Home Blog Page 3331

ಎಕರೆಗೆ 50 ಸಾವಿರ ಪರಿಹಾರ ಕೊಡಿ; ಬೇಕ್ರಿ ರಮೇಶ್ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ

ವ್ಯಾಪಕ ಮಳೆಯಿಂದ ಬೆಳೆಹಾನಿಯಾಗಿದ್ದು ಪ್ರತಿ ಎಕರೆಗೆ ಸರಕಾರ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ರೈತರ ಕೃಷಿ ಭೂಮಿಗಳಲ್ಲಿದ್ದ ಶೇಂಗಾ, ಮೆಣಸಿನಗಿಡ, ಹತ್ತಿ, ಉಳ್ಳಾಗಡ್ಡಿ, ಗೋವಿನಜೋಳ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.

ಕೂಡಲೇ ರಾಜ್ಯ ಸರಕಾರ ರೈತರಿಗೆ ಬೆಳೆ ಪರಿಹಾರ ಹಾಗೂ ನಿರಂತರ ಮಳೆಯಿಂದ ಹಾನಿಯಾಗಿರುವ ಮನೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಪರಿಹಾರ ಬಿಡುಗಡೆ ವಿಳಂಬವಾದರೆ ಮುಂಬರುವ ದಿನಗಳಲ್ಲಿ ರೈತರ ಕ್ರಾಂತಿಯಿಂದ ರಾಜಕೀಯ ನಾಯಕರು ಬುದ್ಧಿ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುಲಿಕೇಶಿ ಪ್ರತಿಮೆ ಸ್ಥಾಪಿಸಲು ಆಗ್ರಹ

ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕು. ಉತ್ತರ ಪಥೇಶ್ವರ ಹರ್ಷವರ್ಧನನು ಇಮ್ಮಡಿ ಪುಲಿಕೇಶಿಯ ಎದುರು ಸೋಲನ್ನು ಒಪ್ಪಿಕೊಂಡು, ಇಮ್ಮಡಿ ಪುಲಿಕೇಶಿಗೆ ‘ದಕ್ಷಿಣ ಪಥೇಶ್ವರ’ ಬಿರುದು ನೀಡಿದ್ದಾನೆ. ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮನಸ್ಸು ಮಾಡಿದ್ದರೆ ಭಾರತದ ಚಕ್ರರ್ತಿಯಾಗಿ ಮರೆಯಬಹುದಿತ್ತು’ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜು, ಜಿಲ್ಲಾಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಸಂಚಾಲಕ ಮಂಜುನಾಥ ಬುರಡಿ, ಶಿವಪ್ಪ ಚಿಕ್ಕಬಳ್ಳಾಪುರ, ರಾಮು ಮಂಡ್ಯ ಇದ್ದರು.

ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿ; ಓರ್ವ ಸ್ಥಳದಲ್ಲಿಯೇ ಸಾವು, ನಾಲ್ವರು ಗಂಭೀರ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ

ವೇಗವಾಗಿ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹಳ್ಳಿಕೇರಿ-ಬನ್ನಿಕೊಪ್ಪ ಮಧ್ಯೆ ಸಂಜೆ ನಡೆದಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ ಅಲ್ಲಾಭಕ್ಷಿ (35) ಮೃತಪಟ್ಟ ದುರ್ಧೈವಿ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ನಾಲ್ವರು ಲಕ್ಕುಂಡಿ ಗ್ರಾಮದವರೆಂದು ತಿಳಿದು ಬಂದಿದೆ.

ಮೃತ ಅಲ್ಲಾಭಕ್ಷಿ ಕಾರಿನಲ್ಲಿ ಸಿಲುಕಿ ಮೃತಪಟ್ಟರೆ, ಉಳಿದವರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದ ಸೌಂಡಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನ ಓಡೋಡಿ ಬಂದು ನೋಡಿ ಮಮ್ಮಲ ಮರುಗಿದರು. ಅಷ್ಟೇ ಅಲ್ಲ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಐವರು ಗೆಳೆಯರಾಗಿದ್ದು ಬನ್ನಿಕೊಪ್ಪದ ಕಡೆ ಹೊರಟಿದ್ದರು ಎನ್ನಲಾಗಿದೆ. ಗಾಯಗೊಂಡವರು ಸದ್ಯ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ ಸ್ಪೈರ್ ಅವಾರ್ಡ್ 2020-21; ನವದೆಹಲಿಗೆ ತೆರಳಿದ ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ

ಇನ್ ಸ್ಪೈರ್ ಅವಾರ್ಡ್ 2020-21 ನೇ ಸಾಲಿನ 9ನೇ ರಾಷ್ಟ್ರಹಂತದ ವಸ್ತುಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯು ನವದೆಹಲಿಯಲ್ಲಿ ಸೆ. 14 ರಿಂದ 16 ರ ವರೆಗೆ ನಡೆಯಲಿದ್ದು, ಗದಗ ಜಿಲ್ಲೆಯಿಂದ 6 ವಿದ್ಯಾರ್ಥಿಗಳು ಶನಿವಾರ ರೈಲು ಮೂಲಕ ನವದೆಹಲಿಗೆ ತೆರಳಿದರು.

ಮುಂಡರಗಿ ತಾಲ್ಲೂಕಿನ ಶ್ರೀನಿವಾಸ್ ಅಂಬರೀಷ್ ಮಸಲವಾಡ, ಗಜೇಂದ್ರಗಡ ತಾಲೂಕಿನ ಅನುಶ್ರೀ ಅಮರಯ್ಯ ಗೌರಿಮಠ, ಕಳಕೇಶ್ ಶಂಕ್ರಪ್ಪ ಗುಂಡಿ, ಈಶ್ವರ್ ಸಂಗಪ್ಪ ಸೂರಿ, ಶಿರಹಟ್ಟಿ ತಾಲೂಕಿನ ರೇಷ್ಮಾ ಶೇಖಪ್ಪ ಲಮಾಣಿ, ಗದಗ ಶಹರದ ನೇಹಾ ಬಿ ಕುಲಕರ್ಣಿ ಈ ಆರು ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಉಸ್ತುವಾರಿ ಶಿಕ್ಷಕಿಯಾಗಿ ಶ್ರೀಮತಿ ಭುವನೇಶ್ವರಿ ಜಿ ಪೋಲೀಸ್ ಪಾಟೀಲ್ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ ಪ್ರಾಚಾರ್ಯ ಎಸ್ ಡಿ ಗಾಂಜಿ, ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಉಪನ್ಯಾಸಕ ಶಂಕರ್ ಹಡಗಲಿ, ಹಿರಿಯ ಉಪನ್ಯಾಸಕರಾದ ಆರ್. ಎಸ್. ಬುರಡಿ, ತಾಂತ್ರಿಕ ಸಹಾಯಕರಾದ ಶ್ರೀಮತಿ ಎಸ್. ಎಸ್.ಗೌಡರ ಹಾಗೂ ತಾಲೂಕು ನೋಡಲ್ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.

ಗದಗ-ಬೆಳದಡಿ ಸಂಪರ್ಕ ರಸ್ತೆ ಸಂರಕ್ಷಣೆಗೆ ತಡೆಗೋಡೆ ನಿರ್ಮಿಸಲು ಸಚಿವ ಪಾಟೀಲಗೆ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ಈ ಬಾರಿ ಜಿಲ್ಲೆಯ ಶಿರುಂದ-ಯಲಿಶಿರುಂದ, ಬೆಳದಡಿ ತಾಂಡಾ ಹಾಗೂ ನಾಗಾವಿ ಭಾಗದಲ್ಲಿ ರಾಜ್ಯದಲ್ಲೇ ದಾಖಲೆ ಪ್ರಮಾಣದ ಮಳೆಯಾಗಿದ್ದು, ಗದಗ-ಬೆಳದಡಿ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತದೆ.

ನೀರಿನಿಂದ ರಸ್ತೆಯು ಸುರಕ್ಷಿತವಾಗಿ ಉಳಿಯಬೇಕಾದರೆ ತಡೆಗೋಡೆ ನಿರ್ಮಾಣ ಅವಶ್ಯಕವಾಗಿದೆ ಎಂದು ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ದಿ.11 ರಂದು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮನವಿ ಸಲ್ಲಿಸಿದರು. ಇಲ್ಲಿನ ಹಿರಿಕೆರೆಯು ಭರ್ತಿಯಾದ ಪರಿಣಾಮ ಅಂತರ್ಜಲದ ಮಟ್ಟ ಹೆಚ್ಚಾಗಿ ಸುಮಾರು 5 ಸಾವಿರ ಎಕರೆ ಹೊಲಗಳ ಬೆಳೆಗಳು ನಾಶವಾಗಿದ್ದು, ಜಮೀನಿನಲ್ಲಿ ಸಂಗ್ರಹವಾಗುವ ನೀರು ರಸ್ತೆಗೆ ಹರಿದು ರಸ್ತೆಯು ಹದಗೆಟ್ಟು ಹೋಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಜೊತೆಗೆ ಗದಗ-ಬೆಳದಡಿ ರಸ್ತೆಯ ಹಿತದೃಷ್ಠಿಯಿಂದ ತಡೆಗೋಡೆ ನಿರ್ಮಾಣ ಅಗತ್ಯವಾಗಿದೆ ಎಂದರು.

ಇತಿಹಾಸ ಪ್ರಸಿದ್ಧವಾದ ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಬುಕ್ಕನಕೆರೆಯಲ್ಲಿ ತುಂಬಿಕೊಂಡಿರುವ ಅಪಾರ ಪ್ರಮಾಣದ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೊರಹಾಕಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಸಚಿವರು ಕ್ರಮ ವಹಿಸುವಂತೆ ಮನವಿ ಮಾಡಿದರು.

ತಾ.ಪಂ ಮಾಜಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯರಾದ ಬಿ.ಎಸ್ ಚಿಂಚಲಿ ಮಾತನಾಡಿ, ಮಳೆಯಿಂದ ಹಾಳಾಗಿರುವ ಇಚಲಹಳ್ಳದ ೨ ಕೆರೆಗಳನ್ನು ದುರಸ್ತಿಗೊಳಿಸುವುದರ ಜೊತೆಗೆ ಬೆಳೆಹಾನಿಯಾದ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ನಾಗಾವಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ನಾಗಾವಿ ತಾಂಡಾದ ಗಣೇಶ ಲಮಾಣಿ, ಗದಗ-ನಾಗಾವಿ ಸಂಪರ್ಕ ರಸ್ತೆ ಹಾಳಾಗಿರುವುದರಿಂದ ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಂಚಾರಿಗಳಿಗೆ ತೀವ್ರ ತೊಂದರೆಯುಂಟಾಗಿದ್ದು, ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಿ ರಸ್ತೆ ಸುಧಾರಿಸಬೇಕೆಂದು ಮನವಿ ಮಾಡಿದರು.

ವಿ.ಪ ಸದಸ್ಯರಾದ ಎಸ್.ವಿ ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಣ್ಣ ಪಲ್ಲೇದ, ಜಿಲ್ಲಾಧಿಕಾರಿಗಳಾದ ವೈಶಾಲಿ. ಎಂ.ಎಲ್, ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ ದೇವರಾಜು ಇವರ ಉಪಸ್ಥಿತಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ರಾಜು ಕುರಡಗಿ, ವಿಜಯಕುಮಾರ ಗಡ್ಡಿ, ಭೀಮಸಿಂಗ್ ರಾಠೋಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸಲಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಅತಿವೃಷ್ಠಿಯಿಂದ ಗದಗ ಜಿಲ್ಲೆಯಲ್ಲಿ ಸುಮಾರು 811.26 ಕೋಟಿ ರೂ. ಹಾನಿ

ಉಸ್ತುವಾರಿ ಸಚಿವ ಬಿ.ಸಿ.ಪಾಟೀಲರಿಂದ ಅತಿವೃಷ್ಠಿ ಹಾನಿ ಪ್ರದೇಶಗಳಿಗೆ ಭೇಟಿ, ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಅಧಿಕ ಪ್ರಮಾಣದ ಬೆಳೆ, ಮನೆ, ಸರ್ಕಾರಿ ಆಸ್ತಿ ಹಾನಿಗೊಳಗಾಗಿದ್ದು ಹಾನಿಯ ಪ್ರಮಾಣವನ್ನು 811.26 ಕೋಟಿ ಎಂದು ಅಂದಾಜಿಸಲಾಗಿದೆ. ಹಾನಿಯ ಸಮೀಕ್ಷಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರಿಕಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದಾಗ ಜಿಲ್ಲೆಯಲ್ಲಿ 93 ಸಾವರಿ ಹೆಕ್ಟೇರ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿತ್ತು. ಇದರಲ್ಲಿ 76 ಸಾವಿರ ಹೆಕ್ಟೇರ ಪ್ರದೇಶದ ಬೆಳೆಗಳ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.

ಸೆಪ್ಟೆಂಬರ 12ರ ನಂತರ ಪರಿಹಾರ ಮೊತ್ತವನ್ನು ಅರ್ಹರಿಗೆ ನೀಡಲು ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಈ ವರೆಗೆ 7 ಮಾನವ ಜೀವ ಹಾನಿ ಸಂಭವಿಸಿದ್ದು ಇದರಲ್ಲಿ 4 ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಜೊತೆಗೆ ಇಬ್ಬರು ಕರ್ತವ್ಯ ನಿರತ ಪೋಲಿಸರ ಪೇದೆಗಳ ಜೀವ ಹಾನಿ ಸಂಭವಿಸಿದ್ದು ಆ ಕುಟುಂಬಗಳಿಗೆ ಶೀಘ್ರವೇ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ದೊರಕಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಒಟ್ಟು 59 ಜಾನುವಾರುಗಳ ಜೀವಹಾನಿಯಾಗಿದ್ದು, 1601 ಹಾನಿಯಾದ ಮನೆಗಳ ಪೈಕಿ 655 ಮನೆಗಳಿಗೆ ಮಾರ್ಗಸೂಚಿಗಳನ್ವಯ ಪರಿಹಾರ ನೀಡಲಾಗಿದೆ. ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಲೋಕೊಪಯೋಗಿ ಇಲಾಖೆ ರಸ್ತೆಗಳು ಅಧಿಕ ಹಾನಿಗೊಳಗಾಗಿದ್ದು ಜೊತೆಗೆ ಕೆರೆಗಳು ಸಹ ಹಾನಿಗೊಳಗಾಗಿವೆ. ಹಾನಿಯಾದ ಬೆಳೆ, ಮನೆಗಳಿಗೆ ಸರ್ಕಾರದ ನೆರವನ್ನು ಪಕ್ಷಪಾತ ಮಾಡದೆ ವಿತರಣೆಗೆ ತಿಳಿಸಲಾಗಿದೆ ಎಂದರು.

ಕೃಷಿ ಹಾಗೂ ತೋಟಗಾರಿಕೆ ಪ್ರದೇಶಗಳ ಹಾನಿ ಪ್ರಮಾಣ ಅಪಾರವಾಗಿದ್ದು ಈ ಕುರಿತು ಸಮೀಕ್ಷಾ ಪ್ರಗತಿಯಲ್ಲಿದೆ. ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸೇರಿ 612 ಕೀ.ಮಿ. ರಸ್ತೆ ಹಾನಿಗೊಳಗಾಗಿದ್ದು 96 ಕೋಟಿ ಹಾನಿ ಪ್ರಮಾಣ ಅಂದಾಜಿಸಲಾಗಿದೆ. ಅದರಂತೆ 94 ಸೇತುವೆಗಳು ಹಾನಿಯಾಗಿದದ 34 ಕೋಟಿ ನಷ್ಟವಾಗಿದೆ. ಕುಡಿಯುವ ನೀರಿನ ಹಾನಿ ಪ್ರಮಾಣ 26 ಲಕ್ಷ ಎಂದು ಅಂದಾಜಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯ 5 ಕೆರೆಗಳು ಹಾನಿಗಿಡಾಗಿದ್ದು ಅಂದಾಜು 1 ಕೋಟಿ ರೂ. ಹಾನಿಯಾಗಿದೆ ಎಂದು ವರದಿಯಾಗಿದೆ. 241 ವಿದ್ಯುತ್ ಕಂಬಗಳ ಹಾನಿಯ ಪ್ರಮಾಣ 28 ಲಕ್ಷ, ಪ್ರಾಥಮಿಕ ಶಾಲಾ ಕೊಠಡಿಗಳು 174 ಹಾನಿಯಾಗಿದ್ದು 5.6 ಕೋಟಿ ರೂ ಹಾಗೂ 122 ಅಂಗನವಾಡಿ ಕೊಠಡಿಗಳು ಹಾನಿಯಾಗಿದ್ದು 2.44 ಕೋಟಿ ರೂ. ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿದ್ದು ಅಧಿಕಾರಿಗಳು ಸಂತ್ರಸ್ಥರಿಗೆ ತಕ್ಷಣವೇ ಸ್ಪಂದಿಸುವ ಕಾರ್ಯ ಮಾಡಬೇಕು. ನಿಖರ ಹಾನಿಯ ಪ್ರಮಾಣ ಅಂದಾಜಿಸಿ ಪರಿಹಾರ ಕಾರ್ಯ ಚುರುಕುಗೊಳಿಸಲು ತಿಳಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ. ಎಂ.ಎಲ್, ಜಿ.ಪಂ. ಸಿ.ಇ.ಓ. ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತದನಂತರ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ, ಮೊದಲಿಗೆ ಕುರ್ತಕೋಟಿಯಲ್ಲಿ ಹಳ್ಳದ ನೀರಿನಿಂದ ಹಾನಿಗೊಳಗಾದ ಸೇತುವೆ, ರಸ್ತೆ ವೀಕ್ಷಿಸಿದರು. ನಂತರ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಶೇಂಗಾ ಬೆಳೆದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂತೂರ-ಬೆಂತೂರ ಗ್ರಾಮದಲ್ಲಿ ಹಳ್ಳದ ನೀರು ಜಮೀನುಗಳಿಗೆ ನುಗ್ಗಿ ಹಾನಿಯಾದ ಬಗ್ಗೆ ಪರಿಶೀಲನೆ ನಡೆಸಿದ ಅವರು ಕಳಸಾಪುರದಲ್ಲಿ ಪಂಚಾಯತರಾಜ್ ಇಲಾಖೆಯ ಹಾನಿಗೊಳಗಾದ ರಸ್ತೆಯನ್ನು ವೀಕ್ಷಿಸಿದರು. ನಾಗಾವಿಯಲ್ಲಿ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿರುವದನ್ನು ಪರಿಶೀಲಿನೆ ನಡೆಸಿದರು. ಗದಗ ನಗರದ ದೋಬಿ ಘಾಟನ ಸೇತುವೆ ಹಾಗೂ ಮಕಾನ ಗಲ್ಲಿಯಲ್ಲಿ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ನಂತರ ಬೆಟಗೇರಿಯ ವಾರ್ಡ ನಂ.3 ಬಣ್ಣದ ನಗರಕ್ಕೆ ಭೇಟಿ ನೀಡಿ ಅಗತ್ಯದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹುತಾತ್ಮ ಪೊಲೀಸರ ಕುಟುಂಬಗಳಿಗೆ ಸಾಂತ್ವನ ಹೇಳದ ಜನಪ್ರತಿನಿಧಿಗಳು! ಮತದ ಗುಂಗಿನಲ್ಲಿ ಸೂತಕದ ಮನೆ ಮರೆತರು?

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜಕೀಯ ಮರೆತು ಮತಕ್ಕೋಸ್ಕರ ಬಡಿದಾಡಿ ಸಾವನ್ನಪ್ಪಿದಾಗ ಶಾಸಕರು, ಸಚಿವರು, ರಾಜಕೀಯ ಮುಖಂಡರು ಆ ಸಾವಿನ ಮನೆಯ ಮುಂದೆ ಕಾರ್ಯಕ್ರಮ ಮಾಡಿದ್ದು ರಾಜ್ಯದ ಇತಿಹಾಸ.

ಆದರೆ ನಮ್ಮ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮುಂಡರಗಿ ಪೊಲೀಸ್‌ ಠಾಣೆಯ ನಾಗರಹಳ್ಳಿ ಮತ್ತು ಹಮ್ಮಿಗಿ ಗ್ರಾಮದ ಸಿಬ್ಬಂದಿಗಳಿಬ್ಬರು ಸಾರ್ವಜನಿಕರಿಗಾಗಿ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದರು.

ಇದನ್ನೂ ಓದಿ ಕೊನೆಗೂ ಶವವಾಗಿ ಪತ್ತೆಯಾದ ಮಹೇಶ್; ಇಲಾಖೆಗೆ ಜೊತೆಯಲ್ಲಿ ಸೇರಿ, ಜೊತೆಯಾಗಿ ಇಹಲೋಕ ತ್ಯಜಿಸಿದ ಸ್ನೇಹಿತರು!

ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಯಾವೊಬ್ಬ ರಾಜಕೀಯ ನಾಯಕರೂ ಭಾಗಿಯಾಗದಿರುವದು ನಮ್ಮ ನಿಮ್ಮೆಲ್ಲರ ದುರ್ದೈವ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರ ದುದುಪೀರ ಹಣಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಅಥವಾ ಹಿತೈಷಿಗಳು ಮರಣ ಹೊಂದಿದಾಗ, ಆಯಾ ಪಕ್ಷದ ಶಾಸಕರು, ಮುಖಂಡರುಗಳು ಓಡಿಹೋಗಿ ಮಾಲೆ ಹಾಕಿ ನಮನ ಸಲ್ಲಿಸಿ ಬರುವುದು ಸಂಪ್ರದಾಯ. ಆದರೆ ಜನಸೇವೆಗಾಗಿಯೇ ಪ್ರಾಣತೆತ್ತ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ ವಕ್ರದ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವನ್ನು ಘಟನೆ ನಡೆದು ಮೂರು ದಿನ ಕಳೆದರೂ ಯಾವ ಪಕ್ಷದ ರಾಜಕಾರಣಿಗಳೂ ಮಾಡಿಲ್ಲ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರೂ ಸಿಬ್ಬಂದಿಗಳು ಅತ್ಯಂತ ಬಡತನದಲ್ಲಿಯೂ ಕಷ್ಟಪಟ್ಟು ಕಲಿತು ಸ್ವಸಾಮರ್ಥ್ಯದಿಂದಲೇ ನೌಕರಿ ಪಡೆದವರು. ಕನಿಷ್ಠಪಕ್ಷ ಪೊಲೀಸ್ ಹುದ್ದೆಗೆ ಗೌರವ ಕೊಟ್ಟಾದರೂ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಬಹುದಿತ್ತು.

ಮೃತರ ಕುಟುಂಬದವರು ಆರ್ಥಿಕ ಸಹಕಾರವನ್ನೇನೂ ಕೇಳುವದಿಲ್ಲ. ಅವರು ಬಯಸುವದು ‘ಬೆಂಬಲಕ್ಕೆ ನಾವಿದ್ದೇವೆ’ ಎಂಬ ಧೈರ್ಯ ತುಂಬುವ, ಸಾಂತ್ವನದ ಮಾತುಗಳನ್ನಷ್ಟೇ. ಆದ್ದರಿಂದ ರಾಜಕೀಯ ಮುಖಂಡರು ಈಗಲಾದರೂ ಅವರ ಮನೆಗೆ ತೆರಳಿ ಒಂದೆರಡು ಸಾಂತ್ವನದ ಮಾತುಗಳನ್ನಾದರೂ ಹೇಳಿಬರಲಿ ಎಂಬ ಆಶಯವನ್ನು ದುದುಪೀರ ಹಣಗಿ ವ್ಯಕ್ತಪಡಿಸಿದ್ದಾರೆ.

ಮಳೆಹಾನಿ ತುರ್ತು ಕ್ರಮ ಕೈಗೊಳ್ಳಿ; ಎಚ್.ಕೆ.ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಯಾದ ಕಳಸಾಪೂರ, ನಾಗಾವಿ, ನಾಗಾವಿ ತಾಂಡಾದ ಹಲವು ಪ್ರದೇಶಗಳಿಗೆ ಶಾಸಕ ಎಚ್.ಕೆ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್

ನಾಗಾವಿ ತಾಂಡಾದಲ್ಲಿ ಭಾರಿ ಪ್ರಮಾಣದಲ್ಲಿ ಒಡೆದ ಸೇತುವೆಯನ್ನು ವೀಕ್ಷಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಸೂಕ್ತ ರಸ್ತೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಪ್ರಮುಖವಾಗಿ ಕುಡಿಯುವ ನೀರು ಕಾಮಗಾರಿಯ ಪೈಪ್‌ಲೈನ್ ಹಾಳಾಗಿದ್ದು, ನೀರು ಪೂರೈಕೆಗಾಗಿ ಬೋರ್‌ವೆಲ್ ಕೊರೆಸಲು ಪ್ರವಾಹದ ವಿಶೇಷ ಅನುದಾನ ಬಿಡುಗಡೆಗೊಳಿಸಲು ಸೂಚಿಸಿದರು.

ರಸ್ತೆ ಸಂಪೂರ್ಣ ಹಾಳಾಗಿದ್ದು ಮಕ್ಕಳು ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ. ಆದಷ್ಟು ಬೇಗ ರಸ್ತೆ ದುರಸ್ತಿಪಡಿಸಲು ಆಗ್ರಹಿಸಿದರು.

ನಾಗಾವಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಮನೆ, ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳನ್ನು ಎಚ್.ಕೆ.ಪಾಟೀಲ ವೀಕ್ಷಿಸಿದರು.

ಈ ಸಂದರ್ಭದಲ್ಲಿ ವಾಸಣ್ಣ ಕುರಡಗಿ, ಬಿ.ಆರ್.ದೇವರಡ್ಡಿ, ಸಿದ್ದು ಪಾಟೀಲ, ಬಿ.ವಿ.ಸುಂಕಾಪೂರ, ತಹಸೀಲ್ದಾರ ಕಿಶನ್ ಕಲಾಲ, ಸಹಾಯಕ ತೋಟಗಾರಿಕೆ ಅಧಿಕಾರಿ ಶೈಲೇಂದ್ರ ಬಿರಾದಾರ, ಕೃಷಿ ಅಧಿಕಾರಿ ರವಿ, ತಾಪಂ ಇ ಓ ಧರ್ಮೇಂದ್ರ ನಾಗಾವಿ, ಕಳಸಾಪೂರ ಗ್ರಾಪಂ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರು-ಬಸ್ ಡಿಕ್ಕಿ; ಮೂವರು ಸ್ಥಳದಲ್ಲಿಯೇ ಸಾವು, ನಾಲ್ವರು ಗಾಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಖಾಸಗಿ ಬಸ್ ಹಾಗೂ ಇನೋವಾ ಕಾರ ಮಧ್ಯ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ಜರುಗಿದೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪನ್ನಪಟ್ಟಿ ಬಳಿ ಈ ದುರ್ಘಟನೆ ಸಂಭವಿಸಿದೆ.

ಕೇರಳ ರಾಜ್ಯದ ಇನೋವಾ ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಬಂಧಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎದಕ ಬರ್ತಾರಿಲ್ಲಿ, ದನ ಕಾಯಾಕ ಬಂದಾನೇನ ಅಂವ; ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ಲೆಫ್ಟ್ ರೈಟ್

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಹಲವು ಸ್ಥಳಗಳಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಇಂದು ಶುಕ್ರವಾರ ಭೇಟಿ ನೀಡಿ ನೆರೆಹಾವಳಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಳೆಯಿಂದಾಗಿ ಬೆಳೆ, ಜಮೀನು ಹಾನಿಯಾಗಿ ಸಂಕಷ್ಟ ಎದುರಿಸುತ್ತಿರುವ ರೈತ ಮಹಿಳೆ ಸುಮಿತ್ರಾ ಕಟ್ಟಿಮನಿ ಸಚಿವರೆದುರು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಸುಮಿತ್ರಾರಿಗೆ ಸೇರಿದ 10 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ಸವಳು ಹಳ್ಳದ ಆರ್ಭಟಕ್ಕೆ ಜಮೀನಿನಲ್ಲಿ ಹಾಕಿದ್ದ ಮೆಣಸಿನಕಾಯಿ, ಈರುಳ್ಳಿ, ಶೇಂಗಾ, ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಸವಳು ಹಳ್ಳದ ಇಕ್ಕೆಲಗಳಲ್ಲಿ ಮುಳ್ಳುಕಂಟಿಗಳು ಯಥೇಚ್ಛವಾಗಿ ಬೆಳೆದಿದ್ದು ಹಳ್ಳ ತನ್ನ ದಾರಿ ಬದಲಿಸಿದ್ದೇ ಈ ಅವಾಂತರಕ್ಕೆ ಕಾರಣವೆಂಬ ಅಭಿಪ್ರಾಯಗಳು ರೈತರಿಂದ ಕೇಳಿಬಂದಿವೆ.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಸಚಿವ ಸಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೊಂದ ರೈತ ಮಹಿಳೆ ಸುಮಿತ್ರಾ, ಅತೀವ ನೋವಿನಿಂದ ತಮ್ಮ ದುಃಖ ತೋಡಿಕೊಂಡರು.

`ನೋಡ್ರಿ ಸಾಹೇಬ್ರೆ. ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದೆ. ಈ ಮಳೆಗೆ ಎಲ್ಲವೂ ಕೊಚ್ಚಿಹೋಯ್ತು. ಬೆಳೆ ನಾಶವಾಗಿದ್ದಷ್ಟೇ ಅಲ್ದೆ ಈ ಭೂಮಿ ಕೃಷಿ ಮಾಡೋಕೂ ಸಾಧ್ಯವಾಗದಂತೆ ಹಾನಿಗೊಳಗಾಯ್ತು. ಅಗದೀ ಫಲವತ್ತಾದ ಭೂಮಿ ನಮ್ದು. ಎಲ್ಲಾ ಬೆಳೆಗಳೂ ಹೋಯ್ತು. ಭೂಮಿಯೂ ಹಾಳಾಯ್ತು. ಮಣ್ಣು ಕೊಚ್ಚಿಹೋಗಿ, ಗರಸುಮಣ್ಣು ಮತ್ತು ಮರಳು ಹೊಲದಲ್ಲಿ ಎರಡು-ಮೂರು ಅಡಿಗಳಷ್ಟು ನಿಂತಿದೆ. ಈಗ ಮತ್ತೆ ಭೂಮಿ ಹಸನು ಮಾಡಿ ಬೆಳೆ ಬೆಳೆಯೋದಾದ್ರೂ ಹ್ಯಾಂಗ್ರೀ? ಅಲ್ಲೀವರೆಗೆ ನಾವು ಬದುಕು ನಡೆಸೋಕೆ ದಾರಿ ಯಾವ್ದು ಸರ್? ನಮಗೆ ಜಮೀನು ಸರಿ ಮಾಡಿಸಿಕೊಡಿ. ನಮಗೆ ನ್ಯಾಯ ಕೊಡಿಸಿ, ಪರಿಹಾರ ಒದಗಿಸಿ. ಹೇಗಾದರೂ ಬದುಕಿಕೊಳ್ತೇವೆ’ ಎಂದು ಕಣ್ಣೀರು ಹಾಕಿದರು.

ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಗರಂ ಆದ ಸಿ.ಸಿ. ಪಾಟೀಲ್

ತಾಲೂಕಿನ ಹೊಂಬಳ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಣೆಯ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಮಹಿಳೆಯ ಕೃಷಿ ಭೂಮಿ ಹಾಳಾದ ವಿಷಯವನ್ನು ಚರ್ಚೆಸುವದಕ್ಕಾಗಿ ಕೃಷಿ ಅಧಿಕಾರಿಗಳನ್ನು ಸಚಿವರು ಕೇಳಲು ಮುಂದಾದರು. ಆದರೆ, ಈ ವೇಳೆ ಅಧಿಕಾರಿಗಳು ಸ್ಥಳದಲ್ಲಿ ಗೈರಾಗಿರುವದಕ್ಕೆ ಕೆಂಡಾಮಂಡಲವಾದರು.

ಸರ್ವೆ ಮಾಡಬೇಕಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನನ್ನ ಹಿಂದೆ ಇರಬೇಕು. ಜಂಟಿ ಕೃಷಿ ನಿರ್ದೇಶಕ ಒಂದು ಕಿಲೊಮೀಟರ್ ಹಿಂದ ಅದಾನ ಅಂದ್ರ ದನಾ ಕಾಯಾಕ ಹೋಗಲಿ ಎಂದು ಸಿಸಿ ಪಾಟೀಲ ತಮ್ಮ ಆಪ್ತ ಸಹಾಯಕರಿಗೆ ಗದರಿದರು.

ಕಂದಕಕ್ಕೆ ಜಾರಿದ ಸಾರಿಗೆ ಬಸ್; ಚಾಲಕನ ಸಮಯ ಪ್ರಜ್ಞೆ, ಪ್ರಯಾಣಿಕರು ಸೇಫ್

ವಿಜಯಸಾಕ್ಷಿ ಸುದ್ದಿ, ರೋಣ

ಜೆಂಟ್ ಪಿನ್ ತುಂಡಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್ ಕಂದಕಕ್ಕೆ ಜಾರಿದ ಘಟನೆ
ತಾಲೂಕಿನ ಜಕ್ಕಲಿ ಗ್ರಾಮದ ವಸತಿ ನಿಲಯದ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಇದನ್ನೂ ಓದಿ ಗದಗದಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ

ಮಾರನಬಸರಿ ಗ್ರಾಮದಿಂದ ಜಕ್ಕಲಿ ಮಾರ್ಗವಾಗಿ ಬಸ್ ಗದಗ ಕಡೆಗೆ ಹೊರಟಿತ್ತು. ಜಕ್ಕಲಿ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇರುವ ವಸತಿ ನಿಲಯದ ಬಳಿ ಬಸ್ ನ ಜೆಂಟ್ ಪಿನ್ ತುಂಡಾಗಿದ್ದರಿಂದ ಬಸ್ ಕಂದಕ್ಕೆ ಜಾರಿದೆ. ಆಗ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹದಿನೈದಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣವನ್ನು ಉಳಿಸಿದ್ದಾನೆ ಎನ್ನಲಾಗಿದೆ.

ರೋಣ ಸಾರಿಗೆ ಸಂಸ್ಥೆಯು ತಾಲೂಕಿನ ಗ್ರಾಮೀಣ ಭಾಗಗಳಿಗೆ ಡಕೋಟಾ ಬಸ್ ಒಡಿಸುತ್ತಿರುವ ಮೂಲಕ ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.