ಬೆಳಗಾವಿ: ಬೆಳಗಾವಿಯಲ್ಲಿ ಪೆಟ್ರೋಲ್, ಮರಳು ದಂಧೆ ಜೋರಾಗಿಯೇ ನಡೆಯುತ್ತಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪೆಟ್ರೋಲ್, ಮರಳು ದಂಧೆ ಜೋರಾಗಿಯೇ ನಡೆಯುತ್ತಿದೆ. ಪೊಲೀಸರಿಗೆ ಇದು ಗೊತ್ತಿದ್ದು ಸುಮ್ಮನಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕಣ್ಣಿದ್ದು ಕುರುಡಾಗಿ, ಬುದ್ದಿ ಇದ್ದು ಭ್ರಮಣೆಯಾದಂತಿದೆ. ಬಸವರಾಜ್ ರಾಯರೆಡ್ಡಿ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ರಾಜ್ಯ ಆಗಿದೆ ಅಂತ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದಿಂದ ಗ್ಯಾಸ್ ಬೆಲೆ 50 ರೂ ಹೆಚ್ಚಳ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿಚಾರದ ಕುರಿತು ಮಾತನಾಡಿದ ಅವರು, ಅದು ಕಂಪನಿಗಳ ಮೇಲೆ ಮಾತ್ರ ಹೊರೆಯಾಗಿದೆ. ಜನರ ಮೇಲೆ ಹೊರೆಯಾಗಿಲ್ಲ. ಗ್ಯಾಸ್ ಬೆಲೆ 1003 ರೂ ಇತ್ತು. ಅದನ್ನು 800 ರೂಪಾಯಿಗೆ ಕಡಿಮೆ ಮಾಡಲಾಗಿದೆ. ಸದ್ಯ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.