ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಜೋರಾಗಿ ಶಬ್ದ ಮಾಡುತ್ತಾ ಹಾಡುಗಳನ್ನು ಹಾಕಿಕೊಂಡು ಚಲಿಸುವ ಟ್ರ್ಯಾಕ್ಟರ್ ಗಳ ಸೌಂಡ್ ಬಾಕ್ಸ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಕರ್ಕಶ ಶಬ್ದ ಮಾಡುವವರ ಮೇಲೆ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪಟ್ಟಣದಲ್ಲಿ ಟ್ರ್ಯಾಕ್ಟರ್ ಗಳ ಏರುಧ್ವನಿಯ ಸೌಂಡ್ಬಾಕ್ಸ್ ಗಳಿಂದ ಸಾಕಷ್ಟು ಶಬ್ದಮಾಲಿನ್ಯ ಉಂಟಾಗುತ್ತಿದ್ದು, ಅದನ್ನು ನಿಯಂತ್ರಿಸುವಂತೆ ಇತ್ತಿಚೇಗೆ ಕೆಲ ಸಂಘಟನೆಗಳು ಪೊಲೀಸ್ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದರು. ಈ ನಿಟ್ಟಿನಲ್ಲಿ ಸೋಮವಾರ ಪಟ್ಟಣದ ಶಿಗ್ಲಿ ನಾಕಾ, ಸವಣೂರ ರಸ್ತೆ, ಗದಗ ನಾಕಾ, ಹುಬ್ಬಳ್ಳಿ ರಸ್ತೆ ಸೇರಿದಂತೆ ಹಲವೆಡೆ ಪೊಲೀಸ್ ಸಿಬ್ಬಂದಿಗಳು ಸ್ಪೆಷಲ್ ಡ್ರೈವ್ ನಡೆಸಿ ಟ್ರ್ಯಾಕ್ಟರ್ ಗಳಿಗೆ ಅಳವಡಿಸಿದ್ದ ಸೌಂಡ್ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ ಅವರ ಮಾರ್ಗದರ್ಶನ ಹಾಗೂ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡಾದ ಹಾಗೂ ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ. ರಾಥೋಡ ನೇತೃತ್ವದಲ್ಲಿ ವಾಹನಗಳಿಗೆ ಅಳವಡಿಸಿದ್ದ ಸೌಂಡ್ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದು, 11 ಐಎಮ್ವಿ ಪ್ರಕರಣ ದಾಖಲಿಸಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗಿದ್ದು, ಟ್ರ್ಯಾಕ್ಟರ್ ನವರು ಇದರ ಬಗ್ಗೆ ಗಮನ ಹರಿಸಿ ಅವುಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವದು ಎಂದು ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡಾದ ತಿಳಿಸಿದರು.