ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುವ ವೈಶಿಷ್ಟ್ಯಪೂರ್ಣ ಪ್ರದರ್ಶನ ಇದಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಕೆ.ಹೆಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಹತ್ತಿರವಿರುವ ವಿ.ಡಿ.ಎಸ್.ಟಿ ಮೈದಾನದಲ್ಲಿ ಮಾರ್ಚ್ 1ರಿಂದ ಮಾರ್ಚ್ 3ರವರೆಗೆ ಗದಗ ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನ ಹಾಗೂ ಜಿಲ್ಲಾ ಮಟ್ಟದ ಸರಸ್ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆದ ಹೂವು ಮತ್ತು ಹಣ್ಣುಗಳ ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಬೆಂಬಲ ನೀಡುವ ಉದ್ದೇಶದಿಂದ ಸರಸ್ ಮೇಳವನ್ನು ಸಹ ಆಯೋಜಿಸಲಾಗಿದೆ ಎಂದು ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭರತ್ ಎಸ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸೇರಿದಂತೆ ಗಣ್ಯರು, ಹಿರಿಯರು ಪಾಲ್ಗೊಂಡಿದ್ದರು.
ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಸಿದ್ದೇಶ್ವರ ಸ್ವಾಮೀಜಿ, ಪಂಡಿತ ಪುಟ್ಟರಾಜ ಗವಾಯಿಗಳು, ಆಲೂರು ವೆಂಕಟರಾಯರು, ಸುನೀಲ ಜೋಶಿ, ರತನಜಿ ಟಾಟಾ, ಕೆ.ಎಚ್. ಪಾಟೀಲ, ಸಾಲುಮರದ ತಿಮ್ಮಕ್ಕ, ಮಹಾತ್ಮ ಗಾಂಧೀಜಿ, ಹುಯಿಲಗೋಳ ನಾರಾಯಣರಾವ್, ಸಿದ್ಧನಗೌಡ ಪಾಟೀಲ, ಭೀಮಸೇನ ಜೋಶಿ, ಕುಮಾರವ್ಯಾಸ, ಗಂಗೂಬಾಯಿ ಹಾನಗಲ್ ಕಲಾಕೃತಿಗಳು ದೇಶದ ಸಂಗೀತ, ಕ್ರೀಡೆ, ಆಧ್ಯಾತ್ಮಿಕ, ಪರಿಸರ ಕ್ಷೇತ್ರದಲ್ಲಿನ ಸಾಧಕರನ್ನು ನೆನಪಿಸುತ್ತಿದ್ದವು. ಮರಳಿನಿಂದ ತಯಾರಿಸಿದ ಲಕ್ಕುಂಡಿಯ ಬ್ರಹ್ಮಜಿನಾಲಯ ಪ್ರತಿಕೃತಿ ಶಿಲ್ಪಕಲೆ ಸಾಹಿತ್ಯವನ್ನು ಬಿಂಬಿಸುತ್ತಿತ್ತು.
ಸ್ವಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿದ ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಖಾರಾ ಮತ್ತು ಸಿಹಿ ತಿನಿಸು, ಅಗರಬತ್ತಿ, ಖಡಕ್ ಜೋಳದ ರೊಟ್ಟಿ, ಅಗಸಿ ಚಟ್ನಿ, ಅರಿಶಿನಪುಡಿ, ಶ್ಯಾವಿಗೆ, ಮಸಾಲಾ ಮಜ್ಜಿಗೆ, ಗೃಹ ಅಲಂಕಾರಿಕ ವಸ್ತುಗಳು, ಲಂಬಾಣಿ ಉಡುಪುಗಳು, ಇಳಕಲ್ ಸೀರೆ, ಚಕ್ಕುಲಿ, ಕೋಡುಬಳಿ, ನಿಪ್ಪಟ್ಟು, ಶೇಂಗಾ ಚಿಕ್ಕಿ, ಮೈಸೂರು ಪಾಕ್, ಹುಣಿಸೆ ಚಿಗಳಿ ಇವುಗಳ ಮಳಿಗೆಗಳು ಗ್ರಾಮೀಣ ಸೊಗಡನ್ನು ಎತ್ತಿ ತೋರಿಸುತ್ತಿದ್ದವು.
ರಂಗೋಲಿಯಲ್ಲಿ ಅರಳಿದ ಕಲಾಕೃತಿಗಳಾದ ದೇಶದ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ದಿ. ಮನಮೋಹನ ಸಿಂಗ್, ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲ, ಅಂಧ ಮಕ್ಕಳ ಆಶಾಕಿರಣ ಪಂ. ಪುಟ್ಟರಾಜ ಗವಾಯಿಗಳು ಹಾಗೂ ದೇಶದ ಶ್ರೇಷ್ಠ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಲಾಕೃತಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರ ಮೆಚ್ಚುಗೆಗೆ ಪಾತ್ರವಾದವು.
ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ
ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡ 5 ಗ್ಯಾರಂಟಿ ಯೋಜನೆಗಳ ಪ್ರದರ್ಶನ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದವು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ ಎಂಬ ಸಂದೇಶ ಸಾರುತ್ತಿತ್ತು. ಪುಷ್ಪಗಳಿಂದ ಅಲಂಕೃತಗೊAಡ ಸಬರಮತಿ ಆಶ್ರಮದ ಪ್ರತಿಕೃತಿ ಅದರಲ್ಲಿ ಸಿರಿಧಾನ್ಯದಿಂದ ತಯಾರಿಸಿದ `ನನ್ನ ಜೀವನ ನನ್ನ ಸಂದೇಶ‘ ಸಾರುವ ಗಾಂಧೀಜಿ ಪ್ರತಿಮೆ ದೇಶಭಕ್ತಿಯನ್ನು ಬಿಂಬಿಸುತ್ತಿತ್ತು.