Home Blog Page 3370

ನರಗುಂದ ಗಲಭೆ ಪ್ರಕರಣ; ಡಿವೈಎಸ್ಪಿ ರಾಗಿ ಎತ್ತಂಗಡಿ

ನರಗುಂದ ಡಿವೈಎಸ್ಪಿ ಶಂಕರ್ ರಾಗಿ ವರ್ಗಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಶಂಕರ್ ಎಂ.ರಾಗಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಬುಧವಾರ ಆದೇಶಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಈಗನಗೌಡರ್ ವೈ.ಎಸ್. ಅವರು ನರಗುಂದ ಡಿವೈಎಸ್ಪಿ ಆಗಿ ನೇಮಕಗೊಂಡಿದ್ದಾರೆ.

ನರಗುಂದದ ಪಟ್ಟಣದಲ್ಲಿ ಗಲಭೆ, ಅಮಾಯಕ ಯುವಕನ ಕೊಲೆ ಪ್ರಕರಣದ ಬಳಿಕ ನರಗುಂದ ಪೊಲೀಸ್ ಠಾಣೆಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮೊನ್ನೆಯಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಿಪಿಐ ನಂದೀಶ್ವರ ಕುಂಬಾರ್ ಅವರನ್ನು ಅಮಾನತು ಮಾಡಿ ಬೆಳಗಾವಿ ಉತ್ತರ ವಿಭಾಗದ ಐಜಿಪಿ ಸತೀಶ್ ಕುಮಾರ್ ಅವರು ಆದೇಶಿಸಿದ್ದರು. ಈ ಬೆನ್ನಲ್ಲೇ ಡಿವೈಎಸ್ಪಿ ಶಂಕರ್ ರಾಗಿ ವರ್ಗಾವಣೆಯಾಗಿದ್ದಾರೆ.

ಗದಗ ಜಿಲ್ಲೆಗಿಂದು ನೂತನ ಉಸ್ತುವಾರಿ ಸಚಿವರ ಮೊದಲ ಭೇಟಿ; ಹೊಸ ಮಂತ್ರಿಗೆ ಹಳೆ ಸವಾಲು!

ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಪರ್ವ ಸೃಷ್ಟಿಸುತ್ತಾರಾ ಕೌರವ?

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಗೆ ಸೇರುವ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಹಲವು ಸವಾಲುಗಳು ಎದುರಾಗಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ, ಆಡಳಿತದಲ್ಲಿ ಬಹಳಷ್ಟು ಬದಲಾವಣೆ ತರುವ ಮಹತ್ವದ ಹೊಣೆಗಾರಿಕೆ ಇದೆ.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿದ್ದು, ಜಿಲ್ಲೆಯವರಾಗಿದ್ದ ಸಿ.ಸಿ.ಪಾಟೀಲರಿಗೆ ಪಕ್ಕದ ಬಾಗಲಕೋಟೆ ಜಿಲ್ಲೆಯ ಹೊಣೆ ನೀಡಿದರೆ, ನೆರೆಯ ಹಾವೇರಿ ಜಿಲ್ಲೆಯ ಬಿ.ಸಿ.ಪಾಟೀಲ್ ಅವರಿಗೆ ಗದಗ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಕೇತ್ರದ ಶಾಸಕರಾಗಿರುವ ಇವರು, ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವರಾಗಿರುವ ಬಿ.ಸಿ.ಪಾಟೀಲ್ ಕೃಷಿ ಖಾತೆ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ್ಯೂ ಇದೇ ಖಾತೆ ನಿರ್ವಹಿಸಿದ ಅನುಭವ ಇವರಿಗಿದೆ.

ಹಲವು ವರ್ಷಗಳ ಬಳಿಕ ಬೇರೆ ಜಿಲ್ಲೆಯವರಿಗೆ ಗದಗ ಉಸ್ತುವಾರಿ ನೀಡಿರುವುದರಿಂದ ಜಿಲ್ಲೆಯ ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ.

ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಆಡಳಿತ ವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಈ ಹಿಂದೆ ಬೇರೆ ಜಿಲ್ಲೆಯವರು ಗದಗ ಉಸ್ತುವಾರಿ ಮಂತ್ರಿಯಾಗಿದ್ದರೂ, ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಬಿಸಿಪಿ ಹೇಗೆ ಶ್ರಮಿಸುತ್ತಾರೆ? ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಾರೆಯೇ ಎಂಬ ಕುತೂಹಲ ಹೆಚ್ಚಿಸಿದೆ.

ಅದರಂತೆ, ಪ್ರತಿವರ್ಷ ಆರ್ಥಿಕ ವರ್ಷದ ಕೊನೆಯಲ್ಲಿ ತ್ವರಿತಗತಿಯಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಕೆಲಸಗಳು, ಆರ್ಥಿಕ ವರ್ಷದ ಆರಂಭದಲ್ಲೇ ಆಗಬೇಕಿವೆ. ತವರು ಜಿಲ್ಲೆಯವರೇ ಲೋಕೋಪಯೋಗಿ ಸಚಿವರಾಗಿದ್ದರೂ ರಸ್ತೆಗಳ ಸುಧಾರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳ ರಸ್ತೆಗಳು ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ಸುಧಾರಣೆಗೊಳ್ಳಬೇಕಿವೆ. ಅಲ್ಲದೇ, ಅಲ್ಲಲ್ಲಿ ತೆಪೆ ಹಾಕುವ ಕೆಲಸವಾಗುತ್ತಿದ್ದು, ತೆಪೆ ಹಾಕುವುದನ್ನು ಬಿಟ್ಟು ಸಂಪೂರ್ಣ ರಸ್ತೆ ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆ ಇದೆ. ಅವಳಿ ನಗರದಲ್ಲಿ ಆಮೆವೇಗದಲ್ಲಿ ಸಾಗುತ್ತಿರುವ ನಿರಂತರ ಕುಡಿಯುವ ನೀರು ಯೋಜನೆ, ಒಳಚರಂಡಿ(ಯುಜಿಡಿ)ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕಿದೆ. ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ದೇವಾಲಯ, ಪ್ರವಾಸಿ ತಾಣಗಳನ್ನು ಪುನಶ್ಚೇತನಗೊಳಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಇವೆಲ್ಲಾ ಆಗಬೇಕೆಂದರೆ, ಪ್ರಾಮಾಣಿಕ ಅಧಿಕಾರಿಗಳ ತಂಡ ಬೇಕಿದೆ. ಜಿಡ್ಡು ಹಿಡಿದಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಿದೆ. ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಬೇರೆ ಅಧಿಕಾರಿಗಳನ್ನು ನೇಮಿಸುವ ಕೆಲಸವಾಗಬೇಕಿದೆ. ಅಲ್ಲದೇ, ವಲಸಿಗ ಎಂಬ ಅಳುಕಿದ್ದು, ಜಿಲ್ಲೆಯ ಸ್ವಪಕ್ಷದವರ ಮನಗೆಲ್ಲಬೇಕಿದೆ. ಅಂದಾಗ ಸಚಿವ ಬಿ.ಸಿ.ಪಾಟೀಲ್ ಗದಗ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ.

ಜಿಲ್ಲೆಯ ಸಮಸ್ಯೆಗಳು

*ಅನುದಾನದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಒದಗಿಸಬೇಕಿದೆ.
*1992ರಲ್ಲಿ 63 ಕೋಟಿ ರೂ., ಪ್ರಸ್ತುತ 5,798 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗಿರುವ ಶಿಂಗಟಾಲೂರ ಏತನೀರಾವರಿ ಯೋಜನೆಯ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಬೇಕಿದೆ.
*ಸೂಕ್ಷ್ಮ ಹನಿ ನೀರಾವರಿ ಬದಲು ಕಾಲುವೆಗಳ ಮೂಲಕ ನೀರು ಹರಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ.
*ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಮುಂಜೂರಾದ ಕಾರ್ಮಿಕರ ವಸತಿ ಗೃಹ ನಿರ್ಮಾಣಕ್ಕೆ ಇನ್ನೂವರೆಗೂ ಚಾಲನೆ ಸಿಕ್ಕಿಲ್ಲ.
*ಜಿಲ್ಲೆಯ ಬಹು ಗ್ರಾಮಗಳ ಕೆರೆಗೆ ನೀರು ಪೂರೈಸುವ ಜಾಲವಾಡಗಿ ಏತನೀರಾವರಿ ಯೋಜನೆಗೆ ಅನುದಾನ ನೀಡಿ, ಕಾಮಗಾರಿಗೆ ಚಾಲನೆ ನೀಡಬೇಕಿದೆ.
*ಗದಗ-ಬೆಟಗೇರಿ ಅವಳಿ ನಗರಕ್ಕೆ ನಿರಂತರ ಕುಡಿಯುವ ನೀರು, ಒಳಚರಂಡಿ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಬೇಕಿದೆ.
*ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ.
*ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾದ ಈರುಳ್ಳಿ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ.
*ಬಳ್ಳಾರಿಯಂತೆ ಒಣ ಮೆಣಸಿನಕಾಯಿ ಮಾರುಕಟ್ಟೆ ಅಥವಾ ಬ್ಯಾಡಗಿಯಂತೆ ಗದಗನಲ್ಲೂ ಆಧುನಿಕ ಗುಣ ವಿಶ್ಲೇಷಣಾ ಘಟಕ ಸ್ಥಾಪನೆಗೊಳ್ಳಬೇಕಿದೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಕಾರುಬಾರಿಗೆ ಹೈಕೋರ್ಟ್ ಬ್ರೇಕ್!; ಆದೇಶ ಪ್ರತಿ ಲಭ್ಯ

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಮಾದ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ಸಿಗರು

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಮಂಗಳವಾರ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಈ ಕುರಿತ ಆದೇಶದ ಪ್ರತಿ ಇಂದು ವಿಜಯಸಾಕ್ಷಿಗೆ ಲಭ್ಯವಾಗಿದೆ.

ಜ.24ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪೂರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ, ಚಂದ್ರಶೇಖರಗೌಡ ಕರಿಸೋಮನಗೌಡರ ಎಂಬವವರು ಹೈಕೋರ್ಟ್ ಮೊರೆ ಹೋಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯನ್ನು ಅಧಿಕಾರಿಗಳು ಪಾರದರ್ಶಕವಾಗಿ ನಡೆಸಿಲ್ಲ. ಹೀಗಾಗಿ ಮರು ಆಯ್ಕೆ ನಡೆಸುವಂತೆ ಕೋರಲಾಗಿತ್ತು.

ಮಂಗಳವಾರ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮಪ್ರಸಾದ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿ, ಫೆ.21ಕ್ಕೆ ವಿಚಾರಣೆ ಮುಂದೂಡಿದೆ. ಮುಂದಿನ ವಿಚಾರಣೆವರೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಆದೇಶಿಸಿದೆ. ಅಲ್ಲದೇ, ಚುನಾವಣೆ ಪ್ರಕ್ರಿಯೆ ನಮೂದಿಸಿದ ಠರಾವು ಪುಸ್ತಕ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ವಾದ ಮಂಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಚ್.ಕೆ.ಪಾಟೀಲ್ ಅವರು, ‘ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಾರದು ಎಂದು ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿರುವುದು ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಹೈಕೋರ್ಟ್ ಪರಿಗಣಿಸಿ, ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಮಾಡಬಾರದು ಎಂದು ತಡಯಾಜ್ಞೆ ನೀಡಿದೆ. ಅಲ್ಲದೇ ಆಯ್ಕೆ ಪ್ರಕ್ರಿಯೆ ವೇಳೆ ನಡೆದ ಪ್ರಮಾದಗಳಾಗಿರುವ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡುವಂತೆ ಕೋರ್ಟ್ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಬೊಮ್ಮಾಯಿ ಸಿಎಂ ಸ್ಥಾನದಿಂದ ಕೆಳಗಿಳಿಯೊ ಸಾಧ್ಯತೆ: ಜಾರಕಿಹೊಳಿ

0

ಮೇಕೆದಾಟು ಪಾದಯಾತ್ರೆ ಮುಂದುವರಿಯುತ್ತೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಬಂದ ಪ್ರತಿ ಸಲವೂ ಮೂವರು ಸಿಎಂ ಆಗಿರ‌್ತಾರೆ. ಈ ಸಲ ಬೊಮ್ಮಾಯಿಯವರು ಎರಡನೇ ಸಿಎಂ ಆಗಿದ್ದು, ಸರಕಾರದ ಅವಧಿ ಮುಗಿಯುವುದರೊಳಗೆ ಮತ್ತೊಬ್ಬರು ಸಿಎಂ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಬೊಮ್ಮಾಯಿಯವರಿಗೆ ಆರು ತಿಂಗಳು ಟೈಮ್ ಕೊಟ್ಟಿತ್ತು. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಆರು ತಿಂಗಳು ಮುಗಿದಿದ್ದು ಸಿಎಂ ಬದಲಾವಣೆ ಬಗ್ಗೆ ಸ್ವತಃ ಬಿಜೆಪಿಯವರೇ ಮಾತನಾಡುತ್ತಿದ್ದಾರೆ ಎಂದರು.

ಸಿ.ಎಂ.ಇಬ್ರಾಹಿಂ, ನಾನು ಸೇರಿದಂತೆ ಕಾಂಗ್ರೆಸ್‌ನ ಎಲ್ಲರೂ ಪಕ್ಷದಲ್ಲೇ ಇದ್ದಾರೆ. ಸೆಕ್ಯುಲರ್ ಶಕ್ತಿ‌ ಉಳಿಸಲು ಇಬ್ರಾಹಿಂ ದಳದಿಂದ ಕಾಂಗ್ರೆಸ್‌ಗೆ ಬಂದವರು. ಅವರಿಗೆ ಒಂದಿಷ್ಟು ಅಸಮಾಧಾನ‌ ಇರಬಹುದು. ಹಾಗಂತ ಕಾಂಗ್ರೆಸ್‌ನಿಂದ ಅವರು ದೂರ ಆಗಿಲ್ಲ, ರಾಜಕೀಯವೂ ಕೊನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಅನ್ನೋದು ಎಸ್ ಎಸ್ (ಸಿದ್ದರಾಮಯ್ಯ, ಶಿವಕುಮಾರ್) ಪಕ್ಷ ಎಂಬ ಸಚಿವ ಶ್ರೀ ರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಒಂದು ಆರ್‌ಎಸ್ಎಸ್ ಬಣ ಹಾಗೂ ಯಡಿಯೂರಪ್ಪ ಬಣ ಇದೆ. ಎಲ್ಲ ಪಕ್ಷಗಳಲ್ಲಿ ಇರುವಂತೆ ಕಾಂಗ್ರೆಸ್‌ನಲ್ಲೂ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು‌ ಎಂದು ಹೇಳಿದರು.

ಈಗಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಮುಳುಗುತ್ತಿರುವ ಹಡಗು ಯಾವ ಪಕ್ಷ ಎಂಬುದನ್ನು ತೋರಿಸಿದ್ದಾರೆ ಎಂದ ಸತೀಶ್ ಜಾರಕಿಹೊಳಿ, ಮೇಕೆದಾಟು ಪಾದಯಾತ್ರೆ ಕೋವಿಡ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆಯೇ ಹೊರತು ಶಾಶ್ವತವಾಗಿ ಪಾದಯಾತ್ರೆ ನಿಂತಿಲ್ಲ. ಮೇಕೆದಾಟು ಪಾದಯಾತ್ರೆಗೆ ಶೀಘ್ರದಲ್ಲೇ ಮರುಚಾಲನೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮತ್ತಿತರರು ಇದ್ದರು.

ಗಣರಾಜ್ಯ ದಿವಸ ಲೆನ್ಸ್‌ಕಾರ್ಟ್ 73 ಮಳಿಗೆಗಳ ಆರಂಭ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ:

ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐ-ವೇರ್ ಬ್ರ್ಯಾಂಡ್ ಲೆನ್ಸ್‌ಕಾರ್ಟ್ ಭಾರತದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 19 ರಾಜ್ಯಗಳ 46 ನಗರಗಳಲ್ಲಿ 73 ಮಳಿಗೆಗಳನ್ನು ಪ್ರಾರಂಭಿಸಿದೆ. 2022 ಅರ್ಥಿಕ ವರ್ಷದಲ್ಲಿ ಲೆನ್ಸ್‌ಕಾರ್ಟ್, 400 ಸ್ಟೋರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ, ಇದರಲ್ಲಿ 73 ಸ್ಟೋರ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ಮುಖ್ಯವಾಗಿ ತಮಿಳುನಾಡು -17 ಸ್ಟೋರ್‌ಗಳು, ಕರ್ನಾಟಕದಲ್ಲಿ 10 ಮತ್ತು ತೆಲಂಗಾಣ ಮತ್ತು ಕೇರಳದಲ್ಲಿ ತಲಾ 6 ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಕಂಪನಿಯು ಈ ವರ್ಷದ ಫೆಬ್ರವರಿಯಲ್ಲಿ ತನ್ನ 1000 ನೇ ಮಳಿಗೆಯ ಹೆಗ್ಗುರುತನ್ನು ಸ್ಥಾಪಿಸಲು ತನ್ನ ಕೊನೆಹಂತದ ಕ್ಷಣಗಣನೆ ಪ್ರಾರಂಭಿಸಿದೆ.

73 ಮಳಿಗೆಗಳ ಉದ್ಘಾಟನೆಯಲ್ಲಿ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಛತ್ತೀಸ್‌ಗಢ ಮತ್ತು ಪಂಜಾಬ್‌ನಂತಹ ರಾಜ್ಯಗಳನ್ನು ಒಳಗೊಂಡಿವೆ. ಲೆನ್ಸ್‌ಕಾರ್ಟ್ ದೃಷ್ಟಿ ಆರೈಕೆಯಲ್ಲಿ ಅತಿದೊಡ್ಡ ಚಿಲ್ಲರೆ ನೆಟ್‌ವರ್ಕ್‌ನೊಂದಿಗೆ ಭಾರತದಲ್ಲಿನ ಅತಿದೊಡ್ಡ ಕನ್ನಡಕ ಬ್ರಾಂಡ್ ಆಗಿದೆ ಮತ್ತು ಗಣರಾಜ್ಯೋತ್ಸವದ ಪ್ರಾರಂಭದೊಂದಿಗೆ ದೇಶದಲ್ಲಿ ನೆಟ್‌ವರ್ಕ್ ಅನ್ನು ಇನ್ನಷ್ಟು ಬಲಪಡಿಸುವುದು ಇದರ ಗುರಿಯಾಗಿದೆ.

ಗಣರಾಜ್ಯೋತ್ಸವದ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಲೆನ್ಸ್‌ಕಾರ್ಟ್‌ನ ಸಹ ಸಂಸ್ಥಾಪಕ ಅಮಿತ್ ಚೌಧರಿ, “73 ನೇ ಗಣರಾಜ್ಯೋತ್ಸವದಂದು ದೇಶದಲ್ಲಿ 73 ಮಳಿಗೆಗಳನ್ನು ಪ್ರಾರಂಭಿಸಿರುವುದು ನಿಜಕ್ಕೂ ಹೆಮ್ಮೆ ಪಡುವಂತೆ ಮಾಡಿದೆ. ಲೆನ್ಸ್‌ಕಾರ್ಟ್‌ನಲ್ಲಿ ಜನರು ಜಗತ್ತನ್ನು ನೋಡುವ ಮತ್ತು ಅನುಭವಿಸುವ ವಿಧಾನವನ್ನು ಪರಿವರ್ತಿಸುವುದು ನಮ್ಮ ಉದ್ಧೇಶವಾಗಿದೆ ಮತ್ತು ಈ ಹೊಸ ಔಟ್‌ಲೆಟ್‌ಗಳನ್ನು ತೆರೆಯುವುದರೊಂದಿಗೆ, ಹೆಚ್ಚು ಹೆಚ್ಚು ಜನರು ಲೆನ್ಸ್‌ಕಾರ್ಟ್ ಉತ್ಪನ್ನಗಳನ್ನು ಆನಂದಿಸಬಹುದು. ಜಾಗತಿಕವಾಗಿ 2027 ರ ವೇಳೆಗೆ 1 ಶತಕೋಟಿ ಜನರಿಗೆ ದೃಷ್ಟಿಯನ್ನು ಸಕ್ರಿಯಗೊಳಿಸುವ ಗುರಿ ಹೊಂದಿದ್ದೇವೆ ಇದು ಅದರ ಕಡೆಗೆ ಒಂದು ಧನಾತ್ಮಕ ಹೆಜ್ಜೆಯಾಗಿದೆ.” ಎಂದರು.

ಲೆನ್ಸ್‌ಕಾರ್ಟ್‌ನ ಮುಖ್ಯ ರಿಟೇಲ್ ವಿಸ್ತರಣಾ ಅಧಿಕಾರಿ ಸುನಿಲ್ ಮೆನನ್ ಅವರು ಲಾಂಚ್ ಕುರಿತು ಮಾತನಾಡುತ್ತಾ, ನಾವು ಎಲ್ಲಾ ಸ್ಟೋರ್‌ಗಳಲ್ಲಿ ನಮ್ಮ ಓಮ್ನಿಚಾನಲ್ ಬಲಪಡಿಸುತ್ತಿದ್ದೇವೆ ಆದ್ದರಿಂದ ನಾವು ನಮ್ಮ ಗ್ರಾಹಕರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಚುರುಕಾದ ಶಾಪಿಂಗ್ ಅನುಭವ ನೀಡುವುದನ್ನು ಮುಂದುವರಿಸಲಿದ್ದೇವೆ.” ಎಂದರು.

ಮುಂದುವರೆಯುತ್ತಾ, ಭಾರತದ ರಿಟೇಲ್ ಉದ್ಯಮವು ಪ್ರಪಂಚದ ಇತರ ಭಾಗಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ಎರಡನೆಯ ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿ ವಾಸಿಸುವ ಜನರು ತಮ್ಮ ಒಂದನೇ ಶ್ರೇಣಿಯ ಪ್ರತಿರೂಪಗಳಂತೆ ಆನ್‌ಲೈನ್ ಇ-ಕಾಮರ್ಸ್ ಅನ್ನು ಬಳಸುವುದರ ಜೊತೆಗೆ ರಿಟೇಲ್ ಅಂಗಡಿಯ ಅನುಭವವನ್ನು ಬಯಸುತ್ತಾರೆ. ಲೆನ್ಸ್‌ಕಾರ್ಟ್‌ನ ಫ್ರಾಂಚೈಸಿ ನೆಟ್‌ವರ್ಕ್ ವಿಸ್ತರಣೆಯ ಮೂಲಕ ಈ ಎರಡನೆಯ ಮತ್ತು ಮೂರನೆಯ ಶ್ರೇಣಿಯ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ, ಕಣ್ಣು ತಪಾಸಣೆ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತೇವೆ.” ಎಂದರು.

ಲೆನ್ಸ್‌ಕಾರ್ಟ್ ಪ್ರಸ್ತುತ ತನ್ನ ಓಮ್ನಿ-ಚಾನೆಲ್ ಶಾಪಿಂಗ್ ಅನುಭವದ ಮೂಲಕ ವಾರ್ಷಿಕವಾಗಿ 7 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ, ಇದರಲ್ಲಿ ಆನ್‌ಲೈನ್ ಸ್ಟೋರ್, ಮೊಬೈಲ್ ಅಪ್ಲಿಕೇಶನ್ ಮತ್ತು 900+ ಓಮ್ನಿ-ಚಾನೆಲ್ ಸ್ಟೋರ್‌ಫ್ರಂಟ್‌ಗಳು ಶೀಘ್ರದಲ್ಲೇ 175 ಕ್ಕೂ ಹೆಚ್ಚು ಸ್ಥಳಗಳಲ್ಲಿ 1000 ಸ್ಟೋರ್‌ಗಳಾಗಿ ಬದಲಾಗುತ್ತವೆ ಮತ್ತು ಆ ಮೂಲಕ ವೇಗವಾಗಿ ಜಾಗತಿಕವಾಗಿ ವ್ಯಾಪಾರ ಬೆಳೆಯುತ್ತಿದೆ.ಪ್ರತಿ ಹೊಸ ಮಳಿಗೆಗಳು ತೆರೆಯುವುದರಿಂದ ಗ್ರಾಹಕರ ನೆಲೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಕಾರು, ಟ್ರ್ಯಾಕ್ಟರ್ ಡಿಕ್ಕಿ; ರೋಣದ ಮೂವರ ಸಾವು,‌ ಇಬ್ಬರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ರೋಣ:

ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಬಾದಾಮಿ ಬಳಿ ನಡೆದಿದೆ.

ರೋಣ ತಾಲೂಕಿನ ಡ.ಸ.ಹಡಗಲಿ ಗ್ರಾಮದ
ಬಸನಗೌಡ ಶಂಬುಲಿಂಗಗೌಡ ಪಾಟೀಲ್ (55) ಕಾರು ಚಾಲಕ ಮಂಜುನಾಥ ಮಾರನಬಸರಿ ಹಾಗೂ ಸಂಗಮ್ಮ ಶರಣಪ್ಪಗೌಡ ಪಾಟೀಲ್ ಮೃತ ದುರ್ದೈವಿಗಳಾಗಿದ್ದು, ಶರಣಪ್ಪಗೌಡ ಪಾಟೀಲ್ ಹಾಗೂ ಕಮಲಮ್ಮ ರುದ್ರಗೌಡ ಪಾಟೀಲ್ ತೀವ್ರ ಗಾಯಗೊಂಡಿದ್ದಾರೆ‌.

ಗಾಯಾಳುಗಳು ಗದಗ ಹಾಗೂ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಡ.ಸ.ಹಡಗಲಿ ಮತ್ತು ಅರಹುಣಸಿ ಗ್ರಾಮದ ನಿವಾಸಿಗಳು ಸೋಮವಾರ ಬಾಗಲಕೋಟಿಯ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ಮರುಳಿ ಊರಿಗೆ ಬರುತ್ತಿದ್ದರು. ಈ ವೇಳೆ ಬಾದಾಮಿಯಿಂದ ರೋಣ ಕಡೆಗೆ ಬರುತ್ತಿದ್ದಾಗ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಕೋರ್ಟ್ ಮಹತ್ವದ ತೀರ್ಪು; ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆ?

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ತಡೆಯಾಜ್ಞೆ ನೀಡಿ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿದೆ ಎನ್ನಲಾಗಿದೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜ.24ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಳ್ಳು ದಾಖಲೆ ಸೃಷ್ಟಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ನಡೆಸಿಲ್ಲ. ಹೀಗಾಗಿ ಮರು ಚುನಾವಣೆ ಮಾಡುವಂತೆ ಅರ್ಜಿ ಸಲ್ಲಿಸಿತ್ತು.

ಮಂಗಳವಾರ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮಪ್ರಸಾದ್ ಅವರಿದ್ದ ಪೀಠ ಚುನಾವಣೆಗೆ ತಡೆಯಾಜ್ಞೆ ನೀಡಿ, ಫೆ.21ಕ್ಕೆ ವಿಚಾರಣೆ ಮುಂದೂಡಿದೆ.

ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹದಿನಾಲ್ಕು ವರ್ಷಗಳ ಕನಸಿಗೆ ಮಂಕುಬೂದಿ ಎರಚಿದಂತಾಗಿದೆ. ಕಾಂಗ್ರೆಸ್ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ವಾದ ಮಂಡಿಸಿದರು‌.

ಅಮಾಯಕ ಯುವಕನ ಕೊಲೆ ಪ್ರಕರಣ, ಘಟನೆಗೆ ಕಾರಣರಾದ ಎಲ್ಲರನ್ನು ಬಂಧಿಸುವವರೆಗೂ ಬಿಡುವುದಿಲ್ಲ: ಇಬ್ರಾಹಿಂ

ಕೊಲೆಯಾದ ಸಮೀರ್ ಕುಟುಂಬಕ್ಕೆ ಪರಿಹಾರ ಕೊಡಿ; ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಒತ್ತಾಯ

ವಿಜಯಸಾಕ್ಷಿ ಸುದ್ದಿ, ನರಗುಂದ:

ಪಟ್ಟಣದಲ್ಲಿ ಕೊಲೆಯಾದ ಅಮಾಯಕ ಸಮೀರ ಶಹಾಪುರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಘಟನೆಗೆ ಕಾರಣರಾದ ಎಲ್ಲರನ್ನು ಬಂಧಿಸುವವರೆಗೂ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಕೊಲೆಯಾದ ಸಮೀರ ಶಹಾಪುರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಅಮಾಯಕ ಯುವಕನ ಕೊಲೆಯಾಗಿರುವುದು ಅತ್ಯಂತ ದುರ್ದೈವದ ಸಂಗತಿ. ಮುಸ್ಲಿಂ ಸಮಾಜದವರು ಯಾವುದೇ ಕಾರಣಕ್ಕೂ ಆತಂಕ, ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದರು.

ನರಗುಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡಲು ಸರಕಾರದ‌ ಮೇಲೆ ಒತ್ತಡ ತಂದು ಗಡುವು ನೀಡಲಾಗಿದೆ. ಅದಾಗ್ಯೂ ಮತ್ತೆನಾದರೂ ಸಹಾಯ, ಸಹಕಾರ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಭರವಸೆ ನೀಡಿದರು.

ಫಸಲ್ ಬಿಮಾ ಯೋಜನೆ ಹಣ ದುರ್ಬಳಕೆ; ರೈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ವಿಜಯಸಾಕ್ಷಿ ಸುದ್ದಿ, ಗದಗ:

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21 ನೇ ಸಾಲಿನಲ್ಲಿ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂದಿವೇರಿಮಠದ ಮಾಲೀಕತ್ವದಲ್ಲಿರುವ ಒಟ್ಟು 14.51 ಹೇ. ಜಮೀನಿಗೆ ನಿಜಲಿಂಗಪ್ಪ ಕೆ. ಆಲೂರ ಎಂಬುವವರು ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡು ಅಂದಾಜು ರೂ. 542115/- ಸರ್ಕಾರದ / ವಿಮಾ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ತನಿಖೆಯಿಂದ ತಿಳಿದು ಬಂದಿರುತ್ತದೆ. ಆದ ಕಾರಣ ನಿಜಲಿಂಗಪ್ಪ ಕೆ. ಆಲೂರ ಎಂಬುವವರ ಮೇಲೆ ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಪೋಲೀಸ್ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

ಆದ್ದರಿಂದ ಜಿಲ್ಲೆಯ ರೈತ ಬಾಂಧವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ದುರುಪಯೋಗ ಆಗುತ್ತಿರುವ ಕುರಿತು ಹಾಗೂ ತಮ್ಮ ಜಮೀನಿನ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳದಂತೆ ಎಚ್ಚರವಹಿಸಬೇಕೆಂದು ಪ್ರಭಾರಿ ಜಂಟಿ ಕೃಷಿ ನಿರ್ದೇಶಕರಾದ ವೀರೇಶ ಹುನಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಕಚ್ಚಿದ ಹೆಜ್ಜೇನು

0

ವಿಜಯಸಾಕ್ಷಿ ಸುದ್ದಿ, ರೋಣ:

ಪಟ್ಟಣದಲ್ಲಿ ದಲಿತ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನಡೆದಿದೆ.

ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವ ಚಿತ್ರಕ್ಕೆ ಅಪಮಾನವಾಗಿರುವ ಘಟನೆ ಖಂಡಿಸಿ ದಲಿತ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ರ‍್ಯಾಲಿ ತಹಸೀಲ್ದಾರ ಕಚೇರಿಗೆ ಮನವಿ ಸಲ್ಲಿಸಲು ಬಂದ ಸಂದರ್ಭದಲ್ಲಿ ಕಟ್ಟಡಲ್ಲಿದ್ದ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ.

ಹೆಜ್ಜೇನು ದಾಳಿಗೆ ಭಯಬೀತಗೊಂಡ ಪ್ರತಿಭಟನಾ ನಿರತರು ಹಾಗೂ ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಹೆಜ್ಜೇನುಗಳಿಂದ ತಪ್ಪಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು. ದಾಳಿಯಲ್ಲಿ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಾಯವಾಗಿರುವ ಘಟನೆ ನಡೆಯಿತು.