Home Blog Page 3417

ಬ್ಯಾಂಕ್ ನೌಕರನ ಮನೆಗೆ ಕನ್ನ; ಚಿನ್ನ, ಬೆಳ್ಳಿ ದೋಚಿದ ಕಳ್ಳರು

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಟ್ರಜರಿಯಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳವು ಮಾಡಿದ ಘಟನೆ ಗದಗ ಕೆಎಚ್ ಬಿ ಕಾಲೋನಿಯಲ್ಲಿ ನಡೆದಿದೆ.

ಬ್ಯಾಂಕ್ ಉದ್ಯೋಗಿ ಸುರೇಂದ್ರ ಗುಡಿ ಅವರು ಬೇರೆ ಊರಿಗೆ ಹೋಗಿದ್ದಾಗ, ಮನೆಯಲ್ಲಿ ಯಾರು ಇರದ ಸುಳಿವು ಅರಿತ ಕಳ್ಳರು ಮನೆಗೆ ಕನ್ನ ಹಾಕಿದ್ದು, 6 ಗ್ರಾಂ ಚಿನ್ನ, 610 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 25 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದತ್ತ ಪೀಠದಲ್ಲಿ ಹಿಂದುಗಳ ಪೂಜೆಗೆ ಮುಕ್ತ ಅವಕಾಶ ನೀಡಿ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ದತ್ತ ಪೀಠವೇ ಬೇರೆ, ಬಾಬಾ ಬುಡನ್ ದರ್ಗಾನೇ ಬೇರೆ. ಇಲ್ಲಿ ಅನಗತ್ಯವಾಗಿ ನಿರ್ಮಿಸಿರುವ ದರ್ಗಾಗಳನ್ನು ನಾಗೇನಹಳ್ಳಿಗೆ ಸ್ಥಳಾಂತ ಮಾಡಿ. ದತ್ತ ಪೀಠವನ್ನು ಹಿಂದುಗಳಿಗೆ ಮುಕ್ತವಾಗಿ ಪೂಜೆಗೆ ಬಿಡುವಂತೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ‌.

ದತ್ತಪೀಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸಲ್ಮಾನರು ಕಣ್ತೆರೆದು ನೋಡಬೇಕು. ನಾಗೇನಹಳ್ಳಿ ದರ್ಗಾ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಿಂದುಗಳ ವಿರುದ್ಧ ನಿರ್ಣಯ ಕೈಗೊಂಡಿತ್ತು. ಸುಪ್ರೀಂಕೋರ್ಟ್ ಆದೇಶವಿದ್ದರೂ ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಿರಲಿಲ್ಲ. ಸಮಿತಿ ರಚಿಸಿ ಮುಜಾವರ್ ರಿಂದ ಪೂಜೆಗೆ ಅವಕಾಶ ಮಾಡಿತ್ತು. ಹಿಂದಿನ ಸರ್ಕಾರದ ಮುಜಾವರ್ ನೇಮಕವನ್ನು ಹೈಕೋರ್ಟ್ ರದ್ದು ಮಾಡಿದೆ.

ದತ್ತ ಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ. ಹಿಂದು ಅರ್ಚಕರ ಮೂಲಕವೇ ಪೂಜೆ ಮಾಡಬೇಕೆಂಬ ರೂಪದಲ್ಲಿ ಆದೇಶ ನೀಡಿದೆ ಎಂದು ಹೇಳಿದರು.

ನಾನು ದತ್ತ ಪೀಠ ಹೋರಾಟದ ಮೂಲಕವೇ ಸಾರ್ವಜನಿಕ ಜೀವನಕ್ಕೆ ಬಂದವನು. ದತ್ತ ಪೀಠದಯ ಹೋರಾಟದಿಂದಲೇ ಜನಪ್ರತಿನಿಧಿಯಾಗಿ, ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಮತ್ತಷ್ಟು ಹಿಂದುತ್ವದ ಪರ ಕೆಲಸ ಮಾಡುವಂತೆ ಬೇಡಿಕೊಂಡಿದ್ದೇನೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು

ಕಲಬುರಗಿ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ನಲವತ್ತು ಶಾಸಕರು ಬಿಜೆಪಿಯಿಂದ ಕಾಂಗ್ರೆಸ್ ಗೆ ಬರ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳ್ತಾರೆ. ನಾಲ್ಕು ಜನ ಶಾಸಕರೂ ಹೋಗೋದಿಲ್ಲ. ಸಾಯೋ ಪಾರ್ಟಿಗೆ ಯಾರು ಹೋಗಿ ಸೇರಿಕೊಳ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಯಾವ ಹುಚ್ಚಾಸ್ಪತ್ರೆಗೆ ಸೇರಿಸಬೇಕು
ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದ್ರೆ ಕಾಂಗ್ರೆಸ್ ನವರು ನಡುಗಿ ಹೋಗ್ತಾರೆ.
ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಡಿಪಾಜಿಟ್ ಕಳೆದುಕೊಳ್ಳುತ್ತಾರೆ. ಬೇರೆ ಮನೆಯವರನ್ನು ಹುಡುಕಿಕೊಂಡು ಬಂದು ಟಿಕೆಟ್ ನೀಡ್ತಾರೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರೇ ಇಲ್ವಾ ಎಂದು ಪ್ರಶ್ನಿಸಿದ ಅವರು, ಎರಡೂ ಉಪ ಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ಹೇಳಿದರು.

ಹಿಂದುತ್ವ ಬಿಜೆಪಿ ಅಜೆಂಡಾದ ಈಶ್ವರಪ್ಪ ತಂಟೆಗೆ ನಾನು ಹೋಗೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಏನು ಮಾತನಾಡುತ್ತೇನೆಂದು ಅವರಿಗೆ ಗೊತ್ತಿದೆ.‌ ಅದಕ್ಕಾಗಿ ನನ್ನ ತಂಟೆಗೆ ಬರಲ್ಲ. ಇನ್ನಾದರೂ ಏಕ ವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.

ಸೆಲ್ಫಿ ಗೀಳು; 140 ಅಡಿ ಕಂದಕಕ್ಕೆ ಬಿದ್ದರೂ ಬದುಕುಳಿದ ಯುವಕ

ವಿಜಯಸಾಕ್ಷಿ ಸುದ್ದಿ, ಗೋಕಾಕ

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ 140 ಅಡಿ ಆಳದ ಕಂದಕಕ್ಕೆ ಬಿದ್ದ ಯುವಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ ಸಾಗರ ಅದೃಷ್ಟವಂತ ಯುವಕ. ಬೆಳಗಾವಿಯ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ ಶನಿವಾರ ರಜೆ ಮಜಾ ಜಳೆಯಲು ಸ್ನೇಹಿತರ ಜತೆ ಗೋಕಾಕ್ ಫಾಲ್ಸ್ ಗೆ ಬಂದಿದ್ದ.

ಫಾಲ್ಸ್ ಮೇಲಿನ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ 140 ಅಡಿ ಆಳದ ಕಂದಕಕ್ಕೆ ಜಾರಿಬಿದ್ದಿದ್ದಾನೆ. ಸ್ನೇಹಿತರು ತಕ್ಷಣ ಗೋಕಾಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಕಾಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಾತ್ರಿಯವರೆಗೆ ರಕ್ಷಣಾ ಕಾರ್ಯಾಚರಣೆ ‌‌ನಡೆಸಿದ್ದರು. ಬದುಕುಳಿದಿರುವುದು ಅಸಾಧ್ಯವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಮೊಟಕುಗೊಳಿಸಿ ಸಿಬ್ಬಂದಿ ಹಾಗೂ ಸ್ನೇಹಿತರು ತೆರಳಿದ್ದರು.

ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ ಸ್ನೇಹಿತರಿಗೆ ಕರೆ ಮಾಡಿ, ತನ್ನ ಲೋಕೇಶನ್ ಶೇರ್ ಮಾಡಿದ್ದ. ಸ್ನೇಹಿತರು ತಕ್ಷಣ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

140 ಅಡಿ ಆಳದ ಕಂದಕಕ್ಕೆ ಇಳಿದ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರದೀಪನನ್ನು ರಕ್ಷಿಸಿ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿದ್ದ ಸ್ಥಿತಿ ನೋಡಿದರೆ ಯುವಕ ಬದುಕುಳಿದಿರುವುದು ಪವಾಡವೆಂದೇ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ 40 ಜನ ಶಾಸಕರು ಶೀಘ್ರ ಕಾಂಗ್ರೆಸ್‌ಗೆ; ಮಾಜಿ ಶಾಸಕ ಹೊಸ ಬಾಂಬ್

ವಿಜಯಸಾಕ್ಷಿ ಸುದ್ದಿ, ಅಥಣಿ

ಬಿಜೆಪಿಯ 40 ಜನ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಎರಡ್ಮೂರು ಶಾಸಕರು ಕಾಂಗ್ರೆಸ್ ಬರಲು ಸಿದ್ಧವಾಗಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದಿದ್ದೇನೆ.

ನನಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತೊಡಗಲು ಹೇಳಿದ್ದಾರೆ. ಶೀಘ್ರದಲ್ಲಿ 40 ಜನ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಪುನರುಚ್ಚರಿಸಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರು, ಶಾಸಕರ ಮಧ್ಯೆ ವೈಮನಸ್ಸು ಇದೆ. ಹೊಂದಾಣಿಕೆ ಕೊರತೆಯಿಂದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಬರುವ 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಳೆಯ ಆರ್ಭಟಕ್ಕೆ ಮನೆ ಮೇಲ್ಛಾವಣಿ ಕುಸಿತ; ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಗದಗ, ರೋಣ ಹಾಗೂ ಮುಂಡರಗಿ ಸೇರಿದಂತೆ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು- ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ.
ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಜಮೀನು ಒಂದರಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದ ಕೃಷಿ ಕಾರ್ಮಿಕ ಮಹಿಳೆ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಇತ್ತ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮಳೆಯ ರಭಸಕ್ಕೆ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದಿದೆ.

ಮನೆಯ ಒಳಗಡೆ ಮಲಗಿಕೊಂಡಿದ್ದ ಕುಟುಂಬದ ಚನ್ನಮ್ಮ ಕಂಬಳಿ, ಅವರ ಮಗ ನವೀನ ಕಂಬಳಿ ಹಾಗೂ ಸೊಸೆ ಸುಜಾತಾ ಎಂಬ ಮೂವರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮನೆಯ ಮೇಲ್ಛಾವಣಿ ಕುಸಿಯುತ್ತಿದ್ದಂತಿಯೇ ಮೂವರು ತಡಬಡಿಸಿ ಓಡಿ ಹೊರಬಂದಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯ ಅವಾಂತರದಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಹಳ್ಳ- ಕೊಳ್ಳಗಳು, ಚೆಕ್ ಡ್ಯಾಂಗಳು, ಗೋಕಟ್ಟೆಗಳು ತುಂಬಿ ಹರಿಯುತ್ತಿವೆ. ಕೆಲ ಕಡೆಗಳಲ್ಲಿ ರಸ್ತೆಯ ಮೇಲೆ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದ ಪರಿಣಾಮ ರಾತ್ರಿ ಇಡೀ ಸಂಪರ್ಕ ಕಡಿತಗೊಂಡಿದ್ದು, ಬೆಳಿಗಿನ ಹೊತ್ತಿಗೆ ಸಹಜ ಸ್ಥಿತಿಗೆ ಮರಳಿವೆ.

ಭಾರೀ ಮಳೆಯಿಂದಾಗಿ ಜಮೀನಿನಲ್ಲಿ ಈಗಾಗಲೇ ಕಟಾವಿನ ಹಂತದಲ್ಲಿದ್ದ ಮುಂಗಾರು ಬೇಳೆ ನೆಲಕಚ್ಚಿವೆ. ಕೆಲ ಜಮೀನುಗಳಲ್ಲಿ ನೀರು ನಿಂತುಕೊಂಡಿರುವ ಪರಿಣಾಮ ಬೆಳೆಗಳು ಜಲಾವೃತಗೊಂಡಿವೆ.

ಸರ್ಕಾರಿ ನೌಕರರನ್ನು ಅಶ್ಲೀಲವಾಗಿ ನಿಂದಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ!

ವಿಜಯಸಾಕ್ಷಿ ಸುದ್ದಿ, ಕೋಲಾರ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರಿ ನೌಕರರನ್ನು ಅಶ್ಲೀಲ ಪದಬಳಕೆ ಮಾಡಿ ನಿಂದಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಸಲುವಾಗಿ ಚರ್ಚಿಸಲು ತಹಶೀಲ್ದಾರ್ ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಭೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ರೈತರಿಗೆ ಡಿಸಿಸಿ ಬ್ಯಾಂಕ್ ವಿತರಿಸುವ ಸಾಲಕ್ಕೆ ದಾಖಲೆ ಕೊಡಲು ಕಂದಾಯ ಇಲಾಖೆ ವಿಳಂಬ ಮಾಡಿದ್ದಕ್ಕೆ ತಾಳ್ಮೆ ಕಳೆದುಕೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸರ್ಕಾರಿ ನೌಕರರಿಗೆ ಬಾಯಿಗೆ ಬಂದಂತೆ ಅಶ್ಲೀಲ ಪದಗಳ ಪ್ರಯೋಗ ಮಾಡಿದ್ದಾರೆ.

ಸರ್ಕಾರಿ ನೌಕರರನ್ನು ಸೂ… ಮಕ್ಕಳು ಎಂದು ಹೀಯಾಳಿಸಿದ್ದಲ್ಲದೆ, ಇದಕ್ಕಾಗಿ ನಿರ್ದಿಷ್ಟ ಜಾತಿ ಹೆಸರನ್ನೂ ಬಳಸಿಕೊಂಡಿದ್ದಾರೆ. ಕೆಲಸ ಮಾಡದ ನೌಕಕರನ್ನು ಬಾರಿಸಲು ಶುರು ಮಾಡ್ತೀನಿ. ಅವರ (ನೌಕರರ) ಸಂಘ ಬಂದು ಪ್ರತಿಭಟನೆ ಮಾಡಲೀ ನೋಡ್ತೀನಿ. ರೈತರನ್ನು ಕರೆದುಕೊಂಡು ( ನೌಕರರನ್ನ) ಸೂ….ಮಕ್ಕಳನ್ನು ಸುಡಿಸಿಬಿಡ್ತೀನಿ.

ರಾಜ್ಯದಲ್ಲಿ ಸಂಘರ್ಷವೇ ನಡೆದುಹೋಗಲಿ, ಜನರು ಒಳ್ಳೆಯದನ್ನು ತೀರ್ಮಾನಿಸ್ತಾರೆ. ಸಂಬಳ ಬೇಕು, ಬಂದೋಬಸ್ತ್ ಬೇಕು, ಅನುಕೂಲ ಬೇಕು ಆದರೆ, ರೈತರ ಕಷ್ಟ ಬೇಕಾಗಿಲ್ಲ ಸೂ…ಮಕ್ಕಳಿಗೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ರೈತ ಕಳೆದುಕೊಳ್ಳುವ ಹಣದ ಬಗ್ಗೆ ಮಾತನಾಡಿದಾಗ ನಿರ್ದಿಷ್ಟ ಜಾತಿ ಉಲ್ಲೇಖಿಸಿದ್ದಾರೆ. ಇತ್ತೀಚೆಗಷ್ಟೆ ರಮೇಶ್ ಕುಮಾರ್ ಚಿಂತಾಮಣಿಯಲ್ಲಿ ಪೊಲೀಸರನ್ನು ನಿಂದಿಸಿ ಸುದ್ದಿಯಾಗಿದ್ದರು. ರಮೇಶ್ ಕುಮಾರ್ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇದೀಗ ಸರ್ಕಾರಿ ನೌಕರರನ್ನು ಅಶ್ಲೀಲವಾಗಿ ಬೈದಿರುವ ರಮೇಶ್ ಕುಮಾರ್ ವರ್ತನೆಗೆ ಸರ್ಕಾರಿ ನೌಕರರ ಸಂಘದ ಮುಖಂಡರು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ನಾನು ಯಾರನ್ನೂ ಬೈದಿಲ್ಲ

ಶುಕ್ರವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್, ಉದ್ದೇಶಪೂರ್ವಕವಾಗಿ ಯಾರಿಗೂ ಬೈದಿಲ್ಲ. ಆವೇಶಭರಿತವಾಗಿ ಮಾತಾನಾಡಿದ್ದೇನೆ. ದುರದ್ದೇಶದಿಂದ ನಿಂದಿಸಿಲ್ಲ. ಅವಾಚ್ಯವಾಗಿ, ಯಾವುತ್ತು ಎಂದಿಗೂ ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸಿದ ಸಿ.ಟಿ.ರವಿ

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಗಾಂಧಿ ಜಯಂತಿ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಾಲಕಿಯರ ಹಾಸ್ಟೆಲ್ ನಲ್ಲಿ ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದ್ದಾರೆ.

ಗಾಂಧೀಜಿ ಜಯಂತಿ ಹಿನ್ನೆಲೆ ಸ್ವಚ್ಛತಾ ಅಭಿಯಾನ ಅಂಗವಾಗಿ ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಿ.ಟಿ. ರವಿ ಶೌಚಾಲಯ ಕ್ಲೀನ್ ಮಾಡಿ ವಿದ್ಯಾರ್ಥಿಗಳಲ್ಲಿ ಅಚ್ಚರಿ ಮೂಡಿಸಿದರು.

ಸಾರ್ವಜನಿಕರಿಂದ ಹಣ ವಸೂಲಿ; ಗದಗನ ಇಬ್ಬರು ನಕಲಿ ಪೊಲೀಸರ ಬಂಧನ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಗದಗನ ವೀರನಾರಾಯಣ ಗುಡಿ ಬಳಿಯ ನಿವಾಸಿ ಸಂಜಯ್ ಕೊಪ್ಪದ (23), ನರಗುಂದದ ಸಂಜು ಚಲವಾದಿ (23) ಬಂಧಿತ ಆರೋಪಿಗಳು.

ನಗರದ ಆರ್ ಟಿಒ ಕಚೇರಿ ಹೊರವಲಯದ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಭೀಮೇಶ್ ಹುಗ್ಗಿ ಎಂಬುವರನ್ನು ತಡೆದು ದಾಖಲೆಗಳನ್ನು ಪರಿಶೀಲನೆಗೆ ಕೇಳಿದ್ದಾರೆ. ದಾಖಲೆ ಇಲ್ಲವೆಂದ ಮೇಲೆ ದಂಡ ಕಟ್ಟಬೇಕು ಇಲ್ಲವೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೇಳಿದ್ದಾರೆ.

ಆದರೆ ದಂಡ ಕಟ್ಟಲು ಹಣ ಇಲ್ಲ ಎಂದಾಗ ಕಪಾಳಕ್ಕೆ ಹೊಡೆದು ಜೇಬು ಪರಿಶೀಲಿಸಿ ಒಂದು ಸಾವಿರ ರೂ.ನಗದು, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ,  ಎಟಿಎಂ ಕಾರ್ಡ್ ಪಡೆದು ನಂತರ, ಅದರ ಪಾಸ್‍ವರ್ಡ್ ಕೇಳಿ, ಬ್ಯಾಂಕ್ ಖಾತೆಯಲ್ಲಿನ ರೂ. 1,500 ರೂ.  ಡ್ರಾ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆಗಸ್ಟ್‌ 15 ರಂದು ಪ್ರಕರಣ ದಾಖಲಾಗಿತ್ತು
ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸೈ ಲಕ್ಕಪ್ಪ ಅಗ್ನಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖಾ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ವೇಳೆಯಲ್ಲಿ ನಗರದ ಹೊರವಲಯದಲ್ಲಿ ಸಾರ್ವಜನಿಕರನ್ನು ತಡೆದು ಪೊಲೀಸ್ ಎಂದು ಬೆದರಿಸಿ ಹಣಕೀಳುವ ವೇಳೆಯಲ್ಲಿ ವಶಕ್ಕೆ ಪಡೆಯಲಾಗಿದೆ.

ಗದಗ ನಗರ, ಗ್ರಾಮೀಣ, ಅಣ್ಣಿಗೇರಿ, ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣ ವಸೂಲಿ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಮಣ್ಣಿನ ಮಕ್ಕಳ ಕಲ್ಲು; ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಕೋಲಾರ

ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ನೀರಾವರಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ‘ಕಲ್ಲು’ಹಾಕಲು ಹವಣಿಸಿದ್ದ ಮಣ್ಣಿನಮಕ್ಕಳು, ಈಗ ನನ್ನ ತಲೆಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಮಾಲೂರು ತಾಲೂಕಿನ ದೊಡ್ಡಶಿವಾರ ಈಶ್ವರಕೆರೆ ನಾಲ್ಕು ದಶಕದ ಬಳಿಕ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.

ಮಳೆಯ ಜೂಜಾಟದಲ್ಲಿ ಪಾತಾಳಕ್ಕೆ ಕುಸಿದಿದ್ದ ಕೋಲಾರ ಜಿಲ್ಲೆಯಲ್ಲಿನ ಅಂತರ್ಜಲ ಈಗ ಕೆಸಿ ವ್ಯಾಲಿ ನೀರಾವರಿ ಯೋಜನೆಯಿಂದಾಗಿ ಪುನಶ್ಚೇತನ ಕಂಡಿದೆ. 800- 900 ಅಡಿಗೂ ನಿಲುಕದ ಅಂತರ್ಜಲ, ಯೋಜನೆಯ ಅನುಷ್ಠಾನದಿಂದಾಗಿ 300- 500ರ ಅಡಿಗೆ ನೀರು ಕಾಣುವಂತಾಗಿದೆ. ಯೋಜನೆಗೆ ಅಡ್ಡಿಗಾಲು ಹಾಕಿದ್ದ ಮಣ್ಣಿನಮಕ್ಕಳಿಗೆ ತಕ್ಕಪಾಠ ಕಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಅವರು ಸ್ವಘೋಷಿತ ಮಣ್ಣಿನಮಕ್ಕಳು. ನಾವು ರೈತರ ಮಕ್ಕಳು ಎಂದು ದೇವೇಗೌಡರನ್ನು ಕಾಲೆಳೆದ ಸಿದ್ದರಾಮಯ್ಯ, ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೇ. ಆಗ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಆದರೆ, ಈಗಿನ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳನ್ನ ಅನುಷ್ಠಾನಕ್ಕೆ ತರಲು ಸರ್ಕಾರದ ಬಳಿ ಹಣವೇ ಇಲ್ಲ ಎಂದು ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಛೇಡಿಸಿದರು.

ಅನ್ನಭಾಗ್ಯ ಯೋಜನೆ ಅಡಿ ನಮ್ಮ ಸರ್ಕಾರ ಪ್ರತಿ ವ್ಯಕ್ತಿಗೆ ಏಳು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದೇವು. ಆದರೆ, ಈಗ ಬಿಜೆಪಿ ಸರ್ಕಾರ ಎರಡು ಕೆಜಿ ಕಡಿತಗೊಳಿಸಿದೆ. ಅಕ್ಕಿ ಕಡಿತಗೊಳಿಸಿದ ಸಚಿವ ಉಮೇಶ್ ಕತ್ತಿ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು. ಅದಕ್ಕಾಗಿ ಅವರು ಅಕ್ಕಿಯನ್ನು ಕಡಿತಗೊಳಿಸಿದ್ದಾರೆ ಎಂದು ಕುಟುಕಿದರು.
ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಇತರರು ಇದ್ದರು.

ಬಾಗಿನ ಕಾರ್ಯಕ್ರಮದಲ್ಲಿ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಮಾಯಿಸುವ ಮೂಲಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ ಕೇಳಿ ಬಂತು.

ಬಲವಂತದ ಮತಾಂತರಕ್ಕೆ ನಮ್ಮ ವಿರೋಧ: ಸಿದ್ದು

ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತನ್ನ ಧರ್ಮದಿಂದ ತನಗೆ ಸರಿಕಾಣುವ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ, ಆಸೆ, ಆಮಿಷಗಳಿಗೆ ಒಳಗಾಗಿ, ಬಲವಂತದಿಂದ ಮತಾಂತರಕ್ಕೆ ಒಳಗಾದರೆ, ಅದಕ್ಕೆ ನಮ್ಮ ವಿರೋಧ ಇದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯಿಸಿದರು.

ಜೇಬಿಗೆ ಕತ್ತರಿ ಹಾಕಿದ ದುಷ್ಕರ್ಮಿಗಳು

ಈಶ್ವರಕೆರೆ ಭರ್ತಿಯಾಗಿ ಕೋಡಿಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಸಹಸ್ರಾರು ಜನಸ್ತೋಮ ಜಮಾಯಿಸಿತ್ತು. ಇಂಥಹ ಸಂದರ್ಭವನ್ನೇ ಅವಕಾಶವಾಗಿ ಬಳಸಿಕೊಂಡ ಪುಢಾರಿಗಳು, ತಾಲ್ಲೂಕಿನ ಹುಲ್ಕೂರು ಗ್ರಾಮದ ನಾಗೇಶ್ ಅವರ ಜುಬ್ಬಾದ ಜೇಬಿಗೆ ಕತ್ತರಿ ಹಾಕಿ, ಅವರ ಜೇಬಿನಲ್ಲಿದ್ದ ರೂ. 25ಸಾವಿರ ಹಣವನ್ನು ಎಗರಿಸಿದ ಘಟನೆ ನಡೆದಿದೆ.