ವಿಜಯಸಾಕ್ಷಿ ಸುದ್ದಿ, ರೋಣ: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕಾಡಳಿತ ಅದ್ಧೂರಿಯಿಂದ ಆಚರಿಸಲು ನಿರ್ಧರಿಸಿದ್ದು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ತಹಸೀಲ್ದಾರ ನಾಗರಾಜ ಕೆ ಹೇಳಿದರು.
ಅವರು ಸೋಮವಾರ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಶಿವಶರಣ ನುಲಿಯ ಚಂದಯ್ಯ ಜಯಂತಿ ಹಾಗೂ 79ನೇ ಸ್ವಾಂತತ್ರ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆ. 15ರಂದು ತಾಲೂಕಾ ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಬೆಳಿಗ್ಗೆ 8ರೊಳಗೆ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಎಸ್.ಆರ್. ಪಾಟೀಲ ಶಾಲಾ ಆವರಣಕ್ಕೆ ಬರಬೇಕು. ಅಲ್ಲಿಂದ ಶಾಲಾ ಮಕ್ಕಳ ಜೊತೆಗೆ ಭಾರತಾಂಬೆಯ ಭಾವಚಿತ್ರದ ಮೆರವಣಿಗೆ ಮೂಲಕ ತಾಲೂಕಾ ಕ್ರೀಡಾಂಗಣಕ್ಕೆ ತೆರಳಿ, ಬೆಳಿಗ್ಗೆ 9ಕ್ಕೆ ಧ್ವಜಾರೋಹಣವನ್ನು ನೆರವೇರಿಸಲಾಗುವುದು ಎಂದರು.
ಆ. 9ರಂದು ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರವಿದ್ದು, ಈ ಜಯಂತಿಯನ್ನು ಕೂಡ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಿ, ತಹಸೀಲ್ದಾರ ಕಚೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ಜರುಗುವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಮುದಾಯದವರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡ ಬಾಳಪ್ಪ ಭಜಂತ್ರಿ ಮಾತನಾಡಿ, ಕಳೆದ ಬಾರಿ ನುಲಿಯ ಚಂದಯ್ಯನವರ ಜಯಂತಿ ಆಚರಿಸಿದ ಅನುದಾನ ಇನ್ನೂ ಬಂದಿಲ್ಲ. ನಮ್ಮದು ಸಣ್ಣ ಸಮಾಜವಾಗಿದ್ದು, ಜಯಂತ್ಯುತ್ಸವದ ಅನುದಾನವನ್ನು ನೀಡಿ ಎಂದರು. ಆಗ ತಹಸೀಲ್ದಾರ ನಾಗರಾಜ ಕೆ ಪ್ರತಿಕ್ರಿಯಿಸಿ, ಸರಕಾರದಿಂದ ಅನುದಾನ ಬಂದ ತಕ್ಷಣ ಒದಗಿಸಲಾಗುವುದು ಎಂದರು.
ಮುಖ್ಯಾಧಿಕಾರಿ ರಮೇಶ ಹೊಸಮನಿ, ಬಿಇಒ ಅರ್ಜುನ ಕಂಬೋಗಿ, ಉಪತಹಸೀಲ್ದಾರ ಜೆ.ಟಿ. ಕೊಪ್ಪದ, ಆರ್.ಎಲ್. ನಾಯಕರ, ಶಿವಪುತ್ರಪ್ಪ ಕಮಸಗಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಮತ್ತು ಸಮುದಾಯದವರು ಉಪಸ್ಥಿತರಿದ್ದರು.