ಸ್ತ್ರೀಯರಲ್ಲಿ ಆತ್ಮವಿಶ್ವಾಸ ಬೆಳೆಸಿ, ಆರ್ಥಿಕ ಸ್ವಾವಲಂಬನೆಗೆ ಮಾರ್ಗ ತೋರಿಸುವಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ `ಶಕ್ತಿ ಯೋಜನೆ’ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಮಹಿಳಾ ಸಬಲೀಕರಣದ ನವದಿಗಂತವನ್ನು ಪರಿಚಯಿಸುತ್ತಿರುವ ಈ ಯೋಜನೆ, ನಾಡಿನ ಮಹಿಳೆಯರ ಜೀವನ ವಿಧಾನದಲ್ಲಿ ಸ್ಥಿರ ಬದಲಾವಣೆಗೆ ಕಾರಣವಾಗುತ್ತಿದೆ.
ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯಡಿ, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದು, ಈ ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಮಾರ್ಚ್ 2025ರ ಅಂತ್ಯದವರೆಗೆ 9.33 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.
ಗದಗ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿದ್ದು, ತಾಲೂಕುವಾರು ಮಹಿಳೆಯರು ಪ್ರಯಾಣಿಸಿದ ವಿವರ ಹಾಗೂ ಉಚಿತ ಟಿಕೆಟ್ ವಿತರಣೆ ಮೊತ್ತ ಹೀಗಿದೆ: ಗದಗ ತಾಲೂಕಿನಲ್ಲಿ 27276281 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ರೂ. 873194608ಗಳ ಶೂನ್ಯ ಮೊತ್ತದ ಟಿಕೆಟ್ ವಿತರಣೆ ಮಾಡಲಾಗಿದೆ. ರೋಣದಲ್ಲಿ 14110356, ರೂ.432692225ಗಳ ಮೊತ್ತದ ಶೂನ್ಯ ಟಿಕೆಟ್ ವಿತರಣೆಯಾಗಿದೆ. ಲಕ್ಷ್ಮೇಶ್ವರದಲ್ಲಿ 1,29,37,071, ರೂ. 36,16,07,713 ಮೊತ್ತದ ಶೂನ್ಯ ಟಿಕೆಟ್ ವಿತರಣೆಯಾಗಿದೆ. ನರಗುಂದ ತಾಲೂಕಿನಲ್ಲಿ ರೂ.42,89,47,797ಗಳ ಟಿಕೆಟ್ ವಿತರಿಸಲಾಗಿದೆ. ಮುಂಡರಗಿ ತಾಲೂಕಿನಲ್ಲಿ ರೂ. 3,76,59,861 ಶೂನ್ಯ ಟಿಕೆಟ್, ಗಜೇಂದ್ರಗಡ ತಾಲೂಕಿನಲ್ಲಿ ರೂ. 37,98,94,207 ಮೊತ್ತದ ಶೂನ್ಯ ಟಿಕೆಟ್, ಶಿರಹಟ್ಟಿ ತಾಲೂಕಿನಲ್ಲಿ ರೂ. 11,40,48,862 ಮೊತ್ತದ ಶೂನ್ಯ ಟಿಕೆಟ್ ವಿತರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 9,32,75,327 ಮಹಿಳಾ ಪ್ರಯಾಣಿಕರು ಮಾರ್ಚ್ ಅಂತ್ಯದವರೆಗೆ ಪ್ರಯಾಣ ಮಾಡುವ ಮೂಲಕ ರೂ.296,69,84,274ಗಳ ಮೊತ್ತದ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಿ, ದಾಖಲೆಯ ಪ್ರಯಾಣ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಸಾಧ್ಯವಾಗಿದೆ ಎಂದು ಮಹಿಳೆಯರು ಸರ್ಕಾರವನ್ನು ಪ್ರಶಂಸಿಸಿದ್ದಾರೆ.
ಶಕ್ತಿ ಯೋಜನೆಯ ಮೂಲಕ ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿರುವುದು ಮಾತ್ರವಲ್ಲದೇ ಹೆಚ್ಚಿನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವ ಸುವರ್ಣಾವಕಾಶವಾಗಿದೆ. ಅಲ್ಲದೇ ಮಹಿಳೆಯರು ಉದ್ಯೋಗ, ಪ್ರವಾಸ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗಿರುವುದರ ಜೊತೆಗೆ ಈ ಪ್ರಯಾಣ ವೆಚ್ಚದ ಉಳಿತಾಯದ ಮೊತ್ತವು ದೈನಂದಿನ ಬದುಕಿನಲ್ಲಿನ ಹಲವು ಅವಶ್ಯಕತೆಗಳನ್ನು ಪೂರೈಸಲು ನೆರವಾಗಿದೆ.
ಶಕ್ತಿ ಯೋಜನೆಯಿಂದ ನಾಡಿನ ಮಹಿಳೆಯರಿಗೆ ದೂರದ ಪ್ರದೇಶಗಳಿಗೆ ತೆರಳುವ, ಪ್ರವಾಸ ಮಾಡುವ ಕನಸುಗಳು ನನಸಾಗಿವೆ. ಶಕ್ತಿ ಯೋಜನೆ ಪ್ರವಾಸಕ್ಕೆ ಅವಕಾಶ ಲಭ್ಯವಾಗಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೂ ಸಹ ಅಪಾರ ಪ್ರಮಾಣದಲ್ಲಿ ಸಹಕಾರಿಯಾಗಿದೆ. ಜೊತೆಗೆ ಮಹಿಳೆಯರ ಸುಸ್ಥಿರ ಬದುಕಿಗೆ ಶಕ್ತಿಯೇ ಆಸರೆಯಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ.
ಶಕ್ತಿ ಯೋಜನೆ ಕರ್ನಾಟಕದ ಮಹಿಳೆಯರಿಗೆ ಕೇವಲ ಆರ್ಥಿಕ ನೆರವನ್ನಷ್ಟೇ ನೀಡದೆ, ಜೀವನವನ್ನು ರೂಪಿಸಿಕೊಳ್ಳುವ ಶಕ್ತಿ, ಆತ್ಮವಿಶ್ವಾಸ ಮತ್ತು ಅವಕಾಶಗಳ ದಾರಿ ಒದಗಿಸುತ್ತಿದೆ. ಈ ಯೋಜನೆಯ ಪರಿಣಾಮವಾಗಿ ಸಾವಿರಾರು ಮಹಿಳೆಯರು ತಮ್ಮ ಕುಟುಂಬಗಳನ್ನೂ, ಸಮಾಜವನ್ನೂ ಬದಲಾಯಿಸುವ ಶಕ್ತಿ ಕೇಂದ್ರಗಳಾಗಿ ರೂಪಗೊಳ್ಳುತ್ತಿದ್ದಾರೆ. ನಿಜ ಅರ್ಥದಲ್ಲಿ ಶಕ್ತಿ ಯೋಜನೆ, ನಾಡು ಮುಂದುವರಿಯುವ ಮಾರ್ಗದಲ್ಲಿ ಮಹಿಳೆಯರ ಶಕ್ತಿಯ ಅವಿಭಾಜ್ಯ ಪಾತ್ರವನ್ನು ಪ್ರಭಾವಶೀಲವಾಗಿ ಮೂಡಿಬರುತ್ತಿದೆ.
ಫಲಾನುಭವಿಗಳು ಏನಂತಾರೆ?
ಶಕ್ತಿ ಯೋಜನೆ ಜಾರಿಯಿಂದಾಗಿ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ತುಂಬಾ ಅನುಕೂಲವಾಗಿದೆ. ಅನೇಕ ವರ್ಷಗಳಿಂದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಆಸೆ ಇತ್ತು. ಆದರೆ ಹಣಕಾಸಿನ ತೊಂದರೆಯಿಂದ ಇದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಶಕ್ತಿ ಯೋಜನೆ ಜಾರಿಯಿಂದಾಗಿ ವಿವಿಧ ಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ಕೊಡಲು ಅನುಕೂಲವಾಗಿದೆ. ಇದಲ್ಲದೆ, ಇತರೆ ಕೆಲಸಗಳಿಗೆ ಬಸ್ನಲ್ಲಿ ಸಂಚರಿಸುವ ಬಡ ಮಹಿಳೆಯರಿಗೆ ಇದು ಉಪಯೋಗವಾಗಿದೆ. ಶಕ್ತಿ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳು.
– ನೀಲವ್ವ ಭಾವಿಮನಿ, ಮುಂಡರಗಿ.
ಅನೇಕ ವರ್ಷಗಳಿಂದ ರಾಜ್ಯದ ವಿವಿಧ ಪ್ರವಾಸಿ ತಾಣ, ಕ್ಷೇತ್ರಗಳಿಗೆ ಭೇಟಿ ನೀಡುವ ಆಸೆಯಿತ್ತು. ಹಣಕಾಸಿನ ತೊಂದರೆಯಿಂದಾಗಿ ಸಾಧ್ಯವಾಗಲಿಲ್ಲ. ಶಕ್ತಿ ಯೋಜನೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ರಾಜ್ಯದಾದ್ಯಂತ ಸಂಚರಿಸಿದ್ದಾರೆ. ಜೊತೆಗೆ ಸಂಭಂದಿಕರ ಮನೆಗಳಿಗೆ ಭೇಟಿ ನೀಡಲು ತುಂಬಾ ಅನುಕೂಲವಾಗಿದೆ. ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು.
– ಲಕ್ಷ್ಮೀ ಬೆಟಗೇರಿ, ಗದಗ.