ಜನತೆಯ ಜೀವ ಹಿಂಡುತ್ತಿದೆ ಜಲಕ್ಷಾಮ

0
jalakshama
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿಯ ಬಿಸಿಲಿನ ತಾಪಕ್ಕೆ ಇಡೀ ರಾಜ್ಯವೇ ತತ್ತರಿಸಿದೆ. ಸೂರ್ಯನ ಕೆಂಗಣ್ಣಿಗೆ ಸಕಲವೂ ಸುಟ್ಟು ಭಸ್ಮವಾಗುವಂತೆ ಭಾಸವಾಗುತ್ತಿದೆ. ಮನೆಯಿಂದ ಹೊರಬರಲು ಸಾರ್ವಜನಿಕರು ಹಿಂದೇಟು ಹಾಕುವಂತಾಗಿದೆ. ಬಾಯಾರಿಕೆ ನೀಗುವ ಜೀವಜಲ ಮರೀಚಿಕೆಯಾಗಿದೆ. ತೆರೆದ ಬಾವಿಗಳು ಪಾತಾಳ ಕಂಡರೂ ತೊಟ್ಟು ನೀರಿಗೂ ಗತಿಯಿಲ್ಲ ಎನ್ನುವಂತಾಗಿದೆ.

Advertisement

ಸದ್ಯದ ಪರಿಸ್ಥಿತಿಗೆ ಗದಗ ಜಿಲ್ಲೆಯೂ ಹೊರತಾಗಿಲ್ಲ. ಕುಡಿಯಲು ನೀರು ಸಿಗದೇ ಜನ-ಜಾನುವಾರುಗಳ ಜೀವಕ್ಕೂ ಸಂಚಕಾರ ಒದಗುವ ಪರಿಸ್ಥಿತಿಯಿದೆ. ಗದಗ ಜಿಲ್ಲೆಯಲ್ಲಿ ಈ ಬಾರಿ ಭೀಕರ ಜಲಕ್ಷಾಮ ಆವರಿಸಿದೆ.

jalakshama

ಹಮ್ಮಿಗಿ ಬ್ಯಾರೇಜ್ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ್ದು, ಅವಳಿ ನಗರಕ್ಕೆ ನೀರು ಪೂರೈಕೆಯಾಗದೇ 20 ದಿನಗಳು ಕಳೆದಿವೆ. ಒಂದೇ ಒಂದು ದಿನವೂ ನೀರಿಲ್ಲದೇ ಜೀವನ ಕಳೆಯಲಾರದ ಮನುಜರ ಪರಿಸ್ಥಿತಿ ಚಿಂತಾಜನಕವಾಗಿದೆ. ಪರಿಣಾಮ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಗದಗ-ಬೆಟಗೇರಿ ಅವಳಿ ನಗರವೂ ಸೇರಿದಂತೆ ಜಿಲ್ಲೆಯ ಹೆಚ್ಚಿನ ಗ್ರಾಮೀಣ ಪ್ರದೇಶಗಳಿಗೂ ಹಮ್ಮಿಗಿ ಬ್ಯಾರೇಜ್‌ನ ನೀರೇ ಆಧಾರ. ಆದರೆ, ಹಮ್ಮಿಗಿ ಬ್ಯಾರೇಜ್‌ನಲ್ಲಿಯೂ ನೀರು ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ್ದರ ಪರಿಣಾಮ, ಜನತೆ ನೀರು ಕಾಣದೇ 20 ದಿನಗಳೇ ಕಳೆದಿವೆ. ಗದಗ-ಬೆಟಗೇರಿ ಅವಳಿ ನಗರದ 35 ವಾರ್ಡ್ಗಳಲ್ಲಿ ಜೀವಜಲಕ್ಕಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದ ದಾಸರ ಓಣಿ, ಗಂಗಿಮಡಿ ಪ್ರದೇಶದಲ್ಲಿ ಸಾರ್ವಜನಿಕರು ಜೀವನಕ್ಕೆ ಆಧಾರವಾದ ಕೆಲಸ ಕಾರ್ಯಗಳನ್ನೂ ಬದಿಗೊತ್ತಿ ನೀರಿಗಾಗಿ ಪಾಳಿ ನಿಲ್ಲಬೇಕಾಗಿದೆ. ಟ್ಯಾಂಕರ್ ಮೂಲಕವಾದರೂ ನೀರು ಪೂರೈಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳೂ ಸಮರ್ಪಕ ನೀರು ಪೂರೈಕೆಗೆ ಮುಂದಾಗಿಲ್ಲ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಈ ಹಮ್ಮಿಗಿ ಬ್ಯಾರೇಜ್ ಸಾಮರ್ಥ್ಯ 3.12 ಟಿಎಂಟಿ. ಆದರೆ, ಹಮ್ಮಿಗಿ ಬ್ಯಾರೇಜ್ ಹಿನ್ನೀರು ನಿಲ್ಲುವ ಸ್ಥಳದಲ್ಲಿನ ಗ್ರಾಮಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳದಿರುವ ಕಾರಣದಿಂದ ಕೇವಲ 1.76 ಟಿಎಂಟಿ ನೀರನ್ನು ಶೇಖರಣೆ ಮಾಡಲಾಗುತ್ತಿದೆ. ಈಗಾಲೇ ಎರಡು ಬಾರಿ ಭದ್ರಾ ಡ್ಯಾಮ್‌ನಿಂದ ನೀರು ಹರಿಸಲಾಗಿತ್ತು. ಈ ಬಾರಿ ಭದ್ರಾ ಡ್ಯಾಮ್‌ನಲ್ಲಿಯೂ ನೀರಿನ ಕೊರತೆಯಿರುವುದರಿಂದ ಭದ್ರಾ ನೀರು ಇತ್ತ ಹರಿದಿಲ್ಲ.

ಹೀಗೆಯೇ ಮುಂದುವರೆದರೆ, ಜನಜೀವನ ಇನ್ನಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ಇನ್ನಾದರೂ ಸರ್ಕಾರ ಗದಗ ಜಿಲ್ಲೆಗೆ ಶಾಶ್ವತವಾಗಿ ನೀರಿನ ಬವಣೆ ನೀಗುವ ಮಾರ್ಗೋಪಾಯಗಳನ್ನು ಹುಡುಕಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಮುಂದಾಗಬೇಕಿದೆ.

ಇನ್ನು ಕೆಲ ದಿನಗಳ ಒಳಗಾಗಿ ಮಳೆಯೂ ಸುರಿದಿಲ್ಲವೆಂದರೆ, ಜಲಕ್ಷಾಮದ ಬಿಸಿ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ಅಧಿಕಾರಿಗಳು. ಪ್ರತಿ ಬಾರಿಯೂ ಬೇಸಿಗೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.


Spread the love

LEAVE A REPLY

Please enter your comment!
Please enter your name here