ಬೆಂಗಳೂರು:- ವಿಧವೆ ಮದುವೆಯಾಗಿದ್ದ ಪೊಲೀಸಪ್ಪನ ವಿರುದ್ಧವೇ ಮಹಿಳೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ನಗರದ ಶೇಷಾದ್ರಿಪುರಂ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಕೊಲೆ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಹಿಳೆಯನ್ನು ಕಾನ್ಸ್ಟೇಬಲ್ ಮನೋಜ್ ಬುಟ್ಟಿಗೆ ಹಾಕಿಕೊಂಡಿದ್ದ. 2016 ರಲ್ಲಿ ಮಹಿಳೆಯ ಪತಿ ಕೊಲೆಯಾಗಿದ್ದ. ಈ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಆರೋಪಿ ಮನೋಜ್ ಶೇಷಾದ್ರಿಪುರಂ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ.
ಪತಿಯ ಕೇಸ್ ಸಲುವಾಗಿ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿತ್ತು. 2019 ರಲ್ಲಿ ಸಮನ್ಸ್ ಕಾಪಿ ಕೊಡಲು ಶೇಷಾದ್ರಿಪುರಂ ಠಾಣೆಗೆ ಮಹಿಳೆ ತೆರಳಿದ್ದರು. ಆಗ ಕಾನ್ಸ್ಟೇಬಲ್ ಮನೋಜ್ ಆಕೆಯ ನಂಬರ್ ಕೇಳಿ ಪಡೆದಿದ್ದ. ಬಳಿಕ ಇಬ್ಬರಿಗೂ ಸಲಿಗೆ ಬೆಳೆದು ಪ್ರೇಮಾಂಕುರವಾಗಿತ್ತು.
ಅದರಂತೆ 2024ರ ನ.28 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯಾಗಿ ತನ್ನ ಕ್ವಾಟ್ರಸ್ಗೆ ಮಹಿಳೆಯನ್ನ ಮನೋಜ್ ಕರೆತಂದಿದ್ದ. ಆಗ ಕುಟುಂಬಸ್ಥರಿಂದ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಲಾಗಿದೆ. ಬೇರೆಯವರನ್ನ ಮದುವೆಯಾಗಿದ್ದರೆ ವರದಕ್ಷಿಣೆ ಸಿಗುತ್ತಿತ್ತು. ನೀನು ಎರಡು ಮಕ್ಕಳ ತಾಯಿ ಎಂದು ಮನೋಜ್ ಕುಟುಂಬದವರು ಗಲಾಟೆ ಮಾಡಿದ್ದಾರೆ.
,ಕೆಲ ದಿನದ ನಂತರ ಯಾವಾಗಲೂ ಮೊಬೈಲ್ನಲ್ಲಿ ಪತಿ ಮನೋಜ್ ಬ್ಯುಸಿಯಾಗಿರ್ತಿದ್ದ. ಕೇಳಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಗಂಡನ ವರ್ತನೆ ನೋಡಿ ಮನೋಜ್ ಮೊಬೈಲ್ ಚೆಕ್ ಮಾಡಿದಾಗ, ಗೊತ್ತಾಗಿದ್ದು ಕಾನ್ಸ್ಟೇಬಲ್ನ ಅಸಲಿಯತ್ತು. ಬೇರೆ ಮಹಿಳೆಯರ ಜೊತೆಗಿದ್ದ ವೀಡಿಯೋ, ಫೋಟೊಗಳು ಮೊಬೈಲ್ನಲ್ಲಿ ಪತ್ತೆಯಾಗಿವೆ.
ಅದನ್ನ ಕೇಳಿದ್ದಕ್ಕೆ ಮತ್ತೆ ಹಲ್ಲೆ ಮಾಡಿ ಪತ್ನಿ ಕೈ ಮುರಿದಿದ್ದಾನೆ. ಸದ್ಯ ಪತಿ ಮನೋಜ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.