ಬೆಂಗಳೂರು:- ರಾಜಧಾನಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಮಾನವೀಯತೆ ಮರೆತಿದ್ದು, ರಾತ್ರಿ 10 ಗಂಟೆಯವರೆಗೆ ಗರ್ಭಿಣಿ ಮಹಿಳೆಯನ್ನು ಠಾಣೆಯಲ್ಲೇ ಇರಿಸಿಕೊಂಡ ಘಟನೆ ಸಂಭವಿಸಿದೆ.
ನಿನ್ನೆ ಅಂದರೆ ಗುರುವಾರ ಪತಿಯೊಂದಿಗೆ ಗರ್ಭಿಣಿ ಮಹಿಳೆ ಕೆ.ಸಿ.ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ತೆಗೆದುಕೊಳ್ಳಲು ಬಂದಿದ್ದಳು. ಈ ವೇಳೆ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಮಹಿಳೆಯ ವಯಸ್ಸು 18 ವರ್ಷ, 20 ದಿನ ಎಂದು ಗೊತ್ತಾಗಿದೆ. ಆದರೆ ಮಹಿಳೆ ಈಗ 4 ತಿಂಗಳ ಗರ್ಭಿಣಿಯಾಗಿದ್ದು, 18 ವರ್ಷಕ್ಕೂ ಮುಂಚೆಯೇ ಮದುವೆ ಮಾಡಿರುವುದಾಗಿ ತಿಳಿದುಬಂದಿದೆ.
ಇದರಿಂದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರು ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಧ್ಯಾಹ್ನ 2 ಗಂಟೆಗೆ ಪತಿ, ಪತ್ನಿಯನ್ನ ಪೊಲೀಸರು ಶೇಷಾದ್ರಿಪುರಂ ಠಾಣೆಗೆ ಕರೆತಂದಿದ್ದಾರೆ. ನಿಯಮಗಳ ಪ್ರಕಾರ ಸಂಜೆ 6 ಗಂಟೆಯೊಳಗೆ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆದರೆ ರಾತ್ರಿ 10 ಗಂಟೆವರೆಗೆ ಗರ್ಭಿಣಿಯನ್ನು ಠಾಣೆಯಲ್ಲಿಯೇ ಇರಿಸಿಕೊಂಡು ಅಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.