ಮಂಗಳವಾರ ನಡೆದ ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ನನ್ನ ದೇಶದ ಕೈವಾಡವಿದೆ ಎಂದು ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದರೆ, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದರೆ ನಾಚಿಕೆಪಡಬೇಕು. ಇಂತಹ ಕೃತ್ಯಗಳ ಬಗ್ಗೆ ಜಾಣಮೌನವಹಿಸುವ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತದ ಕಡೆಯಿಂದ ಕ್ರಮ ಆರಂಭವಾಗಿದೆ. ರಾಜತಾಂತ್ರಿಕವಾಗಿ, ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಹಾನಿ ಉಂಟುಮಾಡುವ ಹಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಏತನ್ಮಧ್ಯೆ, ವಿಶ್ವದ ಹಲವು ದೇಶಗಳು ಮತ್ತು ಉನ್ನತ ನಾಯಕರು ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಭಾರತದೊಂದಿಗೆ ನಿಲ್ಲುವ ಬಗ್ಗೆ ಮಾತನಾಡಿದ್ದಾರೆ.
ಇದಾಗ್ಯೂ ಈ ದುಷ್ಕೃತ್ಯವನ್ನು ಖಂಡಿಸುವ ಯಾವುದೇ ಹೇಳಿಕೆ ಪಾಕಿಸ್ತಾನ್ ಸರ್ಕಾರದಿಂದ ಕೇಳಿ ಬಂದಿಲ್ಲ. ಇದನ್ನೇ ಈಗ ಪಾಕ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ. ಈ ದಾಳಿಯಲ್ಲಿ ನಿಜವಾಗಿಯೂ ಪಾಕಿಸ್ತಾನದ ಯಾವುದೇ ಕೈವಾಡವಿಲ್ಲದಿದ್ದರೆ, ನಮ್ಮ ಪ್ರಧಾನಿ ಶಹಬಾಜ್ ಷರೀಫ್ ಆ ವಿಷಯದ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಅತ್ತ ಭಾರತದಲ್ಲಿ ದಾಳಿಯಾಗುತ್ತಿದ್ದಂತೆ ಇತ್ತ ಪಾಕಿಸ್ತಾನದಲ್ಲಿ ಸೇನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಎಚ್ಚರಿಕೆ ವಹಿಸಲು ಏಕೆ ಹೇಳಲಾಯಿತು? ಏಕೆಂದರೆ ನಿಮಗೆ ಸತ್ಯ ಗೊತ್ತಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ದಾನಿಶ್ ಕನೇರಿಯಾ ಸೋಷಿಯಲ್ ಮೀಡಿಯಾ ಮೂಲಕ ಪಾಕಿಸ್ತಾನ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.