ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಗ್ನಿ ಸೋಮೇಶ್ವರ ದೇವಸ್ಥಾನದ ಹತ್ತಿರ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ದಸರಾ ಕವಿಗೋಷ್ಠಿಯಲ್ಲಿ 15ಕ್ಕೂ ಅಧಿಕ ಕವಿಗಳು ತಾವು ರಚಿಸಿದ ವಿಶಿಷ್ಟ, ವಿಭಿನ್ನ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಎಂ. ಎಂ. ಮಠದ ಉದ್ಘಾಟಿಸಿ ಮಾತನಾಡಿ, ಕವಿಗಳು ಸಮಾಜದ ಓರೆ-ಕೋರೆಗಳನ್ನು ತಿದ್ದುವದರ ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವಂತಿರಬೇಕು. ದಸರಾ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿರುವದು ಸ್ತುತ್ಯಾರ್ಹ ಕಾರ್ಯವಾಗಿದೆ. 12ನೇ ಶತಮಾನಕ್ಕೆ ಸೇರಿದ ಅಗ್ನಿಸೋಮೇಶ್ವರ ದೇವಸ್ಥಾನ ಲಕ್ಷ್ಮೇಶ್ವರದ ಪುರಾತನ ಸಂಸ್ಕೃತಿಯ ಪ್ರತೀಕವಾದದ್ದು, ಇಲ್ಲಿ ನಿರಂತರ ಸಾಹಿತ್ಯ, ಸಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕೈಜೋಡಿಸಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕು ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಲಕ್ಷ್ಮೇಶ್ವರ ತಾಲೂಕು ಕಸಾಪ ಘಟಕ ಈಗಾಗಲೇ ಎಲ್ಲರ ಸಹಕಾರ, ಮಾರ್ಗದರ್ಶನದೊಂದಿಗೆ 154 ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಸಂಘಟನೆ ಮಾಡಿ ಮುನ್ನಡೆದಿದೆ. ದತ್ತಿ ಉಪನ್ಯಾಸಗಳು, ಮನೆ ಕನ್ನಡ-ಮನ ಕನ್ನಡ ಕಾರ್ಯಕ್ರಮ ಸರಣಿ, ಮಾಸದ ಮಾತು ಕಾರ್ಯಕ್ರಮ ಸರಣಿ, ಸಾಹಿತ್ಯ ಸಮ್ಮೇಳನಗಳು, ಬೇಸಿಗೆ ಶಿಬಿರಗಳು ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ನಿರಂತರವಾಗಿ ಸಂಘಟನೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಹಿರೇಮಠ, ಮುಖ್ಯ ಅತಿಥಿಗಳಾಗಿ ಎಸ್.ಎ. ಬಣಗಾರ, ನಿಂಗಪ್ಪ ಗೊರವರ, ಬಸವರಾಜ ಬೆಲಹುಣಸಿ, ಸುರೇಶ ತಂಗೋಡ, ರಮೇಶ ರಿತ್ತಿ, ಎಸ್.ಬಿ. ಕದಡಿ ಉಪಸ್ಥಿತರಿದ್ದರು. ರವಿರಾಜ ಶಿಗ್ಲಿ ಭಾವಗೀತೆ, ತತ್ವಪದಗಳನ್ನು ಹಾಡಿ ಗಾನ ದಸರಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಸ್ವಾಗತಿಸಿದರು. ಉಪನ್ಯಾಸಕ ತಮ್ಮನಗೌಡ ಪಾಟೀಲ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಶಿಕ್ಷಕರಾದ ಶ್ರೀಪಾಲ ಗೋಂಗಡಿ, ಆರ್.ಪಿ. ರಾಯಚೂರ, ಶಂಕರ ನಿರ್ವಹಿಸಿದರು, ಭೂಪಾಲ ಘೋಂಗಡಿ ವಂದಿಸಿದರು.
ಪ್ರಭಾವತಿ ಹಿರೇಮಠ, ಸವಿತಾ ಕಳಸಾಪುರ, ಪ್ರತಿಭಾ ಶಿಳ್ಳಿನ, ವಿ.ಎಮ್. ಹೂಗಾರ, ಜೀವನ್ ಸಾತಪುತೆ, ಪಿ.ಪಿ. ಹಿರೇಮಠ, ಪಾರ್ವತಿ ಪಾಟೀಲ ಮುಂತಾದವರು ಹಾಜರಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜ ಹಣಗಿ ಮಾತನಡಿ, ಕಾವ್ಯವೆಂಬುದು ಬುದ್ಧಿ-ಭಾವಗಳ ಸಂಗಮ. ಕಾವ್ಯವು ಸಾಹಿತ್ಯದ ಅತ್ಯಂತ ಪರಿಣಾಮಕಾರಿ ಪ್ರಕಾರ. ಮಹಾಕಾವ್ಯಗಳು ನಮ್ಮ ಕನ್ನಡದ ಶ್ರೇಷ್ಠ ಸಂಕೇತಗಳಾಗಿವೆ ಎಂದು ಹೇಳಿದರು.