ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ ಮತ್ತು ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಗದಗ ಜಿಲ್ಲೆ ಇವರ ಸಹಯೋಗದೊಂದಿಗೆ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಹಾಗೂ ಯುದ್ಧದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
1962, 1965, 1971 ಮತ್ತು 1999ರ ಯುದ್ಧದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವ ನಮನ ಕಾರ್ಯಕ್ರಮವು ಮುಂಜಾನೆ 9 ಗಂಟೆಗೆ ಗದುಗಿನ ಮಹಾತ್ಮ ಗಾಂಧಿ ಸರ್ಕಲ್ನಲ್ಲಿ ಜರುಗಲಿದೆ. ನಂತರ ಗಾಂಧಿ ಸರ್ಕಲ್, ತೋಂಟದಾರ್ಯ ಮಠದ ಕಮಾನು, ತೋಂಟದಾರ್ಯ ಮಠ, ಮಹೇಂದ್ರಕರ ಸರ್ಕಲ್, ಬಸವೇಶ್ವರ ನಗರದ ಮಾರ್ಗವಾಗಿ ಕರ್ನಾಟಕ ಟಾಕೀಜ್ ಬಳಿ ಇರುವ ಕರ್ನಾಟಕ ರಾಜ್ಯ ಗದಗ ಜಿಲ್ಲಾ ನಿವೃತ್ತರ ಸಂಘದ ಕಾರ್ಯಾಲಯದಲ್ಲಿ 10 ಗಂಟೆಗೆ ವೇದಿಕೆಯ ಕಾರ್ಯಕ್ರಮ ನಡೆಯುವುದು.
ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಗದಗ ಜಿಲ್ಲಾಧ್ಯಕ್ಷ ನಾಗರಾಜ ಕುಂದರಗಿ ವಹಿಸುವರು.
ಅತಿಥಿಗಳಾಗಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷರೂ ಹಾಲಿ ಗೌರವ ಅಧ್ಯಕ್ಷರೂ ಆದ ಅಂದಾನಪ್ಪ ಯರಗೇರಿ, ಮಾಜಿ ಮತ್ತು ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘದ ಗೌರವ ಅಧ್ಯಕ್ಷ ವ್ಹಿ.ಎಸ್. ಅಕ್ಕಿ ಆಗಮಿಸುವರು. ಮಾಜಿ ಯೋಧರು ಹಾಗೂ ವೀರನಾರಿಯರು ಮುಂಚಿತವಾಗಿ ಉಪಸ್ಥಿತರಿರಬೇಕೆಂದು ಉಭಯ ಸಂಘಟನೆಗಳ ಕಾರ್ಯದರ್ಶಿಗಳಾದ ಸಿ.ಜಿ. ಸೊನ್ನದ ಹಾಗೂ ಬಸಯ್ಯ ಹಿರೇಮಠ ವಿನಂತಿಸಿದ್ದಾರೆ.
ಸಮಾರಂಭದ ಸಾನ್ನಿಧ್ಯವನ್ನು ಕಳಸಾಪೂರ-ಸೊರಟೂರ-ಮಲ್ಲಸಮುದ್ರದ ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಜಿಲ್ಲಾ ನಿವೃತ್ತರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಆಗಮಿಸುವರು.
Advertisement