ಮಂಗಳೂರು:- ರಾಶಿ ರಾಶಿ ಆಧಾರ್ ಕಾರ್ಡ್ಗಳು ನೀರಲ್ಲಿ ತೇಲಿಬಂದ ಆಘಾತಕಾರಿ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ಜರುಗಿದೆ.
ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್ ಕಾರ್ಡ್ಗಳನ್ನು ಕಂಡು ಸಾರ್ವಜನಿಕರು ಶಾಕ್ ಆಗಿದ್ದು, ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಜೊತೆಗೂಡಿ ನೂರಾರು ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಿದ್ದಾರೆ.
ಘಟನೆಯಿಂದ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್ಗಳು ತಮಗೆ ತಲುಪದ ಕಾರಣ ಅನೇಕರು ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯು.ಟಿ. ಖಾದರ್ ಅವರು ಈ ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಘಟನೆ ಬೆನ್ನಲ್ಲೇ ಸ್ಥಳೀಯ ಶಾಸಕ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಆಧಾರ್ ಕಾರ್ಡ್ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು? ಮತ್ತು ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಯು.ಐ.ಡಿ.ಎ.ಐ ಯೋಜನಾ ವ್ಯವಸ್ಥಾಪಕರಿಗೆ ಸೂಚನೆ ಕೊಡಲಾಗಿದೆ ಎಂದಿದ್ದಾರೆ.



