ಬೆಂಗಳೂರು: ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಬಿಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಯಾರು ಏನೇ ಹೇಳಿದರು ನಾವು ಸಹಿಸುವುದಿಲ್ಲ. ಯಾವ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಬಿಡುವುದಿಲ್ಲ.
ಈ ರೀತಿ ಹತ್ಯೆಗಳು ನಡೆಯುತ್ತಲೇ ಇದ್ದರೆ ಸರ್ಕಾರ ಸಹಿಸೋಕೆ ಆಗುತ್ತಾ? ಇಲ್ಲ ನಾವು ಸಹಿಸುವುದಿಲ್ಲ. ಅನಿವಾರ್ಯವಾಗಿ ಕೆಲವು ಅಧಿಕಾರಿಗಳನ್ನ ಬದಲಿಸಿದ್ದೇವೆ. ಈಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಗುರುವಾರ ಒಂದು ಸಮುದಾಯದವರು ಬಹಳ ಉದ್ವೇಗದಿಂದ ಮಾತನಾಡಿದ್ದಾರೆ. ಮಾತಾಡಿದರೆ ತೊಂದರೆ ಇಲ್ಲ ಇಂತಹ ಸಂದರ್ಭಗಳಲ್ಲಿ ಮಾತನಾಡುತ್ತಾರೆ. ಪ್ರಚೋದನಕಾರಿ ಹೇಳಿಕೆಗಳಿಗೆ ಖಂಡಿತ ಕಡಿವಾಣ ಹಾಕುತ್ತೇವೆ. ಇಂತಹ ಘಟನೆಗಳ ಮೂಲ ಹುಡುಕುತ್ತಿದ್ದೇವೆ ಎಂದರು.