ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕರ್ನಾಟಕ ಸರ್ಕಾರಿ ನೌಕರರ ತಾಲೂಕಾ ಸಂಘದಿಂದ 7ನೇ ವೇತನ ಆಯೋಗ ಜಾರಿ, ಎನ್ಪಿಸಿ ಬದಲಾಗಿ ಒಪಿಎಸ್ ಜಾರಿಗೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ತಹಸೀಲ್ದಾರ್ಗೆ ಮನವಿ ನೀಡಲಾಯಿತು.
ಈ ವೇಳೆ ಕರ್ನಾಟಕ ಸರ್ಕಾರಿ ನೌಕರರ ತಾಲೂಕಾ ಸಂಘದ ತಾಲೂಕಾಧ್ಯಕ್ಷ ಡಾ. ಎಂ.ಎ. ಹಾದಿಮನಿ ಮಾತನಾಡಿ, ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಲು 7ನೇ ವೇತನ ಆಯೋಗ ಜಾರಿಯಾಗಿ ವರದಿ ನೀಡಿ 4 ತಿಂಗಳು ಗತಿಸಿವೆ. ಈ ಹಿಂದೆ ನೌಕರರ ಸಂಘವು ಸರ್ಕಾರಕ್ಕೆ ಮನವಿ ಮಾಡಿದಾಗ ನೀತಿ ಸಂಹಿತೆ ಮುಗಿಯಲಿ ಎಂದಿತ್ತು. ಆದರೆ ಸರ್ಕಾರವು 7ನೇ ವೇತನ ಪರಿಷ್ಕರಣೆಗೆ ವಿಳಂಬವಾಗುತ್ತಿರುವ ಪರಿಣಾಮ ನೌಕರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದರು.
ಮುಪ್ಪಿನ ಕಾಲದಲ್ಲಿ ನೌಕರರ ಕೈಬಿಡುವ ಯೋಜನೆ ಸರ್ಕಾರದ್ದಾಗಿದೆ. ಮುಪ್ಪಿನ ವಯಸ್ಸಿನಲ್ಲಿ ನೌಕರರು ತುತ್ತು ಅನ್ನಕ್ಕಾಗಿ ಪರದಾಡು ಸ್ಥಿತಿ ಬರಬಾರದು ಎನ್ನುವ ಆಶಯ ಸರ್ಕಾರದ್ದಾಗಿದ್ದರೆ ತಕ್ಷಣವೇ ಎನ್ಪಿಎಸ್ ಕೈಬಿಟ್ಟು ಒಪಿಎಸ್ ಜಾರಿ ಮಾಡಲು ಮುಂದಾಗಲಿ. ಇಲ್ಲದಿದ್ದರೆ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ವಿ.ಎ. ಹಾದಿಮನಿ, ಎನ್ಪಿಎಸ್ ನೌಕರರ ಅಧ್ಯಕ್ಷ ಶರಣು ಪೂಜಾರ, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷ ನಜೀರಹ್ಮದ ಸರ್ಕಾವಸ, ವಿಕಲಚೇತನರ ನೌಕರರ ಅಧ್ಯಕ್ಷ ಎಸ್.ವಿ. ಕಂಬಳಿ, ಬಿ.ಸಿ. ಅಂಗಡಿ, ಕೆ.ಎ. ಬೂದಿಹಾಳ, ಉಮೇಶ ಅರಳಿಗಿಡದ, ಎ.ಕೆ. ಒಂಟಿ, ಅಶೋಕ ಕಲ್ಲಿಗನೂರ, ಎಸ್.ಬಿ. ಜೂಲಗುಡ್ಡ, ಪಿ.ಎಸ್. ಹಿರೇಮಠ ಸೇರಿ ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
ರಾಜ್ಯದ ವಿವಿಧ ಹುದ್ದೆಗಳಲ್ಲಿ ಖಾಲಿಯಿರುವ 2.60 ಲಕ್ಷ ನೌಕರರ ಕೆಲಸ ಕಾರ್ಯವನ್ನು ಹಾಲಿ ನೌಕರರು ನಿರ್ವಹಿಸುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಎಂದು ಡಾ. ಎಂ.ಎ. ಹಾದಿಮನಿ ಒತ್ತಾಯಿಸಿದರು.