ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ ಅವರು ಕಾರವಾರ ಹಾಗೂ ಆಂಕೋಲಾ ಘಟಕಗಳಿಗೆ ಮತ್ತು ಗೋಕರ್ಣ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಂಪೂರ್ಣ ಸ್ವಚ್ಛತೆ ಹಾಗೂ ನಿಯಮಿತ ನಿರ್ವಹಣೆಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಅಂತಾರಾಜ್ಯ ಬಸ್ಗಳು ಸಮಯ ಪಾಲಿತವಾಗಿ ಹಾಗೂ ನಿರಂತರವಾಗಿ ಚಲಾಯಿಸುವಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಬಸ್ಗಳನ್ನು ನಿರಂತರವಾಗಿ ತಾಂತ್ರಿಕ ನಿರ್ವಹಣೆಗೆ ಒಳಪಡಿಸಿ, ಅಗತ್ಯ ಸೇವೆ ಹಾಗೂ ತಾತ್ಕಾಲಿಕ ದುರಸ್ತಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಸ್ಗಳಲ್ಲಿ ರೂಫ್ ಲೀಕೆಜ್ ಇದ್ದರೆ ಅವುಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ದುರಸ್ತಿ ಮಾಡಬೇಕು. ಇತರೆ ತಾಂತ್ರಿಕ ದೋಷಗಳು ಮತ್ತು ನಿರ್ವಹಣಾ ಸಮಸ್ಯೆಗಳಿಗೆ ಕೂಡ ತಕ್ಷಣ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ, ಅಧಿಕಾರಿಗಳಾದ ಆರ್.ಎಲ್. ಕುಮಾರಸ್ವಾಮಿ, ವಿನೋದ ನಾಯಕ್, ರವಿ ಅಂಚಗಾವಿ ಹಾಗೂ ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.