Home Blog Page 3437

ವಾಜಪೇಯಿ, ನೆಹರೂ ಬಗ್ಗೆ ಕೀಳುಮಟ್ಟದ ಭಾಷೆ ಬಳಕೆ ಸಲ್ಲ

ಹಾವೇರಿಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಹಾವೇರಿ

ವಾಜಪೇಯಿ, ನೆಹರು ಅಂಥವರನ್ನು ಯಾರೇ ಆಗಲಿ ಗೌರಿಸಬೇಕಾಗುತ್ತದೆ. ಅಂಥವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಬಾರದು ಎಂಬುದು ನನ್ನ ವಯಕ್ತಿಕ ಭಾವನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಸಿಎಂ ಪುತ್ರ ಭಾಗಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಉದ್ಯಮಿಯಾಗಿ ಸಿಎಂ ಪುತ್ರ ಭರತ ಬೊಮ್ಮಾಯಿ ಭಾಗಿಯಾಗಿದ್ದಾರೆ.
ಅದಕ್ಕೂ ಟೀಕೆ ಮಾಡೋದು ಅಂದರೆ ಹೇಗೆ.? ಕಾಂಗ್ರೆಸ್ ನವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆ ಗೊತ್ತಿಲ್ಲ ಎಂದರು.

ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ಬಿಜೆಪಿ ಸರಕಾರ ಅಲ್ಲಾಡಿಸಲು ಯಾರಿಂದಲೂ ಆಗೋದಿಲ್ಲ. ನಾವು 118 ಜನ ಬಿಜೆಪಿ ಶಾಸಕರಿದ್ದೇವೆ‌. ಬೊಮ್ಮಾಯಿ ಅವರು ಸಿಎಂ ಆಗಿ ಅವಧಿ ಪೂರ್ಣಗೊಳಿಸಲಿದ್ದಾರೆ.

2023ರಲ್ಲೂ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಭವಿಷ್ಯ ಹೇಳೋಕೆ ಶುರು ಮಾಡಿದ್ದಾರೆ.
ಅವರಿಗೆ ಭವಿಷ್ಯದಲ್ಲಿ ನಂಬಿಕೆ ಇಲ್ಲ. ಅದ್ಹೇಗೆ ಭವಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ ಎಂದು ಹೇಳಿದರು.

ಧ್ವಜ ಸ್ತಂಬ ನೆಡುವಾಗ ವಿದ್ಯುತ್ ತಗುಲಿ‌ ಬಾಲಕ ಸಾವು

ವಿಜಯಸಾಕ್ಷಿ ಸುದ್ದಿ, ತುಮಕೂರು

ಧ್ವಜ ಸ್ತಂಭ ನಿಲ್ಲಿಸುವ ವೇಳೆ ಮೂವರಿಗೆ ವಿದ್ಯುತ್ ತಗುಲಿ, ಓರ್ವ ಬಾಲಕ ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಸಂಭವಿಸಿದೆ.

ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲು ಧ್ವಜ ಸ್ತಂಬ ನಿಲ್ಲಿಸಲು ಹೋದಾಗ ಸ್ತಂಬಕ್ಕೆ ವಿದ್ಯುತ್ ತಂತಿ ತಗುಲಿ ಮೂವರಿಗೆ ಶಾಖ್ ಹೊಡೆದು ಅಸ್ವಸ್ಥರಾಗಿದ್ದಾರೆ.

ಆಸ್ಪತ್ರೆಗೆ ಸಾಗಿಸುವಾಗ 16 ವರ್ಷದ ಚಂದನ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಶಂಕರ್, ಪವನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಚಂದನ್ ತಂದೆ- ತಾಯಿಗೆ ಒಬ್ಬನೇ ಪುತ್ರ ಎಂದು ತಿಳಿದುಬಂದಿದೆ. ಮೂವರು ವಿದ್ಯಾರ್ಥಿಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಮೃತ ಬಾಲಕನ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಈ ದುರ್ಘಟನೆಗೆ ಶಾಲಾ ಶಿಕ್ಷಕರ ನಿರ್ಲಕ್ಷವೇ ಕಾರಣ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಮಾಜಿ ಸೈನಿಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಮಾಜಿ ಸೈನಿಕರಿಗೆ ಬಿಜೆಪಿ ನಗರ ಘಟಕ ವತಿಯಿಂದ, ವಾರ್ಡ್ ಸಂಖ್ಯೆ 29ರ ಬೂತ್ ಕಮಿಟಿ ಅಧ್ಯಕ್ಷರಾದ ಅಮರೇಶ್ ಮುರಲಿಯವರು ಸನ್ಮಾನ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚಂದ್ರಶೇಖರ್ ಗೌಡ ಪಾಟೀಲ್ ಹಲಿಗೇರಿ ಮಾತನಾಡಿ, ಸವಿಸ್ತಾರವಾಗಿ ಸೈನಿಕರ ಬಲಿದಾನ ಹಾಗೂ ತ್ಯಾಗವನ್ನು ಗುರುತಿಸುವಲ್ಲಿ ಬಿಜೆಪಿಯವರ ವಾಜಪೇಯಿ ಅವರು ಪ್ರಮುಖ ಪಾತ್ರ ವಹಿಸಿದ ಬಗ್ಗೆ ಹಾಗೂ ಸೈನಿಕರನ್ನು ಗುರುತಿಸಿ ಅವರಿಗೆ ದೇಶಾದ್ಯಂತ ಹೆಚ್ಚಿನ ಗೌರವಗಳನ್ನು ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿವರಿಸಿದರು.

ಅದೇ ರೀತಿ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಮಾನ್ ನರೇಂದ್ರ ಮೋದಿಜಿ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದರ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.

ಅದೇ ರೀತಿಯಾಗಿ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ ರಾಜ್ಯ ಕಾರ್ಯದರ್ಶಿಗಳಾದ ಹೇಮಲತಾ ನಾಯಕ ರವರು ಮೋದಿ ಸರ್ಕಾರದಲ್ಲಿ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಾಗೂ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಹಾಗೂ ಸೈನಿಕರಿಗೆ ಸಿಗಬೇಕಾದ ಎಲ್ಲಾ ಸೌಲತ್ತುಗಳನ್ನು ನಮ್ಮ ಬಿಜೆಪಿ ಸರಕಾರ ಒದಗಿಸಿಕೊಡುತ್ತಿದೆ. ಬಿಜೆಪಿ ಸರ್ಕಾರವು ಸೈನಿಕರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸವಲತ್ತುಗಳನ್ನು ನೀಡುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದ ಆಯೋಜಕರಾದ ಅಮರೇಶ್ ಮುರಲಿ 75 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸೈನಿಕರಿಗೆ ಸನ್ಮಾನಿಸುವಯದರಿಂದ ಯಶಸ್ವಿ ಕಾರ್ಯಕ್ರಮ ಆಗಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಬಿಜೆಪಿಯ ನಗರ ಘಟಕದ ಅಧ್ಯಕ್ಷ ಸುನಿಲ್ ಹೆಸರೂರು, ಕವಿತಾ ಪಾಟೀಲ್, ನಾಗರತ್ನ ಪಾಟೀಲ್, ಶ್ರೀಧರ್ ಗೌಡ್ರು ಬನ್ನಿಕೊಪ್ಪ, ಶಿವಯೋಗಿ ಹಾವಿನಾಳ, ಗವಿಸಿದ್ದಪ್ಪ ನೆಳಜೇರಿ, ಹುಡುಕೋ ಕಾಲೋನಿಯ ನಿವಾಸಿಗಳಾದ
ಬಸವರಾಜ್ ತಳಗೇರಿ, ಸುನಿಲ್ ಮಹೇಶ್ ಎಲಿಗಾರ್ ಇತರರು ಇದ್ದರು.

ಸನ್ಮಾನಿತ ಮಾಜಿ ಸೈನಿಕರು
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಡಾ.ಬಿ.ಆರ್. ಬೆಳಗಟ್ಟಿ,
ನಿಂಗಪ್ಪ ಗಾಣಿಗೇರ,
ಲಕ್ಷ್ಮಣ್, ವೆಂಕಟೇಶ್,
ಹನುಮಂತಪ್ಪ ಆರೆರ್ ಇವರನ್ನು ಸನ್ಮಾನಿಸಲಾಯಿತು.

ಸಚಿವ ಹಾಲಪ್ಪ ಸುದ್ದಿಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರು!

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ರಾಷ್ಟ್ರಧ್ವಜಾರೋಹಣದ ನಂತರ ಆಯೋಜಿಸಿದ್ದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರ ಸುದ್ದಿಗೋಷ್ಠಿಯನ್ನು ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಕರ್ತರು ಬಹಿಷ್ಕರಿಸಿದರು.

ಹಾಲಪ್ಪ ಆಚಾರ್ ಸಚಿವರಾದ ನಂತರ ಜಾಹೀರಾತು ನೀಡಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ಖಂಡಿಸಿ ಮಾಧ್ಯಮಗೋಷ್ಠಿಯ ಕೋಣೆಗೆ ಸಚಿವರು ಆಗಮಿಸುತ್ತಿದ್ದಂತೆ ಅವರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತಾ, ಸಾಂಕೇತಿಕ ಹೋರಾಟದ ರೂಪದಲ್ಲಿ ಹಾಜರಿದ್ದ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ವರದಿಗಾರರು ಹೊರ ನಡೆದರು.

ಪತ್ರಕರ್ತರ ಈ ನಡೆಯಿಂದ ಕೆಲ‌ಕ್ಷಣ ಅವಕ್ಕಾದ ಸಚಿವರು ನಂತರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸಂಸದ ಕರಡಿ ಸಂಗಣ್ಣ ಪತ್ರಕರ್ತರ ಮನವೊಲಿಸುವ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ.

ಈ ವೇಳೆ ಪತ್ರಕರ್ತರಾದ ಹರೀಶ್ ಎಸ್.ಎಚ್.ಸಾದಿಕ್ ಅಲಿ, ದೇವು ನಾಗನೂರು, ಬಸವರಾಜ ಕರುಗಲ್, ನಾಗರಾಜ ವೈ.ಎನ್, ಶಿವರಾಜ ನುಗಡೋಣಿ, ಮೌಲಾಹುಸೇನ್ ಬುಲ್ಡಿಯಾರ್, ರವಿಚಂದ್ರ ಬಡಿಗೇರ, ಸಿದ್ದಪ್ಪ ಹಂಚಿನಾಳ, ಶಿವಕುಮಾರ್ ಹಿರೇಮಠ, ಬಸವರಾಜ ಗುಡ್ಲಾನೂರು, ವೈ.ಬಿ.ಜೂಡಿ, ಫಕೀರಪ್ಪ ಗೋಟೂರು, ಎನ್.ಎಂ.ದೊಡ್ಡಮನಿ, ಮಂಜುನಾಥ ಗೊಂಡಬಾಳ, ಬ್ರಹ್ಮಾನಂದ, ರಾಜಾಸಾಬ್ ಮುಲ್ಲಾರ್, ಕಾಸೀಂಸಾಬ್ ನದಾಫ್, ಪ್ರಭು ಗಾಳಿ ಸೇರಿದಂತೆ ಅನೇಕ ಪತ್ರಕರ್ತರು ಬಹಿಷ್ಕಾರ ಹಾಕಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಲವು ಅಮೃತ ಯೋಜನೆ ಘೋಷಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಳ್ಳಿಯಿಂದ ನಗರದವರೆಗೆ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಸವಿನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಅಮೃತ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ‍್ಯ ಸಂಭ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣದ ಬಳಿಕ ರಾಜ್ಯವನ್ನುದ್ದೇಶಿಸಿ ಅವರು ಮಾತನಾಡಿದರು.

ಅಮೃತ ಗ್ರಾಮ ಪಂಚಾಯ್ತಿ ಯೋಜನೆ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಕಿರು ಉದ್ದಿಮೆ ಯೋಜನೆ, ಅಮೃತ ಅಂಗನವಾಡಿ ಯೋಜನೆ ಸೇರಿದಂತೆ ವಿವಿಧ ಅಮೃತ ಯೋಜನೆಗಳನ್ನು ಘೋಷಣೆ ಮಾಡಿದರು.

ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ ಗ್ರಾಮೀಣ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

750 ಗ್ರಾಮ ಪಂಚಾಯತಿಗಳಲ್ಲಿ ವಸತಿ ರಹಿತರು, ಬಡವರನ್ನು ಗುರುತಿಸಿ, ವಸತಿ ಯೋಜನೆ ರೂಪಿಸಲಾಗುತ್ತದೆ. ಬೀದಿದೀಪ, ಪ್ರತಿಮನೆಗೆ ಕುಡಿಯುವ ನೀರು ಪೂರೈಕೆ, ಶೇ.100ರಷ್ಟು ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ನೀರನ್ನು ವೈಜ್ಞಾನಿಕ ವಿಲೇವಾರಿ, ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದರು.

ಅಮೃತ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ ಪ್ರತಿ ಸಂಘಕ್ಕೆ ತಲಾ 30 ಲಕ್ಷ ರೂಪಾಯಿ ಸಹಾಯಧನ ನೀಡಿ, ರೈತರಿಗೆ ವಿವಿಧ ಯೋಜನೆಗಳ ಪ್ರಯೋಜನ ಒದಗಿಸಿಕೊಡಲಾಗುತ್ತದೆ.

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಅಮೃತ ಶಾಲಾ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 750 ಶಾಲೆಗಳ ಸಮಗ್ರ ಮೂಲಭೂತ ಸೌಕರ್ಯ ಕಲ್ಪಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ಶಾಲೆಗಳಲ್ಲಿನ ಡಿಜಿಟಲ್ ಗ್ರಂಥಾಲಯ, ಸುಸಜ್ಜಿತ ಶಾಲೆಗಳ ನಿರ್ಮಾಣ, ಪ್ರಯೋಗಾಲಯ, ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅಮೃತ ಅಂಗನವಾಡಿ ಯೋಜನೆಯಡಿ ರಾಜ್ಯದಲ್ಲಿ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರತಿ ಅಂಗನವಾಡಿಗಳಿಗೆ 1 ಲಕ್ಷ ನೀಡುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಅಮೃತ ನಿರ್ಮಲ ನಗರ ಯೋಜನೆ ಅನುಷ್ಠಾನಗೊಳಿಸುವ ಮೂಲಕ, ಸ್ಥಳೀಯ ಸಂಸ್ಥೆಗಳನ್ನು 75 ಕೋಟಿ ವೆಚ್ಚದಲ್ಲಿ ಸೌಂದರ್ಯ ಕಾಪಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಪ್ರತಿ ಸ್ಥಳೀಯ ಸಂಸ್ಥೆಗಳಿಗೆ 1 ಕೋಟಿ ನೀಡಲಾಗುತ್ತದೆ. ಇದಕ್ಕಾಗಿ 75 ಕೋಟಿ ಅನುದಾನ ನೀಡಲಾಗುತ್ತದೆ. ಅಮೃತ ಕಿರು ಉದ್ದಿಮೆ ಯೋಜನೆ ಅನುಷ್ಠಾನದ ಮೂಲಕ ಸ್ವಸಹಾಯಕ ಸಂಘಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಮೂರನೇ ಅಲೆ ನಿಯಂತ್ರಣಕ್ಕಾಗಿ ಆ. 30 ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ, ನೈಟ್ ಕರ್ಫ್ಯೂ

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973,

ಸಾಂಕ್ರಾಮಿಕ  ರೋಗ ಕಾಯ್ದೆ 1897  ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ  ಕಾಯ್ದೆ 2005 ರ ಪ್ರಕಾರ

ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಸರ್ಕಾರ ಹೊರಡಿಸಿದ ಮೊಹರಂ ಹಾಗೂ ಗಣೇಶ ಹಬ್ಬಗಳ ಮಾರ್ಗಸೂಚಿಗಳ ಆದೇಶಗಳಡಿ ಸಮೀಕ್ಷೆ, ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಮಾರ್ಗಸೂಚಿಗಳ ಎಲ್ಲ ಷರತ್ತು ಹಾಗೂ ಸಡಿಲಿಕೆಗಳಿಗೆ ಒಳಪಟ್ಟು

ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಆಗಸ್ಟ 30 ರ ಬೆಳಗಿನ 6 ಗಂಟೆಯವರೆಗೆ ಪ್ರತಿ ರಾತ್ರಿ 9 ಗಂಟೆಯಿಂದ ಬೆಳಗಿನ 5 ಗಂಟೆಯವರೆಗಿನ ರಾತ್ರಿ ಕಫ್ರ್ಯೂ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ  ರೂ.100 ದಂಡವನ್ನು ವಿಧಿಸಲಾಗುವುದು.

ಈ ಆದೇಶವನ್ನು  ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ತತ್ತಿ ತಿಂದದ್ದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಖಾತೆ

ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ತತ್ತಿ ಖಾತೆಯಲ್ಲಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಖಾತೆ ನೀಡಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆಗೆ ತತ್ತಿ ಪಾಪ ತೊಳೆದುಕೊಳ್ಳಲು ಪ್ರಾಯಶ್ಚಿತ ಖಾತೆ ನೀಡಲಾಗಿದೆ.

ದೇವರ ಜಪ ಮಾಡಲಿ, ಗುಡಿಗಳನ್ನು ಚೆನ್ನಾಗಿ ನೋಡಿಕೊಂಡು ಪೂಜೆ ಮಾಡಿಸಲಿ ಎಂದು ಮುಜರಾಯಿ ಖಾತೆ ಕೊಟ್ಟಿದ್ದಾರೆ. ಎಗ್ ಆದ ಮೇಲೆ ಮತ್ತೇನು ತಿಂತಾರೆ ಎನ್ನುವ ಚಿಂತೆ ಇತ್ತು. ಮುಂದೆ ಏನಾದರೂ ಅನಾಹುತ ಮಾಡಬಾರದು ಎಂದು ಮುಖ್ಯಮಂತ್ರಿ ಮುಜರಾಯಿ ಖಾತೆ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.

ಬಿಜೆಪಿಯವರು ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪಕ್ಷದಲ್ಲಿರುವವರೆಲ್ಲ ಸೇರಿ ಭ್ರಷ್ಟಾಚಾರ ಹಂಚಿಕೊಂಡಿರುತ್ತಾರೆ. ಹಾಗಾಗಿ ಶಶಿಕಲಾ ಜೊಲ್ಲೆ ವಿರುದ್ಧದ ಆರೋಪದ ಕುರಿತಂತೆ ತನಿಖೆ ಮಾಡಿಲ್ಲ. ಯಾರಾದರೂ ನ್ಯಾಯಾಲಯಕ್ಕೆ ಹೋಗಿಯೇ ಹೋಗುತ್ತಾರೆ. ತಡವಾದರೂ ತನಿಖೆ ಆಗುತ್ತದೆ. ಮರಳಿ ಶಶಿಕಲಾ ಅವರಿಗೆ ತತ್ತಿ ಖಾತೆ ನೀಡದಿರುವುದು ಸಂತೋಷ ತಂದಿದೆ ಎಂದರು.

ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ; ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊರೊನಾ ನಿರ್ವಹಣೆ ಕುರಿತಾಗಿ ತಜ್ಞರೊಂದಿಗೆ ಬೆಂಗಳೂರಿನಲ್ಲಿಂದು ನಡೆಸಿದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸದಿರಲು ನಿರ್ಧರಿಸಲಾಗಿದೆ. ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಸೆ.23ರಿಂದ 8ರಿಂದ 12ನೇ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.

ಪೋಷಕರು, ಮಕ್ಕಳು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಶಾಲೆ ಆರಂಭವಾದ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾದಲ್ಲಿ ಒಂದು ವಾರಗಳ ಕಾಲ ಶಾಲೆ ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಜೇಶನ್ ಮಾಡಿ ಬಳಿಕ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

ಕೊರೊನಾ ಎರಡನೇ ಅಲೆ ಇನ್ನೂ ಸಂಪೂರ್ಣ ಹೋಗಿಲ್ಲ. ಈಗಲೂ ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ಮುಂದಿನ ಎರಡು ವಾರಗಳ ಕಾಲ ಈಗಿರುವ ನಿಯಮಗಳೇ ಮುಂದುವರಿಯಲಿವೆ.

ಕೊರೊನಾ ನಿರ್ವಹಣೆಗೆ ಬಹಳ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕಿದೆ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಶನ್ ಹೆಚ್ಚಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಟೆಸ್ಟಿಂಗ್ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊರೊನಾ ಡೆಲ್ಟಾ ವೇರಿಯೇಶನ್ ಕಂಡು ಹಿಡಿಯಲು ಮುಂದಿನ ಮೂರು ವಾರಗಳಲ್ಲಿ ರಾಜ್ಯದ ಆರು ಕಡೆ ಜಿನೋಮ್ ಲ್ಯಾಬ್ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಆ.23 ರಿಂದ ಶಾಲೆ ಆರಂಭಿಸಲು ಅಗತ್ಯ ಸಿದ್ಧತೆ; ಸಚಿವ ನಾಗೇಶ್

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಆ. 23 ರಿಂದ 9 ರಿಂದ 12ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ನಿರ್ಧರಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದು ವಾರ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಗಡಿಭಾಗದ ಕೆಲ ತಾಲೂಕುಗಳನ್ನು ಹೊರತುಪಡಿಸಿ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗಿದೆ. ಶಾಲೆ ಇಲ್ಲದಿರುವುದರಿಂದ ಅನೇಕ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಇನ್ನೂ ವಿಳಂಬ ಮಾಡಿದರೆ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಮಾಣ ಬೀರಲಿದೆ. ಹೆಚ್ಚಿನ ಪಾಲಕರು ಶಾಲೆ ಪ್ರಾರಂಭದ ಪರವಾಗಿದ್ದಾರೆ. 9 ರಿಂದ 12ನೇ ತರಗತಿ ಫೀಡ್ ಬ್ಯಾಕ್ ನೋಡಿಕೊಂಡು 1 ರಿಂದ 8ನೇ ತರಗತಿವರೆಗಿನ ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರ ಎಲ್ಲ ಮುನ್ನೆಚ್ಚರಿಕೆ ವಹಿಸಿಯೇ ಶಾಲೆ ಆರಂಭಿಸುತ್ತಿದೆ. ಹೀಗಾಗಿ ಪಾಲಕರು ಧೈರ್ಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಮನವಿ ಮಾಡಿದರು.

ಆಫ್ ಲೈನ್ ಜೊತೆಗೆ ಆನಲೈನ್ ತರಗತಿ ಕೂಡ ಇರಲಿದೆ ಎಂದ ಸಚಿವರು, ಶಿಕ್ಷಕರ ವರ್ಗಾವಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರೆದುರು ಏಕವಚನದಲ್ಲೇ ಬೈದಾಡಿದ ಸಂಸದ, ಶಾಸಕರು

ವಿಜಯಸಾಕ್ಷಿ ಸುದ್ದಿ, ತುಮಕೂರು

ವಿದ್ಯುತ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಹಾಗೂ ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ನಡುವೆ ಜಟಾಪಟಿ ನಡೆದು, ಪರಸ್ಪರ ಕೈ ಕೈ ಮಿಲಾಸುವ ಹಂತ ತಲುಪಿದ ಘಟನೆ ನಡೆಯಿತು.

ಗುಬ್ಬಿ ತಾಲೂಕಿನ ಸಿ. ನಂದಿಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್ ಎಂಎಸ್ ಎಸ್ ಘಟಕ ಉದ್ಘಾಟನಾ ಸಮಾರಂಭದ ವೇಳೆ ಇಬ್ಬರು ನಾಯಕರು ಪರಸ್ಪರ ಏಕವಚನದಲ್ಲಿ ಮಾತಿನ ಚಕಮಕಿ ನಡೆಸಿದರು.

ಸಂಸದ ಬದವರಾಜು ಮಾತನಾಡುತ್ತ, ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು 550 ಕೋಟಿ ರೂಪಾಯಿ ತಂದಿದ್ದೇನೆ, ರೈತರಿಗೆ ಎಕರೆಗೆ ಒಂದು ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.

ಇದರಿಂದ ಆಕ್ರೋಶಗೊಂಡ ಜೆಡಿಎಸ್ ಶಾಸಕ ಶ್ರೀನಿವಾಸ್, ರೈತರಿಗೆ ಸುಳ್ಳು ಯಾಕೆ ಹೇಳ್ತೀರಾ ? ವಯಸ್ಸಾಗಿದೆ ಈಗಲಾದರೂ ನ್ಯಾಯಯುತ ಹೇಳಿಕೆ ನೀಡಬಾರದೇ? ಎಂದು ಪ್ರಶ್ನಿಸಿದರು.

ಇದರಿಂದ ಸಿಟ್ಟಾದ ಸಂಸದ ಬಸವರಾಜು, ಶಾಸಕ ಶ್ರೀನಿವಾಸರಿಗೆ ಏಕವಚನದಲ್ಲೇ ಮಾತಿನ ಚಾಟಿ ಬೀಸಿದರು. ಇಬ್ಬರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದನ್ನು ಕಂಡ ಜನರು ಕೆಲ ಕ್ಷಣ ದಂಗಾಗಿ ಹೋದರು.