ಅಹಮದಾಬಾದ್:- ಇಲ್ಲಿ ಇಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಓರ್ವ ವ್ಯಕ್ತಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ವಿಶ್ವಾಸ್ ಕುಮಾರ್ ರಮೇಶ್(40) ದುರಂತದಿಂದ ಪಾರಾದ ವ್ಯಕ್ತಿ. ಪಾರಾದ ವಿಶ್ವಾಸ್ ಅವರು ತುರ್ತು ನಿರ್ಗಮನ ಡೋರ್ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದರು. ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಅವರು ಹಾರಿದ್ದರಿಂದ ಪಾರಾಗಿದ್ದಾರೆ. ವಿಶ್ವಾಸ್ ಅವರ ಎದೆ , ಕಣ್ಣು, ಪಾದಗಳು ಗಾಯಗೊಂಡಿದ್ದು ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಪತನಗೊಂಡ ಸ್ಥಳದಿಂದ ಅವರು ನಡೆದುಕೊಂಡೇ ಅಂಬುಲೆನ್ಸ್ ಹತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ವಿಮಾನ ನಿಲ್ದಾಣದ ಟೇಕಾಫ್ ಆದ 30 ಸೆಕೆಂಡ್ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು. ನಂತರ ವಿಮಾನ ಪತನ ಹೊಂದಿತು ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ ಎಂದು ವಿವರಿಸಿದರು.
ಘಟನೆ ವಿವರ:
ಟೇಕಾಫ್ ನಂತರ ಎಂಜಿನ್ನಲ್ಲಿ ತಾಂತ್ರಿಕದೋಷ ಉಂಟಾದ ಪರಿಣಾಮ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನ ವಿಮಾನ ನಿಲ್ದಾಣದ ಬಳಿಯ ಬಿಜೆ ಮೆಡಿಕಲ್ ಕಾಲೇಜಿನ ಮೇಲೆ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದ ಮೇಘಾನಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಅಲ್ಲದೇ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ಗೆ ವಿಮಾನ ಬಡಿದಿದ್ದು, ಭಾರೀ ಸಾವು-ನೋವಿನ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ 7 ಅಗ್ನಿಶಾಮಕ ಹಾಗೂ ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.