ಲಕ್ಕುಂಡಿ ಮೇಲಿರುವ ಪ್ರೀತಿ ಪುಟ್ಟರಾಜ ಸ್ಮಾರಕ ಭವನದ ಮೇಲೆ ಏಕಿಲ್ಲ: ವ್ಹಿ.ಆರ್. ಗೋವಿಂದಗೌಡ್ರ ಪ್ರಶ್ನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಇತ್ತೀಚಿನ ದಿನಗಳಲ್ಲಿ ಗದಗ ತಾಲೂಕಿನ ನರಗುಂದ ಮತಕ್ಷೇತ್ರ ವ್ಯಾಪ್ತಿಯ ಲಕ್ಕುಂಡಿ ಗ್ರಾಮದ ಮೇಲೆ ಏಕಾಏಕಿ ಪ್ರೀತಿ ಹೆಚ್ಚಾಗಿದ್ದು, ಲಕ್ಕುಂಡಿ ಮೇಲಿರುವ ಪ್ರೀತಿ ನಗರದ ಪುಟ್ಟರಾಜ ಸ್ಮಾರಕ ಭವನದ ಮೇಲೆ ಇಲ್ಲವೇಕೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವ್ಹಿ.ಆರ್. ಗೋವಿಂದಗೌಡ್ರ ಪ್ರಶ್ನಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರು ಸಾಕಷ್ಟು ಅನುದಾನವನ್ನು ಲಕ್ಕುಂಡಿಗೆ ಮೀಸಲಿಡುತ್ತಿದ್ದಾರೆ. ಆದರೆ, ತಮ್ಮನ್ನು ಆಯ್ಕೆ ಮಾಡಿದ ಗದಗ-ಬೆಟಗೇರಿ ನಗರವನ್ನು ಮರೆತು ಬಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪುಟ್ಟರಾಜ ಸ್ಮಾರಕ ಭವನಕ್ಕೆ ಅನುದಾನವನ್ನು ಸಚಿವರು ನೀಡುತ್ತಿಲ್ಲ ಎಂದು ಎಚ್.ಕೆ. ಪಾಟೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗದಗ ಶಹರ ಹಾಗೂ ಗ್ರಾಮೀಣ ಭಾಗವಾಗಿ ವಿಂಗಡಣೆಯಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಜೀವನವನ್ನು ಭದ್ರಪಡಿಸಿಕೊಳ್ಳಲು ಸಚಿವರು ಪ್ರಯತ್ನಿಸುತ್ತಿದ್ದಾರೆ. ಪುಟ್ಟರಾಜ ಸ್ಮಾರಕ ಭವನಕ್ಕೆ ಒಂದು ರೂ ಹಣವನ್ನೂ ಸರ್ಕಾರ ನೀಡುತ್ತಿಲ್ಲ. ಮ್ಯೂಸಿಯಂಗೆ 7 ಕೋಟಿ ರೂ, ಲಕ್ಕುಂಡಿಗೆ 5 ಕೋಟಿ ರೂ ಹಣ ಬಿಡುಗಡೆಗೊಳಿಸಿ ಪುಟ್ಟರಾಜರ ಸ್ಮಾರಕ ಭವನವನ್ನು ಮರೆತಿದ್ದಾರೆ ಎಂದು ಆರೋಪಿಸಿದರು.

ನಡೆದಾಡುವ ದೇವರು ಎನಿಸಿಕೊಂಡಿರುವ ಪರಮ ಪೂಜ್ಯ ಪಂಡಿತ ಪುಟ್ಟರಾಜರ ಹೆಸರನ್ನು ಸ್ಮಾರಕ ಭವನಕ್ಕೆ ಇಟ್ಟು ಅವಮಾನ ಮಾಡುತ್ತಿದ್ದಾರೆ. ಈಗಾಗಲೇ 5 ಕೋಟಿ ರೂ ವೆಚ್ಚದಲ್ಲಿ ಅರ್ಧ ಕಾಮಗಾರಿ ಮುಗಿದು ಹಲವು ವರ್ಷಗಳೇ ಕಳೆದಿವೆ. ಹೀಗೆ ಮುಂದುವರಿದರೆ ಆ ಕಟ್ಟಡ ಬಿಳುವ ಸಾಧ್ಯತೆ ಇದೆ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಹಣ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೋಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಾಣಂತಿಯರ ಸಾವು ನಿರಂತರವಾಗಿ ನಡೆಯುತ್ತಿದೆ. ಸಾವಿಗೂ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮಹಿಳೆಯರು ಹಾಗೂ ನವಜಾತ ಶಿಶುಗಳ ಜೀವದ ಜೊತೆ ರಾಜ್ಯ ಸರ್ಕಾರ ಆಟ ಆಡುತ್ತಿದೆ. ಸತ್ತ ನಂತರ ಪರಿಹಾರ ನೀಡುವ ಮುನ್ನ ಬದುಕಿದ್ದಾಗ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರದ ನಿರ್ಲಕ್ಷö್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ ಎಂದು ಆರೋಪಿಸಿದ ಅವರು, ಬೇಸಿಗೆಗೂ ಮುನ್ನವೇ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಸಚಿವ ಎಚ್.ಕೆ. ಪಾಟೀಲರ ನಿರ್ಲಕ್ಷö್ಯದಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. 24*7 ಯೋಜನೆ ಜಾರಿಗೆ ತಂದು 24 ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ ಎಂದರು.

ಸ್ಮಾರಕ ಭವನಕ್ಕಾಗಿ ಭಿಕ್ಷಾಟನೆ

ಸ್ಮಾರಕ ಭವನಕ್ಕೆ ಹಣ ಮಂಜೂರು ಮಾಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಜಿಲ್ಲಾ ಜೆಡಿಎಸ್‌ನಿಂದ ಜನವರಿ 10ರಂದು ಸಾಂಕೇತಿಕವಾಗಿ ಮಠದ ಆವರಣದಲ್ಲಿ ಭಿಕ್ಷಾಟನೆ ಮಾಡುತ್ತೇವೆ. ಇದರಿಂದ ಎಚ್ಚೆತ್ತುಕೊಂಡು ಅನುದಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ ಹಣ ಸಂಗ್ರಹಿಸುತ್ತೇವೆ.

– ವ್ಹಿ.ಆರ್. ಗೋವಿಂದಗೌಡ್ರ.

 ರಾಜ್ಯ ಜೆಡಿಎಸ್ ವಕ್ತಾರರು.


Spread the love

LEAVE A REPLY

Please enter your comment!
Please enter your name here