ವಿಜಯಸಾಕ್ಷಿ ಸುದ್ದಿ, ಗದಗ : ಸಂವಿಧಾನ ಪೀಠದ ತೀರ್ಪಿಗೆ ಬದ್ಧರಾಗದೇ ಜಾತಿ ಜನಗಣತಿ ವರದಿ ಬಿಡುಗಡೆ ನೆಪವೊಡ್ಡಿ ಒಳಮೀಸಲಾತಿ ಜಾರಿ ತಡಮಾಡುತ್ತಿರುವ ಸರ್ಕಾರದ ನಡೆ ಖಂಡಿಸಿ ಗದಗ ಜಿಲ್ಲಾ ಡಾ. ಬಾಬಾಸಾಹೇಬ್ ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಮ ಸಮಾನತೆ ಸಮಿತಿಯ ವತಿಯಿಂದ ರಾಜ್ಯ ಡಿ.ಎಸ್.ಎಸ್. ಸಂಚಾಲಕ ಎಸ್.ಎನ್. ಬಳ್ಳಾರಿ, ಯುವರಾಜ ಬಳ್ಳಾರಿ ನೇತೃತ್ವದಲ್ಲಿ ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಯುವರಾಜ ಬಳ್ಳಾರಿ ಮಾತನಾಡಿ, ಸಂವಿಧಾನ ಪ್ರಧಾನ ಆಶಯವಾಗಿರುವ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಉದ್ದೇಶದಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹೀಗೆ ಸಾರ್ವಜನಿಕ ಜೀವನದ ಎಲ್ಲ ರಂಗಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ತತ್ವವನ್ನು ಅಳವಡಿಸಿ ಮೀಸಲಾತಿ ಸೌಲಭ್ಯವನ್ನು ಶಾಸನಬದ್ಧವಾಗಿ ಜಾರಿಗೆ ತರಲಾಗಿದೆ. ಆದರೆ ಕಾಲಾಂತರದಲ್ಲಿ ಸ್ಪ್ರಶ್ಯ ಜಾತಿಗಳನ್ನು ಅಸ್ಪ್ರಶ್ಯ ಜಾತಿಗಳ ಪಟ್ಟಿಗೆ ಸೇರಿಸಿದ್ದರಿಂದ ಮೀಸಲಾತಿ ನೀತಿಯ ಮೂಲ ಉದ್ದೇಶವೇ ವಿಫಲಗೊಂಡಿತು.
ಇದರಿಂದ ನೊಂದು-ಬೆಂದ ಮಾದಿಗ ಸಮಾಜವು ವೈಜ್ಞಾನಿಕ ಸ್ವರೂಪದ ಆಂತರಿಕ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಪ್ರತಿಭಟನೆ ಮಾಡುತ್ತ ಕಾನೂನು ಹೋರಾಟ ನಡೆಸುತ್ತಿದೆ. ಮೂರು ದಶಕಗಳ ನಿರಂತರ ಹೋರಾಟದಿಂದ ಮಾದಿಗ ಸಂಘಟನೆಗಳು ಮಾನಸಿಕ-ದೈಹಿಕ ಚಿತ್ರಹಿಂಸೆಯ ಪರಿಣಾಮವಾಗಿ ಕರ್ನಾಟಕ ಸರ್ಕಾರ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಿ ಅದರ ವರದಿಯನ್ನು ಪಡೆದಿದೆ. ತದನಂತರ ಸರ್ಕಾರ ಒಳಮೀಸಲಾತಿ ಕುರಿತು ಸಂಪುಟದ ಉಪಸಮಿತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.
ಆದ್ದರಿಂದ ಘನವೆತ್ತ ಸರ್ಕಾರ ಅಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಂತೆ ಒಳಮೀಸಲಾತಿ ಜಾರಿಗೊಳಿಸಬೇಕು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿ ಒಳಮೀಸಲಾತಿ ಕಲ್ಪಿಸಿಕೊಡುವುದಾಗಿ ಘೋಷಿಸಿಕೊಂಡಂತೆ ನಡೆದುಕೊಳ್ಳಬೇಕು ಹಾಗೂ ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್ಲಾಗ್ ಹುದ್ದೆಗಳನ್ನು ಮತ್ತು ಇತರೆ ನೇಮಕಾತಿಗಳನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಸುಪ್ರೀಂಕೋರ್ಟಿನ ತೀರ್ಪನ್ನು ಕೂಡಲೇ ರಾಜ್ಯ ಸರ್ಕಾರ ಯಥವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಹಾಗೂ ಡಾ. ಬಾಬು ಜಗಜೀವನರಾಮ ಸಮಾನತೆ ಸಮಿತಿಯ ಸದಸ್ಯರಾದ ಪೃಥ್ವಿ ಪರಾಪೂರ, ಪವನ ಬಳ್ಳಾರಿ, ಸುಂಕಪ್ಪ ಗುತ್ತಿ, ಹನಮಪ್ಪ ನೀಲಗುಂದ, ಪರಶುರಾಮ ದೊಡಮನಿ, ಈಶಪ್ಪ ಕಲ್ಲೂರ ನಾಗರಾಜ ಕಿನ್ನರ, ಮಹೇಶ ನಾನಬಲ್, ಗೋವಿಂದರಾಜ ಬಳ್ಳಾರಿ, ವರ್ಧನ್ ತೌಜಲ್, ನಿತಿನ್ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.
ಒಳಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ವಹಿಸಿದೆ. ಅಲ್ಲದೇ ಈ ಕುರಿತು ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲವೆಂದು ಉಲ್ಲೇಖಿಸಿದೆ. ಈ ತೀರ್ಪನ್ನು ಮರುಪರಿಶೀಲಿಸುವ ಅರ್ಜಿಗಳನ್ನು ವಜಾಗೊಳಿಸಿದೆ. ಪರಿಶಿಷ್ಟ ಜಾತಿಗಳು ಏಕರೂಪಿಯಾಗಿಲ್ಲವೆಂದು ಹೇಳಿದ ಸುಪ್ರೀಂ ಕೋರ್ಟ್, ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ಒದಗಿಸುವುದು ಸಂವಿಧಾನ ಬದ್ಧವಾಗಿದೆ ಎಂದು ಉಚ್ಛರಿಸಿದಿದೆ ಎಂದರು.
Advertisement