ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಭಯ ಇದ್ದೇ ಇರುತ್ತದೆ. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ 14 ಸೈಟ್ ಪಡೆದಿದ್ದಷ್ಟೇ ಅಲ್ಲ, 500ಕ್ಕೂ ಹೆಚ್ಚು ಸೈಟ್ಗಳನ್ನು ಹಂಚಿದ್ದಾರೆ.
ಪದೇ ಪದೇ ನಾನು ಹಿಂದುಳಿದವನು ಎಂದು ಹೇಳ್ತಾರೆ. ಕಾಂಗ್ರೆಸ್ನಲ್ಲಿ ದಲಿತರಿಗೆ, ಓಬಿಸಿಗಳಿಗೆ ಯಾವತ್ತೂ ಬೆಲೆ ಇಲ್ಲ. ನೆಹರು ನಂತರ 40 ವರ್ಷ ಕಾಂಗ್ರೆಸ್ ಸರಕಾರ ಇತ್ತು. ಅವರಿಗೆ ಭಾರತ ರತ್ನ ಕೊಡಲಿಲ್ಲ. ಇವರನ್ನು ಸೋಲಿಸಿದವರಿಗೆ ಭಾರತರತ್ನ, ಪದ್ಮಭೂಷಣ ಕೊಟ್ಟರು ಎಂದು ಸಂಸದ ಪ್ರಹ್ಲಾದ ಜೋಶಿ ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.
ಅವರು ಶನಿವಾರ ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇವೆಲ್ಲ ಗಮನಿಸಿದರೆ ಕಾಂಗ್ರೆಸ್ ಎಸ್ಸಿ/ಎಸ್ಟಿ/ಓಬಿಸಿಗೆ ವಿರುದ್ಧವಾಗಿದೆ. ಬಿಜೆಪಿ ಪಕ್ಷ ಡಾ. ಬಿ.ಆರ್. ಅಂಬೇಡ್ಕರ ಅವರಿಗೆ ಭಾರತರತ್ನ ಕೊಡುವುದರಲ್ಲಿ, ಜಗಜೀವನರಾಮ ಅವರನ್ನು ಪ್ರಧಾನಿ ಮಾಡುವುದರಲ್ಲಿ ಸರ್ವ ಪ್ರಯತ್ನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ 2 ಅವಧಿಯಲ್ಲಿ ಅತ್ಯಧಿಕ ಓಬಿಸಿ ಮಂತ್ರಿಗಳಿದ್ದರು. ತಪ್ಪು ಮಾಡಿ ಜಾತಿ ಹೆರಸರಿನಲ್ಲಿ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷವು ಕಾಂಗ್ರೆಸ್ ಸರಕಾರವನ್ನು ಬೀಳಿಸದು. ಇದು ಸ್ಪಷ್ಟ ನನ್ನ ಹಾಗೂ ಪಕ್ಷದ ಅಭಿಪ್ರಾಯ. ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಹೊಂದಿದೆ. ನಾವು ಸರಕಾರ ಬೀಳಿಸುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.
ನಿಮಗೆ ಯಾಕೆ ಭಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಅವರು, ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಅವರಿಗೆ ಭಯ ಕಾಡುತ್ತಿದೆ. ರಾಜಭವನಕ್ಕೆ ಹೋಗುವ ಬದಲು ಮುಡಾಗೆ ಹೋಗಬೇಕಾಗಿತ್ತು.
ಅದನ್ನು ಬಿಟ್ಟು ಅಲ್ಲಿಯ ಅಧಿಕಾರಿಯನ್ನು ಹಾವೇರಿಯ ವಿಶ್ವವಿದ್ಯಾಲಯದ ರಜಿಸ್ಟಾçರ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜ.ಫ. ದಿಂಗಾಲೇಶ್ವರ ಶ್ರೀ ದೊಡ್ಡವರು
ಸ್ಥಳೀಯ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ನಿನ್ನೆಯೇ ಶಿರಹಟ್ಟಿ ಮಠಕ್ಕೆ ಆಗಮಿಸುವ ಬಗ್ಗೆ ತಿಳಿಸಿದ್ದೆ. ಜ.ಫ. ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಇಂದಲ್ಲ ನಾಳೆ ತೆಗೆದುಕೊಳ್ಳುತ್ತೇನೆ. ಏನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿ ಆಶೀರ್ವಾದ ಮಾಡಿ ಅಂತಾ ಕೇಳಿಕೊಳ್ಳುತ್ತೇವೆ. ಸಂವಹನದ ಕೊರತೆಯಾದರೆ ಮತ್ತೊಮ್ಮೆ ಬಂದು ಹೋಗುತ್ತೇನೆ. ಅವರು ದೊಡ್ಡವರು, ಅವರ ಆಶೀರ್ವಾದ ನಮಗೆ ಬೇಕು ಎಂದು ಪ್ರಹ್ಲಾದ ಜೋಶಿ ಹೇಳಿದರು.