ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಕಿವುಡ ಮಕ್ಕಳ ಶಾಲೆಯ ಮಕ್ಕಳು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಅಭಿವ್ಯಕ್ತಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ನರೇಗಲ್ಲ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯ ಶಿಕ್ಷಕ ಎಲ್.ಎಂ. ತಳಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ಯಾಕುಮಾರಿಯ ಅನಮ್ ಪ್ರೇಮ್ ಸಂಸ್ಥೆಯು ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಅಭಿವ್ಯಕ್ತಿ ಸ್ಪರ್ಧೆಯಲ್ಲಿ ಪ್ರಥಮ, ಚಿತ್ರಕಲೆಯಲ್ಲಿ ದ್ವಿತೀಯ, ಫುಟ್ಬಾಲ್ನಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದರು. ಶ್ರವಣ ಮತ್ತು ವಾಕ್ದೋಷದ 24ನೇ ರಾಷ್ಟ್ರೀಯ ಸಂಗಮದಲ್ಲಿ 12 ಮಕ್ಕಳು ಭಾಗವಹಿಸಿದ್ದರು. ಮಕ್ಕಳೊಂದಿಗೆ ತಾವು ಶಿಕ್ಷಕ ಆರ್.ಕೆ. ಬಾಗವಾನ ಮತ್ತು ನಾಗರಾಜ ಹೊಸಮನಿ ಪಾಲ್ಗೊಂಡಿದ್ದರು.
ಅಭಿನಂದನೆ: ರಾಷ್ಟ್ರೀಯ ಮಟ್ಟದಲ್ಲಿ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಕಿವುಡ ಮಕ್ಕಳನ್ನು ಮತ್ತು ಅದಕ್ಕೆ ಮಕ್ಕಳನ್ನು ತಯಾರು ಮಾಡಿದ ಶಿಕ್ಷಕ ಬಳಗವನ್ನು ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಆಡಳಿತ ಮಂಡಳಿಯ ಚೇರಮನ್ ಶರಣಪ್ಪ ರೇವಡಿ ಮತ್ತು ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.