ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಯ ವಿಳಂಬದ ವಿರುದ್ಧ ಕಳೆದ ಐದು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಅಸಹಕಾರ ಚಳುವಳಿಯ ಭಾಗವಾಗಿ, ಗದಗ ತಾಲೂಕು ಪಂಚಾಯತ್ನಲ್ಲಿ ಪ್ರತಿಭಟನೆ 5ನೇ ದಿನಕ್ಕೆ ಮುಂದುವರೆಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜ್ಯ ನೇವಾಕ ಸಂಘದ ಜಿಲ್ಲಾ ಪ್ರತಿನಿಧಿ ಕಿರಣಕುಮಾರ ಎಸ್.ಎಚ್. ಮಾತನಾಡಿ, ಕಳೆದ ಐದು ದಿನಗಳಿಂದ ರಾಜ್ಯ ನರೇಗಾ ಕುಟುಂಬದ ಸದಸ್ಯರು ಒಗ್ಗಟ್ಟಿನಿಂದ ಅಹಕಾರ ಚಳುವಳಿ ನಡೆಸುತ್ತಿದ್ದೇವೆ. ಈ ಅಸಹಕಾರ ಚಳುವಳಿಯಿಂದ ವೇತನ ಪಾವತಿ ಪ್ರಕ್ರಿಯೆಯ ವೇಗ ಹೆಚ್ಚುತ್ತಿದೆ. ಆದರೂ ಕಡಿಮೆ ಮೊತ್ತದ ಫಂಡ್ ಟ್ರಾನ್ಸ್ಫರ್ ಆರ್ಡರ್ ರಚನೆಯ ಪ್ರಕ್ರಿಯೆ ಯಶಸ್ವಿಯಾಗಿದೆ. ವೇತನ ಪಾವತಿಗೆ ಸಂಬಂಧಿಸಿದ ಸೃಜನೆ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ ಮಾತನಾಡಿ, ಕಳೆದ ಅರು ತಿಂಗಳಿಂದ 130ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ. ಈ ಅಸಹಕಾರ ಚಳುವಳಿಯಿಂದಾಗಿ ಸರ್ಕಾರದ ಗಮನ ಸೆಳೆಯಲಾಗಿದೆ. ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಗ್ರಾ.ಪಂ ಜನಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಜ್ಯ ಡಿಇಒ ಸಂಘದಂತಹ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಾವು ಒಗ್ಗಟ್ಟಾಗಿ ಮುಂದುವರಿಯುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಮಹೇಶ್ ಚಿತವಾಡಗಿ, ಬಸವರಾಜ ಮಣ್ಣಮನವರ, ಮೋಹನ ಹೊಂಬಳ, ಚಂದ್ರು ಹಳ್ಳಿ, ನವೀನ ಬಸರಿ, ಅಜಯ ಅಬ್ಬಿಗೇರಿ, ಮಂಜುನಾಥ ತಳವಾರ, ಮಂಜುನಾಥ ಕುಲಕರ್ಣಿ, ವಿರೇಶ ಪಟ್ಟಣಶೆಟ್ಟಿ, ಸಚಿನ ಭಂಡಾರಿ, ಪ್ರಶಾಂತ ಯಾವಗಲಮಠ, ತಾಲೂಕಿನ ಬಿ.ಎಫ್.ಟಿಗಳು ಹಾಜರಿದ್ದರು.