ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಮಹತ್ವದ ಅಭಿವೃದ್ಧಿಯನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಜನರು ಮತ್ತೊಮ್ಮೆ ಆಶೀರ್ವಾದ ನೀಡಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಗೋಗಮುಖ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿರುವ ಉತ್ಸಾಹವು ನಿರಂತರ ಅಭಿವೃದ್ಧಿ ಮತ್ತು ಸ್ಥಿರ ಆಡಳಿತದ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ ಎಂದರು. ಈ ಬಾರಿ ನಡೆಯುವ ಚುನಾವಣೆಯು ಅಭಿವೃದ್ಧಿ ಹೊಂದಿದ ಭಾರತದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.
ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೋದಿ, ರಾಜ್ಯದ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಸಿದ್ಧರಾಗಿದ್ದಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, “ಸ್ವಯಂ ಘೋಷಿತ ರಾಜಕುಮಾರನಿಗೆ ಇದು ಹ್ಯಾಟ್ರಿಕ್ ಸೋಲು ಆಗಲಿದೆ” ಎಂದು ಟೀಕಿಸಿದರು.
ಚುನಾವಣೆ ಘೋಷಣೆಯಾದ ನಂತರ ಅಸ್ಸಾಂನಲ್ಲಿ ಇದು ತನ್ನ ಮೊದಲ ಸಾರ್ವಜನಿಕ ಸಭೆಯಾಗಿದ್ದು, ಇಲ್ಲಿ ಕಂಡುಬರುವ ಜನಸಾಗರವೇ ಮೂರನೇ ಬಾರಿ ಗೆಲುವು ಖಚಿತ ಎಂಬುದಕ್ಕೆ ಸಾಕ್ಷಿ ಎಂದು ಮೋದಿ ಹೇಳಿದ್ದಾರೆ. ತಮ್ಮ ನಾಯಕತ್ವದಲ್ಲಿ ದೇಶದಲ್ಲಿ ಹ್ಯಾಟ್ರಿಕ್ ಸಾಧನೆಯಾಗಿರುವುದನ್ನು ಉಲ್ಲೇಖಿಸಿ, ಅಸ್ಸಾಂದಲ್ಲೂ ಅದೇ ರೀತಿಯ ಫಲಿತಾಂಶ ಬರುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.



