ವಿಜಯಸಾಕ್ಷಿ ಸುದ್ದಿ, ಗದಗ: ಎಂ.ಎಸ್.ಎಂ.ಇ.ಗಳು ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಲು ಮಹತ್ವ ನೀಡಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಗದಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ರ್ಯಾಂಪ್ ಯೋಜನೆಯಡಿಯಲ್ಲಿ ಝಡ್.ಇ.ಡಿ., ಲೀನ್ ಯೋಜನೆ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಎಸ್.ಎಂ.ಇ. ಉದ್ಯಮದಾರರು ಲೀನ್ ಯೋಜನೆ, ಝಡ್.ಇ.ಡಿ. ಸರ್ಟಿಫಿಕೇಶನ್ ಪಡೆಯಲು ಬೇಕಾಗಿರುವ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಉತ್ಪಾದನಾ ಕ್ರಮಗಳು, ವ್ಯರ್ಥವಾಗುವುದನ್ನು ಕಡಿಮೆ ಮಾಡುವುದು, ಪರಿಸರ ಹಾನಿಯಾಗದಂತೆ, ಕಚ್ಚಾ ಸಾಮಗ್ರಿಗಳನ್ನು ಉತ್ತಮ ರೀತಿಯಿಂದ ಉಪಯೋಗಿಸಿ ಗುಣಮಟ್ಟದ ವಸ್ತುಗಳನ್ನು ಉತ್ಪಾದನೆ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ ಮಾತನಾಡಿ, ಎಂ.ಎಸ್.ಎಂ.ಇ. ಕ್ಷೇತ್ರವು ಕೃಷಿ ನಂತರ ಎರಡನೇ ಹೆಚ್ಚು ಉದ್ಯೋಗ ಅವಕಾಶವನ್ನು ಕಲ್ಪಿಸುತ್ತಿದೆ. ಕರ್ನಾಟಕದಲ್ಲಿ 38 ಲಕ್ಷ ಎಂ.ಎಸ್.ಎಂ.ಇ. ಘಟಕಗಳು ಇದ್ದು, ಅಂದಾಜು 55 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು.
ಕಾಶಿಯಾ ಜಂಟಿ ಕಾರ್ಯದರ್ಶಿ ಆರ್. ಕೇಶವಮೂರ್ತಿ ಸ್ವಾಗತಿಸಿ ನಿರೂಪಿಸಿದರು. ಕಾಶಿಯ ಪ್ಯಾನಲ್ ಸದಸ್ಯ ನಾಗರಾಜ ಯಲಿಗಾರ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಎಂ.ಎಸ್.ಎಂ.ಇ. ಉದ್ದಿಮೆದಾರರು, ವ್ಯಾಪಾರಸ್ಥರು, ಆದರ್ಶ ಶಿಕ್ಷಣ ಸಂಸ್ಥೆ, ಜಗದ್ಗುರು ತೋಂಟದಾರ್ಯ ಕಾಲೇಜು ಹಾಗೂ ಮನೋರಮಾ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರು ಮತ್ತು ವಿವಿಧ ಕೈಗಾರಿಕಾ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸ್ಥೆಯ ಉಪಾಧ್ಯಕ್ಷ ಶರಣಬಸಪ್ಪ ಎಸ್. ಗುಡಿಮನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಎಂ.ಎಸ್.ಎಂ.ಇ.ಗಳಿಗೆ ಹಲವಾರು ಯೋಜನೆಗಳು ಹಾಗೂ ಉತ್ತೇಜನ ನೀಡುತ್ತಿದ್ದು, ಉದ್ಯಮದಾರರು ಈ ಯೋಜನೆಗಳಿಂದ ಪ್ರಯೋಜನ ಪಡೆದು ಯಶಸ್ವಿಯಾಗಬೇಕೆಂದರು.


