Home Blog Page 3282

ಬೆಳಗಾವಿಯಲ್ಲಿ ಭಾರಿ ಮಳೆ; ಜಿಲ್ಲೆಯಲ್ಲಿ ಹೈ ಅಲರ್ಟ್, ಗ್ರಾಮಸ್ಥರಿಗೆ ಎಚ್ಚರಿಕೆ!

ವಿಜಯಸಾಕ್ಷಿ ಸುದ್ದಿ, ನರಗುಂದ

ರಾಜ್ಯದಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿರುವ ಪರಿಣಾಮ ಜಿಲ್ಲಾಡಳಿತವು ಜಿಲ್ಲೆಯ ಹಲವು ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಲಕಮಾಪುರ ಗ್ರಾಮದಲ್ಲಿ ಸಭೆ ನಡೆಸಿದೆ. ನರಗುಂದ ತಹಸೀಲ್ದಾರ್ ಎ.ಡಿ. ಅಮರವಾಡಗಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಲಾಗಿದೆ.

ಬೆಳಗಾವಿ ಜಿಲ್ಲೆ ಹಾಗೂ ಮಲಪ್ರಭಾ ನದಿ ಜಲಾನಯನ ಪ್ರದೇಶದಲ್ಲಿ ವಿಪರೀತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ, ನೀರಿನ ಹರಿವು ಹೆಚ್ಚಾಗಿ ನವಿಲು ತೀರ್ಥ ಡ್ಯಾಂ ನಿಂದ ನೀರು ಹರಿಬಿಟ್ಟರೆ ಲಕಮಾಪುರ ಗ್ರಾಮ ನಡುಗಡ್ಡೆಯಾಗುತ್ತದೆ. ಹೀಗಾಗಿ ತಾಲೂಕು ಆಡಳಿತ ಮಾಹಿತಿ ನೀಡಿದ ತಕ್ಷಣ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ಪ್ರಾವಹ ಉಂಟಾದರೆ ಲಕಮಾಪುರ ಗ್ರಾಮದ ಜನರು ಬೆಳ್ಳೇರಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಬರುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ. ಈ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ತಾಪಂ ಇಓ, ನರಗುಂದ ಸಿಪಿಐ ಭಾಗವಹಿಸಿದ್ದರು.

ಈ ಹಿಂದೆಯೂ ಹಲವು ಬಾರಿ ಈ ಗ್ರಾಮ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿತ್ತು. ಇಡೀ ಗ್ರಾಮದ ಸುತ್ತಮುತ್ತ ನೀರು ಆವರಿಸಿ ಗ್ರಾಮ ನಡುಗಡ್ಡೆಯಂತಾಗಿತ್ತು. ಹೀಗಾಗಿ ತಾಲೂಕು ಆಡಳಿತ ಈ ಬಾರಿ ಎಚ್ಚರಿಕೆ ವಹಿಸಿದೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಈ ಗ್ರಾಮವೇ ಮೊದಲಿಗೆ ತೊಂದರೆ ಅನುಭವಿಸುವುದು.

ಖ್ಯಾತ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ

ವಿಜಯಸಾಕ್ಷಿ ಸುದ್ದಿ, ಚಂಡೀಗಢ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಅಥ್ಲೆಟಿಕ್ ಮಿಲ್ಖಾ ಸಿಂಗ್ ಅವರು ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರ ಪತ್ನಿ ಕೊರೋನಾದಿಂದ ಸಾವನ್ನಪ್ಪಿದ್ದರು.
ಇತ್ತೀಚೆಗೆ ಮಿಲ್ಖಾ ಸಿಂಗ್ ಅವರ ಪತ್ನಿ ಹಾಗೂ ಭಾರತದ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್ (85) ಅವರು ಕೋವಿಡ್ ಗೆ ಬಲಿಯಾಗಿದ್ದರು.

ಪತ್ನಿ ಮೃತಪಟ್ಟ ಐದು ದಿನಗಳ ಅಂತರದಲ್ಲಿ ಮಿಲ್ಖಾಸಿಂಗ್ ಸಹ ಮೃತಪಟ್ಟಿದ್ದಾರೆ.
1935 ರಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿರುವ ಗೋವಿಂದಪುರದಲ್ಲಿ ಮಿಲ್ಖಾ ಸಿಂಗ್ ಜನಿಸಿದರು. ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ವೇಳೆ ನಡೆದ ಕೋಮು ಗಲಭೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರು. ಆಗ ಇವರಿಗೆ ಕೇವಲ 12 ವರ್ಷ ವಯಸ್ಸು, ಅಂದು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ ಅವರು ಮುಂದೆ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದರು.

1958ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಚಿನ್ನ, 1958ರ ಕಾಮನ್ ವೆಲ್ತ್ ನಲ್ಲಿ ಮಿಲ್ಖಾ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಭಾರತಕ್ಕೆ ಕಾಮನ್ ವೆಲ್ತ್ನಲ್ಲಿ ಬಂದ ಮೊಟ್ಟ ಮೊದಲ ಸ್ವರ್ಣಪದಕವಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ನೀಡಿದೆ. ಪ್ರಧಾನಿ ಮೋದಿ ಸೇರಿ ಇತರ ಗಣ್ಯರು ಮಿಲ್ಖಾ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಧಾರಾಕಾರ ಮಳೆಗೆ ಮತ್ತೊಂದು ಬಲಿ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗಾವಿಯಲ್ಲಿ ಕೂಡ ಕಳೆದ ಕೆಲವು ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯ ಮಾರ್ಕಂಡೆಯ ನದಿಯ ಪ್ರವಾಹದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿದ್ದಾರೆ. ಕಾಕತಿ ಗ್ರಾಮದ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ (65) ಕೊಚ್ಚಿ ಹೋದ ರೈತ.

ಈ ರೈತ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕೃಷಿ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನದಿಯ ಸೇತುವೆ ಬಳಿ ಕೈ ಕಾಲು ತೊಳೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ರೈತ ಕೊಚ್ಚಿ ಹೋಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಎಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರಾಕಾರ ಮಳೆ ಮತ್ತು ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಕಾರ್ಯಾಚರಣೆ ಅರ್ಧದಲ್ಲಿಯೇ ಅಧಿಕಾರಿಗಳು ಮೊಟಕುಗೊಳಿಸಿದ್ದಾರೆ. ಮತ್ತೆ ಇಂದು ಬೆಳಿಗ್ಗೆ ಶೋಧ ಕಾರ್ಯ ನಡೆಯಲಿದೆ.

ಪ್ರೀತಿಯ ಪಾರಿವಾಳ ಕಳುವಾತ ಗೆಳೆಯ…! ಆರ್‌ಎಕ್ಸ್, ಸೂರಿ, ಮಾರಿ ಎಲ್ಲವೂ ಚೋರಿ

ವಿಜಯಸಾಕ್ಷಿ ಸುದ್ದಿ, ಗದಗ

ಆ ಇಬ್ಬರಿಗೂ ಈ ಜಗತ್ತು ಹೊಸದು. ಹುಟ್ಟಿ ೨೦ ರಿಂದ ೨೫ ದಿನಗಳಾಗಿವೆ ಅಷ್ಟೇ. ಹಸಿವು ಆದರೆ ತಿನ್ನಲು ಬಾರದು. ನೀರಡಿಕೆಯಾದರೆ ಕುಡಿಯಲು ಗೊತ್ತಿಲ್ಲ. ಈ ಇಬ್ಬರ ಹಸಿವು, ನೀರಡಿಕೆ ಗೊತ್ತಾಗುವುದು ತಂದೆ-ತಾಯಿಗೆ ಮಾತ್ರ. ಆದರೆ ಅವರೇ ಇಲ್ಲ. ಕಳ್ಳರ ಕೈ ಚಳಕದಿಂದ ಇವರಿಬ್ಬರು ಅನಾಥರಾಗಿದ್ದಾರೆ !
ಇದು ಯಾವುದೊ ಕಟ್ಟು ಕಥೆಯಲ್ಲ, ಕ್ರೈಂ ಸ್ಟೋರಿ ಅಂತು ಅಲ್ಲವೇ ಅಲ್ಲ. ಇದೊಂದು ಪಾರಿವಾಳ ಮರಿಗಳ ಮನಮಿಡಿಯುವ ಕಣ್ಣೀರ ಕಥೆ.

ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಪೆಟ್ರೋಲ್ ಬಂಕ್ ಹತ್ತಿರ ಜೂನ್ 15 ಮಂಗಳವಾರ ಪಾರಿವಾಳದ ಗೂಡಿಗೆ (ಪೆಟ್ಟಿಗೆಗೆ) ಕಳ್ಳರ ವಕ್ರದೃಷ್ಟಿ ಬಿದ್ದಿದೆ. ಪ್ರೀತಿಯಿಂದ ಹೆಸರಿಟ್ಟಿದ್ದ ಆರ್‌ಎಕ್ಸ್, ಸೂರಿ, ಮಾರಿ ಹಾಗೂ ಗಿಡ್ಡ ಎನ್ನವ ಅತಿ ಮುದ್ದಿನ ಪಾರಿವಾಳಗಳ ಜೊತೆಗೆ 25 ಪಾರಿವಾಳಗಳನ್ನು ಖದೀಮರು ಕದ್ದೊಯ್ದಿದ್ದಾರೆ.

ಜೂನ್ 16 ಬುಧವಾರ ಬೆಳಿಗ್ಗೆ ಪಾರಿವಾಳ ಕಳ್ಳತನ ವಿಷಯ ಬೆಳಕಿಗೆ ಬಂದಿದೆ. ಪಾರಿವಾಳಗಳ ಮಾಲೀಕ ಕಿರಣ ಕಟ್ಟಿಮನಿ ತನ್ನ ಮೆಚ್ಚಿನ ಪಾರಿವಾಳಗಳು ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕಿದ ಪಾರಿವಾಳ ಕಳ್ಳತನವಾಗಿದ್ದಕ್ಕೆ ಸಹಜವಾಗಿ ಬೇಸರಗೊಂಡಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ದುಃಖಿತರಾಗಿದ್ದು ಎರಡು ಪಾರಿವಾಳ ಮರಿಗಳು ಅನಾಥವಾಗಿದ್ದಕ್ಕೆ. ಬೇರೆ ಬೇರೆಯ ಜೋಡಿ ಈ ಎರಡು ಪಾರಿವಾಳ ಮರಿಗಳು ಈಗ ಅನಾಥವಾಗಿದ್ದಕ್ಕೆ ಕಿರಣ ಕಟ್ಟಿಮನಿ ಮಮ್ಮಲ ಮರಗುತ್ತಿದ್ದಾರೆ.

ತಂದೆ-ತಾಯಿಯ ಗುಟ್ಟಿಯಿಂದ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದ ಆ ಎರಡೂ ಮರಿಗಳಿಗೆ ಈಗ ಕಿರಣ ಕಷ್ಟ ಪಟ್ಟು ಆಹಾರ ನೀಡುತ್ತಿದ್ದಾರೆ. ಕಾಡಪುಡಿ ಜಾತಿಗೆ ಸೇರಿರುವ ಈ ಪಾರಿವಾಳಗಳನ್ನು ಇನ್ನೂ ಇಂದು ತಿಂಗಳು ಕಾಲ ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲುಹಿ ದೊಡ್ಡದಾಗಿ ಬೆಳಸುವ ಹೊಣೆಗಾರಿಕೆ ಹೊತ್ತಿದ್ದಾರೆ.

ಕಿರಣ ಕಟ್ಟಿಮನಿ ಗದಗನ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿ. ಪಾರಿವಾಳಗಳೆಂದರೆ ಎಲ್ಲಿಲ್ಲದ ಪ್ರೀತಿ. ಕಳೆದ 20 ವರ್ಷಗಳಿಂದ ಪಾರಿವಾಳಗಳನ್ನು ಸಾಕುವುದು, ಆರೈಕೆ ಮಾಡುವುದರಲ್ಲಿ ನಿಸ್ಸೀಮರು. ತಮಗೆ ಇಷ್ಟವಾದ ಪಾರಿವಾಳಗಳನ್ನು ಎಷ್ಟೆ ದುಡ್ಡು ಖರ್ಚು ಆದರೂ ಪರವಾಗಿಲ್ಲ ಅವುಗಳನ್ನು ಕೊಂಡು ಸಾಕುತ್ತಿದ್ದರು. ಎರಡು ತಿಂಗಳ ಹಿಂದೆ 10 ಸಾವಿರ ರೂ. ಖರ್ಚು ಮಾಡಿ ಬಿಜಾಪೂರದಿಂದ ಎರಡು ಪಾರಿವಾಳಗಳನ್ನು ತಂದಿದ್ದರು. ಕಳ್ಳತನವಾದ ಪರಿವಾಳಗಲ್ಲಿ ಇವು ಸೇರಿವೆ.

ವಾರದ ಹಿಂದೆ ಕೆಲವರು ಪಾರಿವಾಳಗಳನ್ನು ಮಾರಾಟಕ್ಕೆ ಕೇಳಿದ್ದರು. ಆದರೆ ಕಿರಣ ಕೊಟ್ಟಿರಲಿಲ್ಲ. ಆದರೆ ಈಗ ಕಳ್ಳತನವಾಗಿವೆ. ಕಳ್ಳತನವಾದ ಸುದ್ದಿ ಕೇಳಿದ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪಾರಿವಾಳಗಳನ್ನು ಕದ್ದ ಖದೀಮರಿಗೆ ಗ್ರಾಮೀಣ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.

ಲಕ್ಷ ರೂಪಾಯಿ ಖರ್ಚು ಮಾಡಿ ಪಾರಿವಾಳ ಸಾಕಿದ್ದೀ. ಮಂಗಳವಾರ ರಾತ್ರಿ ಮಲಗಲು ಹೋಗಿರಲಿಲ್ಲ. ಆದರೆ ಯಾರೋ ನನ್ನ ಪಾರಿವಾಳಗಳನ್ನು ಕದ್ದಿದ್ದಾರೆ. ಕದ್ದಿದ್ದಕ್ಕೆ ಬೇಜಾರಿಲ್ಲ. ಆದರೆ ಎರಡು ಮರಿ ಪಾರಿವಾಳ ಹಾಗೆ ಬಿಟ್ಟು ಹೋಗಿದ್ದಕ್ಕೆ ಬೇಜಾರಾಗಿದೆ. ಆ ಮರಿಗಳನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಕಿರಣ ಕಟ್ಟಿಮನಿ, ಪಾರಿವಾಳ ಕಳೆದುಕೊಂಡ ವ್ಯಕ್ತಿ.

ಕೊರೊನಾ; ಸೋಂಕು ನಿಯಂತ್ರಣದತ್ತ ಮತ್ತೊಂದು ಹೆಜ್ಜೆ ಮುಂದಿಟ್ಟ ಗದಗ ಜಿಲ್ಲೆ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಶುಕ್ರವಾರ 23 ಜನರಿಗೆ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದಾಗಿ ಒಬ್ಬರು ಮೃತಪಟ್ಟ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ. ಇದರಿಂದಾಗಿ ಇದುವರೆಗೂ ಕೋವಿಡ್ ನಿಂದಾಗಿ 291 ಜನ ಮೃತಪಟ್ಟಿದ್ದಾರೆ.

ಇಂದು 23 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25555 ಏರಿಕೆ ಕಂಡಿದೆ. ಶುಕ್ರವಾರವೂ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆ ಆಗಿದ್ದು ಗದಗ ಜಿಲ್ಲೆ ಸೋಂಕು ‌ಮುಕ್ತದತ್ತ ಮತ್ತೊಂದು ಹೆಜ್ಜೆ ಮುಂದೆ ಸಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -11, ಮುಂಡರಗಿ-03, ನರಗುಂದ-03, ರೋಣ-01, ಶಿರಹಟ್ಟಿ-03, ಹೊರಜಿಲ್ಲೆಯ-02 ಸೇರಿದಂತೆ 23 ಪ್ರಕರಣಗಳು ದೃಢಪಟ್ಟಿವೆ.

ಇಂದು 84 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24816 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 448 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 80 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಸವಾಲೆಸೆದ ಮಾಜಿ ಮೇಯರ್!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಣಿಜ್ಯನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿದ್ದರೂ ಕೂಡ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ರಸ್ತೆಯ ಗುಂಡಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಭಾವಚಿತ್ರಗಳನ್ನು ತಗ್ಗು ಗುಂಡಿಗಳಲ್ಲಿ ಹರಿಬಿಟ್ಟು ಅವುಗಳಿಗೆ ಸನ್ಮಾನಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಅವಳಿ ನಗರದ ಶೇ%80ರಷ್ಟು ಪ್ರಮುಖ ರಸ್ತೆ ಮಾರ್ಗಗಳು ತಗ್ಗು ದಿನ್ನಿಗಳಿಂದ ಕೂಡಿವೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ.

ಕೇವಲ ಐಷಾರಾಮಿ ಕಾರಲ್ಲಿ ತಿರುಗುವ ಸಚಿವರು ಒಮ್ಮೆ ಅವಳಿ ನಗರದ ಬೀದಿಗಳಲ್ಲಿ ಬೈಕ್ ಮೇಲೆ ಸಂಚಾರ ಮಾಡಿ ತೊರಿಸಲಿ ಎಂದು ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಶೆಟ್ಟರ್ ಗೆ ಸವಾಲೆಸೆದರು.

ನಂತರ ಕಾಂಗ್ರೆಸ್ ಕಾರ್ಯಕರ್ತರು ತಗ್ಗು ಗುಂಡಿಗಳಲ್ಲಿನ ಕೊಳಚೆ ನೀರಲ್ಲಿ ಹೂ, ಶಾಲೂ ಗಳನ್ನ ನರೇಂದ್ರ ಮೋದಿ ಹಾಗೂ ಜಗದೀಶ್ ಶೆಟ್ಟರ್ ಭಾವಚಿತ್ರಕ್ಕೆ ಹೊದಿಸಿ ನಂತರ ಇಬ್ಬರ ಭಾವಚಿತ್ರಗಳನ್ನೊಳಗೊಂಡ ದೋಣಿಗಳ ಹರಿಬಿಟ್ಟು ಪ್ರತಿಭಟನೆ ನಡೆಸಿ,
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಸ್ತೆ ಹಾಗೂ ತಗ್ಗು ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಕಾರ್ಯಕರ್ತರು ಇದ್ದರು.

ಬಾಲ ಚೈತನ್ಯ ಆರೈಕೆ ಕೇಂದ್ರಕ್ಕೆ ಸಂಸದ ದೇವೇಂದ್ರಪ್ಪ ಭೇಟಿ

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ತಾಲೂಕಿನ ಹಿರೇಹಡಗಲಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಾಲ ಚೈತನ್ಯ ಕೇಂದ್ರಕ್ಕೆ ಸಂಸದ ವೈ ದೇವೇಂದ್ರಪ್ಪ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಬಂದಿರುವಂತಹ ಮಕ್ಕಳನ್ನು ಆತ್ಯಂತ ಮುತುವರ್ಜಿಯಿಂದ ನೋಡಿಕೊಂಡು ಮಕ್ಕಳಿಗೆ ಉತ್ತಮವಾದ ಆಹಾರ, ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ಮಕ್ಕಳನ್ನು ಸಂರಕ್ಷಿಸಿ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಎಂದು ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.

ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವ ಹಾಗೆ ಮೊದಲಿನ ಹಂತದಲ್ಲಿಯೇ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ ಸರಿಯಾದ ಪೌಷ್ಟಿಕತೆಯನ್ನು ಒದಗಿಸಲು ಎಲ್ಲರೂ ಕೈಜೋಡಿಸಬೇಕೆಂದರು.

ನಂತರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಾಯಂದಿರ ಜೊತೆ ವೈ ದೇವೇಂದ್ರಪ್ಪ, ಮಕ್ಕಳ ಆರೋಗ್ಯದ ಕುರಿತು ಹಾಗೂ ಪೌಷ್ಟಿಕತೆ ಒದಗಿಸುವ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಿ. ರಾಮನಗೌಡ, ಆರೋಗ್ಯ ಇಲಾಖೆಯ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಇಂದು ಸಂಜೆಯಿಂದ ಸೋಮವಾರದವರೆಗೂ ವೀಕೆಂಡ್ ಕರ್ಫ್ಯೂ; ಡಿಸಿ ಸುಂದರೇಶ್ ಬಾಬು

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಕೊರೊನಾ ವೈರಸ್ ಸಧ್ಯ ನಿಯಂತ್ರಣಕ್ಕೆ ಬರುತ್ತಿದೆ. ಇದರ ಮಧ್ಯೆ ಸರ್ಕಾರ 19 ಜಿಲ್ಲೆಗಳಲ್ಲಿ ಇಂದು ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲೂ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂವಿನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ, ಅಂಗಡಿ ತೆರೆಯಲು, ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಮಾತ್ರ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಕೂಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

ವೀಕೆಂಡ್ ಕರ್ಫ್ಯೂನಲ್ಲಿ ಯಾವುದಕ್ಕೆಲ್ಲಾ ಅವಕಾಶ?
• ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ ಅವಕಾಶ.
• ಎಲ್ಲಾ ಕೇಂದ್ರ-ರಾಜ್ಯ ಸರ್ಕಾರದ ಕಚೇರಿಗಳು ತೆರೆಯಲಿವೆ.
• ಕೋವಿಡ್ ಸಂಬಂಧಿತ ಕೆಲಸ ಮಾಡುವ ಕಂಪನಿಗಳು ಓಪನ್.
• ಟೆಲಿಕಾಂ ಹಾಗೂ ಇಂಟರ್ ನೆಟ್ ಸರ್ವೀಸ್ ಪೂರೈಕೆದಾರರ ಓಡಾಟಕ್ಕೆ ಅವಕಾಶ.
• ರೋಗಿಗಳು, ಅವರ ಕುಟುಂಬಸ್ಥರು ಹಾಗೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಸಂಬಂಧಪಟ್ಟ ಪ್ರೂಫ್ ತೋರಿಸಿ ಓಡಾಟಕ್ಕೆ ಅವಕಾಶ ನೀಡಲಾಗಿದೆ.
• ರೈಲು ವಿಮಾನ ಸಂಚಾರ ಇರಲಿದೆ..
• ಬಾರ್ ತೆರೆಯಲು ಕೂಡ ಅವಕಾಶವಿದ್ದು, ಮಧ್ಯಾಹ್ನ 2ರ ವರೆಗೆ ಎಂದಿನಂತೆ ಪಾರ್ಸೆಲ್ ಗೆ ಅವಕಾಶವಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ.
• ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಜಿಲ್ಲಾಡಳಿತ ಕೂಡ ಅನಾವಶ್ಯಕವಾಗಿ ಜನರ ಓಡಾಟಕ್ಕೆ ಬ್ರೇಕ ಹಾಕಿದೆ. ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ತಿಳಿಸಿದ್ದಾರೆ.

ಸತ್ತ ಮಗು ತಾಯಿಯ ಕಣ್ಣೀರಿಗೆ ಬದುಕಿ ಬಂದನಾ?

ವಿಜಯಸಾಕ್ಷಿ ಸುದ್ದಿ, ಹರಿಯಾಣ

ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಮಗು ಸತ್ತಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಭಾರದ ಹೃದಯ ಹೊತ್ತ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆ ನಂತರ ನಡಿದಿದ್ದೇ ಪವಾಡ!

ಈ ಸಂದರ್ಭದಲ್ಲಿ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇಹವನ್ನು ಅಲ್ಲಾಡಿಸುತ್ತಾ ಗೋಗರೆಯುತ್ತಿದ್ದಳು. ತಾಯಿಯ ಕರುಳ ಕೂಗು ಆ ದೇವರಿಗೆ ಕೇಳಿಸಿರಬೇಕು ಅನ್ನಿಸುತ್ತೆ, ಶವವಾಗಿ ಮಲಗಿದ್ದ ಮಗುವಿನ ದೇಹದಲ್ಲಿ ದಿಢೀರ್ ಚಲನೆ ಕಂಡುಬಂದಿರುವುದು ಒಂದು ಪವಾಡವೇ ಎಂದು ಹೇಳಬಹುದು.

ಹರಿಯಾಣದ ಜಜ್ಜಾರ್ ಜಿಲ್ಲೆಯ ಹಿತೇಶ್ ಎಂಬುವವರ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್ ಜ್ವರ ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥನಾಗಿದ್ದ ಕುನಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಮಗು ಮೃತಪಟ್ಟಿದೆ ಎಂದು ದೆಹಲಿ ವೈದ್ಯರು ಘೋಷಿಸಿದ್ದರು.

ಪಾಲಕರು 7 ವರ್ಷದ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಅಂತಿಮ ವಿಧಿವಿಧಾನ ಮಾಡಿಸುವ ವೇಳೆಯಲ್ಲಿ ದೂರದೂರಲ್ಲಿದ್ದ ಕುನಾಲ್ ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದ ಅವರಿಗಾಗಿ ಸ್ವಲ್ಪ ಸಮಯ ಎಲ್ಲರೂ ಕಾಯುತ್ತಿದ್ದರು. ಆದರೆ ಅವರು ಬರುವಷ್ಟರಲ್ಲಿ ಶವವಾಗಿದ್ದ ಮಗು ಬದುಕಿಬಂದ ಪವಾಡವೇ ನಡೆದು ಹೋಗಿದೆ.

ಹೆತ್ತ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ‘ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ…’ ಎಂದು ಮಗನ ದೇಹವನ್ನೆಲ್ಲ ಸವರುತ್ತಾ ಎಳೆದಾಡಿದ್ದಾಳೆ. ಆ ವೇಳೆ ಮಗ ಕುನಾಲ್ ದೇಹದಲ್ಲಿ ಚಲನೆ ಕಂಡು ಬಂದಿದ್ದು, ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇಹದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದ್ದು, ಎದೆಯ ಬಡಿತವೂ ಶುರುವಾಯಿತು.

ಕೂಡಲೇ ಕುಟುಂಬಸ್ಥರು ಮಗು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದ್ದರು. 20 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಜೂ. 15 ರಂದು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಮೂರು ರಾಜ್ಯಗಳಲ್ಲಿ ಸಂಭವಿಸಿದ ಭೂ ಕಂಪನ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಮೂರು ರಾಜ್ಯಗಳಲ್ಲಿ ಬೆಳ್ಳಂ ಬೆಳಿಗ್ಗೆಯೇ ಜನರಿಗೆ ಭೂ ಕಂಪನದ ಅನುಭವವಾಗಿದೆ.
ಈಶಾನ್ಯ ರಾಜ್ಯಗಳಾದ ಆಸ್ಸಾಂ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ಶುಕ್ರವಾರ ಬೆಳಿಗ್ಗೆ ಲಘ ಭೂಕಂಪ ಸಂಭವಿಸಿದೆ.

ಆಸ್ಸಾಂನ ಸೋನಿಪತ್ ನಲ್ಲಿ 4.1 ತೀವ್ರತೆ, ಮಣಿಪುರದ ಚಂಡೇಲ್ ಹಾಗೂ ಪಶ್ಚಿಮಖಾಸಿ ಹಿಲ್ಸ್ ಪ್ರದೇಶದಲ್ಲಿ 3.0ತೀವ್ರತೆ, ಮೇಘಾಲಯದಲ್ಲಿ 2.6 ತೀವ್ರತೆಯ ಲಘು ಭೂ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಸಂಸ್ಥೆ(ಎನ್ ಸಿಎಸ್) ತಿಳಿಸಿದೆ.

ಆಸ್ಸಾಂ ರಾಜ್ಯದ ತೇಜ್ ಪುರದಲ್ಲಿ ಕಳೆದ ಮೂರು ದಿನಗಳಲ್ಲಿಯೇ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ಇತ್ತೀಚೆಗಷ್ಟೇ ರೇಜ್ ಪುರದಲ್ಲಿ 3.0 ತೀವ್ರವತೆಯ ಭೂಕಂಪ ಸಂಭವಿಸಿತ್ತು. 10 ಕಿ.ಮೀ ಆಳದಲ್ಲಿ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ತೇಜ್ ಪುರದ ಪಶ್ಚಿಮಕ್ಕೆ 60ಕಿ.ಮೀ ದೂರದಲ್ಲಿತ್ತು. ಶುಕ್ರವಾರ ಸಂಭವಿಸಿದ ಭೂಕಂಪ 22 ಕಿ.ಮೀ ಆಳದಲ್ಲಿ ಸಂಭವಿಸಿದೆ. ತೇಜ್ ಪುರದಿಂದ 36 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಇತ್ತು ಎಂದು ಸಂಸ್ಥೆ ತಿಳಿಸಿದೆ.

ಮಣಿಪುರದ ಚಾಂಡೇಲ್ ನಲ್ಲಿ ಸಂಭವಿಸಿದ ಕಂಪನದ ತೀವ್ರತೆ 3.0ರಷ್ಟಿತ್ತು. ಇದು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದಕ್ಕೂ ಮುನ್ನ ಇದೇ ರಾಜ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

error: Content is protected !!