Home Blog Page 3319

ಮತ್ತೆ 116 ವಿದ್ಯಾರ್ಥಿಗಳಿಗೆ ಸೋಂಕು; ಪಾಲಕರಲ್ಲೂ ಕೊರೊನಾ ಆತಂಕ!

0

ನ.17 ರ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರ ತಪಾಸಣೆಗೆ ಸೂಚನೆ

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ನಿನ್ನೆ (ನ.25) ಮಧ್ಯರಾತ್ರಿ ಮತ್ತೆ 116 ಜನರಲ್ಲಿ ದೃಢಪಟ್ಟಿದೆ. ಇದರಿಂದಾಗಿ 182 ವಿದ್ಯಾರ್ಥಿಗಳಿಗೆ ಸೋಂಕು ಧೃಡಪಟ್ಟಂತಾಗಿದೆ.

ನ.17 ರಂದು ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದ್ದು, ಅಂತಹ ವ್ಯಕ್ತಿಗಳು ಕೂಡ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ನಿನ್ನೆ (ನ.25) ಸಂಜೆಯವರೆಗೆ ಮತ್ತೆ ಎಸ್ ಡಿ ಎಂ ಆವರಣದ 690 ಜನರನ್ನು ಆರ್ ಟಿ ಪಿ ಸಿ ಆರ್ ಹಾಗೂ ಆರ್ ಎ ಟಿ ತಪಾಸಣೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್ ಡಿ ಎಂ ನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. 116 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮಧ್ಯರಾತ್ರಿಯ ನಂತರ ಈ ವರದಿಗಳು ಲಭ್ಯವಾಗಿವೆ. ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದರಿಂದ ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ..

ಪಾಲಕರ ತಪಾಸಣೆಗೂ ಸೂಚನೆ

ನ.17 ರಂದು ಎಸ್ ಡಿ ಎಂ ಆಸ್ಪತ್ರೆ ಬಳಿಯ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕೆಲವು ಪಾಲಕರೂ ಕೂಡ ಭಾಗವಹಿಸಿದ್ದರೆಂದು ತಿಳಿದು ಬಂದಿದೆ.ಅಂತಹ ವ್ಯಕ್ತಿಗಳೂ ಕೂಡ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಇದುವರೆಗೆ ಎಸ್ ಡಿ ಎಂ ಆವರಣದಿಂದ ಹೊರಗೆ ಎಲ್ಲಿಯೂ ಪ್ರಕರಣಗಳೂ ವರದಿಯಾಗಿಲ್ಲ.

ಹುಬ್ಬಳ್ಳಿ ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸ್ವ್ಯಾಬ್ ನೀಡಿ, ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಎಸ್ಡಿ‌ಎಂ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢ : ಎರಡು ಹಾಸ್ಟೆಲ್ ಸೀಲ್ಡೌನ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿ ಎಂ) ವೈದ್ಯಕೀಯ ಮಹಾವಿದ್ಯಾಲಯದ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲ 400 ವಿದ್ಯಾರ್ಥಿಗಳು ಹಾಗೂ 3 ಸಾವಿರ ಸಿಬ್ಬಂದಿಯ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಹಾಸ್ಟೇಲ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ತೀವ್ರತರ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಔಷಧೋಪಚಾರ, ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.

ಸತ್ತೂರಿನ ಎಸ್.ಡಿ.ಎಂ‌.ವೈದ್ಯಕೀಯ ಕಾಲೇಜು ಆವರಣಕ್ಕೆ ಭೇಟಿ ನೀಡಿ, ಹಾಸ್ಟೇಲು ಸೀಲ್ ಡೌನ್ ಪ್ರದೇಶ ಪರಿಶೀಲಿಸಿ, ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಳೆದ 17 ನೇ ತಾರೀಖಿನಂದು ಕಾಲೇಜಿನ ಆವರಣದ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹಲವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ
ಸಂಸ್ಥೆಯ 400 ಪದವಿ ವಿದ್ಯಾರ್ಥಿಗಳಲ್ಲಿ ಈಗಾಗಲೇ 300 ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ವರದಿ ಬಂದಿದ್ದು 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 100 ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗುತ್ತಿದೆ.

ಎರಡು ಹಾಸ್ಟೇಲುಗಳನ್ನು ಸೀಲ್ ಡೌನ್ ಮಾಡಿ,ಸೋಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದೆ.ತಪಾಸಣೆಗೆ ಒಳಪಟ್ಟವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಆವರಣದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 3 ಸಾವಿರ ಸಿಬ್ಬಂದಿಯನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು ಎಂದರು.

ಕಾಲೇಜಿನ ಅವರಣದ ಕಲಾಕ್ಷೇತ್ರದಲ್ಲಿ ಕಳೆದ ನ.17 ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ತಪಾಸಣೆಗೆ ಒಳಪಟ್ಟು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮನವಿ ಮಾಡಿದ್ದಾರೆ.

ಈ ವೇಳೆ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ರತ್ನಮಾಲಾ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.

ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಮಯಪ್ರಜ್ಞೆ ; ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಿಕ್ಕು ನರಳುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆದಲ್ಲೇ ಹೆರಿಗೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಬುಧವಾರ(ನ.೨೩) ರಾತ್ರಿ ಗರ್ಭಿಣಿಯೋರ್ವರನ್ನು ಹುಬ್ಬಳ್ಳಿಗೆ ಕರೆದೋಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದಿಂದ ಹೆರಿಗೆಗೆ ಬಂದಿದ್ದ ಕವಿತಾ ಪೂಜಾರಿ ಎಂಬ ಮಹಿಳೆಗೆ 108 ವಾಹನದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನಗರದ ಹೃದಯಭಾಗ ಮುಳಗುಂದ ನಾಕಾ ಬಳಿ ಸುಸೂತ್ರವಾಗಿ ಹೆರಿಗೆ ಆಗಿದ್ದು, ಸದ್ಯ ಹೆರಿಗೆ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ತ ಕಡಿಮೆ ಇದ್ದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಇಲ್ಲಿನ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬಸ್ಥರು
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕರೆದೋಯ್ದಾಗಲೂ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು.

ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಿಕ್ಕು ಪರದಾಟ ನಡೆಸುತ್ತಿದ್ದ ಮಹಿಳೆಯ ಹೆರಿಗೆಯನ್ನು
ತುರ್ತು ತಜ್ಞ ರವಿ ಬಡಿಗೇರ್, 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಮಾಡಿಸಿಕೊಂಡಿದ್ದಾರೆ.

ಗದಗ ಕೃಷಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ; ಇನ್ನೋವಾ ಕಾರು, ದಾಖಲೆ ವಶ

ವಿಜಯಸಾಕ್ಷಿ ಸುದ್ದಿ, ಗದಗ:

ಬೆಳ್ಳಂಬೆಳಗ್ಗೆ ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ತಲಾಶ್ ನಡೆಸಿದ್ದಾರೆ.

ಮಂಗಳವಾರ (ನ.23) ಮಧ್ಯಾಹ್ನವೇ ಗದಗ ನಗರದಲ್ಲಿ ಬೀಡು ಬಿಟ್ಟಿದ್ದ ಎಸಿಬಿ ಅಧಿಕಾರಿಗಳು ಇಂದು ಮುಂಜಾವಿನಲ್ಲಿ ನಗರದ ಹುಡ್ಕೋ ಕಾಲನಿಯಲ್ಲಿರುವ ಅವರ ನಿವಾಸ ಹಾಗೂ ನೌಕರರ ಭವನದ ಪಕ್ಕವಿರುವ ಕೃಷಿ ಇಲಾಖೆಯ ಕಚೇರಿ ಮೇಲೆ ಹಾವೇರಿ ಎಸಿಬಿ ಇನ್ಸ್ ಪೆಕ್ಟರ್ ಬಸವರಾಜ್ ಬುದ್ನಿ ಹಾಗೂ ದಾವಣಗೆರೆ ಎಸಿಬಿ ಇನ್ಸ್‌ಪೆಕ್ಟರ್ ರವೀಂದ್ರ ಕುರಬಗಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ರುದ್ರೇಶಪ್ಪ ಟಿ. ಎಸ್. ಅವರಿಗೆ ಸಂಬಂಧಿಸಿದ ಗದಗ ನಗರ ಸೇರಿದಂತೆ ದಾವಣಗೆರೆಯ ಚೆಳ್ಳಕೆರೆಯಲ್ಲಿರುವ ನಿವಾಸ ಮತ್ತು ತೋಟ, ಶಿವಮೊಗ್ಗ ಚಾಲುಕ್ಯ ಬಡಾವಣೆ ಹಾಗೂ ಗೋಪಾಳದ ನಿವಾಸ, ಹಾವೇರಿ ಸೇರಿ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಒಂದು ಇನ್ನೋವಾ ಕಾರು ಹಾಗೂ ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕವಾಗಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಶಂಕೆ ಇದ್ದು, ಅಧಿಕಾರಿಗಳು ಕಳೆದ ನಾಲ್ಕು ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿ ರುದ್ರೇಶಪ್ಪ ಅವರನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಭಾರತದಲ್ಲಿ 7,579 ಹೊಸ ಕೊರೊನಾ ಪ್ರಕರಣಗಳು ದೃಢ

0

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,579 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 543 ದಿನಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಇದಲ್ಲದೆ, ಕಳೆದ 24 ಗಂಟೆಗಳಲ್ಲಿ 236 ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಕರೋನಾ ಸ್ಥಿತಿಯ ಕುರಿತು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ವಿವರಗಳು ಈ ಕೆಳಗಿನಂತಿವೆ:
ಕಳೆದ 24 ಗಂಟೆಗಳಲ್ಲಿ ಸೋಂಕಿತರು : 7,579. (ಕೇರಳದಲ್ಲಿ ಸಂಖ್ಯೆ 3,698)
ಇದುವರೆಗೆ ಕರೋನಾ ಸೋಂಕಿತರ ಸಂಖ್ಯೆ : 3,45,26,480.
ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡವರು : 12,202.
ಇಲ್ಲಿಯವರೆಗೆ ಗುಣಮುಖರಾದವರು : 3,39,46,749.
ರೋಗದಿಂದ ಚೇತರಿಸಿಕೊಳ್ಳುವ ಜನರ ಶೇಕಡಾವಾರು ಪ್ರಮಾಣವು 98.32% ಆಗಿದೆ. ಇದು ಮಾರ್ಚ್ 2020 ರಿಂದ ಅತಿ ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಮೃತಪಟ್ಟವರು : 236 ಕೇರಳ ಒಂದರಲ್ಲೇ 75 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾದ ಒಟ್ಟು ಸಾವುನೋವುಗಳು: 4,66,147. .
ಚಿಕಿತ್ಸೆಯಲ್ಲಿರುವ ಒಳರೋಗಿಗಳ ಸಂಖ್ಯೆ: 1,13,584. ಇದು ಕಳೆದ 536 ದಿನಗಳಲ್ಲೇ ಅತ್ಯಂತ ಕಡಿಮೆ ಮಟ್ಟವಾಗಿದೆ.
ಸಾಪ್ತಾಹಿಕ ಸಕಾರಾತ್ಮಕತೆಯ ದರವು 0.93% ಆಗಿದೆ . ಕಳೆದ 59 ದಿನಗಳಿಂದ ಇದು 2% ಕ್ಕಿಂತ ಕಡಿಮೆಯಾಗಿದೆ.
ದೈನಂದಿನ ಧನಾತ್ಮಕತೆಯ ದರವು 1.08% ಆಗಿದೆ . ಕಳೆದ 49 ದಿನಗಳಿಂದ ಇದು 2% ಕ್ಕಿಂತ ಕಡಿಮೆಯಾಗಿದೆ.
ಧನಾತ್ಮಕ ದರವು 100 ಜನರಿಗೆ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ದೃಢೀಕರಿಸುವ ಲೆಕ್ಕಾಚಾರವಾಗಿದೆ.
ಕರೋನಾ ಲಸಿಕೆ ಪಡೆದವರು ಇಲ್ಲಿಯವರೆಗೆ: 1,17,63,73,499 ( 117.63) ಕೋಟಿ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.

ಶ್ರೀರಾಮಸೇನೆ ಕಾರ್ಯಕರ್ತನಿಂದ ಮೂತ್ರ ವಿಸರ್ಜನೆ; ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್‌ಪಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆಯಂತಹ ವಿನೂತನ ಪ್ರತಿಭಟನೆ ನಡೆಸಿದ್ದರು.

ಅದರಲ್ಲಿ ಓರ್ವ ಶ್ರೀರಾಮಸೇನೆ ಕಾರ್ಯಕರ್ತನೊಬ್ಬ ನಗರಸಭೆ ಕಾರಿಡಾರ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಇದರ ಬೆನ್ನಲ್ಲೇ ಈಗ ದಲಿತ ಸಂಘಟನೆಗಳ ಒಕ್ಕೂಟವು ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಶ್ರೀರಾಮ ಸಂಘಟನೆ ವತಿಯಿಂದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರ ಕಛೇರಿ ಮುಂದೆ ಮೂತ್ರ ವಿಸರ್ಜನೆ ಮಾಡಿರುವುದು ಖಂಡನಾರ್ಹವಾಗಿದ್ದು, ಘಟನೆಯಿಂದ ನಗರಸಭೆ ತಲೆ ತಗ್ಗಿಸುವಂತಾಗಿದೆ. ಈ ಘಟನೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಹಾಗೂ ದಲಿತ ಸಮುದಾಯವನ್ನು ಅವಮಾನಿಸಿದಂತಾಗಿದೆ.

ಇದನ್ನೂ ಓದಿ ಶೇಮ್ ಶೇಮ್ : ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತ

ನಗರಸಭೆ ಕಚೇರಿಯನ್ನು ಸ್ವಚ್ಛಗೊಳಿಸುವವರು ಇಲ್ಲಿನ ಪೌರಕಾರ್ಮಿಕರೇ ವಿನಃ ಅಧಿಕಾರಿ ವರ್ಗವಲ್ಲ. ಈ ರೀತಿ ಉದ್ಧಟನ ತೋರಿದ ಶ್ರೀರಾಮಸೇನೆ ಸಂಘಟನೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನುಸಾರವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೇ, ಸರ್ಕಾರಿ ಕಛೇರಿಗಳಲ್ಲಿ ಈ ರೀತಿ ಮೂತ್ರ ವಿಸರ್ಜನೆಗೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಮನವಿಯಲ್ಲಿ ಉಲ್ಲೇಖಿಸಿದೆ.

ಈ ಸಂದಂರ್ಭದಲ್ಲಿ ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಆನಂದ ಸಿಂಗಾಡಿ, ಯಲ್ಲಪ್ಪ ರಾಮಗಿರಿ, ರಮೇಶ ಕೋಳೂರ, ಶಿವಾನಂದ ತಮ್ಮಣ್ಣವರ, ಅನೀಲ ಕಾಳೆ, ಪರಶು ಕಾಳೆ, ಬಸೂ ಬಿಳೆಯಲಿ, ಮಂಜು ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.

ಶೇಮ್ ಶೇಮ್ : ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಗದಗ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದಲ್ಲಿನ ಶೌಚಾಲಾಯಗಳನ್ನು ಒಡೆದು ಹಾಕಿ ಡಯಾಲಿಸಿಸ್ ಕೇಂದ್ರಗಳಿಗೆ ಹಾಗೂ ಬಯಲು ಶೌಚಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಗದಗ ನಗರಸಭೆ ಅಧಿಕಾರಿಗಳು ಕಳೆದ ಎರಡು ವರ್ಷಗಳ ಹಿಂದೆ ಅವಳಿ ನಗರದಲ್ಲಿನ ಎಲ್ಲ ಮೂತ್ರಾಲಯಗಳನ್ನು ಕೆಡವಿ ಹಾಕಿದ್ದಾರೆ. ಈ ಮೂತ್ರಾಲಯಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಅವಳಿ ನಗರದಲ್ಲಿನ ನಾಗರಿಕರು ತೀವ್ರವಾಗಿ ಪರಿತಪಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ಕಿಡಿಕಾರಿದರು.

ಕನಕದಾಸ ಮಹಾನ್ ಹರಿಭಕ್ತ ; ಮುತ್ತು ರಾಯರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮದ ಕನಕದಾಸ ವೃತ್ತದಲ್ಲಿರುವ ಕನಕದಾಸರ ಪುತ್ಥಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಪಿಡುಗುಗಳ ಕುರಿತು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಿದರು. ಅಲ್ಲದೇ, ಬಾಗಿಲನು ತೆರೆದು ಸೇವೆಯನು ಕೊಡುವ ಹರಿಯನ್ನೇ ಒಲಿಸಿಕೊಂಡ ಮಹಾನ್ ಹರಿಭಕ್ತರಾಗಿದ್ದರು’ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ‌.ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪುಗೌಡ ಹಿರೇಗೌಡ್ರ, ಉಣ್ಣೆ ನಿಗಮದ ಅಧ್ಯಕ್ಷ ಪಡಿಯಪ್ಪ ಮರಿಯಣ್ಣವರ, ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ಗುಂಜಲ್, ಹಿರಿಯರಾದ ಮಲ್ಲನಗೌಡ ಸರ್ವಮಾನೇದ, ಬಸನಗೌಡ ಮುದಿಗೌಡ್ರ, ಅಡಿವೆಪ್ಪ ಮರಿಯಣ್ಣವರ, ಚನ್ನಪ್ಪ ಬ್ಯಾಳಿ, ಹನಮಂತ ಚಾವಡಿ ಸೇರಿದಂತೆ ಅನೇಕರು ಇದ್ದರು.

ಶೌಚಾಲಯ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಶ್ರೀರಾಮಸೇನೆಯಿಂದ ನಾಳೆ ಪೌರಾಯುಕ್ತರ ಕಚೇರಿಗೆ ಮೂತ್ರ ವಿಸರ್ಜನೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಗದಗ ನಗರಸಭೆಯ ಕ್ರಮ ಖಂಡಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳವಾರ (ನ. ೨೩) ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಿದ್ದಾರೆ.

ಈ ಬಗ್ಗೆ ಪ್ರತಿಕಾ ಪ್ರಕಟಣೆ ನೀಡಿರುವ ಅವರು, ‘ಗದಗ ನಗರಸಭೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಅವಳಿ ನಗರದ ಎಲ್ಲ ಮೂತ್ರಾಲಯಗಳನ್ನು ಕೆಡವಿ ಹಾಕಿದ್ದಾರೆ. ಈ ಮೂತ್ರಾಲಯಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾ ಕಾಲಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಅವಳಿ ನಗರದ ನಾಗರಿಕರು ತೀವ್ರವಾಗಿ ಪರಿತಪಿಸುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ 10.30ಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಗದಗ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಲಿದ್ದಾರೆ ಎಂದು ಶ್ರೀರಾಮಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ತಿಳಿಸಿದ್ದಾರೆ.

ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯೆ : ಶೋಕದಲ್ಲಿ ಭಕ್ತರು

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ:

ತಾಲೂಕಿನ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಕಾಯಕಯೋಗಿ,‌ ತ್ರಿವಿಧ ದಾಸೋಹಿ ಡಾ.ಸಂಗನಬಸವ (ಅಭಿನವ ಅನ್ನದಾನೇಶ್ವರ) ಸ್ವಾಮೀಜಿ (85) ಅವರು ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.

ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ. ಇನ್ನು ಶ್ರೀಗಳ ಅಗಲಿಕೆಗೆ ಲೋಕಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಾನಗಲ್ ಶಿವಯೋಗಿ ಮಂದಿರದ ಅಧ್ಯಕ್ಷರಾಗಿದ್ದ ಶ್ರೀ ಗಳು ಉತ್ತರ ಕರ್ನಾಟಕ ಭಾಗದ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಮೂಲಕ ಬೆಳಕಾಗಿ ಶ್ರೀಗಳು ಶ್ರೀಮಠದಲ್ಲಿ ಇತ್ತೀಚೆಗೆ ‌ನಡೆದ ನ.8, 9 ಮತ್ತು 10 ರಂದು ಮೂರು ದಿನಗಳ ಕಾಲ ಅನ್ನದಾನೇಶ್ವರ ಶ್ರೀಗಳ ಗುರುವಂದನಾ ಹಾಗೂ ಮುಪ್ಪಿನ ಬಸವಲಿಂಗ ಸ್ವಾಮೀಜಿ‌ ಅವರ ಚರಪಟ್ಟಾಧಿಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಹಾಲಕೆರೆಯ ಡಾ.ಅಭಿನವ ಅನ್ನದಾನ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ನರೇಗಲ್ ಪಟ್ಟಣದ ವರ್ತಕರ ಸಂಘದಿಂದ ಸೋಮವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಗೌರವ ಸೂಚಿಸುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಧಿವಿಯ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

error: Content is protected !!