ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಪಂಚಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿದ್ದು, ತಾಲೂಕಿನಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳು ಶೇ.95ಕ್ಕೂ ಅಧಿಕ ಪ್ರಮಾಣದಲ್ಲಿ ಪ್ರಗತಿಯಾಗಿದೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಗುರುವಾರ ಪಟ್ಟಣದ ತಾ.ಪಂ ಕಾರ್ಯಾಲಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೆಲವು ಗ್ಯಾರಂಟಿ ಯೋಜನೆಗಳಲ್ಲಿ ತಾಂತ್ರಿಕ ಮತ್ತು ವಾಸ್ತವ ಸಮಸ್ಯೆಗಳಿಂದ ಬೆರಳೆಣಿಕೆಯಷ್ಟು ಜನರಿಗೆ ತಲುಪಲು ಸಮಸ್ಯೆಯಾಗಿರಬಹುದು. ಅವುಗಳನ್ನು ಆಯಾ ಇಲಾಖೆಗಳ ಅಧಿಕಾರಿಗಳು ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಸಾರ್ವಜನಿಕರು ಈ ಕುರಿತಂತೆ ಅಧಿಕಾರಿಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನ ನಿವೇದಿಸಿಕೊಂಡಾಗ ಅಧಿಕಾರಿಗಳು ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ಯೋಜನೆಗಳ ಅನುಷ್ಠಾನದಲ್ಲಿ ಎಲ್ಲ ಇಲಾಖೆಯವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿರುವದರಿಂದ ಕ್ಷೇತ್ರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದರು.
ಪಂಚಗ್ಯಾರಂಟಿ ಯೋಜನಾ ಸಮಿತಿ ತಾಲೂಕಾಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ಕಾರ್ಯವನ್ನು ಮಾಡಬೇಕು. ಜನರ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಕಾರ್ಯನಿರ್ವಹಿಸಲು ಮನವಿ ಮಾಡುತ್ತೇವೆ. ಸರಕಾರ ಪಂಚಗ್ಯಾರಂಟಿ ಯೋಜನೆಗಳನ್ನು ಬಡವರಿಗಾಗಿಯೇ ಜಾರಿಗೆ ತಂದಿದ್ದು, ಅವುಗಳನ್ನು ಸರಿಯಾಗಿ ಜನರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಜನರು ಯೋಜನೆ ಸರಿಯಾಗಿ ಮುಟ್ಟದಿರುವ ಬಗ್ಗೆ ಅನುಷ್ಠಾನ ಸಮಿತಿಗೆ ತಿಳಿಸಿದಲ್ಲಿ ಅವುಗಳನ್ನು ಅಧಿಕಾರಿಗಳಿಗೆ ಹಾಗೂ ಅದರಲ್ಲಿರುವ ಸಮಸ್ಯೆಗಳನ್ನು ಸರಕಾರಕ್ಕೂ ಮುಟ್ಟಿಸುವ ನಿಟ್ಟಿನಲ್ಲಿ ನಾವು ವಿಶೇಷ ಕಾಳಜಿಯಿಂದ ಕಾರ್ಯ ಮಾಡುತ್ತೇವೆ ಎಂದರು.
ಶಕ್ತಿ ಯೋಜನೆಯಲ್ಲಿ ನಿರ್ವಾಹಕರು, ಚಾಲಕರು ಮಹಿಳೆಯರ ಬಗ್ಗೆ ಕೆಟ್ಟದಾಗಿ ವರ್ತಿಸುತ್ತಿರುವ ಕುರಿತು ಸರಿಯಾಗಿ ನಿರ್ದೇಶನ ನೀಡುವಂತೆ ಸದಸ್ಯರು ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಹಣ ಬ್ಯಾಂಕಿಗೆ ಜಮೆಯಾಗಿದ್ದು, ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದಾರೆಂಬ ದೂರುಗಳಿವೆ. ಹಾಗೆ ಮಾಡಿಕೊಳ್ಳದಂತೆ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಹಸೀಲ್ದಾರರಿಗೆ ಮನವಿ ಮಾಡಿದರು.
ಹೆಸ್ಕಾಂ, ಸಾರಿಗೆ, ಆಹಾರ, ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ, ಉದ್ಯೋಗ ವಿನಿಮಯ ಕೇಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆ ಮಾಹಿತಿಗಳನ್ನು ಸಭೆಗೆ ಒದಗಿಸಿದರು. ತಾ.ಪಂ ಇ.ಓ ಕೃಷ್ಣಪ್ಪ ಧರ್ಮರ, ಸಮಿತಿ ಸದಸ್ಯರಾದ ರಮಜಾನಸಾಬ ನಧಾಪ್, ಜಯಕ್ಕ ಕಳ್ಳಿ, ಸಿದ್ದಲಿಂಗೇಶ ರಗಟಿ, ನೂರಅಹ್ಮದ ರಿತ್ತಿ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ, ಕಾರ್ತಿಕ ದೊಡ್ಡಮನಿ, ರಮೇಶ ಬಾರಕೇರ, sಸರ್ಪರಾಜ ಸೂರಣಗಿ ಸೇರಿದಂತೆ ಅನೇಕರಿದ್ದರು.
ನಮ್ಮ ತಾಲೂಕಾ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಇದರಲ್ಲಿ ಅಧಿಕಾರಿಗಳ ಶ್ರಮ ಎದ್ದು ಕಾಣುತ್ತಿದೆ ಎಂದ ಅವರು, ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಇಲಾಖೆ ಕ್ರಮ ವಹಿಸಿ, ಹೆಚ್ಚು ಹೆಚ್ಚು ಬಸ್ ಮಾರ್ಗಗಳನ್ನು ಮಾಡುವ ನಿಟ್ಟಿನಲ್ಲಿ ಮತ್ತು ಅವಶ್ಯ ಇರುವ ಹೆಚ್ಚಿನ ಬಸ್ಗಳನ್ನು ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇವೆ. ಸಾರ್ವಜನಿಕರಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ದೂರುಗಳು ಬರದಂತೆ ಇಲಾಖೆ ಅಧಿಕಾರಿಗಳು ಕ್ರಮ ವಹಿಸುವಂತೆ ವಿನಂತಿಸುವದರ ಜೊತೆಗೆ ಸರಕಾರ, ಇಲಾಖೆಗಳು ಮತ್ತು ಸಾರ್ವಜನಿಕರು ನಡುವಿನ ಕೊಂಡಿಯಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದು ನಾಗರಾಜ ಮಡಿವಾಳರ ಹೇಳಿದರು.