ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವಿಷಯ ಚುರುಕು ಪಡೆದಿದೆ. ಈಚೆಗಷ್ಟೇ ವಿಮಾನ ನಿಲ್ದಾಣ ಜಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಬೆಂಗಳೂರಿನಲ್ಲಿ ತೀರ್ಮಾನಿಸಲಾಗಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಶಾಭಾವ ಮೂಡಿದೆ.
ಜನೇವರಿ 29ರಂದು ಕೊಪ್ಪಳಕ್ಕೆ ಕರ್ನಾಟಕ ಮೂಲಸೌಲಭ್ಯ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಆಗಮಿಸಲಿದ್ದು, ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಜಾಗದ ಪರಿವೀಕ್ಷಣೆ ಮಾಡಲಿದ್ದಾರೆ. ನಂತರ ಅಂದು ಮಧ್ಯಾಹ್ನ 12-30ಕ್ಕೆ ಈ ವಿಷಯ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಹುಬ್ಬಳ್ಳಿಯಿಂದ ಬಾಗಲಕೋಟಿಗೆ ತೆರಳುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸಮೀಪದ ಬೆಣ್ಣೆಹಳ್ಳದ ಸೇತುವೆ ತಿರುವಿನಲ್ಲಿ ಸ್ಟೇರಿಂಗ್ ತುಂಡಾಗಿ ಉರುಳಿ ಬಿದ್ದು ಪರಿಣಾಮ ಹದಿನೈದು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಜರುಗಿದೆ.
ಬಸ್ ನಲ್ಲಿ ಮೂವತ್ತು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡ ವೃದ್ಧೆಯೊಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಕಲ್ಮೇಶ ಬನ್ನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವದ ರಾಷ್ಟ್ರಧ್ವಜಾರೋಹಣವನ್ನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ನೆರವೇರಿಸಿದರು. ಧ್ವಜವಂದನೆ ಸ್ವೀಕರಿಸಿ ಪರೇಡ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ತರನ್ನುಮ್, ಎಸಿ ನಾರಾಯಣರಡ್ಡಿ, ಎಡಿಸಿ ಎಂ.ಪಿ.ಮಾರುತಿ, ಎಸ್ಪಿ ಟಿ.ಶ್ರೀಧರ್ ಇತರರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಿಕ್ಕ ನಂತರ ಮೊದಲ ಬಾರಿ ಜಿಲ್ಲಾಕೇಂದ್ರಕ್ಕೆ ಬಂದು ಗವಿಮಠದ ದರ್ಶನ ಪಡೆದಿದ್ದೇನೆ. ಉಸ್ತುವಾರಿ ಬದಲಾವಣೆ ಮಾಡಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ, ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿ, ಆಗಲೂ ಇದೇ ಉತ್ತರ ಬರುತ್ತೆ ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಹೇಳಿದರು.
ಕೊಪ್ಪಳದ ಗವಿಮಠದ ಕರ್ತೃ ಗದ್ದುಗೆಗೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ ಅಂತ ಸಾಕಷ್ಟು ಸಲ ಹೇಳಿದ್ದೇನೆ. ಬೇಕಾದರೆ ಮಂಪರು ಪರೀಕ್ಷೆ, ಎಲ್ಲಾ ಟೆಸ್ಟ್ ಮಾಡಿಸಿ, ಆಗಲೂ ಇದನ್ನೇ ಹೇಳುತ್ತೇನೆ ಎಂದರು.
ಬಿಜೆಪಿಯಿಂದ ಯಾರೂ ಕಾಂಗ್ರೆಸ್ಗೆ ಹೋಗಲ್ಲ, ಬಂದರೆ ಕಾಂಗ್ರೆಸ್ನವರೇ ಬಿಜೆಪಿಗೆ ಬರಬಹುದು. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ದೇಶದ 120 ಕೋಟಿ ಜನರಿಗೆ ಗೊತ್ತಿರುವ ವಿಚಾರ. ಬಿಜೆಪಿಯವರು ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋದು ಬಸನಗೌಡ ಯತ್ನಾಳ ಅವರ ಅಭಿಪ್ರಾಯ ಇರಬಹುದು, ನನ್ನ ಅಭಿಪ್ರಾಯದಲ್ಲಿ ಬಿಜೆಪಿಯವರು ಯಾರೂ ಕಾಂಗ್ರೆಸ್ಗೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರಗುಂದದಲ್ಲಿ ಭಜರಂಗದಳ, ಸಂಘ ಪರಿವಾರ ಬಾಲ ಬಿಚ್ಚಿರುವುದು ಅಪಾಯಕಾರಿ
ವಿಜಯಸಾಕ್ಷಿ ಸುದ್ದಿ, ನರಗುಂದ:
‘ನರಗುಂದದಲ್ಲಿ ಈ ರೀತಿಯ ಘಟನೆಗಳು ಯಾವತ್ತೂ ನಡೆದಿರಲಿಲ್ಲ. ಇಂತಹ ಘಟನೆಗಳು ಉಡುಪಿ, ಮಂಗಳೂರು ಕಡೆಗಳಲ್ಲಿ ನಡೆಯುತ್ತಿದ್ದವು. ಆದರೆ, ಈಗ ಇಲ್ಲಿಯೂ ಭಜರಂಗದಳ, ಸಂಘ ಪರಿವಾರದವರು ಬಾಲ ಬಿಚ್ಚಿರುವುದು ಅಪಾಯಕಾರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಕಳೆದ ಜ.17ರಂದು ಪಟ್ಟಣದಲ್ಲಿ ಕೊಲೆಯಾದ ಯುವಕನ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾತನಾಡಿದರು.
‘ಭಜರಂಗದಳ, ಸಂಘಪರಿವಾರದವರು ಕಾನೂನು ಕೈಗೆ ತೆಗೆದುಕೊಳ್ಳಲು ಶುರು ಮಾಡಿದ್ದು, ಅವರಿಗೆ ಪೊಲೀಸರ ಭಯವಿಲ್ಲದಾಗಿದೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಹೇಳಿದ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
‘ಘಟನೆಯ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಗೊತ್ತಿದ್ದರೂ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ, ಹೀಗಾಗುತ್ತಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಹೀಗಾಗಿದ್ದು, ಭಜರಂಗದಳದವರ ಜೊತೆಗೆ ಅವರೂ ಶಾಮೀಲಾಗಿರಬೇಕು. ಇಲ್ಲದಿದ್ದರೆ ಭಜರಂಗದಳವರನ್ನು ಕಂಡು ಹೆದರಿಕೊಂಡಿರಬೇಕು ಎಂದು ಆರೋಪಿಸಿದ ಅವರು, ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು. ಭಜರಂಗದಳ, ಸಂಘಪರಿವಾರದವರ ಮೇಲೆ ಕ್ರಮ ಕೈಗೊಳ್ಳುವಂತೆ, ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.
‘ಜಿಲ್ಲಾ ಉಸ್ತುವಾರಿ ಸಚಿವರು ಇದೇ ಊರಿನವರಾಗಿದ್ದರೂ, ಅವರ ಊರಿನಲ್ಲಿಯೇ ಕೊಲೆಯಾಗಿದ್ದರೂ ಇಲ್ಲಿಯವರೆಗೂ ಸೌಜನ್ಯಕ್ಕಾದರೂ ಮೃತ ಯುವಕನ ಮನೆಗೆ ಭೇಟಿ ನೀಡದಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ಮಂತ್ರಿಯಾಗಿರುವ ಸಿ.ಸಿ.ಪಾಟೀಲರು ಘಟನೆಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಅವರ ಕ್ಷೇತ್ರದಲ್ಲಿ ಕೋಮು ಗಲಭೆಯಾಗಿ ಕೊಲೆಯಾಗಿರುವುದು ಅವರಿಗೆ ಕಪ್ಪುಚುಕ್ಕಿಯಾಗಿದೆ ಎಂದ ಅವರು, ಮಂತ್ರಿಯೇ ಬಂದಿಲ್ಲ ಅಂದ್ರೆ, ಅಧಿಕಾರಿಗಳು ಹೇಗೆ ಬರುತ್ತಾರೆ ಹೇಳಿ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ರಾಷ್ಟ್ರೀಯ ಮತದಾರರ ದಿನದಂದೇ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನು, ಸ್ವಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಇರುವ ಕಾರಣಕ್ಕೆ ಶಾಸಕ ರಾಮಣ್ಣ ಲಮಾಣಿ ಅವರು ವಾಟ್ಸಾಪ್ ಗ್ರುಪ್ವೊಂದರಲ್ಲಿ ‘ಸಂವಿಧಾನದ ಆಶಯದಂತೆ, ಪ್ರಜಾಪ್ರಭುತ್ವ ಅನ್ವಯ ತಮ್ಮ ಸೇವಕನನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯೇ ಮತದಾನ. ಇದು ಜಗತ್ತಿನ ಸರ್ವಶಕ್ತ ಸಾಂವಿಧಾನಿಕ ಜವಾಬ್ದಾರಿ. ನನ್ನನ್ನು ವಿಧಾನಸಭೆಗೆ ಆಯ್ಕೆಗೊಳಿಸಿ ಸೇವೆಗೆ ಅನುವು ಮಾಡಿಕೊಟ್ಟ ನಮ್ಮ ಕ್ಷೇತ್ರದ ಮತದಾರರ ಬಂಧುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂಬ ಶುಭಾಶಯವುಳ್ಳ ಪೋಸ್ಟರ್ ಹಾಕಿದ್ದಾರೆ. ಇದಕ್ಕೆ ಬಿಜೆಪಿಯ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಆರಿಸಿ ಕಳಿಸಿದ್ದಕ್ಕೆ ನಿಮ್ಮ ಮನೆಯವರು ಎಲ್ಲರೂ ಸೇರಿ ಕಾಂಗ್ರೆಸ್ನವರಿಗೆ ಕೆಲಸ ಕೊಟ್ಟು ಬಿಜೆಪಿ ಕಾರ್ಯಕರ್ತರಿಗೆ ಸರಿಯಾಗಿ ಪಾಠ ಕಲಿಸ್ತಿದ್ದೀರಿ
‘ನಿಮ್ಮ ಎಲೆಕ್ಷನ್ ಸಲುವಾಗಿ ನಮ್ಮ ಊರಾಗ ಕೆರಾ, ಮಚ್ಚಿ ಹಿಡಕೊಂಡು ವೋಟ್ ಹಾಕಿಸೇವಿ. ನೀವು ಸೋತಾಗ 44 ವೋಟ್ ಇದ್ದ ಬಿಜೆಪಿ 450 ವೋಟ್ ಮಾಡಿದ್ದು ನಾವು. ನಿಮ್ಮ ಕೊಡುಗೆ ಏನು ಇಲ್ಲ. ಇವಾಗ ಕಾಂಗ್ರೆಸ್ನ ಜೊತೆ ಸೇರಿ ನಮಗೆ ಎಚ್ಚರ ಮಾಡ್ತಿದ್ದೀರಾ. ತಾಲೂಕಿನ ತುಂಬಾ ನಿಮ್ಮ ಹಿಂದೆ ತಿರುಗುವವರು ಸಮಯಕ್ಕಾಗಿ ಕಾಯ್ತಿದ್ದಾರೆ. ಇನ್ನೇನು ಬಹಳ ದಿನವಿಲ್ಲ. ನಿಮ್ಮ ಅವನತಿ ಶುರುವಾಗುತ್ತೆ…ನೆನಪಿರಲಿ ಇದಕ್ಕೆ ಮಂಜುನಾಥ ಎಂಬವವರು ‘ಶಂಕರ ಏನಿದು? ಬಹಿರಂಗವಾಗಿ ಮಾತನಾಡುವೆ ಮನೆಗೆ ಹೋಗಿ ಎಂದಿದ್ದಾರೆ.
‘ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಸಮಾಧಾನವಿದ್ದಾರೆ. ಎಲ್ಲರೂ ಸಮಯಕ್ಕಾಗಿ ಕಾಯ್ತಿದ್ದಾರೆ. ಒಂದೇ ಸಾರಿ ಗುಮ್ಮೋಕೆ… ನಿದ್ದೆಯಲ್ಲಿದ್ದೀರಿ 30,000 ಲೀಡ್ನಲ್ಲಿ 315 ವೋಟ್ನಿಂದ ಸೋತಿದ್ದು ನೆನಪಿರಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.
‘ನಿಮಗೆ ಬುದ್ಧಿ ಹೇಳೋ ಯಾವ ನಾಯಕರನ್ನು ನಿಮ್ಮ ಜೊತೆ ಇಟ್ಟುಕೊಳ್ಳಲಿಲ್ಲ. ನಿಮಗೆ ಹೊಗಳಿಕೆ ಭಟ್ಟರು ಅಷ್ಟೇ ಬೇಕು. ಒಂದು ಶಾಸ್ತ್ರ ಇದೆ ಬೈದು ಹೇಳೋರು ಒಳ್ಳೆಯದಕ್ಕೆ, ನಕ್ಕು ಹೇಳೋರು ತಮ್ಮ ಲಾಭಕ್ಕೆ.. ನೆನಪಿರಲಿ ಎಂದು ಬುದ್ಧಿ ಹೇಳಿದ್ದಾರೆ.
‘ಹೋದ ಸಲ ಎಲೆಕ್ಷನ್ ಅನ್ನೋ ಹುಚ್ಚು ನೆತ್ತಿಗೆ ಏರಿತ್ತು. ನಿಮ್ಮ ಬಗ್ಗೆ ಯಾವುದನ್ನು ವಿಚಾರ ಮಾಡದೇ ಹೊತ್ತು ಕುಣಿದಿದ್ದಾರೆ. ಅದಕ್ಕೆ ನೀವು ಎಲ್ಲರಿಗೂ 5 ವರ್ಷದಲ್ಲಿ ನೀವು ನಿಮ್ಮ ಮನೆಯವರು ಸೇರಿ ಎಲ್ಲರಿಗೂ ಹುಚ್ಚು ಹಿಡಿಸಿದ್ದೀರಿ
‘ಎಲ್ಲರೂ ನಿಮ್ಮ ಆಟ ನೋಡಿ ಸುಮ್ಮನಿದ್ದಾರೆ ಅಂದ್ರೆ ಕೈಯಲ್ಲಿ ಏನು ಆಗಲ್ಲ ಅಂತಾ ಅಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಅಂತಾ. ಎಲ್ಲರೂ ಟೈಮ್ಗಾಗಿ ಕಾಯ್ತಿದ್ದಾರೆ. ನೆಕ್ಸ್ಟ್ ನವೆಂಬರ್ನಿಂದ ಸ್ಟಾರ್ಟ್ ಆಗುತ್ತೆ ಎಂದು ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಮಹತ್ವದ ದಿಶಾ ಸಭೆಯಲ್ಲಿ ಶಾಸಕ ರಾಮಪ್ಪ ಲಮಾಣಿ, ಅಭಿವೃದ್ಧಿ ಚರ್ಚೆ: ಮಂಗಳವಾರ ಗದಗ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಗದಗ ಜಿಲ್ಲೆಯ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನಮ್ಮೆಲ್ಲರ ನೆಚ್ಚಿನ ಕ್ರಿಯಾಶೀಲ ಶಾಸಕರಾದ ರಾಮಪ್ಪ ಲಮಾಣಿ ಭಾಗಿಯಾಗಿದ್ದರು. ಸಂಸದ ಶಿವಕುಮಾರ ಉದಾಸಿಯವರ ನೇತೃತ್ವದಲ್ಲಿ ನಡೆದ ಮಹತ್ವದ ದಿಶಾ ಸಭೆಯಲ್ಲಿ ಗದಗ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಅವಲೋಕನ ಮತ್ತು ಭವಿಷ್ಯದ ಯೋಜನೆಗಳ ಸಾಕಾರಕ್ಕಾಗಿ ರಾಮಪ್ಪ ಲಮಾಣಿ, ಮಹತ್ವದ ದಾಖಲೆಗಳೊಂದಿಗೆ ಚರ್ಚಿಸಿದರು ಎಂದು ಪುನಃ ಅದೇ ಗ್ರುಪ್ನಲ್ಲಿ ಫೊಸ್ಟ್ ಬಂದಿದೆ.
ಇದಕ್ಕೆ ಒಬ್ಬರು ‘ಲಕ್ಷ್ಮೇಶ್ವರದಿಂದ ಮಾಗಡಿವರೆಗೆ ರಸ್ತೆ ಸರಿ ಮಾಡಿಸಿ ದಯವಿಟ್ಟು ಎಂದು ಕಮೆಂಟ್ ಮಾಡಿದ್ದಾರೆ.
‘ಮುಗಿದೆ ಹೋಗಿದೆ ಕ್ಷೇತ್ರದ ಅಭಿವೃದ್ಧಿ, ಇವಾಗ ನಿಮ್ಮ ಅಭಿವೃದ್ಧಿ ಅಷ್ಟೇ
ಇದಕ್ಕೆ ಮಂಜುನಾಥ ಎಂಬುವವರು ‘ಇನ್ನೂ ಸಮಯವಿದೆ ಶಂಕರ ದುಡುಕ ಬೇಡ ಎಂದಿದ್ದಾರೆ. ಮರು ಪ್ರತಿಕ್ರಿಯಿಸಿರುವ ಶಂಕರ ಎಂಬ ವ್ಯಕ್ತಿ ‘ನಾಲ್ಕು ವರ್ಷದಿಂದ ಅದೇ ಆಗಿದೆ ಎಲ್ಲರದೂ ಎಂದಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿ ಇರುವಾಗಲೇ ಹಾಲಿ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರ ಹಾಕುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನಗರದ ಮುನ್ಸಿಪಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಉನ್ನತ ವ್ಯಾಸಂಗಕ್ಕೆ ಹಣಕಾಸಿನ ಸೌಲಭ್ಯವಿಲ್ಲದೇ, ಆಟೋ ಓಡಿಸಿ ಬಂದ ಕಾಸಿನಲ್ಲಿ ತೋಂಟದಾರ್ಯ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ನೌಕರಿ ಪಡೆದ ಮುಂಡರಗಿ ಪೊಲೀಸ್ ಠಾಣೆಯ ಎಎಸ್ಐ ಒಬ್ಬರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪೊಲೀಸ್ ಪದಕ ಪ್ರಶಸ್ತಿ ಲಭಿಸಿದೆ.
ಕರ್ನಾಟಕದಲ್ಲಿ ಒಟ್ಟು 19 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಸಿಕ್ಕಿದ್ದು, ಅದರಲ್ಲಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿರುವ ಮಾರುತಿ ಜೋಗದಂಡಕರ್ ಅವರಿಗೆ ಪ್ರಶಸ್ತಿ ದೊರತಿದೆ.
1993ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಜೋಗದಂಡಕರ್ ಅವರು ಶಿಗ್ಗಾಂವ್, ಮುಂಡರಗಿ, ನರಗುಂದ, ಗದಗ ಗ್ರಾಮೀಣ ಹಾಗೂ ಜಿಲ್ಲಾ ಪೊಲೀಸ್ ಕಾರ್ಯಾಲಯಗಳಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ್ದರು. ಕಾನ್ಸ್ಟೇಬಲ್ ಹುದ್ದೆಯಿಂದ 2019ರಲ್ಲಿ ಪದೋನ್ನತಿ ಪಡೆದಿರುವ ಜೋಗದಂಡಕರ್ ಅವರು ಇದೀಗ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೇಕ್ಟರ್(ಎಎಸ್ಐ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೋಗದಂಡಕರ್ ಅವರು ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯಕ್ಕೆ ಪ್ರಥಮವಾಗಿ ಕ್ರೈಂ ಇನ್ ಇಂಡಿಯಾ ಮಾಹಿತಿ ಸಲ್ಲಿಸುತ್ತಾ ಬಂದಿರುವ ಇವರು ಗದಗ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿದಂದಲೂ ಪ್ರಶಂಸೆ ಪಡೆದಿದ್ದಾರೆ. ಬಹುಮಾನ, ಪುರಷ್ಕಾರಗಳನ್ನು ಪಡೆದಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಮಾರುತಿ ಜೋಗದಂಡಕರ್ ಅವರಿಗೆ ಎಸ್ಪಿ ಶಿವಪ್ರಕಾಶ್ ದೇವರಾಜು, ಗದಗ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಉಪವಿಭಾಗದ ಡಿವೈಎಸ್ಪಿ ಶಂಕರರ್ ಎಮ್ ರಾಗಿ, ಡಿಸಿಆರ್ ಬಿ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಅಭಿನಂಧಿಸಿದ್ದಾರೆ.
ಇಲ್ಲಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂ. ದೋಚಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕಳ್ಳತನ ನಡೆದು 48 ಗಂಟೆಗಳಲ್ಲಿಯೇ ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಗಂಗಾಧರ ನಗರ ಸೆಟ್ಲಮೆಂಟ್ನ ಮಂಜುನಾಥ ಪರಶುರಾಮ ಕ್ಯಾರಕಟ್ಟಿ, ಸುನೀಲ್ ದೇವೆಂದ್ರಪ್ಪ ಗುರಾಲ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, 1.75 ಲಕ್ಷ ರೂ. ವಶಪಡಿಕೊಂಡಿದ್ದಾರೆ.
ಗದಗದಿಂದ ಕಂಪ್ಲಿಗೆ ಹೋಗಲು ತಮ್ಮ ಪತ್ನಿಯ ಜೊತೆಗೆ ನವೀನ್ ಬಸವರಾಜ್ ಎಂಬುವವರು ಜ.22ರಂದು ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಹತ್ತುತ್ತಿದ್ದಾಗ ಬಸ್ ಹತ್ತಿ ಮುಂದೆ ಹೋಗದೇ ಮೆಟ್ಟಿಲ ಮೇಲೆ ನಿಂತಿದ್ದ ಇಬ್ಬರು ಯುವಕರು ತಳ್ಳಾಡಿದಂತೆ ಮಾಡಿ ಕಿಸೆಯಲ್ಲಿದ್ದ 2.36 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನವೀನ್ ಬಸವರಾಜ್ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ, ಸಿಪಿಐ ಬಿ.ಜೆ.ಸುಬ್ಬಾಪೂರಮಠ ಮಾರ್ಗದರ್ಶನದಲ್ಲಿ ಪಿಎಸ್ಐ ಆರ್. ಆರ್. ಮುಂಡೆವಾಡಗಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಎಚ್.ದೊಡ್ಡಮನಿ, ಸಂಜೀವ ಕೊರೊಡೂರ, ಎಸ್.ಎಚ್.ಕಮತರ, ಆರ್.ಐ.ಗುಂಜಾಳ, ಸಿ.ವ್ಹಿ.ತಿರ್ಲಾಪುರ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಶ್ಲಾಘಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಂಚಮಸಾಲಿ ಸಮಾಜದ 4 ನೇ ಪೀಠ ಸ್ಥಾಪನೆಗೆ ಕೊಪ್ಪಳದಲ್ಲಿ ಸದ್ದಿಲ್ಲದೆ ಸಿದ್ಧತೆ ನೆಡದಿದೆ. ಮೂರನೇ ಪೀಠ ಚರ್ಚೆ ಎನ್ನುತಿದ್ದಂತೆ ಇದೀಗ ನಾಲ್ಕನೇ ಪೀಠದ ಸರದಿ ಪ್ರಾರಂಭವಾಗಿದೆ. ರಾಜ್ಯದಲ್ಲೇ ಪ್ರಥಮ ಭಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಪಂಚಮಸಾಲಿಯ ನಾಲ್ಕನೇ ಪೀಠದ ಮೊದಲ ಸಭೆ ನೆಡಸಲು ಇದೀಗ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇನ್ನೂ ನಾಲ್ಕನೆ ಪೀಠ ವಿಶೇಷವಾಗಿ ಪಂಚಮಸಾಲಿ ಸಮಾಜದ ಮಹಿಳಾ ಪೀಠವಾಗಬೇಕು ಎನ್ನುವುದು ಸಮಾಜದ ಮಹಿಳೆಯರ ಕೂಗು ಕೇಳಿ ಬರ್ತಿದೆ. ಸುಮಾರು 40 ಲಕ್ಷ ಮಹಿಳೆಯರನ್ನು ಹೊಂದಿದ ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮಹಿಳಾ ಪೀಠ ಆಗಬೇಕು ಎಂದು ಪಂಚಮಸಾಲಿ ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬುದನೂರ ರಿಂದ ಮಹಿಳಾ ಪೀಠದ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಹೆಸರಿಗೆ ಮಾತ್ರ ಕಿತ್ತೂರು ಚೆನ್ನಮ್ಮ ಅಂತಾರೆ ಆದರೆ ಈಗಿರುವ ಎರಡೂ ಪೀಠದಿಂದ ಸಮಾಜದ ಮಹಿಳೆಯರ ಅಭಿವೃದ್ಧಿ ಆಗಿಲ್ಲ ಸಮಾಜದ ಒಕ್ಕೂಟದಲ್ಲಿ 11 ಜನ ಮಹಿಳೆಯರಿದ್ದಾರೆ ಅದರಲ್ಲಿ ಒಬ್ಬರನ್ನು ಮಹಿಳಾ ಪೀಠದ ಪೀಠಾಧಿತಿ ಮಾಡಲಾಗುವುದು ಮಹಿಳಾ ಪೀಠದ ಸ್ಥಾಪನೆ ಬಗ್ಗೆ ಈಗಾಗಲೇ ಒಂದು ಸಭೆ ಮಾಡಲಾಗಿದೆ. ಮಹಿಳಾ ಪೀಠದ ಕುರಿತು ಕೂಡಲಸಂಗಮ, ಹರಿಹರ ಪೀಠದ ಸ್ವಾಮೀಜಿಗಳ ಗಮನಕ್ಕೆ ತರಲಾಗಿದೆ ಸಮಾಜದ ಮೂರು ಪೀಠಗಳು ಮಹಿಳಾ ಪೀಠದ ಸ್ಥಾಪನೆಗೆ ಒಪ್ಪಿಗೆ ಸೂಚಿಸುತ್ತಾರೆ ಯಾವುದೇ ಕಾರಣಕ್ಕೂ ಮಹಿಳಾ ಪೀಠ ಸ್ಥಾಪನೆ ವಿಷಯ ಕೈ ಬಿಡುವುದಿಲ್ಲ ಮಹಿಳಾ ಪೀಠ ಸ್ಥಾಪನೆ ಮಾಡಿಯೇ ಮಾಡುತ್ತೇವೆ ಎಂದು ಕಿಶೋರಿ ಬುದನೂರ ಹೇಳಿದ್ದಾರೆ.