ವಿಜಯಸಾಕ್ಷಿ ಸುದ್ದಿ, ರೋಣ : 78ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ ಅದ್ಧೂರಿಯಾಗಿ ಜರುಗಬೇಕು. ಈ ವಿಷಯದಲ್ಲಿ ನಿಷ್ಕಾಳಜಿಯನ್ನು ಸಹಿಸುವುದಿಲ್ಲ ಎಂದು ಖನಿಜ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ ಸೂಚನೆ ನೀಡಿದರು.
ಅವರು ಶುಕ್ರವಾರ ತಾ.ಪಂ ಸಭಾಭವನದಲ್ಲಿ ಜರುಗಿದ 78ನೇ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಾ ಕೇಂದ್ರದಲ್ಲಿರುವ ಮುಖ್ಯ ವೃತ್ತಗಳು ಹಾಗೂ ಕಚೇರಿಗಳು ಸೇರಿದಂತೆ ಗ್ರಾಮೀಣ ಭಾಗಗಳ ಸರಕಾರಿ ಕಚೇರಿಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಬೇಕು. ಅಲ್ಲದೆ ಅಧಿಕಾರಿಗಳು ಖುದ್ದು ಹಾಜರಿದ್ದು ಪರಿಶೀಲಿಸಬೇಕು ಮತ್ತು ಆ.15ರಂದು ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿರಬೇಕು ಎಂದರು.
ತಾಲೂಕಾಡಳಿತದಿಂದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಶಾಲಾ ಮಕ್ಕಳ ಮೆರವಣಿಗೆ ಎಸ್.ಆರ್. ಪಾಟೀಲ ಶಾಲೆಯಿಂದ ಹೊರಡಲಿದೆ. ಈ ಸಂದರ್ಭದಲ್ಲಿ ಪೊಲೀಸರು ಮಕ್ಕಳಿಗೆ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆ ನಿರ್ವಹಿಸಬೇಕು ಎಂದು ಸೂಚಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸುವ ಸಂಧರ್ಭದಲ್ಲಿ ಯಾವುದೇ ಅಚಾತುರ್ಯ ನಡೆಯಬಾರದು. ಈ ವಿಷಯವಾಗಿ ತಹಸೀಲ್ದಾರರು ಎಚ್ಚರಿಕೆ ವಹಿಸಬೇಕು. ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, 108 ವಾಹನ, ಅಗ್ನಿಶಾಮಕದಳ ಇವೆಲ್ಲವೂ ಕಡ್ಡಾಯವಾಗಿ ಇರಬೇಕು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ನಾಗರಾಜ ಕೆ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಾ ಮಟ್ಟದ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾಕೂಟಗಳು ಅ.9 ಹಾಗೂ 10ರಂದು ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 12 ಮಹಾವಿದ್ಯಾಲಯದ 2100 ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ಉಪಹಾರ ಹಾಗೂ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ಶಾಸಕ ಜಿ.ಎಸ್. ಪಾಟೀಲ ವಹಿಸಿಕೊಳ್ಳುವದಾಗಿ ಘೋಷಿಸಿ, ಕ್ರೀಡಾಭಿಮಾನವನ್ನು ಮೆರೆದರು.