ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀರಾಮ ಸೇನಾ ಲಕ್ಷ್ಮೇಶ್ವರ ತಾಲೂಕು ಘಟಕದಿಂದ ಶ್ರೀರಾಮ ನವಮಿ ಪ್ರಯುಕ್ತ ಕಾರ್ಯಕರ್ತರು ಭಾನುವಾರ ಲಕ್ಷ್ಮೇಶ್ವರದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ಶ್ರೀರಾಮ ಸೇನಾ ಸಂಘಟನೆ ಸ್ಥಾಪನೆಯಾಗಿ 20 ವರ್ಷ, ಶ್ರೀರಾಮ ಸೇನಾ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕರ 70ನೇ ವರ್ಷದ ಜನ್ಮದಿನದ ನಿಮಿತ್ತ 200ಕ್ಕೂ ಹೆಚ್ಚು ಶ್ರೀರಾಮ ಸೇನಾ ಕಾರ್ಯಕರ್ತರು ಗಣವೇಷದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು.
ಪಥಸಂಚಲನ ರಂಭಾಪುರಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡು ಪಂಪ ವೃತ್ತ, ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಕಾಳಮ್ಮದೇವಿ ದೇವಾಸ್ಥಾನ, ಕೋರ್ಟ್ ಸರ್ಕಲ್, ಹಳ್ಳದಕೇರಿ, ತಹಸೀಲ್ದಾರ ಕಚೇರಿ, ಭರಮದೇವರ ಸರ್ಕಲ್, ಪಾದಗಟ್ಟಿ, ಸರಕಾರಿ ಆಸ್ಪತ್ರೆ, ಹಳೇ ಬಸ್ ಸ್ಟ್ಯಾಂಡ್, ಕಿತ್ತೂರರಾಣಿ ಚನ್ನಮ್ಮ ವೃತ್ತದ ಮೂಲಕ ಸಾಗಿ ಪಿಎಸ್ಬಿಡಿ ಗರ್ಲ್ಸ್ ಹೈಸ್ಕೂಲ್/ತೋಟದ್ದೇವರಮಠದ ಬಳಿ ಸಂಪನ್ನಗೊಂಡಿತು.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಧ್ವಜ ಕಟ್ಟಿ ವಿನಮ್ರವಾಗಿ ಸ್ವಯಂ ಸೇವಕರನ್ನು ಸ್ವಾಗತಿಸಿದರು.
ಶಾಂತಿಯುತ ಪಥಸಂಚಲನಕ್ಕಾಗಿ ಎಸ್ಪಿ ನೇತೃತ್ವದಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು. ಮೂವರು ಡಿವೈಎಸ್ಪಿ, 7 ಸಿಪಿಐ, 16 ಪಿಎಸ್ಐ, 15 ಎಎಸ್ಐ, 72 ಪೊಲೀಸ್ ಸಿಬ್ಬಂದಿಗಳು, 55 ಹೋಮ್ಗಾರ್ಡ್ಸ್, ಕೆಎಸ್ಆರ್ಪಿ, ಡಿಆರ್ ಸಿಬ್ಬಂದಿಗಳು ಇದ್ದರು.