Home Blog Page 496

ಟಿ. ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣ: KSIC ಮುಚ್ಚುವ ಪ್ರಶ್ನೆಯೇ ಇಲ್ಲ – ಯತೀಂದ್ರ ಸಿದ್ದರಾಮಯ್ಯ

ಟಿ. ನರಸೀಪುರ: KSIC ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಟಿ. ನರಸೀಪುರದಲ್ಲಿ ಮಾತನಾಡಿದ ಅವರು, KSIC ಅನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಕೆಲವರು KSIC ಮುಚ್ಚಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

KSIC ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಯನ್ನು ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು  ತಿಳಿಸಿದ್ದಾರೆ. ಅಧಿಕಾರಿಗಳು ವಿವಿಧ ಕಡೆ ಜಾಗ ಪರಿಶೀಲನೆ ನಡೆಸಿದ ಬಳಿಕ ಈ ಸ್ಥಳವೇ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಎಂದು ತಿಳಿಸಿರುವುದರಿಂದ ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

KSIC ನೌಕರರು ಅಥವಾ ಇನ್ನಿತರರಿಗೆ ಯಾವುದೇ ಅನುಮಾನ ಇದ್ದರೆ ಬಂದು ಚರ್ಚೆ ನಡೆಸಬಹುದು. ಕ್ರೀಡಾಂಗಣ ನಿರ್ಮಾಣವಾದರೆ ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ನಿಮಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗಿದ್ಯಾ!? ಇದರಿಂದ ಮುಕ್ತಿ ಪಡೆಯಲು ಹೀಗೆ ಮಾಡಿ!

0

ಇಂದಿನ ಜೀವನಶೈಲಿಯಲ್ಲಿ ಆಹಾರ ಪದ್ಧತಿ ಅಸಮರ್ಪಕವಾಗಿರುವುದು, ಫೈಬರ್ ಕೊರತೆ, ನೀರು ಕಡಿಮೆ ಕುಡಿಯುವುದು, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಅಸ್ಥಿರ ದಿನಚರಿ ಮಲಬದ್ಧತೆಗೆ ಪ್ರಮುಖ ಕಾರಣಗಳಾಗಿವೆ.

ದಿನವಿಡೀ ಕುಳಿತೇ ಕೆಲಸ ಮಾಡುವವರು, ಹೊರಗಿನ ಆಹಾರ ಹೆಚ್ಚು ಸೇವಿಸುವವರು ಹಾಗೂ ರಾತ್ರಿ ತಡವಾಗಿ ನಿದ್ರೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಮಲಬದ್ಧತೆಯಿಂದ ಬಳಲುವವರು ಹೊಟ್ಟೆ ಖಾಲಿಯಾಗದೆ ಇರುವುದು, ಮಲವಿಸರ್ಜನೆ ವೇಳೆ ಜೋರಾಗಿ ಒತ್ತಡ ಹಾಕಬೇಕಾಗುವುದು, ಹೊಟ್ಟೆ ಭಾರವಾಗಿರುವ ಅನುಭವ, ಗ್ಯಾಸ್ಟ್ರಿಕ್, ಉಬ್ಬರ ಮತ್ತು ಅಸಹಜತೆ ಮೊದಲಾದ ಲಕ್ಷಣಗಳನ್ನು ಕಾಣಬಹುದು. ಕೆಲವೊಮ್ಮೆ ತಲೆನೋವು, ಚಡಪಡಿಕೆ ಹಾಗೂ ಹಸಿವು ಕಡಿಮೆಯಾಗುವ ಸಮಸ್ಯೆಯೂ ಉಂಟಾಗಬಹುದು. ವಯೋವೃದ್ಧರು, ಗರ್ಭಿಣಿಯರು ಹಾಗೂ ಒತ್ತಡ ಹೆಚ್ಚಾಗಿರುವವರಲ್ಲಿ ಅಪಾಯ ಹೆಚ್ಚಾಗಿರುತ್ತದೆ.

ಮಲಬದ್ಧತೆಯನ್ನು ತಡೆಯಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಮುಖ್ಯ. ಪ್ರತಿದಿನ ಹಣ್ಣು, ತರಕಾರಿ, ಧಾನ್ಯಗಳು ಮತ್ತು ಫೈಬರ್‌ ಸಮೃದ್ಧ ಆಹಾರ ಸೇವನೆ ಮಾಡಬೇಕು. ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು, ನಿರ್ದಿಷ್ಟ ಸಮಯದಲ್ಲಿ ಮಲವಿಸರ್ಜನೆ ಅಭ್ಯಾಸ ಮಾಡುವುದು, ಜೋರಾಗಿ ಒತ್ತಡ ಹಾಕದೆ, ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಎಣ್ಣೆ ಹೆಚ್ಚು ಇರುವ ಆಹಾರ ಮತ್ತು ಜಂಕ್ ಫುಡ್ ಕಡಿಮೆ ಮಾಡುವುದು, ಒತ್ತಡ ಕಡಿಮೆ ಮಾಡಿಕೊಳ್ಳುವುದು ಮತ್ತು ಸರಿಯಾಗಿ ನಿದ್ರೆ ಮಾಡುವುದು ಸಹ ಮಲಬದ್ಧತೆ ತಡೆಗಟ್ಟಲು ಸಹಾಯ ಮಾಡುತ್ತದೆ.

ಮಲಬದ್ಧತೆ ಸಮಸ್ಯೆ ಎರಡು–ಮೂರು ವಾರಗಳಿಗಿಂತ ಹೆಚ್ಚು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಮಲವಿಸರ್ಜನೆ ವೇಳೆ ರಕ್ತ ಕಾಣಿಸಿಕೊಳ್ಳುವುದು, ತೀವ್ರ ಹೊಟ್ಟೆನೋವು, ಅಚಾನಕ್ ತೂಕ ಕಡಿಮೆಯಾಗುವುದು ಅಥವಾ ನಿರಂತರ ದೌರ್ಬಲ್ಯ ಕಾಣಿಸಿಕೊಳ್ಳುವುದನ್ನು ಗಂಭೀರ ಸೂಚನೆಗಳೆಂದು ಪರಿಗಣಿಸಬೇಕು. ಔಷಧಿ ಸೇವನೆಯಿಂದ ಸಮಸ್ಯೆ ನಿವಾರಣೆಯಾಗದಿದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಅಗತ್ಯ. ಸರಿಯಾದ ಪರೀಕ್ಷೆ ಮತ್ತು ತಜ್ಞರ ಮಾರ್ಗದರ್ಶನದಿಂದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಬಹುದು.

ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷಗಳು ಪರಿಹಾರವಲ್ಲ: ಪ್ರಧಾನಿ ಮೋದಿ

0

ನವದೆಹಲಿ: ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷಗಳು ಪರಿಹಾರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಲಿಟರಿ ಕಾರ್ಯಾಚರಣೆಗಳ ಬದಲಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಸಂಘರ್ಷಗಳನ್ನು ಪರಿಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಭಾರತ ಮತ್ತು ಫಿನ್ಲ್ಯಾಂಡ್ ಎರಡೂ ಮಿಲಿಟರಿ ಸಂಘರ್ಷದಿಂದ ಯಾವುದೇ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುವುದಿಲ್ಲ ಎಂಬ ನಿಲುವನ್ನು ಹೊಂದಿವೆ. ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಪ್ರದೇಶವಾಗಿರಲಿ, ಸಂಘರ್ಷ ತ್ವರಿತ ಅಂತ್ಯಗೊಳ್ಳಲು ಕೈಗೊಳ್ಳುವ ಎಲ್ಲ ಶಾಂತಿ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ಇಬ್ಬರು ನಾಯಕರ ಮಾತುಕತೆಯಲ್ಲಿ ಡಿಜಿಟಲೀಕರಣ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತಫಿನ್ಲ್ಯಾಂಡ್ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿಸಲು ಒಪ್ಪಿಗೆ ವ್ಯಕ್ತವಾಗಿದೆ.

ಡಿಕೆ ಶಿವಕುಮಾರ್ ವಿರುದ್ಧದ FIRಗೆ ಹೈಕೋರ್ಟ್ ತಡೆಯಾಜ್ಞೆ: ಡಿಸಿಎಂಗೆ ಬಿಗ್ ರಿಲೀಫ್!

ಬೆಂಗಳೂರು:- ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಕೇಸ್​ ಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.

ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನದ ಪೋಸ್ಟರ್​​ನ್ನು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧದ ಎಫ್​​ಐಆರ್​​ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಇಂದು ಆದೇಶ ಹೊರಡಿಸಿದೆ.

ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಈ ಸಂಬಂಧ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್​ಗೂ ಎಕ್ಸ್​​ನ ಪೋಸ್ಟ್​​​ಗೂ ಸಂಬಂಧವಿಲ್ಲವೆಂದು ಡಿಕೆ ಶಿವಕುಮಾರ್​ ಪರ ವಕೀಲ ಹೆಚ್.ವಿ.ಪ್ರವೀಣ್ ಗೌಡ ವಾದಿಸಿದ್ದಾರೆ. ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್ ವಿರುದ್ಧದ FIRಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಘಟನೆ ವಿವರ:-

1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಅಂದರೆ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು.

ಕಾಂಗ್ರೆಸ್​ ಸರ್ಕಾರ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಹೀಗಾಗಿ ಇದನ್ನು ಖಂಡಿಸಿ ಬಿಜೆಪಿ ನಾಯಕರು ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ವಿಭಿನ್ನ ಅಭಿಯಾನ ಮಾಡಿದ್ದರು. ಇದನ್ನು ಡಿಕೆ ಶಿವಕುಮಾರ್​​ ಸೇರಿದಂತೆ ಕಾಂಗ್ರೆಸ್​​ ನಾಯಕರು ತಿರುಚಿ ಪೋಸ್ಟರ್​​ಗಳನ್ನು ಹಾಕಿದ್ದರು.

ಕಾಂಗ್ರೆಸ್​​ ತಿರುಚಿದ ಪೋಸ್ಟರ್​​ಗಳು ಫೋರ್ಜರಿ ಮತ್ತು ಎರಡು ಗುಂಪುಗಳ‌ ನಡುವೆ ದ್ವೇಷ ಮೂಡಿಸಿದ ಆರೋಪ ಹಿನ್ನೆಲೆ ದೂರು ದಾಖಲಾಗಿತ್ತು. ಬಿಜೆಪಿ ಕಾನೂನು ಪ್ರಕೋಷ್ಠ ಮಾಜಿ ಸಂಚಾಲಕ ಯೋಗೇಂದ್ರ ಹೊಡಘಟ್ಟ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಹೈಗ್ರೌಂಡ ಪೊಲೀಸರು ಡಿಸಿಎಂ ಡಿಕೆ ಶಿವಕುಮಾರ್​​ ಮತ್ತು ಬಿಆರ್​ ನಾಯ್ಡು ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು.

ರಾಶಿ ರಾಶಿ ಆಧಾರ್ ಕಾರ್ಡ್​​ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆ: ಸಾರ್ವಜನಿಕರಿಗೆ ಆಘಾತ!

ಮಂಗಳೂರು:- ರಾಶಿ ರಾಶಿ ಆಧಾರ್ ಕಾರ್ಡ್​​ಗಳು ನೀರಲ್ಲಿ ತೇಲಿಬಂದ ಆಘಾತಕಾರಿ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ಜರುಗಿದೆ.

ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್​​ ಕಾರ್ಡ್​ಗಳನ್ನು ಕಂಡು ಸಾರ್ವಜನಿಕರು ಶಾಕ್​​ ಆಗಿದ್ದು, ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಜೊತೆಗೂಡಿ ನೂರಾರು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.

ಘಟನೆಯಿಂದ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್‌ಗಳು ತಮಗೆ ತಲುಪದ ಕಾರಣ ಅನೇಕರು ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯು.ಟಿ. ಖಾದರ್ ಅವರು ಈ ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಘಟನೆ ಬೆನ್ನಲ್ಲೇ ಸ್ಥಳೀಯ ಶಾಸಕ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಆಧಾರ್ ಕಾರ್ಡ್‌ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು? ಮತ್ತು ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಯು.ಐ.ಡಿ.ಎ.ಐ ಯೋಜನಾ ವ್ಯವಸ್ಥಾಪಕರಿಗೆ ಸೂಚನೆ ಕೊಡಲಾಗಿದೆ ಎಂದಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮುಳುಗಿ 87 ಮಂದಿ ಸಾವು: ಮೋದಿ ಮೌನ ಪ್ರಶ್ನಿಸಿದ ‘ರಾಗಾ’!

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷವು ಭಾರತ ದೇಶದ ಹಿತ್ತಲಿಗೆ ತಲುಪಿದ್ದು, ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮುಳುಗಿ 87 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ಏನೂ ಹೇಳದೆ ಮೌನವಾಗಿರುವುದನ್ನು ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜಗತ್ತು ಅಸ್ಥಿರ ಹಂತ ತಲುಪಿದ್ದು, ಸಮುದ್ರದ ಬಿರುಗಾಳಿ ಭಾರತವನ್ನು ಎದುರಿಸುತ್ತಿದೆ. ದೇಶದ ತೈಲ ಸರಬರಾಜಿನ 40% ಗಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ ಭದ್ರತೆಗೆ ಅಪಾಯವಾಗಿದೆ.

ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆ ಪರಿಸ್ಥಿತಿಯು ಗಂಭೀರವಾಗಿದೆ. ಸರ್ಕಾರವು ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಳೆದುಕೊಂಡಿದ್ದು, ಪ್ರಧಾನಿ ಮೌನ ತಾಳಿದ್ದಾರೆ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದ್ರೆ ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಮೋದಿ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ.

ಅಮೆರಿಕವು ಇರಾನ್‌ ಮೇಲಿನ ದಾಳಿಗೆ ಭಾರತೀಯ ನೌಕಾನೆಲೆ ಬಳಸುತ್ತಿದೆ ಅನ್ನೋದು ಸುಳ್ಳು: ಎಂಇಎ

0

ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯಲ್ಲಿ, ಇರಾನ್ ಮೇಲೆ ಅಮೆರಿಕಾ ದಾಳಿ ಮಾಡಲು ಭಾರತೀಯ ನೌಕಾನೆಲೆಗಳನ್ನು ಬಳಸುತ್ತಿದೆ ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕಾ ಮಾಜಿ ಸೇನಾ ಕರ್ನಲ್ ಡಗ್ಲಾಸ್ ಮ್ಯಾಕ್ಗ್ರೆಗೊರ್ ಒಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ಭಾರತದ ನೌಕಾನೆಲೆಗಳ ಬಳಕೆಯ ಮೂಲಕ ದಾಳಿ ನಡೆಯುತ್ತಿದೆ” ಎಂದು ಹೇಳಿದ್ದಾಗಿ ವೈರಲ್ ವಿಡಿಯೋಗಳು ತೋರಿಸುತ್ತಿವೆ.

ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದ್ದು, ʻನಕಲಿ ಸುದ್ದಿ ಎಚ್ಚರಿಕೆʼ ಎಂಬ ಶೀರ್ಷಿಕೆಯಡಿ ಪೋಸ್ಟ್‌ ಮಾಡಿ ವರದಿಗಳನ್ನ ತಳ್ಳಿಹಾಕಿದೆ.“ಭಾರತದ ನೌಕಾನೆಲೆಗಳು ಅಥವಾ ಬಂದರುಗಳನ್ನು ಅಮೆರಿಕಾ ಬಳಸಿ ದಾಳಿ ಮಾಡುವ ಪರಿಸ್ಥಿತಿ ಇರುವುದಿಲ್ಲ. ಇಂತಹ ಆಧಾರರಹಿತ ಮತ್ತು ತಪ್ಪು ಮಾಹಿತಿ ವಿರುದ್ಧ ಎಚ್ಚರಿಕೆಯಾಗಿರಿ” ಎಂದು ಸಾರ್ವಜನಿಕರಿಗೆ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ನಕಲಿ ವಿಡಿಯೋಗಳು ತಪ್ಪಾದ ಭಾವನೆ ಉಂಟುಮಾಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅನರ್ಹ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಘಾತ: 15 ಲಕ್ಷ ಮಂದಿಗೆ ಶಾಕ್​ ಕೊಟ್ಟ ಸರ್ಕಾರ!

ಬೆಂಗಳೂರು: ಅನರ್ಹವಾಗಿ ಬಿಪಿಎಲ್ (BPL) ಕಾರ್ಡ್ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರದ ಕಾರ್ಯಾಚರಣೆ ಮುಂದುವರಿದಿದ್ದು, ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಭಾರೀ ಆಘಾತ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹರನ್ನು ಗುರುತಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಈ ಅವಧಿಯಲ್ಲಿ ಸಾವಿರಾರು ಪಡಿತರ ಚೀಟಿಗಳ ವಿರುದ್ಧ ಕ್ರಮ ಕೈಗೊಂಡಿದೆ.

ಇದರ ಭಾಗವಾಗಿ ಸುಮಾರು 5,632 ಬಿಪಿಎಲ್ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದೆ. ಜೊತೆಗೆ 4.09 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. ಇನ್ನೂ 23,068 ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಕಳೆದ 5 ತಿಂಗಳ ಕಾರ್ಯಾಚರಣೆ ವಿವರ

ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಗೊಂಡ ಕಾರ್ಡ್‌ಗಳು: 4.09 ಲಕ್ಷ (14,68,540 ಮಂದಿ ಪ್ರಭಾವಿತ)

ಶಾಶ್ವತವಾಗಿ ರದ್ದಾದ ಬಿಪಿಎಲ್ ಕಾರ್ಡ್‌ಗಳು: 5,632 (9,826 ಮಂದಿ ಪ್ರಭಾವಿತ)

ತಾತ್ಕಾಲಿಕವಾಗಿ ಅಮಾನತ್ತಾದ ಬಿಪಿಎಲ್ ಕಾರ್ಡ್‌ಗಳು: 23,068 (34,617 ಮಂದಿ ಪ್ರಭಾವಿತ)

ಇದಕ್ಕೆ ಮತ್ತೊಂದೆಡೆ, ಅರ್ಹರಾದ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಕಾರು, ಬಂಗಲೆ ಹಾಗೂ ಜಮೀನು ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕಡು ಬಡವರು ಹಾಗೂ ದುಡಿದು ತಿನ್ನುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೂ ಮೊದಲು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಕೇಂದ್ರ ಸರ್ಕಾರ ಪ್ರಸ್ತುತ ಬಿಪಿಎಲ್ ಕಾರ್ಡ್‌ದಾರರ ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ನಿಗದಿಪಡಿಸಿದೆ.

ಆದರೆ ದಿನಗೂಲಿ ಕಾರ್ಮಿಕರಿಗೂ ದಿನಕ್ಕೆ ಸುಮಾರು ₹500 ಸಂಬಳ ದೊರೆಯುತ್ತಿರುವುದರಿಂದ ಅವರ ವಾರ್ಷಿಕ ಆದಾಯವೂ ₹1.80 ಲಕ್ಷಕ್ಕಿಂತ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದರು. ಹೀಗಾಗಿ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಈಗ ಸರ್ಕಾರ ಕೈಗೊಂಡಿರುವ ಕ್ರಮದಿಂದ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಳಿಗಾಲವಿಲ್ಲ ಎಂಬುದು ಸ್ಪಷ್ಟವಾಗಿದೆ.

ಧಾರ್ಮಿಕ ಭಾವನೆಗೆ ದಕ್ಕೆ: ಹಿಜಾಬ್ ಧರಿಸಿ ಹೋಳಿ ಆಡಿದವರ ವಿರುದ್ಧ FIR ದಾಖಲು!

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಹಿಜಾಬ್ ಧರಿಸಿ ಬಣ್ಣ ಆಡಿ, ಅನುಚಿತವಾಗಿ ವರ್ತನೆ ತೋರಿದ ಕೆಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್ ಕುರಿತು ವ್ಯಂಗ್ಯ ಮಾಡಲಾಗಿದೆ ಎಂದು ಆರೋಪಿಸಿ, ಸಮೀರ್ ಎಂಬುವವರು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಪ್ರಜ್ವಲ್, ಶಾಂತಪ್ಪ, ನಾಗರಾಜ್, ಅನಿಲ್, ಚೆನ್ನು ಸೇರಿ ಕೆಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಎಫ್ ಐ ಆರ್‌ನಲ್ಲಿ ಆರೋಪಿಗಳು ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದು, ಹಿಜಾಬ್ ಧರಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ಘಟನೆಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಪರಿಶೀಲನೆ ನಡೆಯುತ್ತಿದೆ.

Israel Iran War: ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ 50 ಪ್ರವಾಸಿಗರು ಬೆಂಗಳೂರಿಗೆ ವಾಪಸ್!

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗದ 15 ಮಂದಿ ಸೇರಿದಂತೆ ಒಟ್ಟು 246 ಮಂದಿ ಕನ್ನಡಿಗರು ಮಾ.4ರಂದು ಶಾರ್ಜಾ ದಿಂದ ಕೊಚ್ಚಿನ್ಗೆ ಬಂದಿಳಿದಿದ್ದರು. ಅಲ್ಲಿಂದ 50 ಮಂದಿಗೆ ಬೆಂಗಳೂರಿಗೆ ವಿಶೇಷ ವಿಮಾನ ವ್ಯವಸ್ಥೆಯನ್ನು ಶಾಸಕ ಬಿ. ನಾಗೇಂದ್ರ ಮಾಡಿದ್ದಾರೆ.

ಇಂದು ಬೆಳಗ್ಗೆ (ಮಾ.5) ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರನ್ನು ನಾಗೇಂದ್ರ ಸ್ವಾಗತಿಸಿದರು.

ಸಂಕಷ್ಟದ ಸಂದರ್ಭದಲ್ಲಿಯೇ ನೆರವು ನೀಡಿದ ಶಾಸಕರಿಗೆ ಕನ್ನಡಿಗರು ಕೃತಜ್ಞತೆ ವ್ಯಕ್ತಪಡಿಸಿದ್ದು, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಸಂತಸ ಹಂಚಿಕೊಂಡಿದ್ದಾರೆ.