ಭಾರತೀಯ ಚಿತ್ರರಂಗದ ಆರ್ಥಿಕ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಿರುವುದು ತೆಲುಗು ಚಿತ್ರರಂಗ. ಬಾಲಿವುಡ್ ಮಾತ್ರವೇ ಭಾರತದ ಮುಖ ಎನ್ನುವ ಭ್ರಮೆಯನ್ನು ತೆಲುಗು ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲೇ ಧ್ವಂಸಗೊಳಿಸಿವೆ. ‘ಬಾಹುಬಲಿ’, ‘ಆರ್ಆರ್ಆರ್’ ತರಹದ ಚಿತ್ರಗಳು ಟಾಲಿವುಡ್ಗೆ ಜಾಗತಿಕ ಮೆಚ್ಚುಗೆ ತಂದಿವೆ.
ಯಶಸ್ಸಿನ ಸರಾಸರಿ ವಿಚಾರದಲ್ಲೂ ತೆಲುಗು ಚಿತ್ರರಂಗ ಇತರ ದೊಡ್ಡ ಇಂಡಸ್ಟ್ರಿಗಳನ್ನು ಹಿಂದಿಕ್ಕಿದೆ. ಆದರೆ ಈ ಸಾಧನೆಗೆ ದೊಡ್ಡ ಸವಾಲಾಗಿ ನಿಂತಿರುವುದು ಪೈರಸಿ ಸಮಸ್ಯೆ.
ಕೋವಿಡ್ ನಂತರ ಒಟಿಟಿ ಬಳಕೆ ಹೆಚ್ಚಿದಂತೆ ಪೈರಸಿಗೂ ರೆಕ್ಕೆ ಬಂದಿದೆ. ಈಗ ಸಿನಿಮಾಗಳು ಬಿಡುಗಡೆಯಾದ ತಕ್ಷಣವೇ ಪೈರಸಿ ರೂಪದಲ್ಲಿ ಆನ್ಲೈನ್ನಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ. ಪೈರಸಿ ಹಾವಳಿ ಅತಿ ಹೆಚ್ಚು ಹೊಡೆತ ನೀಡುತ್ತಿರುವುದು ತೆಲುಗು ಚಿತ್ರರಂಗಕ್ಕೇ.
ಥಿಯೇಟರ್ ಮತ್ತು ಒಟಿಟಿ ಎರಡೂ ಕಡೆ ತೆಲುಗು ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಇರುವುದರಿಂದ ಪೈರಸಿಕೋರರು ಈ ಚಿತ್ರರಂಗವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.
ಈ ಗಂಭೀರ ಪರಿಸ್ಥಿತಿಗೆ ತೆಲುಗು ಚಿತ್ರರಂಗ ಮೌನ ವಹಿಸಿಲ್ಲ. ಮೆಗಾಸ್ಟಾರ್ ಚಿರಂಜೀವಿ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ಸೈಬರ್ ಕ್ರೈಮ್ ಪೊಲೀಸರೊಂದಿಗೆ ನಿರಂತರ ಸಂವಾದ ನಡೆಸಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಚಿವರಿಗೂ ಪೈರಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ.
ಇದರ ಪರಿಣಾಮವಾಗಿ ಸೈಬರಾಬಾದ್ ಪೊಲೀಸರು ಐಬೊಮ್ಮ ರವಿ ಸೇರಿದಂತೆ ಹಲವು ಪ್ರಮುಖ ಪೈರಸಿ ಮಾಸ್ತರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಹಲವು ಪೈರಸಿ ವೆಬ್ಸೈಟ್ಗಳು ಹಾಗೂ ಅಪ್ಲಿಕೇಶನ್ಗಳಿಗೆ ಲಾಕ್ ಹಾಕಲಾಗಿದೆ.
ಇತ್ತೀಚೆಗೆ ತೆಲುಗು ಫಿಲ್ಮ್ ಚೇಂಬರ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು, ಪೈರಸಿ ವಿರುದ್ಧ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಅಧಿಕೃತ MoU ಸಹಿ ಮಾಡಿದ್ದು, ಮುಂದಿನ ದಿನಗಳಲ್ಲಿ ಪೈರಸಿಗೆ ಸಂಪೂರ್ಣ ಕಡಿವಾಣ ಹಾಕುವ ಗುರಿ ಇಟ್ಟುಕೊಂಡಿದ್ದಾರೆ.
ಈಗಾಗಲೇ ಪೈರಸಿ ಸೈಟ್ಗಳನ್ನು ತೆಗೆದುಹಾಕುವ ಜೊತೆಗೆ, ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳು ಪೈರಸಿಯಾಗದಂತೆ ತಡೆಯುವ ಸಂಯುಕ್ತ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಟಾಲಿವುಡ್ ಮತ್ತು ಕಾನೂನು ವ್ಯವಸ್ಥೆ ಒಟ್ಟಾಗಿ ನಿಂತರೆ ಪೈರಸಿ ವಿರುದ್ಧ ಗೆಲುವು ಸಾಧ್ಯ ಎಂಬ ನಂಬಿಕೆ ಗಟ್ಟಿಯಾಗುತ್ತಿದೆ.



