ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿ.ಎಮ್.ಎಫ್.ಎಮ್.ಇ) ಯೋಜನೆಯನ್ನು ಕಳೆದ 5 ವರ್ಷಗಳಿಂದ ಜಾರಿಗೊಳಿಸಿರುತ್ತಾರೆ. ರೈತರು ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡದೇ ಮೌಲ್ಯವರ್ಧನೆ, ಉತ್ಪನ್ನಗಳ ವರ್ಗೀಕರಣ, ಶ್ರೇಣೀಕರಣ, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆಯ ಬೆಂಬಲ ಮತ್ತು ರಫ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ, ಸ್ವ-ಸಹಾಯ ಸಂಘ, ರೈತ ಉತ್ಪಾದಕರ ಸಂಸ್ಥೆಗಳ ಆದಾಯವನ್ನು ದ್ವಿಗುಣಗೊಳಿಸುವುದು ಹಾಗೂ ಅವರನ್ನು ಉದ್ದಿಮೆದಾರರಾಗಿ ರೂಪಿಸುವುದು ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಶೇ. 35 ಹಾಗೂ ರಾಜ್ಯ ಸರ್ಕಾರದ ಶೇ. 15 ಸಹಾಯಧನ ಒಟ್ಟು ಶೇ. 50 ಸಹಾಯಧನ ಬ್ಯಾಂಕ್ ಮೂಲಕ ನೀಡಲು ಅವಕಾಶವಿರುತ್ತದೆ. ವಿಸ್ತೃತ ಯೋಜನಾ ವರದಿ ತಯಾರಿಸಿ ಶೇ. 50ರಷ್ಟು ಸಹಾಯಧನ ಮತ್ತು ಉಳಿದ ಶೇ. 50 ಅನುದಾನ ಬ್ಯಾಂಕ್ ಸಾಲ ದೊರೆಯಲಿದೆ. ಈ ವರ್ಷ ಯೋಜನಾ ಅನುಷ್ಠಾನದ ಕೊನೆಯ ವರ್ಷವಾಗಿರುವುದರಿಂದ ಜಿಲ್ಲೆಯ ರೈತರು ಸದರಿ ಯೋಜನೆಯ ಹೆಚ್ಚಿನ ಲಾಭ ಪಡೆಯಲು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ ಹೆಚ್ ಕೋರಿದ್ದಾರೆ.
ಈ ಯೋಜನೆಯಡಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳಾದ ಬ್ಯಾಡಗಿ ಮೆಣಸಿನಕಾಯಿ ಪುಡಿ, ಹಿಟ್ಟಿನ ಗಿರಣಿಗಳು, ಎಣ್ಣೆ ಗಾಣಗಳು, ಮಿನಿ ದಾಲ್ ಮಿಲ್, ಅರಿಷಿಣ ಸಂಸ್ಕರಣೆ, ಮಸಾಲಾ ಪದಾರ್ಥಗಳು, ಸಿರಿಧಾನ್ಯಗಳಿಂದ ಉಪ ಉತ್ಪನ್ನಗಳ ತಯಾರಿಕೆ, ಶ್ಯಾವಿಗೆ, ರವಾ, ನೂಡಲ್ಸ್ ತಯಾರಿಕೆ, ಕುಕ್ಕುಟ ಉತ್ಪನ್ನಗಳು, ವಿವಿಧ ಹಣ್ಣು ಹಾಗೂ ತರಕಾರಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಇತರೆ ಆಹಾರ ಸಂಸ್ಕರಣಾ ಘಟಕಗಳನ್ನು ಹೊಸದಾಗಿ ಉದ್ಯಮ ಪ್ರಾರಂಭಿಸಲು ಅಥವಾ ಚಾಲ್ತಿಯಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಮೀಪದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು-ಸೀಮಾ ಸವಣೂರ-8277931425 ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ ರಾಠೋಡ-9686641134, ಮಂಜುನಾಥ ಭರಮಗೌಡರ 9449339531, ಗೌರಿಶಂಕರ ಸಜ್ಜನ-9986789162, ಪ್ರಭಾಕರ ಹೂಗಾರ-9620624838, ಸಂತೋಷ ಜವಳಿ-9241333555, ಪ್ರಕಾಶ ಕೊಣ್ಣೂರು-9901553190, ಸುರೇಶ ಸಾವಳಗಿ-9663971865, ಕಾರ್ತಿಕ ಹಿರೇಮಠ-8748945132, ಗಿರೀಶ-9686762766 ಹಾಗೂ ಬಸಪ್ಪ ಮುಧೋಳ-8217682195 ಇವರನ್ನು ಸಂಪರ್ಕಿಸಲು ಕೋರಿದೆ.