ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲರೂ ವನಮಹೋತ್ಸವದತ್ತ ಗಮನ ಹರಿಸಬೇಕೆಂದು ಕರ್ನಾಟಕ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಕಾಂಗ್ರೆಸ್ ಘಟಕದ ಆಶ್ರಯದಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ರೋಣ ಶಾಸಕ ಜಿ.ಎಸ್. ಪಾಟೀಲರ ಜನ್ಮ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಜಗತ್ತಿನ ತಾಪಮಾನ ಹೆಚ್ಚಾಗುತ್ತಿದ್ದು, ಭೂಮಿಯ ಮೇಲೆ ಬದುಕುವುದೇ ದುಸ್ತರವಾಗುತ್ತಿದೆ. ಶಾಸಕ ಜಿ.ಎಸ್. ಪಾಟೀಲರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಎಲ್ಲ ಅಭಿಮಾನಿಗಳು ವನಮಹೋತ್ಸವಕ್ಕೆ ಮುಂದಾಗಿ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಂಡಿದ್ದು ಸ್ತುತ್ಯಾರ್ಹ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗುರುನಾಥ ಅವರೆಡ್ಡಿ ಮಾತನಾಡಿ, ನಮ್ಮ ನಾಯಕರಾದ ಜಿ.ಎಸ್. ಪಾಟೀಲರ ಜನ್ಮ ದಿನಾಚರಣೆಯನ್ನು ವನಮಹೋತ್ಸವದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಸಸಿ ನೆಟ್ಟರೆ ಸಾಲದು, ಅವುಗಳ ಪೋಷಣೆ ಮಾಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆ, ಮಣ್ಣು ಸವಕಳಿಯನ್ನು ತಡೆಯುತ್ತದೆ, ನಮಗೆ ನೆರಳು ಮತ್ತು ಫಲಗಳನ್ನು ಕೊಡುತ್ತದೆ. ಈ ಎಲ್ಲ ಕಾರಣಗಳಿಂದ ನಾವು ಮರಗಿಡಗಳನ್ನು ಕಡಿಯುವ ಬದಲಾಗಿ ಬೆಳೆಸುವತ್ತ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ಬಸವರಾಜ ಪಲ್ಲೇದ, ಅಜ್ಜಪ್ಪಗೌಡ ಪಾಟೀಲ, ಸುರೇಶ ಶಿರೋಳ, ಮಲ್ಲಣ್ಣ ಕಲ್ಲೇಶ್ಯಾಣಿ, ದೇವೇಂದ್ರ ಮುನೇನಕೊಪ್ಪ, ಎ.ಕೆ. ಮಳಗಿ, ಮಳ್ಳಪ್ಪ ದ್ವಾಸಲ, ಬಾಬುಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಅಂದಪ್ಪ ವೀರಾಪೂರ ನಿರೂಪಿಸಿ, ವಂದಿಸಿದರು.