ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಟೋಬರ್ 17ರಿಂದ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುದ್ರಣ ನಗರಿ ನಡುವೆ ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಪಲ್ಲಕ್ಕಿ ಬಸ್ ಸೇವೆ ಪ್ರತಿನಿತ್ಯ ಪ್ರಾರಂಭವಾಗಲಿರುವುದು ಸ್ವಾಗತಾರ್ಹ. ಆದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಪ್ರಮುಖ ಸ್ಥಳವಾದ ರೈಲು ನಿಲ್ದಾಣದಿಂದ ನಗರ ಸಂಚಾರಕ್ಕೆ ಯಾವುದೇ ಬಸ್ ಸೇವೆಗಳು ಇಲ್ಲದಿರುವುದು ಖೇದಕರ ಸಂಗತಿ ಎಂದು ಅರಿವು ಫೌಂಡೇಶನ್ ಅಧ್ಯಕ್ಷರಾದ ವಿಶ್ವನಾಥ ಶೀರಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಸುಕಿನಿಂದ ಮುಂಜಾನೆ 10.30ರವರೆಗೆ ರಾಜ್ಯ, ಅಂತಾರಾಜ್ಯಗಳಿಂದ ಅನೇಕ ರೈಲುಗಳು ಗದಗ ನಿಲ್ದಾಣಕ್ಕೆ ಬರುತ್ತವೆ. ಆದರೆ ಖಾಸಗಿ ವಾಹನಗಳ ಸೌಲಭ್ಯವನ್ನು ಹೊರತುಪಡಿಸಿ ಸರ್ಕಾರದ ನಗರ ಸಾರಿಗೆ ಸೇವೆ ಇಲ್ಲದಿರುವುದು ಪ್ರಯಾಣಿಕರ ಅನಾನುಕೂಲಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳ ಸೌಲಭ್ಯವಿದ್ದರೂ, ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿದೆ. ಕೂಡಲೇ ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ವಿನಂತಿಸಿದ್ದಾರೆ.