ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗುರುವಾರ ರಾತ್ರಿ ಏಕಾಏಕಿ ಹುಚ್ಚು ನಾಯಿಯ ದಾಳಿಯಿಂದ ಹತ್ತಾರು ಮಕ್ಕಳು ಗಾಯಗೊಂಡಿದ್ದು, ಪಾಲಕರು ಬೆಚ್ಚಿ ಬಿದ್ದಿದ್ದಾರೆ. ನಾಯಿಯ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಕ್ಕಳನ್ನು ಹುಬ್ಬಳ್ಳಿಯ ಕಿಮ್ಸ್ ಮತ್ತು ಜಿಮ್ಸ್ ಗೆ ದಾಖಲಿಸಿ, ರಾತ್ರೋರಾತ್ರಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಘಟನೆಯಿಂದ ಮಕ್ಕಳು ಮತ್ತು ಪಾಲಕರು ಭೀತಿಗೊಳಗಾಗಿದ್ದಾರೆ.
ಗುರುವಾರ ರಾತ್ರಿ 9 ಗಂಟೆ ಹೊತ್ತಿಗೆ ಪಟ್ಟಣದ ಪಾದಗಟ್ಟಿ, ಪೇಟಬಣ, ಬಸಾಪುರ ಓಣಿ, ಸೊಪ್ಪಿನಕೇರಿ ಓಣಿಯ ಹಲವು ಕಡೆ ಮಕ್ಕಳ ಮೇಲೆ ಎಗರಿದ ಹುಚ್ಚುನಾಯಿಯೊಂದು ಮಕ್ಕಳಿಗೆ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಬಸಾಪುರ ಓಣಿಯ ಶಿವರಾಜ ಬಳಗಾನೂರ(9) ಈತನ ಬಾಯಿ, ತುಟಿಗೆ ಕಚ್ಚಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಗೊಲ್ಲಾಳೇಶ್ವರ ದೇವಸ್ಥಾನ ಹತ್ತಿರದ ಆದ್ಯಾ ಪಾಟೀಲ(2) ಎಂಬ ಬಾಲಕಿಯ ಕಿವಿಗೆ ಕಚ್ಚಿದೆ. ಅದೇ ರೀತಿ ಪಟ್ಟಣದ ಅನೇಕರ ಕುತ್ತಿಗೆ, ಕೈ, ಕಿವಿ, ಕಾಲಿಗೆ ಕಚ್ಚಿದೆ. ಹಳ್ಳದಕೇರಿ ಓಣಿಯಲ್ಲಿ ಕರುವಿಗೆ, ಹಳೇ ಬಸ್ ನಿಲ್ದಾಣದಲ್ಲಿ ನಾಯಿಗೆ ಕಚ್ಚಿ ಗಾಯಗೊಳಿಸಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಲಸು, ಆಟವಾಡಲು ಹೊರಗಡೆ ಬಿಡದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ನಾಯಿಗಳ ಸಂತತಿ ಹೆಚ್ಚಲು ಪೂರಕವಾದ ಎಲ್ಲ ರೀತಿಯ ವಾತಾವರಣ ಪಟ್ಟಣದಲ್ಲಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಸಾರ್ವಜನಿಕರ ದೂರು, ಪತ್ರಿಕೆಗಳ ವರದಿಗೂ ಪುರಸಭೆಯವರು ಕ್ಯಾರೇ ಎನ್ನುತ್ತಿಲ್ಲ. ರಾಕ್ಷಸ ಸ್ವರೂಪದ ನಾಯಿಗಳ ಹಿಂಡಿನ ವರ್ತನೆಗೆ ನಿತ್ಯ ಒಂದಿಲ್ಲೊಂದು ಕಡೆ ತೊಂದರೆ ಆಗುತ್ತಲೇ ಇದೆ. ಸಾರ್ವಜನಿಕರು ಬಡಿಗೆ, ಕಲ್ಲು ಹಿಡಿದುಕೊಂಡು ಓಡಾಡುವಂತಾಗಿದೆ. ಹುಚ್ಚುನಾಯಿ ಕಡಿತಕ್ಕೆ ದೊಡ್ಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಲಭ್ಯವಿಲ್ಲದ ಕಾರಣ, ಗದಗ, ಹುಬ್ಬಳ್ಳಿಗೆ ಅಲೆಯುವಂತಾಗಿದೆ.
-ಮಲ್ಲನಗೌಡ ಪಾಟೀಲ.
ನಾಯಿ ಕಡಿತಕ್ಕೊಳಗಾದ ಬಾಲಕಿಯ ತಂದೆ.ಹುಚ್ಚಿನಾಯಿ ಕಡಿತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೌರ ಕಾರ್ಮಿಕರು, ಸಾರ್ವಜನಿಕರೊಡಗೂಡಿ ತಡರಾತ್ರಿವರೆಗೂ ನಾಯಿ ಹುಡುಕಾಡಲಾಗಿದೆ. ಆದರೆ ಆ ನಾಯಿ ಬೆಳಿಗ್ಗೆ ಆಸಾರ ರಸ್ತೆಯಲ್ಲಿ ಸತ್ತು ಬಿದ್ದಿತ್ತು. ಇದನ್ನು ಹೂಳಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು ಮಾಡಿರುವ ಪ್ರಯತ್ನಗಳಿಗೆ ಆರ್ಥಿಕ ಹೊರೆ ಮತ್ತು ಸಾಕಷ್ಟು ತೊಂದರೆಗಳು ಉಂಟಾಗಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಮಂಜುನಾಥ ಮುದಗಲ್.
ಆರೋಗ್ಯ ನಿರೀಕ್ಷಕರು.