ಪಾಲಕರು ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕ್ಕಳ ಎದುರಿಗೆ ಪಾಲಕರು ಮೊಬೈಲ್ ನೋಡುತ್ತಲೋ ಅಥವಾ ಟಿವಿ ನೋಡುತ್ತಲೋ ಕೂರಬಾರದು. ಬದಲಿಗೆ ಅವರು ತಮ್ಮ ಕೈಯಲ್ಲಿ ಪುಸ್ತಕವನ್ನು ಹಿಡಿದು ಕುಳಿತುಕೊಂಡರೆ ಮಕ್ಕಳೂ ಸಹ ಅದನ್ನೇ ಅನುಕರಣೆ ಮಾಡುತ್ತಾರೆ. ಆದ್ದರಿಂದ ಪಾಲಕರು ಮೊದಲು ತಮ್ಮಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

Advertisement

ಸಮೀಪದ ಜಕ್ಕಲಿ ಗ್ರಾಮದ ಗಂಡುಮಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿರಿಯ ಉರ್ದು ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಟಿ.ವಿ ಮತ್ತು ಮೊಬೈಲ್‌ಗಳಿಂದ ಇಂದಿನ ಮಕ್ಕಳು ಸಂಸ್ಕೃತಿಹೀನರಾಗುತ್ತಿದ್ದಾರೆ. ನಾವೇ ಅವರನ್ನು ಹಾಳು ಮಾಡುತ್ತಿದ್ದೇವೇನೋ ಎನ್ನುವ ಅನುಮಾನ ಪಾಲಕರನ್ನು ಕಾಡುತ್ತಿದೆ. ಆದ್ದರಿಂದ ಮಕ್ಕಳನ್ನು ಇಂತಹ ವಸ್ತುಗಳಿಂದ ದೂರವಿಟ್ಟು ಅವರಲ್ಲಿ ಆಚಾರ-ವಿಚಾರಗಳನ್ನು, ಸಂಸ್ಕಾರ-ಸಂಸ್ಕೃತಿಗಳನ್ನು ಬೆಳೆಸುವುದು ಅವಶ್ಯಕವಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಮಾತನಾಡಿ, ಈಗ ಬೇಸಿಗೆ ಕಾಲ. ಗ್ರಾಮದ ನಿವಾಸಿಗಳು, ಅದರಲ್ಲೂ ತಾಯಂದಿರು ಹೆಚ್ಚಿನ ನೀರನ್ನು ಪೋಲು ಮಾಡದೆ ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಬೇಕೆಂದರು.

ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾದರ, ಸದಸ್ಯ ಬಸವರಾಜ ಶಾಶೆಟ್ಟಿ, ಮುತ್ತಪ್ಪ ಮರಬಸಪ್ಪನವರ, ಇಂದಿರಾ ಜಂಗಣ್ಣವರ, ಶಾಂತಮ್ಮ ಮಾದರ, ಲಕ್ಷ್ಮೀ ಭಜಂತ್ರಿ, ಮಂಜುಳಾ ಜಕ್ಕಲಿ, ಕಳಕಪ್ಪ ರಂಗಣ್ಣವರ, ಅರುಣ ಸೂರಭಟ್ಟನವರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್.ಬಿ. ಗವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ಸ್ವಾಗತಿಸಿದರು. ಶಿಕ್ಷಕ ವಿ.ಎ. ಕುಂಬಾರ ವಂದಿಸಿದರು.

ಮಧ್ಯಾಹ್ನದ ಭೋಜನದ ವೇಳೆ ತಾಯಂದಿರು ಮಕ್ಕಳಿಗೆ ಕೈತುತ್ತು ಹಾಕುವ ಕಾರ್ಯಕ್ರಮ ಇರುವುದು ಅತ್ಯಂತ ಸಂತಸದ ವಿಷಯ. ಇದು ತಾಯಿ-ಮಕ್ಕಳ ಸಂಬಂಧವನ್ನು ಬೆಸೆಯುವುದರ ಜೊತೆಗೆ ಮಕ್ಕಳಲ್ಲಿ ಸಂಸ್ಕಾರನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಲಾ ಬಳಗದ ಕಾರ್ಯ ಅಭಿನಂದನಾರ್ಹ ಎಂದು ಅರುಣ ಕುಲಕರ್ಣಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here