Home Blog Page 3251

ರೈತರ ಮಕ್ಕಳಿಗೆ ಶಿಷ್ಯವೇತನ; ಸರ್ಕಾರದಿಂದ ಅಧಿಕೃತ ಆದೇಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಿದ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಷ್ಯವೇತನ ಯೋಜನೆಗೆ ಸರ್ಕಾರ ನಿನ್ನೆ ಅಧಿಕೃತ ಆದೇಶ ಹೊರಡಿಸಿದೆ.

ಹೊಸ ಯೋಜನೆಯಂತೆ ಪಿಯುಸಿ, ಐಟಿಐ, ಡಿಪ್ಲೊಮಾ ಕಲಿಯುತ್ತಿರುವ ವಿದ್ಯಾರ್ಥಿ 2500, ವಿದ್ಯಾರ್ಥಿನಿಯರಿಗೆ 3000, ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡು ಪ್ರತಿ ವಿದ್ಯಾರ್ಥಿಗೆ 5000, ವಿದ್ಯಾರ್ಥಿನಿಗೆ 5500,
ಎಲ್ ಎಲ್ ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುವವರಿಗೆ ಕ್ರಮವಾಗಿ 7500 ಹಾಗೂ 8000.

ಎಂಬಿಬಿಎಸ್, ಬಿಇ, ಬಿಟೆಕ್ ಹಾಗೂ ಸ್ನಾಕೋತ್ತರ ಕೋರ್ಸಗಳಿಗೆ 10000 ಹಾಗೂ 11000 ರೂ. ಶಿಷ್ಯವೇತನವನ್ನು ಸರ್ಕಾರ ಪಾವತಿಸಲಿದೆ.
ಈ ಶಿಷ್ಯ ವೇತನ ಪಡೆಯುವ ರೈತ ರಾಜ್ಯದ ಯಾವುದೇ ಮೂಲೆಯಲ್ಲಿ ಕೃಷಿ ಮಾಡುವ ಜಮೀನು ಹೊಂದಿರಬೇಕು. ದತ್ತು ಪುತ್ರರಿಗೂ ಅವಕಾಶ ಇದೆ. ಮಕ್ಕಳಿಗೆ ಪೋಷಕರಿಲ್ಲದಿದ್ದಲ್ಲಿ ಮಕ್ಕಳ ಹೆಸರಲ್ಲಿ ಜಮೀನು ಇದ್ದರೂ ಅರ್ಹರಾಗುತ್ತಾರೆ.

ರೈತ ಮಕ್ಕಳು‌ ರಾಜ್ಯ ಸರ್ಕಾರದ ಪಾವತಿಸುವ ಯಾವುದೆ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಆದರೆ, ರ‌್ಯಾಂಕ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ‌್ಯಾಂಕ್ ಗಳಿಗೆ ಶಿಷ್ಯ ವೇತನ, ಪ್ರೋತ್ಸಾಹ ಧನ ಪಡೆದಿದ್ದರೂ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ‌.

ಶಿಷ್ಯವೇತನ ಯಾವುದೇ ಕೋರ್ಸಿನ ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷಕ್ಕೆ ಮಿತಿಯಾಗಿರುತ್ತದೆ‌. ಅನುತ್ತೀರ್ಣ ಹೊಂದಿ ಪುನಃ ತೆಗೆದುಕೊಂಡರೆ ಅರ್ಹತೆ ಇಲ್ಲ. ಯಾವುದಾದರೂ ಒಂದು ಕೋರ್ಸಗೆ ಮಾತ್ರ ಮಕ್ಕಳು ಶಿಷ್ಯವೇತನ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಸಚಿವ ಆನಂದ ಸಿಂಗ್ ಭಾವನೆ ಗೌರವಿಸುತ್ತೇನೆ: ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಆನಂದ್ ಸಿಂಗ್ ಭಾವನೆ ಹೇಳಿಕೊಂಡಿದ್ದಾರೆ. ಅದನ್ನು ಗೌರಿವಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಖಾತೆ ಹಂಚಿಕೆಗೆ ಆನಂದ್ ಸಿಂಗ್ ಅಸಮಾಧಾನ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ಸಚಿವ ಆನಂದ್ ಸಿಂಗ್ ತಮ್ಮ ಭಾವನೆ ಹೇಳಿಕೊಂಡಿದ್ದಾರೆ. ಅವರ ಭಾವನೆ, ಮನವಿಯನ್ನು ಗೌರವಿಸುವುದಾಗಿ, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದೇನೆ ಎಂದು ಹೇಳಿದರು.

ಇಂದು ಸಂಜೆ ಎಂಟಿಬಿ ನಾಗರಾಜ್ ಕೂಡ ಭೇಟಿಯಾಗಲಿದ್ದಾರೆ. ಅವರೊಂದಿಗೂ ಮಾತುಕತೆ ನಡೆಸಿ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದರು.

ಸಚಿವ ಪ್ರಭು ಚವ್ಹಾಣ, ಶಾಸಕರ ಮಧ್ಯೆ ಮಾತಿನ ಫೈಟ್

  • ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಹಗ್ಗಜಗ್ಗಾಟ

ವಿಜಯಸಾಕ್ಷಿ ಸುದ್ದಿ, ಬೀದರ್

ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರ ಮಧ್ಯೆ ವಾಗ್ವಾದ‌ ನಡೆದ ಘಟನೆ ಬೀದರ್ ನಲ್ಲಿ ಜರುಗಿದೆ.
ನಗರದ ಹೊರವಲಯದ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಆದರೆ, ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂ ಖಾನ್, ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ವಿರೋಧ ವ್ಯಕ್ತಪಡಿಸಿದರು.

ವಿಷಯಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಜಾಣ ಹಾಗೂ ಶಾಸಕರ ಮಧ್ಯೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ‌ ನಡೆಯಿತು. ಸಚಿವ ಪ್ರಭು ಚೌವಾಣ ಮತ್ತು ಈಶ್ವರ ಖಂಡ್ರೆ ಮಧ್ಯೆ ವಾಗ್ವಾದ ಜೋರಾಗಿತ್ತು.

ಮಧ್ಯೆ ಪ್ರವೇಶ ಮಾಡಿದ ಶಾಸಕ ರಹಿಮ್ ಖಾನ್ ಜಿಲ್ಲಾ ಸಂಕೀರ್ಣ ಇಲ್ಲಿಯೇ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಬೀದರ್ ಬಂದ್ ಗೆ ಕರೆ ಕೊಡುತ್ತೇನೆ ಎಂದು ಸಚಿವರಿಗೆ ಧಮಕಿ ಹಾಕಿದ್ದರು. ಸಚಿವರು ಮಾತ್ರ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಮಾಡಲಾಗುವುದು ಎಂದು ಹೇಳಿದ್ದರಿಂದ ಸಭೆಯಲ್ಲಿ ಮತ್ತಷ್ಟು ವಾಗ್ವಾದ ಸೃಷ್ಟಿಯಾಯಿತು.

ನಾನು ಅತೃಪ್ತನಲ್ಲ, ತೃಪ್ತ ಶಾಸಕ: ರಾಜೂಗೌಡ ಯೂಟರ್ನ್

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಸಚಿವ ಸ್ಥಾನ ಸಿಗದಿದ್ದಕ್ಕೆ ನಿನ್ನೆಯಷ್ಟೇ ಪಕ್ಷದ ವಿರುದ್ದ ಸಿಡಿದೆದ್ದಿದ್ದ ಶಾಸಕ ರಾಜೂಗೌಡ ಇಂದು ಯೂ ಟರ್ನ್ ಹೊಡೆದಿದ್ದು, ನಾನು ತೃಪ್ತ ಶಾಸಕ, ಅತೃಪ್ತ ಶಾಸಕನಲ್ಲ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ ಎಂದು ಹೇಳಿದ್ದಾರೆ.

ಯಾದಗಿರಿ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಮಯ ರಾಜಭವನಕ್ಕೆ ಹೋಗುವತನಕ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ, ಒಳಗಡೆ ಇರುವುದಿಲ್ಲ. ಸ್ವಲ್ಪ‌ ಅದೃಷ್ಟದ ಕೊರತೆಯಿದೆ. ಒಳ್ಳೆಯ ರೀತಿಯಿಂದ ಪಕ್ಷದಲ್ಲಿ ಕೆಲಸ ಮಾಡೋಣ. ಮಾಡಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದರು.

ಯಾವುದೆ ಕಾಂಟ್ರವರ್ಸಿ, ಕಳಂಕ ಇಲ್ಲದ‌ ಕಾರಣ ನನಗೂ ಸಚಿವ ಸ್ಥಾನ ಕೊಡುತ್ತಾರೆಂಬ ನಂಬಿಕೆ, ಆಶೆಯಿತ್ತು. ಸಚಿವ ಸ್ಥಾನ ಕೊಡಿ ಎಂದು ಪಕ್ಷಕ್ಕೆ ಅರ್ಜಿ ಹಾಕಿದ್ದೆ. ಮಾಡದಿದ್ದಾಗ ಪಕ್ಷದ ವಿರುದ್ಧ ಮಾತನಾಡುವ ಸ್ವಭಾವ ನನ್ನದಲ್ಲ. ಪಕ್ಷಕ್ಕೆ ಬ್ಲಾಕ್ ಮೇಲೆ ಮಾಡುವಂತೆ ನನ್ನ ತಾಯಿ ಕಲಿಸಿಕೊಟ್ಟಿಲ್ಲ. ಒಳ್ಳೆಯತನದಿಂದ ಹೋಗು ಎಂದು ಕಲಿಸಿದ್ದಾರೆ. ಬಸವಣ್ಣ ಹಾಗೂ ತಾಯಿಯ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದು ರಾಜೂಗೌಡ ಹೇಳಿದ್ದಾರೆ

2-3 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟ; ಖಾತೆ ಹಂಚಿಕೆಗೆ ಎಂಟಿಬಿ ನಾಗರಾಜ್ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಖಾತೆ ಹಂಚಿಕೆಯಲ್ಲಿ ನನಗೆ ಅಸಮಾಧಾನವಿದೆ. ಮುಂದಿನ 2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ ಎಂದು ನೂತನ ಪೌರಾಡಳಿತ ಖಾತೆ ಸಚಿವ ಎಂಟಿಬಿ‌ ನಾಗರಾಜ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಎಂಟಿಬಿ, ಹಿಂದಿನ ಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳು ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ದೂರಿದ್ದಾರೆ.

ಕಾರು ಪಲ್ಟಿ; ಪಿಡಬ್ಲುಡಿ ಎಇಇ ದುರ್ಮರಣ

ವಿಜಯಸಾಕ್ಷಿ ಸುದ್ದಿ, ಕಾರವಾರ

ಅಂಕೋಲಾದಲ್ಲಿ ಕಾರು ಪಲ್ಟಿಯಾಗಿ ಪಿಡಬ್ಲುಡಿ ಎಇಇ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ. ಸಿದ್ದಾಪುರದ ಲೋಕೊಪಯೋಗಿ ಇಲಾಖೆ ಎಇಇ ಮುದುಕಣ್ಣವರ್ ( 58 ) ಮೃತರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಕೋವಿಡ್ ಹಾಗೂ ನೆರೆಗೆ ಸಂಬಂಧಿಸಿದ ಸಭೆ ಆಯೋಜಿಸಲಾಗಿತ್ತು. ಸಭೆಗೆ ಶಿರಸಿ ಸಿದ್ದಾಪುರ ಮತ್ತು ಮುಂಡಗೋಡದ ಪಿಡಬ್ಲುಡಿ ಇಲಾಖೆಯ ಅಧಿಕಾರಿಗಳು ಸೇರಿಕೊಂಡು ಬರುತ್ತಿದ್ದರು.

ಈ ವೇಳೆ ಅಂಕೋಲಾ ಸಮೀಪದ ಬಾಳೆಗುಳಿ ಕ್ರಾಸ್ ನಲ್ಲಿ ಕಾರು ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇತರ ಅಧಿಕಾರಿಗಳು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರಕ್ಕೆ ಸಭೆಗೆ ತೆರಳುತ್ತಿದ್ದ ಸಚಿವರು ಈ ಘಟನೆ ಬಗ್ಗೆ ಮಾಹಿತಿ ಪಡೆದು ತಕ್ಷಣ ಅಂಕೋಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಅಧಿಕಾರಿಗಳನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುವುದಕ್ಕೆ ಖುದ್ದು ತಾವೇ ಮುಂದೆ ನಿಂತು ವ್ಯವಸ್ಥೆ ಮಾಡಿದರು.

ಅಪಘಾತದಲ್ಲಿ ಮೃತರಾದ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಎ.ಇ.ಇ ಮುದುಕಣ್ಣನವರ ಅವರ ಪಾರ್ಥಿವ ಶರೀರಕ್ಕೆ ಸಚಿವರು ಅಂತಿಮ ನಮನ ಸಲ್ಲಿಸಿದರು.

ಗೂಡ್ಸ್ ಲಾರಿ ಡಿಕ್ಕಿ: ನಿವೃತ್ತ ಪ್ರಾಂಶುಪಾಲರ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ಕುಟುಂಬ ಸಮೇತ ಪ್ರವಾಸಕ್ಕೆ ಹೊರಟಿದ್ದ ಗದಗ ಅಕ್ಕಿ ಕುಟುಂಬದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ, ಪ್ರತಿಷ್ಠಿತ ವಿಜಯ ಕಲಾ ಮಂದಿರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಅಕ್ಕಿ (83) ಅವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಅಂಕೋಲಾ ಸಮೀಪ ನಡೆದಿದೆ.

ಅಕ್ಕಿ ಅವರು ಕುಟುಂಬ ಸಮೇತ ಕಾರವಾರ ಹಾಗೂ ದಕ್ಷಿಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು ಮತ್ತು ದೇವಸ್ಥಾನಗಳಿಗೆ ಭೇಟಿ ಕೊಡಲು ಹೊರಟಿದ್ದರು. ಪತ್ನಿ, ಮಕ್ಕಳು, ಮೊಮ್ಮಕ್ಕಳ ಸಹಿತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು‌. ಶುಕ್ರವಾರ ಮಧ್ಯಾಹ್ನ ಅಂಕೋಲಾದ ಬಳಿ ವಸಂತ ಅಕ್ಕಿಯವರಿದ್ದ ಕ್ರೇಟಾ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಕಾರಿನಲ್ಲಿ ಮುಂದುಗಡೆ ಕುಳತಿದ್ದ ವಸಂತ ಅಕ್ಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪ್ರಕಾಶ ಅಕ್ಕಿ, ಅಶೋಕ್ ಅಕ್ಕಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತೇಜಸ್ ಅಕ್ಕಿ ಮತ್ತು ವಿಕಾಸ್ ಅಕ್ಕಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾರ್ಥಿವ ಶರೀರವನ್ನು ಗದಗಕ್ಕೆ ತರಲಾಗುತ್ತಿದೆ. ವಸಂತ ಅಕ್ಕಿ ಅವರು ಗದಗದ ಪಂಚಾಕ್ಷರಿ ನಗರದಲ್ಲಿ ವಾಸವಾಗಿದ್ದರು. ಇವರ ಪುತ್ರ ವಿನಯ ಅಕ್ಕಿ ನಗರದಲ್ಲಿ ಹಲವು ಜಿಮ್‌ಗಳನ್ನು ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಮತ್ತೆ ನೈಟ್, ವೀಕೆಂಡ್ ಕರ್ಫ್ಯೂ ಜಾರಿ

  • ಗಡಿಜಿಲ್ಲೆಗಳಲ್ಲಿ ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಸಂಪೂರ್ಣ ಲಾಕ್ ಡೌನ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ತಜ್ಞರ ಜೊತೆಗಿನ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೆಲವು ಅವಶ್ಯಕ ಕೆಲಸ ಹೊರತುಪಡಿಸಿ ಎಲ್ಲ ಸೇವೆಗಳು ಬಂದ್ ಆಗಲಿವೆ ಎಂದು ಹೇಳಿದರು.

ರಾಜ್ಯದ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವೀಕ್ ಎಂಡ್ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ರಾತ್ರಿ 9 ರಿಂದ ಸೋಮವಾರ ಬೆಳಗಿನ 6 ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಟಾಸ್ಕ್ ಫೋರ್ಸ ನಾಳೆ ಅಥವಾ ನಾಡಿದ್ದು ರಚನೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆ. 23ರಿಂದ 9ರಿಂದ 12ನೇ ತರಗತಿಯವರೆಗೆ ಶಾಲೆ ಆರಂಭವಾಗಲಿದೆ. ಶಾಲೆಗಳನ್ನು ಆರಂಭಿಸುವ ಕುರಿತಂತೆ ಚರ್ಚಿಸಲಾಗಿದೆ. ಆ. 23ರಿಂದ ದಿನಬಿಟ್ಟು ದಿನ ಬ್ಯಾಚ್ ಆಧಾರದ ಮೇಲೆ 9ರಿಂದ 12ನೇ ತರಗತಿಯವರೆಗಿನ ಕ್ಲಾಸ್ ನಡೆಯುತ್ತದೆ. ಪ್ರಾಥಮಿಕ ಶಾಲೆ ಆರಂಭದ ಕುರಿತು ಆಗಸ್ಟ್ ಅಂತ್ಯದ ವೇಳೆಗೆ ನಿರ್ಧರಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿ ಅಂತ್ಯ

  • ಸತತ 24 ಗಂಟೆ ಪರಿಶೀಲಿಸಿದ ಅಧಿಕಾರಿಗಳ ತಂಡ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಾಸಕ ಜಮೀರ್ ಅಹ್ಮದ್ ಮನೆ ದಾಳಿ ನಡೆಸಿದ್ದ ಇಡಿ ತಂಡ ಸತತ 24 ಗಂಟೆಗಳ ಕಾಲ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳಿಗೆ ತಡಕಾಡಿ ಇಂದು ಪರಿಶೀಲನೆ ಅಂತ್ಯಗೊಳಿಸಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯ ಜಮೀರ್ ಅಹ್ಮದ್ ಮನೆಯೊಳಗಿನ ಇಂಟಿರಿಯರ್ ಡಿಸೈನ್, ವೈಭವೋಪೇತವಾದ ಅರೆಬಿಕ್ ಶೈಲಿಯ ಪೀಠೋಪಕರಣ ಕಂಡು ಇಡಿ ದಂಗಾಗಿದ್ದಾರೆ.

ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನ್ನ ಮನೆ ನಿರ್ಮಾಣದ ಬಗ್ಗೆ ಯಾರೋ ದೂರು ನೀಡಿದ್ದರು. ಈ ಕಾರಣಕ್ಕೆ ದಾಳಿ ನಡೆದಿದೆ. ಮನೆ ನಿರ್ಮಿಸಲು 7 ವರ್ಷ ಬೇಕಾಗಿದೆ. ಎಲ್ಲವೂ ವೈಟ್ ಮನಿಯಿಂದ, ಸ್ವಂತ ಸಂಪಾದನೆಯಿಂದಲೇ ನಿರ್ಮಿಸಿದ್ದೇನೆ. ಆದಾಯ ತೆರಿಗೆ ಎಲ್ಲವನ್ನೂ ಸರಿಯಾಗಿಯೇ ಪಾವತಿ ಮಾಡಿದ್ದೇನೆ. ಮನೆಯ ಮೇಲೆ ಹಲವರಿಗೆ ಕಣ್ಣಿತ್ತು. ಹಾಗಾಗಿ ಯಾರೋ ಇಡಿಗೆ ದೂರು ನೀಡಿದ್ದರು. ದಾಳಿ ನಡೆಸಿದ್ದಾರೆ ಎಂದರು.

ನಿನ್ನೆ ನಡೆದಿದ್ದ ದಾಳಿ ಇಂದು ಅಂತ್ಯವಾಗಿದೆ. ಅಧಿಕಾರಿಗಳಿಗೆ ಎಲ್ಲಾ ದಾಖಲೆ, ಮಾಹಿತಿ ನೀಡಿದ್ದೇನೆ. ಎಲ್ಲವನ್ನು ಪರಿಶೀಲನೆ ನಡೆಸಿ, ಸರಿಯಾಗಿ ಇರುವುದರಿಂದಲೆ ವಾಪಸ್ ಹೋಗಿದ್ದಾರೆ. ಅಗತ್ಯಬಿದ್ದರೆ ವಿಚಾರಣೆಗೆ ಕರೆಯುತ್ತೇವೆ ಎಂದಿದ್ದಾರೆ. ರಾಜಕೀಯದಲ್ಲಿ ವಿರೋಧಿಗಳು ಸಹಜ. ನನಗೆ ಆಗದವರು ದೂರು ನೀಡಿದ್ದಾರೆ. ಇಂದಲ್ಲ ನಾಳೆ ಇಡಿ ಅಧಿಕಾರಿಗಳಿಂದ ಮನೆ ಪರಿಶೀಲನೆ ನಡೆಯಲೇ ಬೇಕಿತ್ತು. ಈಗಲೇ ಅಧಿಕಾರಿಗಳು ಬಂದು ಪರಿಶೀಲಿಸಿದ್ದು ಒಳ್ಳೆಯದಾಯಿತು. ಇದರಿಂದ ನನಗೂ ನೆಮ್ಮದಿ. ಅಧಿಕಾರಿಗಳ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ ಎಂದು ಹೇಳಿದರು.

ಇಂದು ರಾತ್ರಿ ಬೆಂಗಳೂರಿನ ರಮೇಶ ಜಾರಕಿಹೊಳಿ ನಿವಾಸದಲ್ಲಿ ಅತೃಪ್ತರ ಸಭೆ ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಅತೃಪ್ತಗೊಂಡಿರುವ ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ಇಂದು ರಾತ್ರಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದರು. ಪ್ರಕರಣ ಅಂತ್ಯಗೊಳಿಸಿ ಶೀಘ್ರ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಿದ್ದರು. ಒಂದು ಹಂತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನೂ ಪ್ರಕಟಿಸಿದ್ದರು. ಆದರೆ, ಬಿಜೆಪಿಯ ಮುಖಂಡರು ಮನವೊಲಿಸಿದ್ದರಿಂದ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಪ್ರಕರಣ ಇತ್ಯರ್ಥವಾಗುವವರೆಗೆ ತಮ್ಮ ಬದಲು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವಸ್ಥಾನ ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಆದರೆ ಬಾಲಚಂದ್ರ ಜಾರಕಿಹೊಳಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಅಲ್ಲದೆ ಇವರೊಂದಿಗೆ ಬಿಜೆಪಿಗೆ ಬಂದ ಆರ್.ಶಂಕರ, ಮಹೇಶ ಕುಮಟಳ್ಳಿ ಅವರನ್ನೂ ಕೈಬಿಡಲಾಗಿದೆ. ಜತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ, ಸವದತ್ತಿ ಶಾಸಕ ಆನಂದ ಮಾಮನಿ ಸೇರಿ ಹಲವು ಸಚಿವಾಕಾಂಕ್ಷಿಗಳನ್ನು ಕಡೆಗಣಿಸಿದ್ದು, ಅವರೂ ಅಸಮಾಧಾನಗೊಂಡಿದ್ದಾರೆ.

ಅತೃಪ್ತರೆಲ್ಲ ಇಂದು ರಾತ್ರಿ ಸಭೆ ನಡೆಸಲು ಮುಂದಾಗಿದ್ದಾರೆ. ಆದರೆ ವಲಸೆ ಬಂದವರಷ್ಟೆ ಸಭೆ ನಡೆಸುತ್ತಾರೋ, ಮೂಲ ಬಿಜೆಪಿಗರೂ ಇದರಲ್ಲಿ ಭಾಗಿಯಾಗಲಿದ್ದಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.

error: Content is protected !!