Home Blog Page 3311

ಠಾಣೆಯಲ್ಲಿ ಯುವಕನ ಸಾವಿಗೆ ಹೊಸ ಟ್ವಿಸ್ಟ್: ‘ಸಂತೋಷ’ ಕಳೆದುಕೊಂಡ ಕುಟುಂಬದ ಬೆನ್ನಿಗೆ ನಿಂತ ಡಿ.ಆರ್. ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ:

ಸಂತೋಷ ಕರಕಿಕಟ್ಟಿ

ದೀಪಾವಳಿ ಅಮಾವಾಸ್ಯೆಯಂದು‌ ಶಹರ ಠಾಣೆಯಲ್ಲಿ ಸಂತೋಷ್ ಕರಕಿಕಟ್ಟಿ ಎನ್ನುವ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಆತ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದರೆ, ಯುವಕನಿಗೆ ಪಿಟ್ಸ್ ಬಂದಿತ್ತೆಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದರು.

ಆದರೆ, ಪೊಲೀಸರ ಹೊಡೆತದಿಂದಲೇ ಸಂತೋಷ ಕೊನೆಯುಸಿರೆಳೆದಿದ್ದಾನೆ ಎನ್ನುವ ಅನುಮಾನ ಗದಗ-ಬೆಟಗೇರಿ ಜನರನ್ನು ಬಲವಾಗಿ ಕಾಡಿತ್ತು. ಇದಕ್ಕೆ ಪೂರಕವಾಗಿ ಪೊಲೀಸರ ಹೊಡೆತದಿಂದ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿರುವ ಸಂತೋಷನದು ಎನ್ನಲಾದ ಆಡಿಯೋ ಒಂದು ಹರಿದಾಡಿ ಮತ್ತಷ್ಟು ಆತಂಕ ಮೂಡಿಸಿತ್ತು. ಅದೂ ಸಾಲದೆಂಬಂತೆ, ಆಸ್ಪತ್ರೆಯಲ್ಲಿ ಮಗನ ಶವದ ಮುಂದೆಯೇ ಅನಸಮ್ಮನವರಿಗೆ ಪೊಲೀಸರು ಗದರಿಸಿ ಹೊರಗೆ ಕಳುಹಿಸಿದ ವೀಡಿಯೋ ಕೂಡ ಬಹಿರಂಗವಾಗಿತ್ತು.

ಆತ ಪಿಟ್ಸ್ ಅಥವಾ ಹೃದಯಾಘಾತದಿಂದ ಸತ್ತಿದ್ದರೆ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಬೇಕಿತ್ತು? ಹೂಳಬೇಕಿದ್ದ ಶವವನ್ನು ತರಾತುರಿಯಲ್ಲಿ ಸುಟ್ಟಿದ್ದೇಕೆ ಎನ್ನುವ ಪ್ರಶ್ನೆಗಳಿಗೂ ಪೊಲೀಸರ ಬಳಿ ಉತ್ತರವಿಲ್ಲ. ಸಾಕ್ಷ್ಯನಾಶಕ್ಕಾಗಿ ಇಷ್ಟನ್ನೆಲ್ಲ ಮಾಡಿದರೇ? ಗೊತ್ತಿಲ್ಲ.
ಇಡೀ ಪ್ರಕರಣದ ತನಿಖೆಯಲ್ಲಿ ಪೊಲೀಸರ ಅಸಹಕಾರ ಎದ್ದು ಕಾಣುತ್ತಿದೆ. ಸಂತೋಷ ಠಾಣೆಯಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ತಾಯಿ ಅನಸಮ್ಮ ಎಸ್ಪಿ ಅವರ ಮುಂದೆಯೇ ಹೇಳಿದ್ದರೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.

ಹೀಗಾಗಿ, ನೊಂದ ಮಹಿಳೆ ನಿರ್ವಾಹವಿಲ್ಲದೆ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಲ್ಲಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಗರಸಭೆ ಚುನಾವಣೆಯ ಭರಾಟೆಯಲ್ಲೂ‌ ನೊಂದ ಕುಟುಂಬಕ್ಕೆ ‌ನ್ಯಾಯ ದೊರಕಿಸಿಕೊಡಲು ಮುಂದಾಗಿರುವ ಡಿ.ಆರ್. ಪಾಟೀಲರು, ಎಸ್ಪಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಲು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ಕಬ್ಜಾದಾರರಿಗೆ ಕಿರುಕುಳ ಕೊಟ್ಟ ಆರೋಪದಲ್ಲಿ ಆದರ್ಶನಗರದ ಸಂತೋಷ ಕರಕಿಕಟ್ಟಿಯನ್ನು ಶಹರ ಠಾಣೆಯ ಪೊಲೀಸರು ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದರು. ಆಗ ಕರ್ತವ್ಯದಲ್ಲಿದ್ದ ಒಂದಿಬ್ಬರು ಪೊಲೀಸರು ಸಂತೋಷನನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಮೇಲೆ ಠಾಣೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದಾಗ ತನ್ನ ಆಪ್ತನಿಗೆ ಕರೆ ಮಾಡಿದ್ದ ಸಂತೋಷ, ಪೊಲೀಸರು ಥಳಿಸಿದ ಬಗ್ಗೆ ವಿವರ ಕೊಟ್ಟಿದ್ದ. ನೋವು ತಡೆಯಲಾಗುತ್ತಿಲ್ಲ, ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದ್ದ. ಆ ಆಡಿಯೋ ಕೂಡ ವೈರಲ್ ಆಗಿತ್ತು.

ಆಮೇಲೆ ಮೃತ ಸಂತೋಷನ ತಾಯಿಗೆ ಕರೆ ಮಾಡಿದ ಪೊಲೀಸರು ಅರ್ಜೆಂಟ್ ಜಿಲ್ಲಾ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕರೆ ಕಟ್ ಮಾಡಿದ್ದರು. ತಾಯಿ ಅನಸಮ್ಮ ಹಾಗೂ ಸಹೋದರ ಶಿವಕುಮಾರ್ ಆಸ್ಪತ್ರೆಗೆ ಹೋದಾಗ ಅಲ್ಲಿ‌, ತಾಯಿ‌ ಅನಸಮ್ಮನನ್ನು ಪೊಲೀಸರ ತಡೆದು, ಸಂತೋಷನ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಾಗ, ಯಾಕ್ರೀ ಯಪ್ಪಾ ಏನಾಗೈತೀ‌ ನನ್ನ ಮಗ್ಗ ಅಂದಾಗ‌, ಅಂವ ಸತ್ತಾನ‌ ಅಂತ ಪೊಲೀಸರು ಕಿವಿಗಪ್ಪಳಿಸುವಂತೆ, ಎದೆಯೇ ಒಡೆದು ಹೋಗುವಂತೆ ಕರ್ಕಶವಾಗಿ ಹೇಳಿದ್ದಾರೆ. ಗಾಬರಿಬಿದ್ದ ತಾಯಿ ಶವಾಗಾರದಲ್ಲಿದ್ದ ಮೃತದೇಹ ನೋಡಿದ್ದಾಳೆ. ತಾಯಿಗೆ ದುಃಖ ಉಮ್ಮಳಿಸಿ‌ ಬಂದಾಗ, ಪೊಲೀಸನೊಬ್ಬ ಆಕೆಯನ್ನು ಗದರಿಸಿ, ಹೊರಗೆ ಹೋಗುವಂತೆ ಕೈಸನ್ನೆ ಮಾಡಿದ್ದ. ಆ ವಿಡಿಯೋ ಕೂಡ ಬಹಿರಂಗವಾಗಿ ಪೊಲೀಸರ ವಿರುದ್ಧವೇ ಎಲ್ಲರ ದೃಷ್ಟಿ ತಿರುಗುವಂತೆ ಮಾಡಿತ್ತು.

ವಿಜಯಸಾಕ್ಷಿ ಕೂಡ ಆ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಎಚ್ಚೆತ್ತುಕೊಳ್ತಾರಾ ಪೊಲೀಸರು?

ಪೊಲೀಸರಿಗೆ ಪಾಪಪ್ರಜ್ಞೆಯೇ ಇದ್ದಂತಿಲ್ಲ. ಜನ ಏನು ಭಾವಿಸುತ್ತಾರೋ ಎಂಬ ಬಗ್ಗೆಯೂ ಕಾಳಜಿಯಿಲ್ಲ. ಥಳಿಸಿದ ಪೊಲೀಸರ ವಿರುದ್ಧ ಒಂದು ಸಣ್ಣ ಇಲಾಖಾ ತನಿಖೆಗೂ ಆದೇಶಿಸದೆ, ಏನೂ ಆಗೇ ಇಲ್ಲ ಎಂಬಂತೆ ಪೊಲೀಸ್ ಇಲಾಖೆ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದೆ. ಸಂತೋಷನನ್ನು ಥಳಿಸಿದ ಪೊಲೀಸರನ್ನು ರಕ್ಷಣೆ ಮಾಡಲು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಸಂತೋಷನ ತಾಯಿ ಕೂಡ ಮಗನ ಸಾವಿಗೆ ಕಾರಣವಾದ ಪೊಲೀಸರಿಗೆ ಹಿಡಿಶಾಪ ಹಾಕಿದ್ದಳು.
ಈಗ ಸ್ವತಃ ಮಾಜಿ ಶಾಸಕ ಡಿ ಆರ್ ಪಾಟೀಲ ಅವರೇ ನೊಂದ ಕುಟುಂಬಕ್ಕೆ ‌ನ್ಯಾಯ ಕೊಡಿಸಲು ಮುಂದಾಗಿದ್ದು, ಪೊಲೀಸ್ ಇಲಾಖೆಗೆ ದಿಗಿಲು ಮೂಡಿಸಿದೆ. ಮುಚ್ಚಿ ಹೋಗಲಿದ್ದ ಪ್ರಕರಣಕ್ಕೆ ಜೀವ ಬಂದಿದೆ.

ಈಗಲಾದರೂ ಸಿಬ್ಬಂದಿ ರಕ್ಷಣೆಯ ಹೊಣೆಗಾರಿಕೆ ಅಷ್ಟೇ ಅಲ್ಲ, ಸಾರ್ವಜನಿಕರ ಅದರಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹೊಣೆಗಾರಿಕೆಯೂ ಜಿಲ್ಲಾ ಪೊಲೀಸ್ ಇಲಾಖೆಯ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಸ್ತಾರಾ ಎಂಬುದನ್ನು ಕಾದು‌ ನೋಡಬೇಕಿದೆ.

ನಾಮಪತ್ರ ಹಿಂಪಡೆದ 19 ಅಭ್ಯರ್ಥಿಗಳು: 146 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದದ್ದರಿಂದ 19 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 146 ಜನ ಕಣದಲ್ಲಿ ಉಳಿದಿದ್ದಾರೆ.

ವಾರ್ಡ್ ನಂ.25ನ ಬಿಜೆಪಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದ ರವಿ ಸಿದ್ದಲಿಂಗ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ರವಿ ಸಿದ್ಧಲಿಂಗ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಾಗೆಯೇ ಬಹುತೇಕ ವಾರ್ಡ್’ಗಳಲ್ಲಿ ಕಾಂಗ್ರೆಸ್‌ನ ಗೆಲುವಿಗೆ ಅಡ್ಡಿಯಾಗಿದ್ದ ಪಕ್ಷೇತರರ ಮನವೊಲಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಆದರೂ ಕಾಂಗ್ರೆಸ್‌ನ ಕೆಲ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಪಕ್ಷದ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದ್ದಾರೆ.

ನಾಮಪತ್ರ ಹಿಂಪಡೆದವರ ವಿವರ:

ವಾರ್ಡ್ ನಂ.2 ಗೋಕಾವಿ ಪ್ರಶಾಂತ್ ಪರಶುರಾಮ,
ವಾರ್ಡ್ ನಂ.3 ಅಶೋಕ ಹೇಮಣ್ಣಮುಳಗುಂದ , ವಾರ್ಡ್ ನಂ.6 ನಂದಿನಿ ಮಂಜುನಾಥ ಮುಳಗುಂದ ಹಾಗೂ ಓಂಕಾರೇಶ್ವರಿ ಗೋಕಾಕ,
ವಾರ್ಡ್ ನಂ.7 ತಿಮ್ಮಯ್ಯ ರಂಗಯ್ಯ ಕೊಂಗತಿ,
ವಾರ್ಡ್ ನಂ.10 ಇಮ್ತಿಯಾಜ್ಅಹ್ಮದ್ ರಜಾಕಸಾಬ ಮಾನ್ವಿ ಹಾಗೂ ಮಹೇಶ ಗದುಗಿನ, ವಾರ್ಡ್ ನಂ.13 ಶ್ರೀಕಾಂತ್ ಶ್ರೀನಿವಾಸ್ ನಾಯರ, ವಾರ್ಡ್ ನಂ.16 ರಾಘವೇಂದ್ರ ಪರಾಪುರ ಹಾಗೂ ಲಕ್ಷ್ಮಣ ಹಳ್ಳಿಕೇರಿ ವಾರ್ಡ್ ನಂ.18 ಕಮಾನಗಾರ ಅಬ್ದುಲ್ ಖಾದರ್ ಜೈಲಾನಿ ಮಹ್ಮದ್ ಇಸ್ಮಾಯಿಲ್,

ವಾರ್ಡ್ ನಂ.21 ಶಿವಲಿಂಗಪ್ಪ ಮಗ್ಗಪ್ಪ ತುರಖಾನಿ,
ವಾರ್ಡ್ ನಂ.22 ಫಾರುಕ್ ಮುಲ್ಲಾ,
ವಾರ್ಡ್ ನಂ.23 ಮುಲ್ಲಾ ಮಹ್ಮದ್ ಶಾಹಿದ್, ವಾರ್ಡ್ ನಂ.24 ರಂಗಪ್ಪ ಯರಗುಡಿ,

ವಾರ್ಡ್ ನಂ.25 ರವಿ ಸಿದ್ದಲಿಂಗ ಹಾಗೂ ಪ್ರಫುಲ್ ದಾಸ್ ಪುಣೇಕರ್, ವಾರ್ಡ್ ನಂ.27 ಮಾಲನಬಿ ಫಕ್ರುದ್ದೀನ್ ಹೊಸಳ್ಳಿ, ವಾರ್ಡ್ ನಂ.34 ಸೀತಲ್ ಸೋಮಪ್ಪ ಲಮಾಣಿ

ಎಂಇಎಸ್, ಶಿವಸೇನೆ ಪುಂಡಾಟ; ಮರಾಠರಿಗೆ ಸಚಿವ ಪಾಟೀಲ್ ಖಡಕ್ ಎಚ್ಚರಿಕೆ

ವಿಕೋಪಕ್ಕೆ ಹೋದ್ರೆ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತೆ: ಸಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕರ್ನಾಟಕದ ಇಬ್ಬರು ಹೆಮ್ಮೆಯ ವ್ಯಕ್ತಿಗಳ ಮೂರ್ತಿಗಳನ್ನು ವಿಕಾರಗೊಳಿಸುವ ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ಸರಿಯಾದ ಪಾಠ ಕಲಿಸುತ್ತದೆ. ಮರಾಠಿಗರು ಇನ್ನಾದರೂ ಇಂತಹ ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಶನಿವಾರ ಗದಗನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪ್ರತಿವರ್ಷ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ನವರು ಇಂತಹ ಕಿತಾಪತಿ ಮಾಡುತ್ತಲೇ ಬರುತ್ತಿದ್ದು, ಈ ವರ್ಷ ಆ ಚಾಳಿಯನ್ನು ಮುಂದುವರೆಸಿದ್ದಾರೆ’ ಎಂದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೇಕೆಂದವರಿಗೆ ಬಿಟ್ಟು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಎಂಇಎಸ್ ನವರು ಈ ರೀತಿ ಮಾಡುತ್ತಿದ್ದಾರೆ. ಎಂಇಎಸ್ ನವರು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಅವರು ಅರ್ಥ ಮಾಡಿಕೊಳ್ಳಬೇಕು. ಆದರೆ, ಕರ್ನಾಟಕದವರು ಶಾಂತಿಪ್ರಿಯರು ಅವರಂತೆ ನಾವು ಮಾಡಬಾರದು’ ಎಂದು ಮನವಿ ಮಾಡಿಕೊಂಡರು.

ಶಿವಸೇನಾ ಕಾರ್ಯಕರ್ತರ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ಅವರು ‘ಕರ್ನಾಟಕದ ಕಾರುಗಳು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತವೆ. ಓಡಾಡುತ್ತವೆ. ಅವರು ಅಲ್ಲಿ ತೊಂದರೆ ಮಾಡಿದರೆ, ಇಲ್ಲಿಯ ಅವರ ಜನಕ್ಕೆ ತೊಂದರೆ ಆಗುತ್ತದೆ ಎಂಬ ಪರಿಕಲ್ಪನೆ ಇರಬೇಕು. ಅಲ್ಲಿ ಅವರು ಕಲ್ಲು ತೂರಿದ್ದಾರೆಂದು ನಮ್ಮವರು ಕಲ್ಲು ತೂರಿ ಅಂತಾ ಹೇಳುವುದಿಲ್ಲ. ವಿಕೋಪಕ್ಕೆ ಹೋದಾಗ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತದೆ. ಮರಾಠಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಪಸ್ಥಿತರಿದ್ದರು.

ಹಣ ಕೊಟ್ಟು ಮತ‌ವೂ ನೀಡಿ; ಪಕ್ಷೇತರ ಅಭ್ಯರ್ಥಿ ವಿನೂತನ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷಗಳನ್ನೊಡ್ಡಿ ಮತ ಪಡೆಯುವುದನ್ನು ಕೇಳಿದ್ದೇವೆ.. ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಮತದಾರರಿಂದಲೇ ಹಣ ಹಾಕಿಸಿಕೊಳ್ಳುವ ಮೂಲಕ ಮತ ನೀಡಿ ಎಂದು ಇನ್ನುಳಿದ ಅಭ್ಯರ್ಥಿಗಳಿಗಿಂತ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ.

ಹೌದು, ಡಿಸೆಂಬರ್ 27 ರಂದು ನಡೆಯುವ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 15ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಶ್ವನಾಥ ಶೀರಿ ಅವರ ಪ್ರಚಾರ ವೈಖರಿ ಇದು. ಚುನಾವಣೆ ಗೆಲ್ಲಲ್ಲು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿ ಮತ ಪಡೆಯುತ್ತಿರುವ ಹೊತ್ತಲ್ಲಿ ವಿಶ್ವನಾಥ ಅವರ ವಿನೂತನ ಪ್ರಚಾರಕ್ಕಿಳಿದಿದ್ದಾರೆ. ಇವರ ಪ್ರಚಾರ ಶೈಲಿಗೆ ಅವಳಿ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಕರಪತ್ರ ಹಂಚುತ್ತಿರುವ ವಿಶ್ವನಾಥ ಅವರು ‘ನಾನು ಮತದಾರರಿಗೆ ಹಣ ಕೊಟ್ಟು ಮತ ಪಡೆಯುವುದಿಲ್ಲ. ಚುನಾವಣಾ ವೆಚ್ಚಕ್ಕಾಗಿ ಮತದಾರರಿಂದಲೇ ಹಣದ ಜೊತೆಗೆ ಮತವನ್ನು ದಾನವಾಗಿ ಪಡೆಯಲು ಇಚ್ಛಿಸಿದ್ದೇನೆ. ಇದಕ್ಕಾಗಿ ಬ್ಯಾಂಕ್ ಖಾತೆ ವಿವರ ಹಾಗೂ ಡಿಜಿಟಲ್ ಮಾಧ್ಯಮದ ವಿವರ ನೀಡಿ, ಹಣ ಪಾವತಿಸಿದ ನಂತರ ಆ ವಿವರವನ್ನು ಗೂಗಲ್ ಫಾರ್ಮ್ ನಲ್ಲಿ ಅದನ್ನು ನಮೂದಿಸಿಲು ವಿನಂತಿಸಿದ್ದಾರೆ.

ಇಂದು ಹುಡ್ಕೋ ಕಾಲೋನಿಯ ಜಾಗೃತ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿಯ ಹುಡ್ಕೋ ಕಾಲೋನಿಯ ಸಿದ್ಧಲಿಂಗೇಶ್ವರ ನಗರದ ಉದ್ಯಾನವನದ ಹತ್ತಿರವಿರುವ ಶ್ರೀಜಾಗೃತ ಆಂಜನೇಯ ದೇವಸ್ಥಾನದಲ್ಲಿ ಶನಿವಾರ(ಡಿ.18) ಕಾರ್ತಿಕೋತ್ಸವ ಜರುಗಲಿದೆ.

ರಾತ್ರಿ 8 ಗಂಟೆಗೆ ಶ್ರೀಜಾಗೃತ ಆಂಜನೇಯ ಹಾಗೂ ನವಗ್ರಹಕ್ಕೆ ಕಾರ್ತಿಕೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.

ನಾಡದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಯ್ಯದ್ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ:

ಎಂಇಎಸ್‌ನ ಕೆಲವರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಶೀಘ್ರವೇ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಸಯ್ಯದ್ ಖಾಲಿದ್ ಕೊಪ್ಪಳ ಆಗ್ರಹಿಸಿದ್ದಾರೆ.

ಬಹುಭಾಷಾ ಸಾಮರಸ್ಯ ಹೊಂದಿರುವುದು ಕನ್ನಡಿಗರ ದೌರ್ಬಲ್ಯವಲ್ಲ, ಇದು ಕನ್ನಡಿಗರ ಔದಾರ್ಯವಾಗಿದೆ. ಕೂಡಲೇ ಕನ್ನಡ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೊಪ್ಪಳ ಒತ್ತಾಯಿಸಿದ್ದಾರೆ.

ಕಾಂಗ್ರೆಸ್’ನವರು ಗದಗ-ಬೆಟಗೇರಿ ಸಮಸ್ಯೆ ಬಗೆಹರಿಸುವುದಿಲ್ಲ

ವಿಜಯಸಾಕ್ಷಿ ಸುದ್ದಿ, ಗದಗ:

‘ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಕಾಂಗ್ರೆಸ್ ನವರು ಪ್ರತಿ ಬಾರಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಲ್ಲಿನ ಜನಕ್ಕೆ ಕಾಂಗ್ರೆಸ್ ನಲ್ಲಿ ಎಚ್.ಕೆ.ಪಾಟೀಲ್ ಹಾಗೂ ಡಿ.ಆರ್.ಪಾಟೀಲ್ ಅವರ ಹೆಸರು ಬಿಟ್ಟು ಮತ್ತೇನು ಗೊತ್ತಿಲ್ಲ. ಇಷ್ಟು ವರ್ಷ ಅವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಂದಿದ್ದೀರಾ. ಆದರೆ, ಈ ಬಾರಿ ಬದಲಾವಣೆ ಆಗಬೇಕು’ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

ಶುಕ್ರವಾರ ಅವಳಿ ನಗರದ 1ನೇ ವಾರ್ಡ್ ಅಭ್ಯರ್ಥಿ ಸೈನಾಜಬಿ ಶಾಮೀದ್ ನರಗುಂದ ಹಾಗೂ 2ನೇ ವಾರ್ಡ್ ಅಭ್ಯರ್ಥಿ ರಾಜೇಶ್ ಮುತಗಾರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.

‘ನಗರದಲ್ಲಿ ಕಾಂಗ್ರೆಸ್ ನವರು ನೀರಿನ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಕಳೆದ 50 ವರ್ಷಗಳಿಂದ ನೀರು, ಚರಂಡಿ, ವಿದ್ಯುತ್ ದೀಪಗಳ ಸಮಸ್ಯೆಗಳನ್ನೇ ಕೇಳುತ್ತಾ ಬಂದಿದ್ದೀರಿ. ಹೀಗಾಗಿ ಮತದಾರರು ಬದಲಾಗಬೇಕು. ನಗರದಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರಾದ ಸಿ.ಸಿ.ಪಾಟೀಲ ಅವರು ಮುತುವರ್ಜಿ ವಹಿಸಿದ್ದು, ಈ ಕುರಿತು ಸಭೆ ನಡೆಸಿದ್ದಾರೆ. ಅಲ್ಲದೇ, ನಗರದಲ್ಲಿರುವ ವಸತಿ ರಹಿತರನ್ನು ಪಟ್ಟಿ ಮಾಡಿಕೊಟ್ಟಲ್ಲಿ ಕೆಲವೇ ತಿಂಗಳುಗಳಲ್ಲಿ ಮನೆ ಮಂಜೂರು ಮಾಡಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ರಾಜು ಕುರುಡಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿಯಾಗಿ ಪ್ರವೀಣ ಸಂಗಳದ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಸಾಮಾಜಿಕ ಜಾಲತಾಣ ವಿಭಾಗದ ಆದೇಶದಂತೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಪ್ರವೀಣ ಸಂಗಳದ ಅವರು ನೇಮಕವಾಗಿದ್ದಾರೆ.

ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟಿಸಬೇಕು. ವಾಟ್ಸ್‌ಆಪ್, ಪೇಸ್‌ಬುಕ್, ಟ್ವೀಟರ್, ಕ್ಲಬ್‌ಹೌಸ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಬಿ.ಆರ್.ನಾಯ್ಡು ಆದೇಶಿಸಿದ್ದಾರೆ.

ಕೇಳಿದ್ದು ಬಿಜೆಪಿ ಟಿಕೆಟ್, ಸಿಕ್ಕಿದ್ದು ಕಾಂಗ್ರೆಸ್ ಟಿಕೆಟ್! ಕಾರ್ಯಕರ್ತರಲ್ಲಿ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯಲ್ಲೂ ಗೆಲ್ಲಬಹುದಾದ ಪಕ್ಷದವರಲ್ಲದ ಆಕಾಂಕ್ಷಿಗಳಿಗೆ ‘ಕೈ ನಾಯಕರು ಮಣೆ ಹಾಕಿದ್ದು, ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ.

ಅವಳಿ ನಗರದ ಪ್ರತಿ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಜೂಕಾಗಿ ನಡೆದುಕೊಂಡಿದೆ. ಉಭಯ ಪಕ್ಷಗಳು ಗೆಲ್ಲಬೇಕೆಂಬ ಒಂದೇ ಒಂದು ಮಾನದಂಡವಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಇದಕ್ಕಾಗಿ ಪಕ್ಷದವರಲ್ಲದಿದ್ದರೂ, ಅಂತಹವರಿಗೆ ಕೆಲ ವಾರ್ಡ್‌ನಲ್ಲಿ ಟಿಕೆಟ್ ನೀಡಿವೆ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಟಿಕೆಟ್ ಕೈ ತಪ್ಪಿದ್ದರಿಂದ ಆಕಾಂಕ್ಷಿಗಳು ತಮ್ಮ ಆಪ್ತರೆದುರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಗದಗ-ಬೆಟಗೇರಿಯ ವಾರ್ಡ್ ನಂ.33 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್‌ನಿಂದ ರುದ್ರಮ್ಮಾ ಕೆರಕಲಮಟ್ಟಿ, ಜಯಶ್ರೀ ಪವಾರ, ಅನ್ನಪೂರ್ಣ ಮಾರುತಿ ಜೋಗದಂಡಕರ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಟಿಕೆಟ್ ಗಿಟ್ಟಿಸಿಕೊಳ್ಳಲು ಹಲವು ನಾಯಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿಕೊಂಡಿದ್ದರು.

ಅಲ್ಲದೇ, 33ನೇ ವಾರ್ಡ್ ವ್ಯಾಪ್ತಿಗೆ ಬರುವ ಬ್ಯಾಂಕರ್ಸ್ ಕಾಲನಿ ಹಿರಿಯರು ಈ ಮೂವರಲ್ಲಿ ಯಾರಿಗಾದರೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಪಕ್ಷದ ನಾಯಕರು ಕಾಂಗ್ರೆಸ್‌ನಲ್ಲಿ ಪಕ್ಷದ ಈ ಮೂವರು ಪ್ರಬಲ ಆಕಾಂಕ್ಷಿಗಳನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಇದರೊಂದಿಗೆ ಬ್ಯಾಂಕರ್ಸ್ ಕಾಲನಿ ಹಿರಿಯರ ಅಭಿಪ್ರಾಯವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಹೌದು, 33ನೇ ವಾರ್ಡ್‌ನ ಬಿಜೆಪಿ ಟಿಕೆಟ್ ಕೇಳಿದ್ದ ಜ್ಯೋತಿ ಎಸ್.ಚಳಗೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಜ್ಯೋತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಕ್ಕಿಂತ ಮುಂಚೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅಷ್ಟರಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಚಳಿಗೇರಿ ಅವರ ಮನವೊಲಿಸಿ ಕಾಂಗ್ರೆಸ್ ಟಿಕೆಟ್ ಕೊಡಿಸಿದರು ಎಂದು ಮೂಲಗಳು ತಿಳಿಸಿವೆ.

ಕೊನೆಗಳಿಗೆಯಲ್ಲಿ ಬಿಜೆಪಿ ಅನಿತಾ ವಿಜಯಕುಮಾರ್ ಗಡ್ಡಿ ಅವರಿಗೆ ಟಿಕೆಟ್ ಕೊಟ್ಟು ನಿಟ್ಟುಸಿರು ಬಿಟ್ಟಿದೆ. ಇತ್ತ ಕಾಂಗ್ರೆಸ್ ಪಕ್ಷದವರೇ ಮೂವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರೂ, ಕೊನೆ ಕ್ಷಣದಲ್ಲಿ ಜ್ಯೋತಿ ಎಸ್.ಚಳಗೇರಿ ಅವರಿಗೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಕಾಂಗ್ರೆಸ್ ನಾಯಕರ ಇಂತಹದ್ದೊಂದು ತೀರ್ಮಾನ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

ಗುತ್ತಿಗೆದಾರರ ಆರೋಪದ ಹಿಂದೆ ‘ಕೈ’ವಾಡ; ಯಾವ್ಯಾವುದೋ ಪ್ರಾಣಿ ಮೇಲೆ ಸದನಕ್ಕೆ ಬಂದ್ರೆ ಬಿಡೋಕಾಗುತ್ತಾ?: ಸಚಿವ ಪಾಟೀಲ್ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ:

ಕಾಂಗ್ರೆಸ್ ನಾಯಕರ 40 ಪರ್ಸಂಟೇಜ್ ಆರೋಪ
ಆಧಾರ ರಹಿತವಾಗಿದ್ದು, ಗುತ್ತಿಗೆದಾರರ ಸಂಘ ತಂದಿದ್ದ ದೂರು ಯಾರೋ ಬರೆದುಕೊಟ್ಟಿದ್ದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದ ವಿಠ್ಠಲರೂಢ ಸಭಾಭವನದಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಅಭ್ಯರ್ಥಿಗಳ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಗುತ್ತಿಗೆದಾರರ ಅಧ್ಯಕ್ಷರು ದೂರಿನ ಕಾಪಿಯನ್ನು ನನಗೆ ಕೊಡಲಿಕ್ಕೆ ಬಂದಿದ್ದರು. ಅವರನ್ನು ಕೂರಿಸಿಕೊಂಡು ಪತ್ರ ಓದಿದೆ. ಓದಿದಾಗ ಅದರಲ್ಲಿ ಕೆಲ ಆಕ್ಷೇಪಾರ್ಹ, ಅಸಂವಿಧಾನಿಕ ಪದಗಳನ್ನು ಉಪಯೋಗಿಸಿದ್ದರು. ಹಿರಿಯರಿದ್ದು, ಇಷ್ಟು ದೊಡ್ಡ ಗುತ್ತಿಗೆದಾರರಿದ್ದು ನಿಮ್ಮ ನೋವು ನಲಿವುಗಳನ್ನು ತೊಂದರೆಗಳನ್ನು ಸರ್ಕಾರದ ಬಳಿ ಹೇಳುವ ಅಧಿಕಾರವಿದೆ. ಆದರೆ, ಪದ ಬಳಸುವಾಗ ಗೌರವಾನ್ವಿತ ಪದ ಬಳಕೆಯಾಗಬೇಕು ಅಂತಾ ಅವರ ಹಿರಿತನಕ್ಕೆ ಗೌರವ ಕೊಟ್ಟು ಹೇಳಿದ್ದೇನೆ. ಆದರೆ, ಅವರು ನೇರವಾಗಿ ‘ನನಗೇನು ಗೊತ್ತಿಲ್ಲ ಸರ್. ಯಾರೋ ಬರೆದುಕೊಂಡು ಬಂದಿದ್ದರು. ನಾನು ಸಹಿ ಮಾಡಿದ್ದೇನೆ’ ಎಂದರು. ಇದು ಅಕ್ಷರಶಃ ಸತ್ಯ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಅಸ್ಥಿತ್ವದಲ್ಲಿ ಇದೆ ಎನ್ನುವುದಕ್ಕೆ ಸಿದ್ದರಾಮಯ್ಯ ಎಲ್ಲರೂ ಸೇರಿ ಟ್ರ್ಯಾಕ್ಟರ್ನಲ್ಲಿ ಬಂದರು. ಟ್ಯಾಕ್ಟರ್ ನಲ್ಲಿ ಬಂದವರನ್ನು ಸುವರ್ಣ ಸೌಧದಲ್ಲಿ ಬಿಡಲು ಸಾಧ್ಯವೇ ಎಂಬುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಲೋಚಿಸಬೇಕು. ಏಕೆಂದರೆ, ಇವತ್ತೊಬ್ಬ ಟ್ರ್ಯಾಕ್ಟರ್, ನಾಳೆ ಒಬ್ಬ ಒಂಟೆ, ಕುದುರೆ, ಚಕ್ಕಡಿ ಸೇರಿ ಇನ್ನಾವುದೋ ಪ್ರಾಣಿಗಳ ಮೇಲೆ ಬರುತ್ತಾನೆ. ಹಾಗಂತ ಸುವರ್ಣಸೌಧ ಒಳಗೆ ಬಿಡುವುದಕ್ಕೆ ಆಗುತ್ತಾ? ಎಂದು ವ್ಯಂಗ್ಯವಾಡಿದರು.

ರಮೇಶ್ ಕುಮಾರ್ ಅವರ ಅತ್ಯಾಚಾರ ಹೇಳಿಕೆಗೆ ‘ಅವರು ಒಬ್ಬ ಹಿರಿಯ ಶಾಸಕರು. ವಿಧಾನಸಭಾ ಅಧ್ಯಕ್ಷರಾಗಿ ಕೆಲಸ‌ ಮಾಡಿದವರು. ಒಮ್ಮೊಮ್ಮೆ ತಮ್ಮ ಹಿಡಿತ ತಪ್ಪಿ ಮಾತನಾಡುತ್ತಾರೆ. ಅವರು ಏನು ಹೇಳಿದ್ದಾರೋ ಅದನ್ನು ನಾನು ಕೇಳಿಲ್ಲ. ಅದನ್ನು ಕೇಳಿದ ಬಳಿಕ ಅವಶ್ಯಕತೆ ಅನಿಸಿದರೆ ಉತ್ತರ ಕೊಡುತ್ತೇನೆ. ಆದರೆ, ಅವರ ಬಗ್ಗೆ ಎಲ್ಲರಿಗೂ ವೈಯಕ್ತಿಕವಾಗಿ ಗೌರವವಿದೆ. ಇಂತಹ ವಿಷಯದಲ್ಲಿ ನನ್ನ ಬಳಿ ಭಾಷಾ ಜ್ಞಾನ ಇದೆ ಅಂತಾ ಹೇಳಿ ಎಲ್ಲ ಕಡೆಗೂ ಉಪಯೋಗಿಸಬಾರದು’ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಎಂ.ಎಸ್.ಕರಿಗೌಡ್ರ, ಸಂಗಮೇಶ ದುಂದೂರ, ಸೇರಿದಂತೆ ಅನೇಕರು ಇದ್ದರು.

error: Content is protected !!