ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಅಂಬೇಡ್ಕರವಾದ) ಗದಗ ಜಿಲ್ಲಾ ಸಮಿತಿಯ ವತಿಯಿಂದ ದ.ಸಂ.ಸ ಸಂಸ್ಥಾಪಕರಾದ ಪ್ರೊ. ಬಿ. ಕೃಷ್ಣಪ್ಪ ಹೆಸರಿನಲ್ಲಿ ಸಭಾಭವನ ನಿರ್ಮಿಸುವಂತೆ ಸಚಿವರಾದ ಹೆಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಗದಗ ಜಿಲ್ಲಾ ಘಟಕದ ಪ್ರದಾನ ಸಂಚಾಲಕ ಬಾಲರಾಜ ಅರಬರ ಮಾತನಾಡಿ, ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳು ಹಾಗೂ ದಲಿತ ಸಮುದಾಯಗಳ ಹಿತದೃಷ್ಟಿಯಿಂದ ಗದಗದಲ್ಲಿ ಬಹುಜನರ ವಿಮೋಚಕ ಹಾಗೂ ದ.ಸಂ.ಸ. ಸಂಸ್ಥಾಪಕರಾದ ಪ್ರೊ. ಬಿ. ಕೃಷ್ಣಪ್ಪ ಹೆಸರಿನಲ್ಲಿ ಒಂದು ಸಭಾಭವನ ನಿರ್ಮಿಸಬೇಕು. ದಲಿತರ ಮೇಲಿನ ಶತಮಾನಗಳ ದಬ್ಬಾಳಿಕೆ ದೌರ್ಜನ್ಯಗಳಿಗೆ ಪ್ರತಿರೋಧದ ಶಕ್ತಿಯಾಗಿ ಜಾತಿವಾದಿಗಳ, ಕೋಮುವಾದಿಗಳ ಎದೆಯಲ್ಲಿ ದ.ಸಂ.ಸ ನಡುಕು ಹುಟ್ಟಿಸಿತು. ಧಮನಿತ ಸಮುದಾಯಗಳಲ್ಲಿ ಹೋರಾಟದ ಕಿಚ್ಚು ಹಚ್ಚಿತು.
ಪ್ರೊ. ಬಿ. ಕೃಷ್ಣಪ್ಪನವರ ನಾಯಕತ್ವದಲ್ಲಿ ದ.ಸಂ.ಸ. ಇಡೀ ರಾಜ್ಯಾದ್ಯಂತ ಕೋಟಿಗಟ್ಟಲೇ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ನೊಂದ, ಶೋಷಿತ ಸಮುದಾಯಗಳಿಗೆ ವಿಮೋಚನೆ ನೀಡಿದೆ. ಕೃಷ್ಣಪ್ಪನವರು ಕರ್ನಾಟಕ ರಾಜ್ಯ ತುಂಬಾ ದ.ಸಂ.ಸ ಚಳುವಳಿ ನಡೆಸಿ ತಮ್ಮ ಚಳುವಳಿಯನ್ನು ಗದಗನಲ್ಲಿ ಮಹಾಪರಿನಿಬ್ಬಣ ಹೊಂದಿದ್ದಾರೆ. ಕಾರಣ, ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣಾರ್ಥವಾಗಿ ಗದಗ ನಗರದದಲ್ಲಿ ಸಭಾಭವನ ನಿರ್ಮಿಸಬೇಕೆಂದು ಸಚಿವರಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಗೋಕಾವಿ, ಯುವರಾಜ್ ಬಳ್ಳಾರಿ, ಹೊನ್ನಪ್ಪ ಸಾಕಿ, ಲಕ್ಷ್ಮಣ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಮುತ್ತು ಚವಡಣ್ಣವರ, ಮಾರುತಿ ಅಂಗಡಿ, ಕುಮಾರ ಕಮತರ, ಅರುಣ ಹಿರೇಮಠ, ಯಮನೂರ ಇರಕಲ್ಲ, ಯಲ್ಲಪ್ಪ ಭಜಂತ್ರಿ, ಕೆಂಚಪ್ಪ ಮ್ಯಾಗೇರಿ, ಪ್ರಕಾಶ್ ಕಮಡೊಳ್ಳಿ, ಲಕ್ಷ್ಮಣ ವಡ್ಡರಕಲ್ಲ, ಸತೀಶ್ ಗುರಿಕಾರ್, ರಾಮಣ್ಣ ಕ್ಯಾಡದ ಇನ್ನಿತರರು ಉಪಸ್ಥಿತರಿದ್ದರು.