ಬೆಂಗಳೂರು: ಮರಣಪೂರ್ವ ಹೇಳಿಕೆಯು ಮೃತರು ಹೇಳುವ ನಿಖರ ಪದಗಳೊಂದಿಗೆ ಪ್ರಶ್ನೋತ್ತರ ರೂಪದಲ್ಲಿದ್ದು, ಸಂಕ್ಷಿಪ್ತ ಹಾಗೂ ಸಂಪೂರ್ಣ ವಿಶ್ವಾಸಾರ್ಹವಾಗಿರಬೇಕು ಎಂದು ಮಹತ್ವದ ಮಾರ್ಗಸೂಚಿ ನೀಡಿರುವ ಹೈಕೋರ್ಟ್, ಮಹಿಳೆಯನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿಯ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ಸೋಮಶೇಖರ್ ಎಂಬ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ. ಅವರಿದ್ದ ವಿಭಾಗೀಯ ಪೀಠ, ಮರಣಪೂರ್ವ ಹೇಳಿಕೆಯ ಸ್ವರೂಪ ಮತ್ತು ದಾಖಲಿಸುವ ವಿಧಾನದಲ್ಲಿ ಗಂಭೀರ ಲೋಪಗಳಿವೆ ಎಂದು ಅಭಿಪ್ರಾಯಪಟ್ಟಿತು.
ಮರಣಪೂರ್ವ ಹೇಳಿಕೆ ಪ್ರಶ್ನೋತ್ತರ ರೂಪದಲ್ಲಿದ್ದು, ಸಂತ್ರಸ್ತರು ಹೇಳಿರುವ ಪದಗಳು ನಿಖರವಾಗಿರಬೇಕು. ಜೊತೆಗೆ ಅದು ಚಿಕ್ಕದಾಗಿ, ಸಂಕ್ಷಿಪ್ತವಾಗಿ ಮತ್ತು ವಿಷಯಕ್ಕೆ ಸೀಮಿತವಾಗಿರಬೇಕು. ಆದರೆ ಈ ಪ್ರಕರಣದಲ್ಲಿ ಮರಣಪೂರ್ವ ಹೇಳಿಕೆ ಎರಡು ಪುಟಗಳಷ್ಟು ವಿಸ್ತಾರವಾಗಿದ್ದು, ಅದರಲ್ಲಿನ ಅಂಶಗಳು ಸಂಪೂರ್ಣ ವಿಶ್ವಾಸಾರ್ಹವಾಗಿಲ್ಲವೆಂದು ಪೀಠ ತಿಳಿಸಿದೆ.
ಇನ್ನೂ, ಮೃತರ ಮುಖ, ತುಟಿ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ವ್ಯಾಪಕ ಸುಟ್ಟ ಗಾಯಗಳಾಗಿದ್ದ ಸಂದರ್ಭದಲ್ಲಿ ಮರಣಪೂರ್ವ ಹೇಳಿಕೆ ದಾಖಲಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ಹೇಳಿಕೆ ನೀಡಲು ಮೃತರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಇತ್ತೇ ಎಂಬುದರ ಬಗ್ಗೆ ಗಂಭೀರ ಸಂದೇಹವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮರಣಪೂರ್ವ ಹೇಳಿಕೆಯನ್ನು ವೈದ್ಯರು ಮತ್ತು ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಾಖಲಿಸಿಕೊಂಡಿದ್ದು, ಹೇಳಿಕೆ ದಾಖಲಿಸಿದ ವಿಧಾನವೂ ಅನುಮಾನಾಸ್ಪದವಾಗಿದೆ ಎಂದು ನ್ಯಾಯಪೀಠ ಸೂಚಿಸಿದೆ.
ಮರಣಪೂರ್ವ ಹೇಳಿಕೆಯೊಂದರ ಆಧಾರ ಮಾತ್ರದಿಂದ ಆರೋಪಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ಪೀಠ, ಈ ಪ್ರಕರಣದಲ್ಲಿ ಮರಣಪೂರ್ವ ಹೇಳಿಕೆ ನಿಯಮಬದ್ಧವಾಗಿ ದಾಖಲಿಸಿಕೊಳ್ಳಲಾಗಿಲ್ಲ. ಹೀಗಾಗಿ ಈ ಸಾಕ್ಷ್ಯವನ್ನು ತಿರಸ್ಕರಿಸಿ, ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.



