ವಿಜಯಸಾಕ್ಷಿ ಸುದ್ದಿ, ಗದಗ : ಯಾವುದೇ ಒಂದು ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದಿ ಶಕ್ತಿಯುವಾಗಿ ಬೆಳೆಯುವಲ್ಲಿ ವಿದ್ಯೆಯು ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಕೃಷಿ, ಕೈಗಾರಿಕೆ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಲು ವಿದ್ಯೆಯೇ ಮುಖ್ಯವಾಗಿದೆ. ಹಾಗಾಗಿ ವಿದ್ಯೆಗೆ ಜಗತ್ತನ್ನು ಆಳುವ ಶಕ್ತಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅವರು, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 590 ಅಂಕ ಪಡೆದು ರಾಜ್ಯಕ್ಕೆ ಏಳನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿಮಿತ್ತ ನಾಗಾವಿ ಗ್ರಾಮದ ಪವಿತ್ರ ಹನುಮಂತಪ್ಪ ಹೊಸಳ್ಳಿ ಅವರ ಸ್ವಗೃಹಕ್ಕೆ ತೆರಳಿ ಸನ್ಮಾನಿಸಿ ಮಾತನಾಡಿದರು.
ಕುರಿ ಕಾಯುವ ಕುಟುಂಬದಲ್ಲಿ ಜನಿಸಿದ ಪವಿತ್ರ ರಾಜ್ಯಮಟ್ಟದ ಸಾಧನೆ ಮಾಡಿದ್ದನ್ನು ನೋಡಿದರೆ ವಿದ್ಯೆ ಎಲ್ಲೆಲ್ಲಿ ಅಡಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಸಾಧನೆಗೆ ಕಾರಣೀಕರ್ತರಾದ ವಿದ್ಯಾರ್ಥಿನಿಯ ಪಾಲಕರಾದ ಹನಮಂತಪ್ಪ, ಕಸ್ತೂರೆವ್ವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಅಶೋಕ್ ಅಂಗಡಿ, ರವಿ ಕುಲಕರ್ಣಿ, ಉಪನ್ಯಾಸಕರಾದ ಎಸ್.ಐ. ಮೇಟಿ, ಎಂ.ಎಸ್. ಮುಲ್ಲಾ, ನಿವೃತ್ತ ಮುಖ್ಯೋಪಾಧ್ಯಾಯ ಎನ್.ವಿ. ಜೋಶಿ, ನಾಗಾವಿ ಗ್ರಾಮದ ಹಿರಿಯರಾದ ಬಸವಣ್ಣಪ್ಪ ಚಿಂಚಲಿ, ಅಲ್ಲಾ ಸಾಬ್ ಪೀರ್ ಖಾನರವರ, ಮಲ್ಲಪ್ಪ ಗೋಲಪ್ಪನವರ, ಡಿ.ವಿ. ಮರಡ್ಡಿ, ಮೈಲಾರಪ್ಪ ತಾಮ್ರಗುಂಡಿ ಮುಂತಾದವರು ಉಪಸ್ಥಿತರಿದ್ದರು.