ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಬಿಜೆಪಿ ಸರ್ಕಾರವು ಇಡೀ ದೇಶಕ್ಕೆ ಶುಭಪ್ರದವಾದ ಬಜೆಟ್ ನೀಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಜನ ಸಾಮಾನ್ಯರ ಅಭಿವೃದ್ಧಿಗೆ ಪೂರಕ ಬಜೆಟ್ ನೀಡಿದ್ದು, ಆದಾಯ ತೆರಿಗೆ ವಿನಾಯಿತಿ, ಶಿಕ್ಷಣ ಕ್ಷೇತ್ರದ ಕೊಡುಗೆ, ಎಂಎಸ್ಎಂಇಗಳಿಗೆ ಆರ್ಥಿಕ ಶಕ್ತಿ ಸೇರಿದಂತೆ ಹಲವಾರು ಯೋಜನೆಗಳನ್ನು ದೇಶದ ಜನರಿಗೆ ನೀಡುವ ಮೂಲಕ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ವಸಂತ ಪಡಗದ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಬಾರಿಯ ಬಜೆಟ್ನಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ, ಮೊಬೈಲ್ ಫೋನ್, ಬ್ಯಾಟರಿ ಸೇರಿದಂತೆ 28 ಬಂಡವಾಳ ಸರಕುಗಳ ನೇರ ತೆರಿಗೆಯಲ್ಲಿ ವಿನಾಯಿತಿ, ಸ್ಟಾರ್ಟ್ಅಪ್ ತೆರಿಗೆ ಪ್ರಯೋಜನಗಳನ್ನು ಮುಂದಿನ 5 ವರ್ಷಕ್ಕೆ ವಿಸ್ತರಣೆ, ಪಿಎಂ ಜನ ಆರೋಗ್ಯ ಯೋಜನೆ ಮೂಲಕ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ, 10 ಲಕ್ಷ ರೂ.ವರೆಗಿನ ಶಿಕ್ಷಣ ಸಾಲದ ಮೇಲಿನ ವಿನಾಯಿತಿ ಮುಂತಾದವು ಜನಪರ ಯೋಜನೆಗಳಾಗಿವೆ ಎಂದಿದ್ದಾರೆ.