ಹುಬ್ಬಳ್ಳಿ:– ಗಂಡನ ಮನೆಯಿಂದ ಬಲವಂತವಾಗಿ ಯುವತಿಯನ್ನು ಪೋಷಕರು ಹೊತ್ತೊಯ್ದಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. ಕಳೆದ ಎಂಟು ವರ್ಷಗಳಿಂದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಹೀಗಾಗಿ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿ ಬಂದಿದ್ದರು. ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು.
ಇದೀಗ ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದರು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಎತ್ತೊಯ್ದಿದ್ದಾರೆ. ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ.