ವಿಜಯಸಾಕ್ಷಿ ಸುದ್ದಿ, ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ಹಾಗೂ ಧಾರವಾಡದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ‘ಹಳಗನ್ನಡ ಓದು: ಪಠ್ಯಾಧಾರಿತ’ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಿತು.
ಕಾರ್ಯಾಗಾರದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಪ್ರೊ. ಕಲಬುರ್ಗಿಯವರು ತಾವು ಇದ್ದಾಗಲೂ ಕನ್ನಡದ ಉಳಿವಿಗಾಗಿ, ಬೆಳವಣಿಗೆಗಾಗಿ ಕಾರ್ಯಮಾಡಿದ್ದರು. ಈಗ ಅವರು ಇಲ್ಲದೆ ಇದ್ದರೂ ಪ್ರತಿಷ್ಠಾನದ ಮೂಲಕ ಅವರ ವಿಚಾರಗಳನ್ನು, ಯೋಜನೆಗಳನ್ನು ನಾಡಿನ ಜನಕ್ಕೆ, ವಿದ್ಯಾರ್ಥಿಗಳಿಗೆ, ವಿದ್ವತ್ ಲೋಕಕ್ಕೆ ಹಂಚುತ್ತಿರುವುದು ಖುಷಿಯ ಸಂಗತಿಯಾಗಿದೆ ಎಂದರು.
ಶಶಿಧರ ತೋಡಕರ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಒಂದು ವಿಶ್ವವಿದ್ಯಾಲಯದಲ್ಲಿ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಪ್ರಾಧ್ಯಾಪಕರಾದ ಕಲಬುರ್ಗಿಯವರನ್ನು ಪಂಪ ಪ್ರಶಸ್ತಿ ಅರಸಿಬರುತ್ತದೆಯೆಂದರೆ, ಆ ವಿಶ್ವವಿದ್ಯಾಲಯದ, ವಿಭಾಗದ ಘನತೆಯನ್ನು ಹೆಚ್ಚಿಸಿದವರು ಕಲಬುರ್ಗಿ ಅವರಾಗಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಸಂದರ್ಭದಲ್ಲಿ ಹೊಲದ ತುಂಬಾ ಹೊಸ ಬೆಳೆ ಎಂಬ ಯೋಜನೆಯಲ್ಲಿ ಪ್ರತಿಯೊಬ್ಬ ಪ್ರಾಧ್ಯಾಪಕರಿಗೆ ಕೆಲಸವನ್ನು ನೀಡಿ ಆ ವಿಶ್ವವಿದ್ಯಾಲಯದ ಆರ್ಥಿಕ ಘನತೆಯನ್ನು ಹೆಚ್ಚಿಸಿದವರು ಕಲಬುರ್ಗಿಯವರು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸ.ಪ್ರ.ದ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಅಂಗಡಿ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಎಸ್. ಭಗವತಿ ಅತಿಥಿಗಳನ್ನು ಪರಿಚಯಿಸಿದರು. ಐ.ಕ್ಯೂ.ಐ.ಸಿ. ಸಂಚಾಲಕರಾದ ವ್ಯಾಪಾರಿ ಮಧೂಸೂಧನ ಕೆ, ಪ್ರತಿಷ್ಠಾನದ ಸದಸ್ಯರಾದ ಡಾ. ಬಾಳಣ್ಣ ಶೀಗೀಹಳ್ಳಿ ಉಪಸ್ಥಿತರಿದ್ದರು. ಡಾ. ಗಾಯಿತ್ರಿ ಕುಲಕರ್ಣಿ ನಿರೂಪಿಸಿದರು, ಅನಿಲಕುಮಾರ ಖಾತೆದಾರ ವಂದಿಸಿದರು.
ಕಾರ್ಯಾಗಾರದಲ್ಲಿ ಹಿರಿಯರಾದ ಹೂಗಾರ, ಆರ್.ಬಿ. ಚಿಲುಮಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಪ್ರತಿಷ್ಠಾನದ ಸದಸ್ಯೆ ಹಾಗೂ ಶಾಸನತಜ್ಞೆ ಹನುಮಾಕ್ಷಿ ಗೋಗಿ ಮಾತನಾಡಿ, ಇಡೀ ಕನ್ನಡ ಭಾಷೆಗೆ ಒಂದು ಪ್ರಾಚೀನತೆಯನ್ನು ತಂದುಕೊಟ್ಟಿದ್ದು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟದ್ದು ಶಾಸನಗಳು. ಶಾಸನದ ನಂತರ ಹಳಗನ್ನಡದ ಕೃತಿಗಳು. ಕನ್ನಡ ಭಾಷೆ ಯಾವಾಗಿನಿಂದ ಇತ್ತು ಎಂಬುದನ್ನು ಬನವಾಸಿಯ ಹಲ್ಮಿಡಿಯ ಶಾಸನ ತಿಳಿಸಿಕೊಡುತ್ತದೆ ಎಂದರು.