ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಈ ಪತ್ರಿಕೆಗಳಿಗೆ ಸುದ್ದಿ ಬರೆಯುವ ಪತ್ರಕರ್ತರ ಕೊಡುಗೆಯೂ ಅಷ್ಟೇ ಮಹತ್ವದ್ದಾಗಿದೆ. ಆದ್ದರಿಂದ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವೆಂದು ತಿಳಿದು ಇಂದು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕಿ ಬಿ.ಕೆ. ಸವಿತಕ್ಕ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ಸಂದರ್ಭಗಳಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಸುದ್ದಿಯನ್ನು ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಅವರಿಗೆ ಸಾರ್ವಜನಿಕರ ಸಹಕಾರ, ಬೆಂಬಲ ಅವಶ್ಯವಿರುತ್ತದೆ. ಈಶ್ವರೀಯ ವಿಶ್ವ ವಿದ್ಯಾಲಯದ ಸುದ್ದಿಗಳನ್ನು ಎಲ್ಲ ಪತ್ರಿಕೆಯವರೂ ಪ್ರಕಟಿಸುತ್ತಿರುವದರಿಂದ ಅವರಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪತ್ರಕರ್ತ ಪ್ರಭುಸ್ವಾಮಿ ಅರವಟಗಿಮಠ, ಇತ್ತೀಚೆಗೆ ಮಾನವರಲ್ಲಿ ಸಂಯಮ ಕಡಿಮೆಯಾಗುತ್ತಿದೆ. ದ್ವೇಷ, ಅಸೂಯೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ದೂರವಿರಲು ನಾವು ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಬಂದು ಇಲ್ಲಿನ ಪಾಠ ಬೋಧನೆಯನ್ನು ಕೇಳಿಸಿಕೊಳ್ಳಬೇಕಿದೆ ಎಂದರು.
ಇನ್ನೋರ್ವ ಪತ್ರಕರ್ತ ಈಶ್ವರ ಬೆಟಗೇರಿ ಮಾತನಾಡಿ, ಮನುಷ್ಯನಿಗೆ ಸಮಾಧಾನ, ನೆಮ್ಮದಿ ಸಿಗುವುದು ಈಶ್ವರೀಯ ವಿಶ್ವವಿದ್ಯಾಲಯದಿಂದ ಮಾತ್ರ. ಇಲ್ಲಿನ ಓಂಕಾರ ಸ್ಮರಣೆ ಈಗ ಭಾರತದಲ್ಲಷ್ಟೆ ಅಲ್ಲದೆ ಜಗತ್ತಿನ ತುಂಬ ನಿನಾದಿಸುತ್ತಿದೆ. ನಾವೂ ಮೇಲಿಂದ ಮೇಲೆ ಇಲ್ಲಿಗೆ ಬಂದು ನೆಮ್ಮದಿಯನ್ನು ಪಡೆಯಲು ಪ್ರಯತ್ನಿಸಬೇಕಿದೆ ಎಂದರು.
ಸಭೆಯನ್ನುದ್ದೇಶಿಸಿ ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿದರು. ವೇದಿಕೆಯ ಮೇಲೆ ಪತ್ರಕರ್ತರಾದ ಮಲ್ಲಯ್ಯ ಗುಂಡಗೋಪುರಮಠ, ಪ್ರಶಾಂತ ಜಕ್ಕಲಿ ಇದ್ದರು. ಸಭೆಯಲ್ಲಿ ರಾಜಣ್ಣ ಭೋಪಳಾಪೂರ, ನಿವೃತ್ತ ಶಿಕ್ಷಕ ಧರ್ಮಾಯತ, ಎಂ.ಎಸ್. ಪೂಜಾರ, ಕಾತರಕಿ, ಹೊಸಮನಿ, ಸೇರಿದಂತೆ ಇನ್ನೂ ಅನೇಕರಿದ್ದರು.
ಪತ್ರಕರ್ತ ಆದರ್ಶ ಕುಲಕರ್ಣಿ ಮಾತನಾಡಿ, ಇಂದು ಈ ಸಂಸ್ಥೆಯಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವ ಮೂಲಕ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರೆಸಿದಂತಾಗಿದೆ. ಅದರೊಂದಿಗೆ ಇಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದು ಅತೀವ ಸಂತಸ ತಂದಿದೆ. ಇದರಿಂದ ನನಗೆ ಪರಮೇಶ್ವರನ ಆಶೀರ್ವಾದ ಸಿಕ್ಕಂತಾಗಿದೆ ಎಂದರು.