ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಶನಿವಾರ ಪೊಲೀಸ್ ಚೌಕಿ, ಟ್ರಾಫಿಕ್ ಸಿಗ್ನಲ್ ಹಾಗೂ ಸಿಸಿ ಕ್ಯಾಮರಾಗಳನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಜೇಂದ್ರಗಡ ಪಟ್ಟಣ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ತರಕಾರಿ, ಹಣ್ಣು, ಹೂ ವ್ಯಾಪಾರಸ್ಥರಿಗೆ ಬೇರೆಡೆ ಸ್ಥಳಾಂತರಗೊಳಿಸಲಾಗಿದೆ.
1985ರಲ್ಲಿ ಎಪಿಎಂಸಿ ಅಧ್ಯಕ್ಷನಿದ್ದಾಗ ಹೊಸದಾಗಿ ಎಪಿಎಂಸಿ ಮಾರುಕಟ್ಟೆಯನ್ನು ಪ್ರಾರಂಭಿಸಿದ್ದೆ. ಈಗ ಅಲ್ಲಿಯೂ ಸಹ ಜಾಗೆಯ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಹೀಗಾಗಿ ಶೀಘ್ರದಲ್ಲೇ 40 ಎಕರೆ ಜಾಗೆಯಲ್ಲಿ ನೂತನ ಮಾರುಕಟ್ಟೆಯ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರವನ್ನು ಬಿಟ್ಟರೆ ಗಜೇಂದ್ರಗಡ ಪಟ್ಟಣದಲ್ಲಿ ಟ್ರಾಫಿಕ್ ಸಿಗ್ನಲ್, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಪ್ರಮುಖ ಕಾಲಕಾಲೇಶ್ವರ ವೃತದಲ್ಲಿ ಪೋಲಿಸ್ ಚೌಕಿಯ ನಿರ್ಮಾಣವನ್ನು ಸ್ಥಳಿಯ ಪುರಸಭೆ, ಶಾಸಕರ ನಿಧಿಯಿಂದ ನಿರ್ಮಾಣ ಮಾಡಲಾಗಿದೆ. ಸಂಚಾರಿ ನಿಯಮಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಸಿದ್ದು ಬೀಳಗಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಿಎಸ್ಐ ಸೋಮನಗೌಡ ಗೌಡ್ರ, ಪುರಸಭೆ ವಿಪಕ್ಷನಾಯಕ ಮುರ್ತುಜಾ ಡಾಲಾಯತ, ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್ಲ ಹಾಗೂ ಸಿದ್ದಣ್ಣ ಬಂಡಿ, ಚಂಬಣ್ಣ ಚವಡಿ, ನಾಗುಸಾ ಬಸವಾ, ಎ.ಡಿ. ಕೋಲಕಾರ, ಉಮೇಶ ರಾಠೋಡ, ಶ್ರೀಧರ ಬಿದರಳ್ಳಿ, ಸಿದ್ದು ಗೊಂಗಡಶೆಟ್ಟಿಮಠ, ತುಳಸಿನಾಥ ಮಾಳೊತ್ತರ, ಅಂದಪ್ಪ ರಾಠೋಡ ಸೇರಿದಂತೆ ಇತರರು ಇದ್ದರು.



